ಕೆಸರಲ್ಲಿ ಸಿಲುಕಿ ಒದ್ದಾಡುತ್ತಿರುವ ಅಮ್ಮನನ್ನು ಬಿಟ್ಟು ಕದಲುತ್ತಿಲ್ಲ ಮರಿಯಾನೆ
ಅಮ್ಮ ಎರಡು ದಿನಗಳಿಂದ ಕೆಸರಿನಲ್ಲಿ ಸಿಲುಕಿ ಒದ್ದಾಡುತ್ತಿದ್ದರೆ ಇತ್ತ ಮರಿಯಾನೆಯೂ ಅಮ್ಮನೊಂದಿಗೆ ಕುಳಿತು ಕಣ್ಣೀರಿಡುತ್ತಿದೆ. ಅರಣ್ಯ ಸಿಬ್ಬಂದಿ ಕೆಸರಲ್ಲಿ ಸಿಲುಕಿ ಒದ್ದಾಡುತ್ತಿರುವ ಆನೆಯನ್ನು ರಕ್ಷಿಸಲು ಒದ್ದಾಡುತ್ತಿದ್ದಾರೆ
ಹಾಸನ : ಕೆಸರಿನಲ್ಲಿ ಸಿಲುಕಿಕೊಂಡು ಕಾಲಿಗೆ ಏಟಾಗಿರುವ ಅಮ್ಮ ಆನೆಯೊಂದು ಮೇಲೇಳಲಾಗದೇ ಒದ್ದಾಡುತ್ತಿದ್ದರೆ, ಅದರ ಅಮ್ಮನನ್ನು ಬಿಟ್ಟು ಹೋಗುತ್ತಲೇ ಇಲ್ಲ ಮರಿ. ಆನೆ ಹಾಗೂ ಮರಿಯ ತೊಳಲಾಟವನ್ನು ನೋಡಿದರೆ ಎಂಥವರ ಕಣ್ಣಿನಲ್ಲಿಯೂ ನೀರು ಬರುತ್ತದೆ.
ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಕಡಗರಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕೆಸರಿನಲ್ಲಿ ಆನೆ ಒದ್ದಾಡುತ್ತಿದ್ದರೆ, ಮರಿಯಾನೆ ಅಮ್ಮನ ಸಂಕಷ್ಟ ನೋಡಲಾಗದೇ ರೋಧಿಸುತ್ತಿದೆ. ಆನೆಯನ್ನು ಮೇಲೆತ್ತಲು ಅರಣ್ಯ ಇಲಾಖೆ ಅಧಿಕಾರಿಗಳು ಹರಸಾಹಸಪಡುತ್ತಿದ್ದಾರೆ.
ನೋವಿನಲ್ಲಿ ಒದ್ದಾಡುತ್ತಿರುವ ಆನೆಗೆ ಆಹಾರ ಸೇವಿಸಲೂ ಕಷ್ಟವಾಗುತ್ತಿದ್ದು, ಸಂಪೂರ್ಣವಾಗಿ ನಿತ್ರಾಣವಾಗಿದೆ. ಕಳೆದ ಎರಡು ದಿನದಿಂದಲೂ ಆನೆ ಕೆಸರಿನಲ್ಲಿಯೇ ಬಿದ್ದಿದೆ. ಸಾಕಾನೆಗಳ ನೆರವಿನಿಂದ ಆನೆಯನ್ನು ಮೇಲಕ್ಕೆತ್ತಲು ಅರಣ್ಯ ಇಲಾಖೆ ನಿರ್ಧರಿಸಿದೆ. ಅಲ್ಲದೇ ಕೆಸರಿನಿಂದ ಮೇಲೆತ್ತಿದ ಬಳಿಕ ಆನೆಗೆ ಸೂಕ್ತ ಚಿಕಿತ್ಸೆ ನೀಡಬಹುದೆಂದು ಅಧಿಕಾರಿಗಳು ಹೇಳಿದ್ದಾರೆ.