- ಬಿಜೆಪಿಗೆ 4, ಕಾಂಗ್ರೆಸ್‌ಗೆ 2, ಜೆಡಿಎಸ್‌ಗೆ 1 ಸ್ಥಾನ ಗ್ಯಾರಂಟಿ- ಈ ಚುನಾವಣೆ ಬಳಿಕ ಬಿಜೆಪಿಗೆ ಮೇಲ್ಮನೆಯಲ್ಲಿ ಬಹುಮತ- ನಾಮಪತ್ರ ಸಲ್ಲಿಕೆಗೆ ಮೇ 24 ಕೊನೆಯ ದಿನ 

ಬೆಂಗಳೂರು(ಮೇ.11): ಮುಂದಿನ ತಿಂಗಳು ತೆರವಾಗುವ ವಿಧಾನಪರಿಷತ್‌ನ ಏಳು ಸ್ಥಾನಗಳಿಗೆ ಚುನಾವಣಾ ಆಯೋಗವು ಮಂಗಳವಾರ ಚುನಾವಣೆ ಘೋಷಣೆ ಮಾಡಿದೆ. ವಿಧಾನಸಭೆ ಸದಸ್ಯರು ಈ ಚುನಾವಣೆಯಲ್ಲಿ ವಿಧಾನಪರಿಷತ್‌ ಸದಸ್ಯರನ್ನು ಆಯ್ಕೆ ಮಾಡಲಿದ್ದಾರೆ.

ಈ ತಿಂಗಳ 17ರಂದು ಚುನಾವಣೆ ಅಧಿಸೂಚನೆ ಹೊರಬೀಳಲಿದ್ದು, ಅಂದಿನಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ನಾಮಪತ್ರ ಸಲ್ಲಿಕೆಗೆ ಮೇ 24 ಕೊನೆಯ ದಿನ. ಮೇ 25ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಮೇ 27ರಂದು ಉಮೇದುವಾರಿಕೆ ಹಿಂಪಡೆಯಲು ಕಡೆಯ ದಿನವಾಗಿದೆ. ಜೂ.3ರಂದು ಬೆಳಗ್ಗೆ 9ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ. ಅದೇ ದಿನ ಸಂಜೆ 5 ಗಂಟೆಗೆ ಮತ ಎಣಿಕೆ ನಡೆಯಲಿದೆ.

Mandyaದಲ್ಲಿ ಜೆಡಿಎಸ್‌ಗೆ ಶಾಕ್ ಮೇಲೆ ಶಾಕ್!

ಯಾರಾರ‍ಯರು ನಿವೃತ್ತಿ?:
ವಿಧಾನಪರಿಷತ್‌ ಸದಸ್ಯರಾದ ಕಾಂಗ್ರೆಸ್ಸಿನ ಆರ್‌.ಬಿ.ತಿಮ್ಮಾಪುರ, ಅಲ್ಲಂ ವೀರಭದ್ರಪ್ಪ, ಎಸ್‌.ವೀಣಾ ಅಚ್ಚಯ್ಯ, ಕೆ.ವಿ.ನಾರಾಯಣ ಸ್ವಾಮಿ, ಬಿಜೆಪಿಯ ಲಕ್ಷ್ಮಣ್‌ ಸವದಿ, ಲೆಹರ್‌ಸಿಂಗ್‌ ಸಿರೋಯಾ ಹಾಗೂ ಜೆಡಿಎಸ್‌ನ ಎಚ್‌.ಎಂ.ರಮೇಶ್‌ಗೌಡ ಅವರು ಜೂ.14ರಂದು ನಿವೃತ್ತಿ ಹೊಂದಲಿದ್ದಾರೆ. ಆ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಕೋವಿಡ್‌ ನಿಯಮಾವಳಿ ಪ್ರಕಾರವೇ ಚುನಾವಣೆ ಪ್ರಕ್ರಿಯೆಯನ್ನು ನಡೆಸಬೇಕು ಎಂದು ಆಯೋಗ ಸೂಚನೆ ನೀಡಿದೆ.

ಯಾರಿಗೆ ಎಷ್ಟುಸ್ಥಾನ?:
ವಿಧಾನಸಭೆಯ ಸದಸ್ಯರು ಈ ಚುನಾವಣೆಯ ಮತದಾರರಾಗಿರುವುದರಿಂದ ಸಂಖ್ಯಾ ಬಲದ ಆಧಾರದ ಮೇಲೆ ಒಟ್ಟು ಏಳು ಸ್ಥಾನಗಳ ಪೈಕಿ ಬಿಜೆಪಿಗೆ ನಾಲ್ಕು, ಕಾಂಗ್ರೆಸ್‌ಗೆ ಎರಡು ಮತ್ತು ಜೆಡಿಎಸ್‌ಗೆ ಒಂದು ಸ್ಥಾನ ಖಾತ್ರಿ ಎನ್ನಲಾಗಿದೆ. ಈ ಚುನಾವಣೆ ಬಳಿಕ ಬಿಜೆಪಿಗೆ ಮೊದಲ ಬಾರಿಗೆ ವಿಧಾನಪರಿಷತ್ತಿನಲ್ಲಿ ಪೂರ್ಣ ಬಹುಮತ ಲಭಿಸಲಿದೆ.

ವಿಧಾನಸಭೆಯ ಪಕ್ಷವಾರು ಬಲಾಬಲ ಒಟ್ಟು- 225
ಬಿಜೆಪಿ- 119, ಕಾಂಗ್ರೆಸ್‌- 69, ಜೆಡಿಎಸ್‌- 32, ಬಿಎಸ್‌ಪಿ- 01, ಪಕ್ಷೇತರರು- 02, ಸ್ಪೀಕರ್‌- 01 ಮತ್ತು ನಾಮನಿರ್ದೇಶನ- 01.

ಹೊರಟ್ಟಿ ಬೆನ್ನಲ್ಲೇ ಜೆಡಿಎಸ್ ತೊರೆಯಲು ಮುಂದಾದ ಮತ್ತೋರ್ವ ಪ್ರಭಾವಿ ನಾಯಕ..!

ಎಂಎಲ್‌ಸಿಗೆ ಕಾಂಗ್ರೆಸ್‌ನಲ್ಲಿ ಲಾಬಿ ಶುರು
ವಿಧಾನಸಭೆಯಿಂದ ವಿಧಾನಪರಿಷತ್‌ಗೆ ನಡೆಯುವ ಚುನಾವಣೆಯಲ್ಲಿ ತಾನು ಗೆಲ್ಲಲು ಸಾಧ್ಯವಿರುವ ಎರಡು ಸ್ಥಾನಗಳನ್ನು ಯಾವ ಸಮುದಾಯಕ್ಕೆ ನೀಡಬೇಕು ಎಂಬ ಗೊಂದಲ ಕಾಂಗ್ರೆಸ್‌ ಅನ್ನು ಇನ್ನೂ ಕಾಡುತ್ತಿದೆ. ಇದರ ನಡುವೆಯೇ ಎಲ್ಲ ಸಮುದಾಯಗಳಿಂದಲ್ಲೂ ಹತ್ತಾರು ಆಕಾಂಕ್ಷಿಗಳು ಟಿಕೆಟ್‌ಗಾಗಿ ಲಾಬಿ ನಡೆಸಿದ್ದಾರೆ.

ಪ್ರಸ್ತುತ ಕಾಂಗ್ರೆಸ್‌ನಿಂದ ಮೂರು ಸ್ಥಾನ ತೆರವಾಗುತ್ತಿದೆ. ಪರಿಶಿಷ್ಟ(ಎಡ) ಸಮುದಾಯದ ಆರ್‌.ಬಿ. ತಿಮ್ಮಾಪುರ, ಕೊಡವ ಸಮುದಾಯ ವೀಣಾ ಅಚ್ಚಯ್ಯ ಹಾಗೂ ಲಿಂಗಾಯತ ಸಮುದಾಯದ ಅಲ್ಲಂ ವೀರಭದ್ರಪ್ಪ ನಿವೃತ್ತರಾಗುತ್ತಿದ್ದಾರೆ. ಆದರೆ, ಈ ಬಾರಿ ಕಾಂಗ್ರೆಸ್‌ ಗೆಲ್ಲಲು ಸಾಧ್ಯವಿರುವುದು ಎರಡು ಸ್ಥಾನ ಮಾತ್ರ. ಈ ಎರಡು ಸ್ಥಾನ ಯಾವ ಸಮುದಾಯಕ್ಕೆ ನೀಡಬೇಕು ಎಂಬ ಬಗ್ಗೆ ಹೈಕಮಾಂಡ್‌ ಮಟ್ಟದಲ್ಲಿ ತೀರ್ಮಾನವಾದ ನಂತರ ಅಭ್ಯರ್ಥಿ ಅಖೈರು ಆಗಲಿದೆ ಎನ್ನುತ್ತವೆ ಮೂಲಗಳು.

ನಿವೃತ್ತಿ ಯಾರಾರ‍ಯರು?
ಕಾಂಗ್ರೆಸ್‌: ಆರ್‌.ಬಿ.ತಿಮ್ಮಾಪುರ, ಅಲ್ಲಂ ವೀರಭದ್ರಪ್ಪ, ಎಸ್‌.ವೀಣಾ ಅಚ್ಚಯ್ಯ, ವಿ.ನಾರಾಯಣಸ್ವಾಮಿ.
ಬಿಜೆಪಿ: ಲೆಹರ್‌ ಸಿಂಗ್‌ ಸಿರೋಯಾ, ಲಕ್ಷ್ಮಣ ಸವದಿ.
ಜೆಡಿಎಸ್‌- ಎಚ್‌.ಎಂ.ರಮೇಶ್‌ಗೌಡ.