ಬಿಜೆಪಿ ಅಶಿಸ್ತನ್ನು ಸಹಿಸಲ್ಲ ಎಂದು ಯತ್ನಾಳ್ ಉಚ್ಚಾಟನೆಯನ್ನು ಹಿರಿಯ ನಾಯಕ ಸದಾನಂದ ಗೌಡ ಸಮರ್ಥಿಸಿದ್ದಾರೆ. ಇದೇ ವೇಳೆ ವಿಜಯೇಂದ್ರ ಬಣಕ್ಕೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ. ಒಂದೇ ಮಾತಿನಲ್ಲಿ ಎರಡೂ ಬಣಕ್ಕೂ ಗೌಡರು ಕೊಟ್ಟ ಟಾಂಗ್ ಏನು?

ಬೆಂಗಳೂರು(ಮಾ.26) ಬಿವೈ ವಿಜಯೇಂದ್ರ ಹಾಗೂ ಬಣದ ವಿರುದ್ದ ಮಾತನಾಡಿದ ಬಿಜೆಪಿಯ ಪ್ರಭಾವಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್‌ಗೆ ಸಂಕಷ್ಟ ಹೆಚ್ಚಾಗಿದೆ. ಪಾರ್ಟಿ ಸರಿ ಮಾಡುತ್ತೇನೆ ಎಂದು ಹೊರಟ ಬಸನಗೌಡ ಪಾಟೀಲ್ ಯತ್ನಾಳ್ ಇದೀಗ ಪಕ್ಷದಿಂದ ಹೊರಬಿದ್ದಿದ್ದಾರೆ. ಬಿಜೆಪಿ ಹೈಕಮಾಂಡ್ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು 6 ವರ್ಷ ಪಕ್ಷದಿಂದ ಉಚ್ಚಾಟಿಸಿದೆ. ಈ ಅಧಿಕೃತ ಪ್ರಕಟಣೆ ಹೊರಬೀಳುತ್ತಿದ್ದಂತೆ ಇದೀಗ ರಾಜ್ಯ ಬಿಜೆಪಿ ನಾಯಕರು ಶಿಸ್ತಿನ ಪಾರ್ಟಿ ಎಂದು ಮಾತನಾಡುತ್ತಿದ್ದಾರೆ. ಇದರ ನಡುವೆ ಹಿರಿಯ ನಾಯಕ ಸದಾನಂದ ಗೌಡ ಯತ್ನಾಳ್ ಉಚ್ಚಾಟನೆಯನ್ನು ಸಮರ್ಥಿಸಿದ್ದಾರೆ. ಇದೇ ವೇಳೆ ಬಿವೈ ವಿಜಯೇಂದ್ರ ಬಣಕ್ಕೂ ಟಾಂಗ್ ಕೊಟ್ಟಿದ್ದಾರೆ.

Add Asianetnews Kannada as a Preferred SourcegooglePreferred

ಬಿಜೆಪಿ ಪಕ್ಷದಲ್ಲಿ ಶಿಸ್ತು ಮುಖ್ಯ. ಶಿಸ್ತು ಮೀರಿದರೆ ಕ್ರಮ ಕೈಗೊಳ್ಳಲಾಗುತ್ತದೆ. ಅದೆಷ್ಟೇ ದೊಡ್ಡ ಸಮುದಾಯದ ನಾಯಕರಾದರೂ ಶಿಸ್ತಿನಿಂದ ಇದ್ದರೆ ಮಾತ್ರ ಸಮುದಾಯ ಜೊತೆಗಿರುತ್ತದೆ ಎಂದು ಡಿವಿ ಸದಾನಂದ ಗೌಡ ಹೇಳಿದ್ದಾರೆ. ಬಸನಗೌಡ ಪಾಟೀಲ್ ಯತ್ನಾಳ್ ಶಿಸ್ತು ಮೀರಿ ಮಾತನಾಡಿದ್ದರು. ಈ ಹಿಂದೆ ಯತ್ನಾಳ್ ಅವರನ್ನು ನಾನೇ ಪಕ್ಷದಿಂದ ಉಚ್ಚಾಟನೆ ಮಾಡಿದ್ದೆ. ಆದರೆ ಅಶಿಸ್ತು ಮುಂದುವರಿಸಿದ ಕಾರಣ ಹೈಕಮಾಂಡ್ ಕ್ರಮ ಕೈಗೊಂಡಿದೆ. ಐವರಿಗೆ ನೋಟಿಸ್ ನೀಡಿದಾಗಲೆ ಒಬ್ಬರ ತಲೆದಂಡ ಸ್ಪಷ್ಟವಾಗಿತ್ತು ಎಂದು ಸದಾನಂದ ಗೌಡ ಹೇಳಿದ್ದಾರೆ.

ಯುಗಾದಿಗೆ ಕೆಲವರಿಗೆ ಸಿಹಿ, ಕೆಲವರಿಗೆ ಬೇವು, ಬಣ ರಾಜಕೀಯಕ್ಕೆ ಬ್ರೇಕ್? ...

ರಾಜ್ಯ ಬಿಜೆಪಿ ಪಕ್ಷವನ್ನು ಬ್ಯಾಲೆನ್ಸ್ ಮಾಡಬೇಕಿದೆ. ಇದಕ್ಕಾಗಿ ಹೈಕಮಾಂಡ್ ನೋಟಿಸ್ ನೀಡಿದೆ. ಆದರೆ ಇದು ಯಾರಿಗೆ ಅರ್ಥವಾಗುತ್ತೆ ಎಂದು ಸದಾನಂದ ಗೌಡ ಹೇಳಿದ್ದಾರೆ. ಲಿಂಗಾಯತ ಸಮಾವೇಶ ಸಭೆ ರೇಣುಕಾಚಾರ್ಯ ಮೂಲಕ ಯಾರು ಮಾಡಿಸುತ್ತಾರೆ ಎನ್ನೋದು, ಗೊತ್ತಿರುವ ಸಂಗತಿ ಎಂದು ಹೇಳುವ ಮೂಲಕ ಸದಾನಂದ ಗೌಡ ಪರೋಕ್ಷವಾಗಿ ವಿಜಯೇಂದ್ರಗೆ ಟಾಂಗ್ ನೀಡಿದ್ದಾರೆ.

ಈ ಕುರಿತು ಹಲವು ಬಾರಿ ಕೋರ್ ಕಮಿಟಿ ಸಭೆಯಲ್ಲಿ ಉಲ್ಲೇಖಿಸಿದ್ದೇನೆ. ರಾಜ್ಯದಲ್ಲಿ ಪಕ್ಷ ಸಂಘಟನೆಗೆ ಆಗುತ್ತಿರುವ ಹಿನ್ನಡೆ ಕುರಿತು ಹೇಳಿದ್ದೇನೆ. ಉಚ್ಚಾಟನೆಯಿಂದ ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿಯಾಗಿದೆ ಎಂದಲ್ಲ. ವಿಜಯೇಂದ್ರ ಕಾರ್ಯಶೈಲಿ ಬಗ್ಗೆ ಬಹಿರಂಗವಾಗಿ ಮಾತನಾಡಲ್ಲ. ಆದರೆ ಹೈಕಮಾಂಡ್ ರಾಜ್ಯ ಬಿಜೆಪಿಯನ್ನು ಸರಿಮಾಡುವ ಕಾರ್ಯಕ್ಕೆ ಕೈಹಾಕಿದೆ. ಈಗಾಗಲೇ ಪಕ್ಷಕ್ಕೆ ಭಾರಿ ಡ್ಯಾಮೇಜ್ ಆಗಿದೆ. ಮೊದಲೈ ಕ್ರಮ ಕೈಗೊಂಡಿದ್ದರೆ ಇಷ್ಟು ಸಮಸ್ಯೆ ಆಗುತ್ತಿರಲಿಲ್ಲ. ಒಳಜಗಳ, ಬಣ ಜಗಳದಿಂದ ಕಾರ್ಯಕರ್ತರಿಗೂ ನೋವಾಗಿತ್ತು ಎಂದು ಸದಾನಂದ ಗೌಡ ಹೇಳಿದ್ದಾರೆ.

6 ತಿಂಗಳ ಬಳಿಕ ಎಚ್ಚೆತ್ತ ಬಿಜೆಪಿ: ಬಣಗಳಿಗೆ ನೋಟಿಸ್, ಮುಂದೇನು? Yatna ...