Asianet Suvarna News Asianet Suvarna News

ಕರ್ನಾಟಕದಲ್ಲಿ ಮಳೆ ಕೊರತೆ: ಮತ್ತೊಮ್ಮೆ ಬರಪರಿಸ್ಥಿತಿ ಸಮೀಕ್ಷೆಗೆ ತೀರ್ಮಾನ, ಬೈರೇಗೌಡ

ಕೇಂದ್ರದ ಮಾರ್ಗಸೂಚಿಗಳ ಪ್ರಕಾರ ರಾಜ್ಯದ ಯಾವ ತಾಲೂಕುಗಳನ್ನೂ ಬರಪೀಡಿತವೆಂದು ಘೋಷಿಸಲು ಸಾಧ್ಯವಿಲ್ಲ. ಆದರೆ, ಶುಷ್ಕ ವಾತಾವರಣ ಸತತವಾಗಿ ಮುಂದುವರೆದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಬರಗಾಲ ಪೀಡಿತ ತಾಲೂಕುಗಳೆಂದು ಘೋಷಣೆ ಮಾಡಬೇಕಾಗಿದೆ ಎಂದ ಕಂದಾಯ ಸಚಿವ ಕೃಷ್ಣ ಬೈರೇಗೌಡ 

Drought Survey Again in Karnataka Says Minister Krishna Byre Gowda grg
Author
First Published Sep 15, 2023, 6:48 AM IST

ಹುಬ್ಬಳ್ಳಿ(ಸೆ.15):  ರಾಜ್ಯದಲ್ಲಿ ಮಳೆ ಕೊರತೆ ಮುಂದುವರೆದಿದ್ದು, ಈಗಾಗಲೇ 195 ತಾಲೂಕುಗಳನ್ನು ಬರಪೀಡಿತ ಪ್ರವೇಶವೆಂದು ಘೋಷಣೆ ಮಾಡಲಾಗಿದೆ. ಈ ತಿಂಗಳ ಕೊನೆಯಲ್ಲಿ ಇನ್ನಷ್ಟು ತಾಲೂಕುಗಳ ಬರ ಪರಿಸ್ಥಿತಿ ಸಮೀಕ್ಷೆ ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ಗುರುವಾರ ನಗರದ ತಹಸೀಲ್ದಾರ್‌ ಕಚೇರಿಗೆ ದಿಢೀರ್‌ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರದ ಮಾರ್ಗಸೂಚಿಗಳ ಪ್ರಕಾರ ರಾಜ್ಯದ ಯಾವ ತಾಲೂಕುಗಳನ್ನೂ ಬರಪೀಡಿತವೆಂದು ಘೋಷಿಸಲು ಸಾಧ್ಯವಿಲ್ಲ. ಆದರೆ, ಶುಷ್ಕ ವಾತಾವರಣ ಸತತವಾಗಿ ಮುಂದುವರೆದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಬರಗಾಲ ಪೀಡಿತ ತಾಲೂಕುಗಳೆಂದು ಘೋಷಣೆ ಮಾಡಬೇಕಾಗಿದೆ ಎಂದರು.

ರಾಜ್ಯದ 195 ತಾಲೂಕಲ್ಲಿ ಬರ, ಸರ್ಕಾರ ಘೋಷಣೆ: ನಿಮ್ಮ ಊರು ಇದೆಯಾ ಚೆಕ್ ಮಾಡಿಕೊಳ್ಳಿ!

ಈಗಾಗಲೇ 161 ತೀವ್ರತರ ಮತ್ತು 34 ಸಾಧಾರಣ ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಿದ್ದೇವೆ. ಮಾರ್ಗಸೂಚಿ ಹಾಗೂ ರಾಜ್ಯದ ಇತರ ಸಮಸ್ಯೆಗಳ ಕುರಿತು ಚರ್ಚಿಸಲು ಪ್ರಧಾನಿ ಅವರ ಭೇಟಿಗೆ ಸಮಯ ಕೇಳಿ ಒಂದು ತಿಂಗಳು ಕಳೆದಿದೆ. ಆದರೆ, ಈವರೆಗೂ ಪ್ರಧಾನಿಗಳಿಂದ ಯಾವೊಂದು ಪ್ರತಿಕ್ರಿಯೆಯೂ ಸಿಕ್ಕಿಲ್ಲ. ಕೂಡಲೇ ಕೇಂದ್ರ ಸರ್ಕಾರ ಮುಖ್ಯಮಂತ್ರಿಗಳ ಭೇಟಿಗೆ ಅವಕಾಶ ಕಲ್ಪಿಸಬೇಕೆಂದು ಒತ್ತಾಯಿಸಿದರು.

ಡಿಜಿಟಲೀಕರಣ: 

ಮೊದಲಿಂದಲೂ ಕಂದಾಯ ಇಲಾಖೆ ಸಮಸ್ಯಾತ್ಮಕ ಇಲಾಖೆ ಎಂದು ಪರಿಗಣಿಸಲಾಗಿದೆ. ಈ ಎಲ್ಲ ಸವಾಲುಗಳನ್ನು ಮುಂದಿಟ್ಟುಕೊಂಡು ಇ-ಇಲಾಖೆ (ಡಿಜಿಟಲೀಕರಣ) ಸೇರಿ ಹತ್ತು ಹಲವು ಸುಧಾರಣೆ ಕ್ರಮಗಳತ್ತ ಹೆಜ್ಜೆ ಇಟ್ಟಿದ್ದೇವೆ. ಇದಕ್ಕೆ ರಾಜ್ಯ ಮತ್ತು ಜಿಲ್ಲಾಮಟ್ಟದ ಶೇ.70 ರಷ್ಟು ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ. ತಳಹಂತದಲ್ಲಿ ಅಧಿಕಾರಿಗಳಿಗೆ ಚುರುಕು ಮುಟ್ಟಿಸಲು ಕ್ರಮ ಕೈಗೊಳ್ಳಲಾಗುವುದು. ಕಂದಾಯ ಇಲಾಖೆಯನ್ನು ಡಿಜಿಟಲೀಕರಣಗೊಳಿಸಿ ಸಾರ್ವಜನಿಕರ ಅರ್ಜಿಗಳನ್ನು ಕಾಲಮಿತಿಯಲ್ಲಿ ವಿಲೇವಾರಿ ಮಾಡುವ ಮೂಲಕ ಭ್ರಷ್ಟಾಚಾರಕ್ಕೆ ಕಡಿವಾಣ ಹಾಗೂ ಕೆಲಸದಲ್ಲಿ ಪಾರದರ್ಶಕತೆ ತರಲು ಆದ್ಯತೆ ನೀಡಲಾಗುವುದು ಎಂದರು‌.

ಬರಗಾಲದ ಎಫೆಕ್ಟ್‌: ಬೆಂಗ್ಳೂರಿನತ್ತ ಕೆಲಸ ಅರಸಿ ಹೊರಟ ಜನ, ರೈಲು ಫುಲ್‌ ರಶ್‌..!

ಸ್ತಿ ಮೌಲ್ಯ ಶೇ.30ರಷ್ಟು ಹೆಚ್ಚಳ

ರಾಜ್ಯದಲ್ಲಿ ಆಸ್ತಿಗಳ ಸರ್ಕಾರಿ ಮಾರ್ಗಸೂಚಿ ಮೌಲ್ಯಕ್ಕೂ ಹಾಗೂ ಮಾರುಕಟ್ಟೆಯ ವಾಸ್ತವಿಕ ಮೌಲ್ಯಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಇದರಿಂದ ರೈತರು ಹಾಗೂ ಇತರ ಆಸ್ತಿ ಮಾಲೀಕರಿಗೆ ಹಾಗೂ ಭೂಸ್ವಾಧೀನ ಸಂತ್ರಸ್ತ ರೈತರಿಗೆ ಅನ್ಯಾಯವಾಗುತ್ತಿದೆ. ಅಲ್ಲದೇ ಕಪ್ಪುಹಣ ವಹಿವಾಟಿಗೆ ಉತ್ತೇಜನ ನೀಡಿದಂತಾಗಿದೆ. ಈ ಹಿನ್ನೆಲೆಯಲ್ಲಿ ಆಸ್ತಿಗಳ ಮೌಲ್ಯ ಪರಿಷ್ಕರಣೆ ಮಾಡಲು ಸರ್ಕಾರ ನಿರ್ಧಾರ ಮಾಡಿದೆ. ಕಳೆದ 5 ವರ್ಷಗಳಿಂದ ಆಸ್ತಿ ಮೌಲ್ಯ ಪರಿಷ್ಕರಣೆಗೊಂಡಿಲ್ಲ. ಕಂದಾಯ ಇಲಾಖೆ ನಿಯಮಾವಳಿ ಪ್ರಕಾರ ಪ್ರತಿ ವರ್ಷವೂ ಆಸ್ತಿಗಳ ಮೌಲ್ಯ ಪರಿಷ್ಕರಿಸಬೇಕು. ಈ ಹಿನ್ನೆಲೆಯಲ್ಲಿ ಸರ್ಕಾರ ಸರಾಸರಿ ಶೇ.30ರಷ್ಟು ಆಸ್ತಿ ಮೌಲ್ಯ ಹೆಚ್ಚಿಸಲು ತೀರ್ಮಾನಿಸಲಾಗಿದೆ. ಒಂದು ವೇಳೆ ಪರಿಷ್ಕರಣೆಯಲ್ಲಿ ಹೆಚ್ಚು ಮೌಲ್ಯ ನಿಗದಿಗೊಳಿಸಿರುವುದು ಕಂಡು ಬಂದಲ್ಲಿ ಅವುಗಳನ್ನು ಮತ್ತೊಮ್ಮೆ ಪರಿಶೀಲಿಸಿ ಪರಿಷ್ಕರಿಸಲು ಸೂಚನೆ ನೀಡಲಾಗುವುದು ಎಂದರು.

ಸರ್ವೋತ್ತಮ ಅಧಿಕಾರಿ ಪ್ರಶಸ್ತಿ: 

ಇಲಾಖೆಯಲ್ಲಿ ಅತ್ಯುತ್ತಮ ಕೆಲಸ ನಿರ್ವಹಿಸುವ ಅಧಿಕಾರಿಗೆ ಸರ್ವೋತ್ತಮ ಅಧಿಕಾರಿ ಪ್ರಶಸ್ತಿ ನೀಡಲು ಉದ್ದೇಶಿಸಲಾಗಿದೆ. ಅದೇ ರೀತಿ ಕರ್ತವ್ಯ ಲೋಪ ಎಸಗುವ ಅಧಿಕಾರಿಗಳ ಮೇಲೂ ನಿರ್ದಾಕ್ಷಿಣ್ಯ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದರು.

ಬರದ ಪಟ್ಟಿಯಿಂದ ಮುಂಡರಗಿ ಔಟ್! ರೈತರು ಕಂಗಾಲು, ಸರ್ಕಾರದ ವಿರುದ್ಧ ಆಕ್ರೋಶ

 

Follow Us:
Download App:
  • android
  • ios