ಕಾಳಿನದಿ ಪಕ್ಕದಲ್ಲಿಯೇ ಹರಿದರೆ ತಾಲೂಕಿಗೆ ಕುಡಿಯಲು ನೀರಿಲ್ಲ, ಅತ್ತ ನೀರಾವರಿಗೂ ನೀರಿಲ್ಲದಂತಹ ಸ್ಥಿತಿಯನ್ನು ಶಾಸಕ ದೇಶಪಾಂಡೆ ಸೃಷ್ಟಿಸಿದ್ದಾರೆ ಎಂದು ಕಿಡಿಕಾರಿರುವ ಮಾಜಿ ಶಾಸಕ ಸುನೀಲ ಹೆಗಡೆ, ಕಾಳಿನದಿ ನೀರಾವರಿ ಯೋಜನೆ ಜಾರಿಯಾಗಿದ್ದರೆ ತಾಲೂಕಿಗೆ ಇಂತಹ ದುಸ್ಥಿತಿ ಬರುತ್ತಿರಲಿಲ್ಲ ಎಂದು ಹೇಳಿದ್ದಾರೆ.

ಹಳಿಯಾಳ (ಆ.29) :  ಕಾಳಿನದಿ ಪಕ್ಕದಲ್ಲಿಯೇ ಹರಿದರೆ ತಾಲೂಕಿಗೆ ಕುಡಿಯಲು ನೀರಿಲ್ಲ, ಅತ್ತ ನೀರಾವರಿಗೂ ನೀರಿಲ್ಲದಂತಹ ಸ್ಥಿತಿಯನ್ನು ಶಾಸಕ ದೇಶಪಾಂಡೆ ಸೃಷ್ಟಿಸಿದ್ದಾರೆ ಎಂದು ಕಿಡಿಕಾರಿರುವ ಮಾಜಿ ಶಾಸಕ ಸುನೀಲ ಹೆಗಡೆ, ಕಾಳಿನದಿ ನೀರಾವರಿ ಯೋಜನೆ ಜಾರಿಯಾಗಿದ್ದರೆ ತಾಲೂಕಿಗೆ ಇಂತಹ ದುಸ್ಥಿತಿ ಬರುತ್ತಿರಲಿಲ್ಲ ಎಂದು ಹೇಳಿದ್ದಾರೆ.

ಹಳಿಯಾಳ ವಿಧಾನಸಭಾ ಕ್ಷೇತ್ರವನ್ನು ಬರಪೀಡಿತವೆಂದು ಘೋಷಿಸುವುದು ಸೇರಿದಂತೆ ವಿವಿಧ ಬೇಡಿಕೆಗೆ ಆಗ್ರಹಿಸಿ ಸೋಮವಾರ ಬಿಜೆಪಿ ಹಮ್ಮಿಕೊಂಡ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು.

ನಾನು ಶಾಸಕನಾಗಿದ್ದ ವೇಳೆ ಕಾಳಿನದಿ ಯೋಜನೆಗೆ 2012ರಲ್ಲಿಯೇ ಸರ್ಕಾರದಿಂದ . 220 ಕೋಟಿ ಮಂಜೂರು ಮಾಡಿಸಿದ್ದರೂ ಈ ವರೆಗೂ ಯೋಜನೆ ಕಾರ್ಯಗತವಾಗಿಲ್ಲ. ದೇಶಪಾಂಡೆ ಅವರು ಪ್ರತಿ ಚುನಾವಣೆಯಲ್ಲಿ ಕಾಳಿನದಿ ನೀರಾವರಿ ಯೋಜನೆ ಜಾರಿಗೊಳಿಸುತ್ತೇನೆ ಎಂದು ಸುಳ್ಳು ಭರವಸೆ ನೀಡುತ್ತಾ ಬರುತ್ತಿದ್ದಾರೆ ಎಂದು ಟೀಕಿಸಿದರು.

ಕ್ರಾಂತಿಕಾರಕ ಕಾಯ್ದೆಯ ರೂವಾರಿ ದೇವರಾಜ ಅರಸು: ಶಾಸಕ ದೇಶಪಾಂಡೆ

ಕಾಂಗ್ರೆಸ್‌ ಸರ್ಕಾರ ರಾಜ್ಯವನ್ನು ದಿವಾಳಿಯತ್ತ ಕೊಂಡೊಯ್ಯುತ್ತಿದ್ದು, ಸರ್ಕಾರದ ವಿವಿಧ ಇಲಾಖೆಗಳ ಸಿಬ್ಬಂದಿಗಳ ವೇತನ ಕಳೆದೆರೆಡು ತಿಂಗಳಿಂದ ಆಗಿಲ್ಲ ಎಂದ ಅವರು, ಲೋಕಸಭಾ ಚುನಾವಣೆ ಗಮನದಲ್ಲಿಟ್ಟು ಕೊಂಡೆ ಕಾಂಗ್ರೆಸ್‌ ಆಡಳಿತ ನಡೆಸುತ್ತಿದೆ. ಸರ್ಕಾರದ ಬಳಿ ಆರ್ಥಿಕ ಸಂಪನ್ಮೂಲಗಳು ಇಲ್ಲದಿದ್ದರೂ ಯೋಜನೆಗಳನ್ನು ಘೋಷಿಸಿ ಮತದಾರರನ್ನು ಮರಳು ಮಾಡುತ್ತಿದೆ ಎಂದು ಆರೋಪಿಸಿದರು. ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿ ತಂದಿದ್ದಂತಹ ಎಲ್ಲ ಜನಪರ ಯೋಜನೆಗಳನ್ನು ನಿಲ್ಲಿಸುವ ಕೆಲಸವನ್ನು ಕಾಂಗ್ರೆಸ್‌ ಸರ್ಕಾರ ಮಾಡುತ್ತಿದ್ದು, ಬಿಜೆಪಿ ವಿರುದ್ಧ ಸೇಡಿನ ರಾಜಕಾರಣ ಮಾಡುತ್ತಿದ್ದೆ ಎಂದು ಕಿಡಿಕಾರಿದರು.

ಹಳಿಯಾಳ ವಿಧಾನಸಭಾ ಕ್ಷೇತ್ರದಲ್ಲಿ ಮಳೆಯ ಕೊರತೆಯಿದ್ದು, ಇಡೀ ಕ್ಷೇತ್ರವನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ, ಕಬ್ಬು ಬೆಳೆಗಾರರು ಹಾಗೂ ಇತರ ರೈತರು ಸೊಸೈಟಿ, ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಮಾಡಿದ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು. ಹೊಸ ಬೆಳೆ ಬಿತ್ತನೆಗೆ ಸರ್ಕಾರವೇ ಹಣಕಾಸಿನ ವ್ಯವಸ್ಥೆ ಮಾಡಬೇಕು ಎಂದರು.

ಬಿಜೆಪಿ ಮುಖಂಡ ಮಂಗೇಶ ದೇಶಪಾಂಡೆ ಮಾತನಾಡಿ, ಕಾಂಗ್ರೆಸ್‌ ಸರ್ಕಾರ ಅಧಿಕಾರದ ಮದದಲ್ಲಿ ಜನರ ಹಿತವನ್ನೇ ಮರೆತಿದೆ ಎಂದರು.

ಇದಕ್ಕೂ ಮೊದಲು ಪಟ್ಟಣದ ಗಣೇಶ ಕಲ್ಯಾಣ ಮಂಟಪದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಬಸ್‌ ಸ್ಟ್ಯಾಂಡ್‌ ರಸ್ತೆ, ಅರ್ಬನ ಸರ್ಕಲ್‌ ಹಾಗೂ ಮಾರುಕಟ್ಟೆಯ ರಸ್ತೆ ಮುಖಾಂತರ ತಾಲೂಕಾಡಳಿತ ಸೌಧದವರೆಗೂ ಸಾಗಿತು. ತಹಸೀಲ್ದಾರ್‌ ಜಿ.ಕೆ. ರತ್ನಾಕರ ಮೂಲಕ ಬೇಡಿಕೆಗಳ ಮನವಿಯನ್ನು ಸರ್ಕಾರಕ್ಕೆ ಸಲ್ಲಿಸಿದರು.

'ಪವಿತ್ರ ಸೇವಾವೃತ್ತಿಯನ್ನು ವ್ಯಾಪಾರ ಮಾಡಿದ್ದೀರಿ' ವೈದ್ಯರಿಗೆ ಆರ್‌ವಿ ದೇಶಪಾಂಡೆ ಚಿಕಿತ್ಸೆ!

ಹಳಿಯಾಳ ತಾಲೂಕು ಬಿಜೆಪಿ ಘಟಕ ಅಧ್ಯಕ್ಷ ಗಣಪತಿ ಕರಂಜೇಕರ, ಜೋಯಿಡಾ ತಾಲೂಕಾಧ್ಯಕ್ಷ ಸಂತೋಷ ರೆಡೆಕರ, ಶಿವಾಜಿ ನರಸಾನಿ, ಗಿರೀಶ ಠೊಸುರ, ಚಂದ್ರಕಾಂತ ಕಮ್ಮಾರ, ಸಂತೋಷ ಘಟಕಾಂಬ್ಳೆ, ಉಮೇಶ ದೇಶಪಾಂಡೆ, ಬಸಣ್ಣ ಕುರುಬಗಟ್ಟಿ, ವಿ.ಬಿ. ರಾಮಚಂದ್ರ, ಸಿದ್ದು ಶೆಟ್ಟಿ, ಯಲ್ಲಪ್ಪಾ ಹೊನ್ನೋಜಿ, ಆಕಾಶ ಉಪ್ಪಿನ ಇದ್ದರು.