ನಟ ಚೇತನ್ ಅಹಿಂಸಾ ಅವರು ಡಾ. ರಾಜ್‌ಕುಮಾರ್ ಅವರ ಸಮಾಧಿ ಕುರಿತು ನೀಡಿದ ಹೇಳಿಕೆಯು ತೀವ್ರ ವಿವಾದಕ್ಕೆ ಕಾರಣವಾಗಿದೆ. ಈ ಹೇಳಿಕೆಯನ್ನು ಖಂಡಿಸಿ, ಸಾ.ರಾ.ಗೋವಿಂದು ನೇತೃತ್ವದಲ್ಲಿ ರಾಜ್ ಅಭಿಮಾನಿಗಳು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತಿದ್ದು, ಚೇತನ್ ಅವರನ್ನು ಗಡಿಪಾರಿಗೆ ಒತ್ತಾಯ.

ಬೆಂಗಳೂರು (ಮೇ.5): ನಟ ಚೇತನ್ ಅಹಿಂಸಾ ಅವರು ಮಾತಾಡಿದ್ದೆಲ್ಲ ವಿವಾದಕ್ಕೀಡಾಗುತ್ತಿವೆ. ಅದರ ಸಾಲಿಗೆ ಇದೀಗ ಡಾ. ರಾಜ್ ಅವರ ಸಮಾಧಿ ಕುರಿತು ಆಡಿದ ಮಾತುಗಳು ಸಂಘರ್ಷದ ಕಿಚ್ಚು ಹಚ್ಚಿದೆ. ಕನ್ನಡದ ಆಸ್ತಿ, ಕರ್ನಾಟಕ ರತ್ನ ಡಾ. ರಾಜ್‌ಕುಮಾರ್ ಅವರ ಪುಣ್ಯಭೂಮಿ ಕುರಿತಾದ ಚೇತನ್ ಅವರ ಆಕ್ಷೇಪಾರ್ಹ ಪೋಸ್ಟ್ ನಾಡಿನಾದ್ಯಂತ ರಾಜ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದು, ನಟ ಚೇತನ್ ವಿರುದ್ಧ ಇಂದು ಬೆಂಗಳೂರು ಪ್ರತಿಭಟನೆಯ ಕೇಂದ್ರಬಿಂದುವಾಗಿದೆ.

ನಮ್ಮ ಅಣ್ಣಾವ್ರ ಬಗ್ಗೆ ಮಾತನಾಡಲು ನಿನಗೆಷ್ಟು ಧೈರ್ಯ?

ನಟ ಚೇತನ್ ಹೇಳಿಕೆಯನ್ನು ಖಂಡಿಸಿ ಅಖಿಲ ಕರ್ನಾಟಕ ಡಾ. ರಾಜ್‌ಕುಮಾರ್ ಅಭಿಮಾನಿಗಳ ಸಂಘವು ಹಿರಿಯ ಕನ್ನಡ ಹೋರಾಟಗಾರ ಸಾ.ರಾ.ಗೋವಿಂದು ಅವರ ನೇತೃತ್ವದಲ್ಲಿ ಇಂದು ಬೃಹತ್ ಹೋರಾಟಕ್ಕೆ ಕರೆ ನೀಡಿದೆ. ಕೇವಲ ಬೆಂಗಳೂರು ಮಾತ್ರವಲ್ಲದೆ, ವಿವಿಧ ಜಿಲ್ಲೆಗಳಿಂದ ಸಾವಿರಾರು ಅಭಿಮಾನಿಗಳು ರಾಜಧಾನಿಯ ಫ್ರೀಡಂ ಪಾರ್ಕ್‌ನತ್ತ ಧಾವಿಸುತ್ತಿದ್ದಾರೆ. 'ನಮ್ಮ ಅಣ್ಣಾವ್ರ ಬಗ್ಗೆ ಮಾತನಾಡಲು ನಿನಗೆ ಎಷ್ಟು ಧೈರ್ಯ?' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಟ ಚೇತನ್ ವಿರುದ್ಧ ಸಾರಾ ಗೋವಿಂದು ವಾಗ್ದಾಳಿ

48 ವರ್ಷದ ಕನ್ನಡದ ಹೋರಾಟದಲ್ಲಿ ನಾನು ಯಾವತ್ತೂ ರಾಜೀ ಆದವನಲ್ಲ. ನನ್ನ ಕನ್ನಡದ ಹೋರಾಟಕ್ಕೆ ಶಕ್ತಿ ಮತ್ತು ಸ್ಫೂರ್ತಿಯೇ ಡಾ. ರಾಜ್‌ಕುಮಾರ್. ಇವತ್ತು ಎಲ್ಲಿಂದಲೋ ಬಂದ ಯಕ್ಚಿತ್ ಚೇತನ್ ಎಂಬ ವ್ಯಕ್ತಿ ನನ್ನ ವಿರುದ್ಧ ಮೊಕದ್ದಮೆ ಹೂಡಿದ್ದಾನೆ. ಇದಕ್ಕೆಲ್ಲ ನಾನು ಹೆದರೋಲ್ಲ ಎಂದು ಗುಡುಗಿದರು.

ಗೋಕಾಕ್ ಚಳವಳಿ ಬಗ್ಗೆ ಚೇತನ್‌ಗೇನು ಗೊತ್ತು?

ಈ ವೇಳೆ ರಾಜ್ ಸಮಾಧಿಯ ಜಾಗದ ಬಗ್ಗೆ ಸ್ಪಷ್ಟನೆ ನೀಡಿದ ಸಾ.ರಾ.ಗೋವಿಂದು, 'ಗೋಕಾಕ್ ಚಳುವಳಿ ಮುಂದಾಳತ್ವ ವಹಿಸಿಕೊಂಡವರ ಬಗ್ಗೆ ಗೊತ್ತಾ ನಿಮಗೆ? ಸುಮ್ಮನೆ ಕೊಡ್ತಾರಾ ಪ್ರಶಸ್ತಿಗಳನ್ನ? ಗೋಕಾಕ್ ಹೋರಾಟದ ಕಥೆ ಗೊತ್ತಾ ನಿನಗೆ? ಸಮಾಧಿ ಮಾಡೋಕೆ ರಾಜ್ ಕುಮಾರ್ ಅವರಿಗೆ ಬೇರೆ ಎಲ್ಲೂ ಜಾಗ ಇರಲಿಲ್ವಾ? ಕುಂಬಳಗೋಡಿಯಲ್ಲಿ 15 ಎಕರೆ ಜಾಗ ಇತ್ತು. ಅವರೇ ಆಸೆ ಪಟ್ಟಿದ್ರು ಸಹೋದರ ಕುಟುಂಬ ಮಣ್ಣು ಮಾಡಿರೋ ಜಾಗದಲ್ಲೇ ಆಗಬೇಕು ಅಂತ. ಆದರೆ ಕಂಠೀರವ ಸ್ಟುಡಿಯೋದಲ್ಲಿ ಅಭಿಮಾನಿಗಳಿಗಾಗಿ ಮಾಡಲಾಯಿತು. ಅಲ್ಲೇ ಮಾಡಿ ಎಂದು ಅಣ್ಣಾವ್ರು ಏನು ಜಾಗ ಕೇಳಿರಲಿಲ್ಲ. ಇಂತಹ ಮಹನೀಯರ ಬಗ್ಗೆ ಈ 'ಯಕಶ್ಚಿತ್ ಚೇತನ್' ಮಾತನಾಡುವುದನ್ನು ಸಹಿಸಲು ಸಾಧ್ಯವಿಲ್ಲ' ಎಂದು ಕಿಡಿಕಾರಿದರು.

ಚೇತನ್ ದೂರಿಗೆ ನಾನು ಹೆದರುವವನಲ್ಲ:

ಇತ್ತೀಚೆಗಷ್ಟೇ ಸಾ.ರಾ.ಗೋವಿಂದು ಅವರ ವಿರುದ್ಧವೇ ಚೇತನ್ ಶೇಷಾದ್ರಿಪುರಂ ಠಾಣೆಯಲ್ಲಿ ದೂರು ನೀಡಿದ್ದರು. ಈ ವಿಚಾರವಾಗಿ ಮಾತನಾಡಿದ ಅವರು, 'ನೀನು ದೂರು ನೀಡಿದ್ದಕ್ಕೆ ನಾನು ಹೆದರುವುದಿಲ್ಲ, ಜೈಲಿಗೆ ಹೋಗಲೂ ಸಿದ್ಧ. ಅಣ್ಣಾವ್ರ ಪರವಾಗಿ ಹೋರಾಡಿ ಜೈಲಿಗೆ ಹೋದೆ ಎಂಬ ಹೆಮ್ಮೆ ನನಗಿರುತ್ತದೆ ಎಂದು ಚೇತನ್ ಸವಾಲಿಗೆ ತಿರುಗೇಟು ನೀಡಿದ್ದಾರೆ.

ಈಗಾಗಲೇ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ತೀವ್ರಗೊಂಡಿದ್ದು, ನಿರ್ಮಾಪಕ ಎಂ. ನರಸಿಂಹಲು, ಎನ್.ಎಂ. ಸುರೇಶ್ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದಾರೆ. 'ಕನ್ನಡ ವಿರೋಧಿ ಧೋರಣೆ ತೋರುತ್ತಿರುವ ಚೇತನ್‌ನನ್ನು ಕೂಡಲೇ ಗಡಿಪಾರು ಮಾಡಬೇಕು' ಎಂಬ ಬಲವಾದ ಒತ್ತಾಯ ಕೇಳಿಬಂದಿದೆ. ಪ್ರತಿಭಟನೆಯ ಬಳಿಕ ಸಾವಿರಾರು ಅಭಿಮಾನಿಗಳೊಂದಿಗೆ ಸಾ.ರಾ.ಗೋವಿಂದು ಅವರು ಶೇಷಾದ್ರಿಪುರಂ ಪೊಲೀಸ್ ಠಾಣೆಗೆ ತೆರಳಿ ಚೇತನ್ ವಿರುದ್ಧ ಅಧಿಕೃತ ದೂರು ದಾಖಲಿಸಲಿದ್ದಾರೆ. ಹೈಕೋರ್ಟ್ ನಿಯಮಗಳ ಅನ್ವಯ ಶಾಂತಿಯುತವಾಗಿ ಪ್ರತಿಭಟನೆ ನಡೆಸಿ, ಕಾನೂನು ಹೋರಾಟ ಮುಂದುವರಿಸಲು ನಿರ್ಧರಿಸಿದ್ದಾರೆ.