Asianet Suvarna News Asianet Suvarna News

ಹಲಾಲ್‌, ಹಿಜಾಬ್‌ ವಿವಾದದಲ್ಲಿ ಸರ್ಕಾರದ ಪಾತ್ರ: ಸುಧಾಕರ್‌ ಹೇಳಿದ್ದಿಷ್ಟು

*  ವಿವಾದದ ಹಿಂದಿರುವ ವ್ಯಕ್ತಿಗಳ ಬಗ್ಗೆ ತಿಳಿಯಲು ತನಿಖೆ ಅಗತ್ಯ
*  ಹಿಜಾಬ್‌ ಕುರಿತ ಜವಾಹಿರಿ ಹೇಳಿಕೆಗೆ ಖಂಡನೆ
*  ವೈರಾಣು ರೂಪಾಂತರ ಸಹಜ
 

Dr K Sudhakar React on Halal Hijab Row in Karnataka grg
Author
Bengaluru, First Published Apr 8, 2022, 5:58 AM IST

ಬೆಂಗಳೂರು(ಏ.08):  ನಮ್ಮ ಸರ್ಕಾರ ಪ್ರತಿ ಧರ್ಮವನ್ನು ಸಮಾನವಾಗಿ ಕಾಣುತ್ತದೆ. ಇಲ್ಲಿ ಯಾರೂ ಮೇಲು, ಕೀಳು ಅಲ್ಲ. ಪ್ರತಿಯೊಬ್ಬರಿಗೂ ಅವರ ಧರ್ಮದ ಅನುಸಾರ ಆಚರಣೆಗಳನ್ನು ಮಾಡಲು ಕಾನೂನಿನಲ್ಲಿ ಸಮಾನ ಅವಕಾಶವಿದೆ. ಭಾವೈಕ್ಯತೆಗೆ ಧಕ್ಕೆ ತರುವ ಕೆಲಸವನ್ನು ಸರ್ಕಾರ ಮಾಡಿಲ್ಲ. ಈಗ ನಡೆಯುತ್ತಿರುವ ಘಟನೆಗಳಿಗೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌(Dr K Sudhakar) ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಯಾವುದೇ ಒಂದು ಧರ್ಮದ(Religion) ಸರ್ಕಾರ ಅಲ್ಲ, ಇದು ಎಲ್ಲರ ಸರ್ಕಾರ. ಹಿಜಾಬ್, ಹಲಾಲ ಮೊದಲಾದ ಧಾರ್ಮಿಕ ವಿವಾದಗಳಲ್ಲಿ ಸರ್ಕಾರದ ಪಾತ್ರವಿಲ್ಲ. ನಮ್ಮ ಜಾತ್ಯತೀತ ನಿಲುವಿನಲ್ಲಿ ಬದಲಾವಣೆಯೇನೂ ಆಗಿಲ್ಲ. ಹಲಾಲ್ ನಿಷೇಧದ ಹಿಂದೆ ಯಾರಿದ್ದಾರೆಂದು ನನಗೂ ತಿಳಿದಿಲ್ಲ. ಆದರೆ ಇದರಲ್ಲಿ ಸರ್ಕಾರದ ಪಾತ್ರ ಎಳ್ಳಷ್ಟೂಇಲ್ಲ. ಇದರ ಹಿಂದೆ ಯಾರಿದ್ದಾರೆ ಎಂಬುದರ ಬಗ್ಗೆ ತನಿಖೆ ನಡೆಯಬೇಕಾದ ಅಗತ್ಯವಿದೆ’ ಎಂದು ಹೇಳಿದರು.

Covid Crisis: ಕರ್ನಾಟಕದಲ್ಲೂ ಮಾಸ್ಕ್‌ ಕಡ್ಡಾಯ ನಿಯಮ ರದ್ದು?

‘ಭಯೋತ್ಪಾದಕರಿಗೆ ಭಯ ಹುಟ್ಟಿಸಲು ಜನರ ಮುಗ್ಧತೆಯನ್ನು ಮುಖ್ಯ ಅಸ್ತ್ರವಾಗಿ ಬಳಸಿಕೊಳ್ಳುತ್ತಾರೆ. ಅಲ್‌ ಖೈದಾ ಉಗ್ರ ಜವಾಹಿರಿಯಿಂದ ಪ್ರಶಂಸೆಗೆ ಒಳಗಾದ ಮಂಡ್ಯ ವಿದ್ಯಾರ್ಥಿನಿ ಮುಸ್ಕಾನ್‌ ಮುಗ್ಧೆ. ಆದರೆ ನಾವೆಲ್ಲರೂ ಕಾನೂನು ಪಾಲನೆ ಮಾಡಬೇಕು. ಶಿಕ್ಷಣಕ್ಕೆ, ಶಿಕ್ಷಣ ಸಂಸ್ಥೆಗೆ ಗೌರವ ಕೊಡಬೇಕು. ಶಾಲೆಯಲ್ಲಿ ಧರ್ಮವನ್ನು ಬದಿಗಿಟ್ಟು ಶಿಕ್ಷಣಕ್ಕೆ ಗೌರವ ಕೊಡಬೇಕು’ ಎಂದರು.

‘ಅಲ್‌ ಖೈದಾ ಅಂತಾರಾಷ್ಟ್ರೀಯ ಮಟ್ಟದ ಭಯೋತ್ಪಾದನಾ ಸಂಘಟನೆ(Terrorist Organization). ಈ ಸಂಘಟನೆಯ ಹೇಳಿಕೆಯನ್ನು ಭಾರತೀಯರು ಒಕ್ಕೊರಲಿನಿಂದ ಖಂಡಿಸುತ್ತದೆ. ಅವನಾರೋ ಹೇಳಿಕೆ ನೀಡಿದರೆ ನಮಗೆ ಅದು ಮುಖ್ಯವಾಗುವುದಿಲ್ಲ. ಆ ಸಂಘಟನೆಯನ್ನು ಭಾರತ ಎಲ್ಲ ರೀತಿಯಿಂದಲೂ ಬಹಿಷ್ಕಾರ ಹಾಕಿದೆ. ಅವರ ಹೇಳಿಕೆ ಬಗ್ಗೆ ಮಾತನಾಡುವುದೇ ಒಂದು ಅಪರಾಧ. ಅಮಾಯಕ ಜನರನ್ನು ಬಲಿ ಪಡೆಯುವ, ಅತ್ಯಂತ ಕೌರ್ಯ ಮೆರೆಯುವ ಸಂಘಟನೆಯದು’ ಎಂದು ಸಚಿವರು ಹೇಳಿದರು.

ವೈರಾಣು ರೂಪಾಂತರ ಸಹಜ:

ವೈರಾಣುಗಳು ರೂಪಾಂತರಗೊಳ್ಳುತ್ತಿರುತ್ತದೆ. ರೂಪಾಂತರಗೊಳ್ಳುವುದು ಅದರ ಮೂಲಭೂತ ಗುಣ. ಈಗ ಎಕ್ಸ್‌ಇ ರೂಪಾಂತರ ಪತ್ತೆ ಆಗಿದೆ. ನಾವು ವಿಶ್ವ ಆರೋಗ್ಯ ಸಂಸ್ಥೆಯ ಜೊತೆ ಸಂಪರ್ಕದಲ್ಲಿದ್ದೇವೆ. ಇದೆಲ್ಲದರ ವಸ್ತು ಸ್ಥಿತಿಯ ಬಗ್ಗೆ ಪರಿಶೀಲನೆ ಮಾಡುತ್ತಿದೇವೆ ಎಂದು ಸಚಿವರು ಹೇಳಿದರು.

ಹೃದಯ ಕಾಯಿಲೆ ಪತ್ತೆಗೆ ಕೃತಕ ಬುದ್ಧಿಮತ್ತೆ:

ಬೆಂಗಳೂರು:  ರೋಗ ಬಂದ ಬಳಿಕ ಚಿಕಿತ್ಸೆ ನೀಡುವ ಬದಲು, ರೋಗದ ಸಂಭವನೀಯತೆಯನ್ನು ಹೇಳುವ ತಪಾಸಣಾ ವ್ಯವಸ್ಥೆ ರಾಜ್ಯದಲ್ಲಿ ಬೆಳೆಯಬೇಕಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ಹೇಳಿದರು.

ಚಿಕ್ಕಬಳ್ಳಾಪುರಕ್ಕೆ ಚುನಾವಣಾ ಚಾಣಕ್ಯ ಅಮಿತಾ ಶಾ ಆಗಮನ: ಬಿಜೆಪಿ ಹವಾ ಎಬ್ಬಿಸಲು ಸುಧಾಕರ್‌ ಕರೆ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆರೋಗ್ಯ ಸೌಧದಲ್ಲಿ ನಡೆದ ’ವಿಶ್ವ ಆರೋಗ್ಯ ದಿನ’(World Health Day) ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಹೃದಯ ಕಾಯಿಲೆಗಳನ್ನು(Heart Disease) ಮುಂಚಿತವಾಗಿ ಪತ್ತೆ ಹಚ್ಚುವ ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನ ಬಂದಿದೆ. ನಮ್ಮ ರಾಜ್ಯದಲ್ಲಿ ಎರಡು ಜಿಲ್ಲೆಯಲ್ಲಿ ಈ ವರ್ಷದಿಂದ ಪ್ರಾಯೋಗಿಕವಾಗಿ ಈ ತಂತ್ರಜ್ಞಾನವನ್ನು ಸರ್ಕಾರ ಬಳಸಲಿದೆ ಎಂದು ಹೇಳಿದರು.

ಶ್ವಾಸಕೋಶ ಸೇರಿದಂತೆ ದೇಹದ ಎಲ್ಲ ಭಾಗಗಳು ಉತ್ತಮವಾಗಿ ಕೆಲಸ ಮಾಡಲು ಶುದ್ಧ ಆಮ್ಲಜನಕ, ಶುದ್ಧ ಆಹಾರ ಬೇಕು. ಆದರೆ ವಾಯುಮಾಲಿನ್ಯದಿಂದಾಗಿ ಗಾಳಿ ಕಲುಷಿತವಾಗಿದೆ. ತಂಪು ಪಾನೀಯ, ಜಂಕ್‌ ಆಹಾರ ಸೇವನೆಯಿಂದ ಬೊಜ್ಜು ಅತಿಯಾಗಿ ಹೃದಯ ಸಂಬಂಧಿ ಸಮಸ್ಯೆಗಳು, ಕ್ಯಾನ್ಸರ್‌, ಶ್ವಾಸಕೋಶ ಸಂಬಂಧಿ ಸಮಸ್ಯೆಗಳು ಹೆಚ್ಚಾಗಿವೆ. ಬಹುತೇಕ ಮಂದಿ ರೋಗ ಬಂದ ಬಳಿಕ ಆಸ್ಪತ್ರೆಗೆ(Hospital) ಬರುತ್ತಿದ್ದಾರೆ. ಇದರ ಬದಲು, ರೋಗದ ಸಂಭವನೀಯತೆಯನ್ನು ಹೇಳುವ ಆಧುನಿಕ ತಂತ್ರಜ್ಞಾನಗಳ ಬಳಕೆಯಿಂದ, ರೋಗ ಬರುವ ಮುನ್ನವೇ ಅದರ ಸಾಧ್ಯತೆಯನ್ನು ಹೇಳಲು ಸಾಧ್ಯವಿದೆ ಎಂದರು.

Follow Us:
Download App:
  • android
  • ios