Asianet Suvarna News Asianet Suvarna News

ರಾಜ್ಯದಲ್ಲಿ ವೈಜ್ಞಾನಿಕವಾಗಿ ಜಾತಿ ಸಮೀಕ್ಷೆ ಮಾಡಿ: ಶಾಸಕ ಶಾಮನೂರು ಶಿವಶಂಕರಪ್ಪ

ವೀರಶೈವ ಲಿಂಗಾಯತ ಸಮುದಾಯದ ಎಲ್ಲಾ ಒಳ ಪಂಗಡಗಳನ್ನು ಕೇಂದ್ರ ಸರ್ಕಾರದ ಒಬಿಸಿ ಪಟ್ಟಿಗೆ ಸೇರಿಸುವುದು ಒಟ್ಟು ಎಂಟು ನಿರ್ಣಯಗಳನ್ನು ಭಾನುವಾರ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ 24ನೇ ಮಹಾ ಅಧಿವೇಶನದಲ್ಲಿ ಕೈಗೊಳ್ಳಲಾಯಿತು.

Do a scientific caste survey in the state Says Mla Shamanur Shivashankarappa gvd
Author
First Published Dec 25, 2023, 1:56 PM IST

ದಾವಣಗೆರೆ (ಡಿ.25): ರಾಜ್ಯದಲ್ಲಿ ಹೊಸದಾಗಿ ವೈಜ್ಞಾನಿಕವಾಗಿ ಜಾತಿ ಸಮೀಕ್ಷೆ ನಡೆಸುವುದು, ವಿಶ್ವ ಗುರು ಬಸವಣ್ಣನವರನ್ನು ರಾಜ್ಯದ ಸಾಂಸ್ಕೃತಿಕ ನಾಯಕರೆಂದು ಸರ್ಕಾರ ಅಧಿಕೃತವಾಗಿ ಘೋಷಿಸುವುದು, ವೀರಶೈವ ಲಿಂಗಾಯತ ಸಮುದಾಯದ ಎಲ್ಲಾ ಒಳ ಪಂಗಡಗಳನ್ನು ಕೇಂದ್ರ ಸರ್ಕಾರದ ಒಬಿಸಿ ಪಟ್ಟಿಗೆ ಸೇರಿಸುವುದು ಒಟ್ಟು ಎಂಟು ನಿರ್ಣಯಗಳನ್ನು ಭಾನುವಾರ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ 24ನೇ ಮಹಾ ಅಧಿವೇಶನದಲ್ಲಿ ಕೈಗೊಳ್ಳಲಾಯಿತು.

ನಗರದ ಬಾಪೂಜಿ ಎಂಬಿಎ ಕಾಲೇಜು ಮೈದಾನದಲ್ಲಿ ನಡೆದ ಮಹಾ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದ ಡಾ.ಶಾಮನೂರು ಶಿವಶಂಕರಪ್ಪನವರು ಮಠಾಧೀಶರು, ಸಮಾಜದ ಮುಖಂಡರು, ಸಮಾಜ ಬಾಂಧವರ ಸಮ್ಮುಖದಲ್ಲಿ ಅಖಿಲ ಭಾರತ ವೀರಶೈವಲಿಂಗಾಯತ ಮಹಾಸಭಾ ಕೈಗೊಂಡ 8 ನಿರ್ಣಯಗಳನ್ನು ಮಂಡಿಸಿದ್ದು, ಸಮಾಜಬಾಂಧವರು ಎದ್ದು ನಿಂತು ಕರತಾಡನದ ಮೂಲಕ ಸಮ್ಮತಿ ಸೂಚಿಸಿದರು.

ಬಡತನ ದೂರ ಮಾಡುವುದೇ ಪ್ರಧಾನಿ ಮೋದಿ ಸಂಕಲ್ಪ: ಪ್ರಲ್ಹಾದ್‌ ಜೋಶಿ

ಏನೇನು ನಿರ್ಣಯಗಳು?
1. ದೇಶದ ಅಖಂಡತೆ, ಏಕತೆ, ಸಮಗ್ರತೆ, ಭದ್ರತೆಯ ರಕ್ಷಣೆ ಅಖಿಲ ಭಾರತ ವೀರಶೈವ ಮಹಾಸಭಾ ಹಾಗೂ ಸಮಾಜ ಸದಾ ಕಟಿಬದ್ಧ‍ವಾಗಿದ್ದು, ಅಂಥ ಯಾವುದೇ ಹೋರಾಟ, ಪ್ರಯತ್ನಗಳಿಗೆ ಹಿಂದಿನಂತೆಯೇ ಪ್ರೋತ್ಸಾಹ, ಬೆಂಬಲ ನೀಡುತ್ತದೆ.

2. ಹನ್ನೆರಡನೇ ಶತಮಾನದಲ್ಲೇ ಅನುಭವ ಮಂಟಪದ ಮೂಲಕ ಸಂಸತ್ತಿನ ಮತ್ತು ಸಮ ಸಮಾಜದ ಪರಿಕಲ್ಪನೆಯನ್ನು ಜಗತ್ತಿಗೆ ಕಟ್ಟಿಕೊಟ್ಟ ಮಹಾನ್ ಮಾನವತಾವಾದಿ, ಜಗಜ್ಯೋತಿ ಬಸವೇಶ್ವರರ ಚಿಂತನೆ, ಅನುಭಾವ ಸಾರ್ವಕಾಲಿಕವಾಗಿದ್ದು, ಜಗತ್ತಿನ ಎಲ್ಲ ಸಮಸ್ಯೆಗಳಿಗೆ ಬಸವ ತತ್ವ ಪರಿಪಾಲನೆ ಪರಮಾನ್ನವಾಗಿದೆ. ಈ ಹಿನ್ನೆಲೆಯಲ್ಲಿ ವಿಶ್ವಗುರು ಬಸವಣ್ಣನವರನ್ನು ರಾಜ್ಯದ ಸಾಂಸ್ಕೃತಿಕ ನಾಯಕರೆಂದು ಸರ್ಕಾರ ಅಧಿಕೃತವಾಗಿ ಘೋಷಿಸಬೇಕು.

3. ವೀರಶೈವ ಲಿಂಗಾಯತ ಸಮುದಾಯದಲ್ಲಿ ಲಕ್ಷಾಂತರ ಕಡು ಬಡವರಿದ್ದು, ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ಅತ್ಯಂತ ಹಿಂದುಳಿದ್ದಾರೆ. ಹೀಗಾಗಿ ವೀರಶೈವ ಲಿಂಗಾಯತ ಸಮುದಾಯದ ಎಲ್ಲಾ ಒಳಪಂಗಡಗಳನ್ನು ಒಳಗೊಂಡಂತೆ ಕೇಂದ್ರ ಸರ್ಕಾರದ ಇತರೆ ಹಿಂದುಳಿದ ವರ್ಗಗಳ(ಓಬಿಸಿ) ಪಟ್ಟಿಗೆ ಸೇರಿಸಲು ರಾಜ್ಯ ಸರ್ಕಾರವು ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು ಮತ್ತು ಕೇಂದ್ರ ಸರ್ಕಾರ ಈ ಶಿಫಾರಸ್ಸನ್ನು ಅಂಗೀಕರಿಸಬೇಕು.

4. ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿ ಸಮೀಕ್ಷೆ(ಜಾತಿಗಣತಿ) ಸುಮಾರು 8 ವರ್ಷಗಳಷ್ಟು ಹಳೆಯದು. ಅಧಿಕೃತವಾಗಿ ಅಂಗೀಕಾರವಾಗುವ ಮೊದಲೇ ಅದರಲ್ಲಿನ ಅಂಶಗಳು ಸೋರಿಕೆಯಾಗಿವೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಕಾಂತರಾಜ್‌ ಆಯೋಗದ ವರದಿಯನ್ನು ಸರ್ಕಾರ ಒಪ್ಪಿಕೊಳ್ಳದೆ, ವೀರಶೈವ ಲಿಂಗಾಯತ ಸಮುದಾಯದ ಎಲ್ಲಾ ಒಳ ಪಂಗಡಗಳನ್ನೊಳಗೊಂಡಂತೆ ವಾಸ್ತವಿಕತೆ ಮತ್ತು ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸ್ಥಿತಿಗತಿಯ ಹಿಂದುಳಿದಿರುವಿಕೆ ಆಧಾರದ ಮೇಲೆ ವೈಜ್ಞಾನಿಕವಾಗಿ ಜಾತಿ ಜನಗಣತಿ ‍ಆಗಬೇಕು.

5. ಸಮಾಜದ ಒಳಿತಿಗಾಗಿ ಮತ್ತು ನಮ್ಮ ಸಮುದಾಯದ ನಿಖರ ಜನಸಂಖ್ಯೆ ಬಗ್ಗೆ ಜಗತ್ತಿಗೆ ತಿಳಿಸಲು, ಸರ್ಕಾರ ಮುಂದಿನ ದಿನಗಳಲ್ಲಿ ನಡೆಸುವ ಜನಗಣತಿ ವೇಳೆ ನಮ್ಮ ಸಮಾಜ ಬಾಂಧವರು ಹಿಂದು ಮತ್ತು ತಮ್ಮ ಉಪ ಜಾತಿಯ ಹೆಸರುಗಳನ್ನು ಬರೆಸದೆ, ಧರ್ಮದ ಕಾಲಂನಲ್ಲಿ ವೀರಶೈವ ಅಥವಾ ಲಿಂಗಾಯತ ಎಂದೇ ಬರೆಸಬೇಕು.

6. ಎಲ್ಲಾ ರೈತರಿಗೆ ಅನುಕೂಲವಾಗುವಂತೆ ರಾಜ್ಯದ ಎಲ್ಲಾ ನೀರಾವರಿ ಯೋಜನೆಗಳನ್ನು ರೂಪಿಸಿ, ಅನುಷ್ಠಾನಗೊಳಿಸಬೇಕು.

7. ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪನವರು ನಮ್ಮ ಸಮಾಜದ ಹೆಮ್ಮೆ. ಮಹಾಸಭಾ ಸಾಂಕೇತಿಕವಾಗಿ ಈ ಮಹಾಧಿವೇಶನದ ಮುಖ್ಯ ವೇದಿಕೆಗೆ ಎಸ್ಎನ್‌ರ ಹೆಸರಿಟ್ಟು ಗೌರವ ಸಲ್ಲಿಸಿದೆ. ನಿಜಲಿಂಗಪ್ಪನವರು ವಾಸವಿದ್ದ ಚಿತ್ರದುರ್ಗದ ನಿವಾಸವನ್ನು ಸರ್ಕಾರ ಖರೀದಿಸಿ, ಸಂರಕ್ಷಿಸಿ, ಅಭಿವೃದ್ಧಿಪಡಿಸಬೇಕು. ನಿಜಲಿಂಗಪ್ಪನವರ ಸರಳತೆ, ಉದಾತ್ತ ಚಿಂತನೆ, ದಕ್ಷ ಆಡಳಿತದ ಸಮ್ಯಕ್ ಚಿತ್ರಣ‍ವನ್ನು ನಾಡಿನ ಜನತೆಗೆ ಕಟ್ಟಿ ಕೊಡುವಂತೆ ಮತ್ತು ಅರ್ಥಪೂರ್ಣವಾಗಿ ಶಾಶ್ವತ ಸ್ಮಾರಕ ನಿರ್ಮಾಣ ಮಾಡಲು ನಿಜಲಿಂಗಪ್ಪನವರ ಪುಣ್ಯಸ್ಮರಣೆ ದಿನವಾದ ಆ.8, 2024ರೊಳಗೆ ಕ್ರಮ ವಹಿಸಬೇಕು.

ಈಗಿನ ಪರಿಸ್ಥಿತಿಯಲ್ಲಿ ಅವಧಿಗೆ ಮುನ್ನವೇ ಕಾಂಗ್ರೆಸ್​ ಸರ್ಕಾರ ಢಮಾರ್: ಮುರುಗೇಶ್ ನಿರಾಣಿ ಭವಿಷ್ಯ

8. ಮಹಾಸಭಾದ 24ನೇ ಮಹಾಧಿವೇಶನವನ್ನು ವೈಭವಪೂರ್ಣವಾಗಿ, ವ್ಯವಸ್ಥಿತವಾಗಿ ನೆರವೇರಿಸಲು ಮಾರ್ಗದರ್ಶನ ಮಾಡಿದ ಹರ-ಗುರು ಚರಮೂರ್ತಿಗಳಿಗೆ, ಒತ್ತಾಸೆಯಾಗಿ ನಿಂತ ರಾಜಕೀಯ ಮುಖಂಡರಿಗೆ, ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ಹಾವೇರಿ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲಾ ಘಟಕಗಳ ಜೊತೆಗೆ ಎಲ್ಲಾ ಹಂತದ ಘಟಕಗಳು ಮತ್ತು ವಿಭಾಗಗಳಿಗೆ, ಗಣ್ಯರಿಗೆ, ದಾನಿಗಳಿಗೆ, ಸಮಾಜದ ಬಂಧುಗಳಿಗೆ, ಪೊಲೀಸರಿಗೆ, ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಮಹಾಧಿವೇಶನದಿಂದ ಕೃತಜ್ಞತೆ ಸಲ್ಲಿಸುತ್ತೇವೆ.

Follow Us:
Download App:
  • android
  • ios