Asianet Suvarna News Asianet Suvarna News

ಡಿ.17ರಿಂದ ದತ್ತಮಾಲಾ ಅಭಿಯಾನಕ್ಕೆ ಜಿಲ್ಲಾಡಳಿತದಿಂದ ಸಕಲ ಸಿದ್ದತೆ: ಡಿಸಿ ಮೀನಾ ನಾಗರಾಜ್

ಕರ್ನಾಟಕದ ಅಯೋಧ್ಯೆ ಎಂದೇ ಖ್ಯಾತಿಯಾಗಿರುವ ಕಾಫಿನಾಡ ದತ್ತಪೀಠದಲ್ಲಿ 17ರಿಂದ ದತ್ತಜಯಂತಿ ಸಂಭ್ರಮ. 17ರಿಂದ 26ರವರೆಗೆ ಕಾಫಿನಾಡು ಚಿಕ್ಕಮಗಳೂರು ಬೂದಿ ಮುಚ್ಚಿದ ಕೆಂಡದಂತಿರುತ್ತೆ. 

District administration all ready for Dattamala Abhiyan from December 17th Says DC Meena Nagaraj gvd
Author
First Published Dec 15, 2023, 7:01 PM IST

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಡಿ.15): ಕರ್ನಾಟಕದ ಅಯೋಧ್ಯೆ ಎಂದೇ ಖ್ಯಾತಿಯಾಗಿರುವ ಕಾಫಿನಾಡ ದತ್ತಪೀಠದಲ್ಲಿ 17ರಿಂದ ದತ್ತಜಯಂತಿ ಸಂಭ್ರಮ. 17ರಿಂದ 26ರವರೆಗೆ ಕಾಫಿನಾಡು ಚಿಕ್ಕಮಗಳೂರು ಬೂದಿ ಮುಚ್ಚಿದ ಕೆಂಡದಂತಿರುತ್ತೆ. ಹಾಗಾಗಿ, ಜಿಲ್ಲಾಡಳಿತ ಜಿಲ್ಲಾದ್ಯಂತ ಹೈ ಅಲರ್ಟ್ ಘೋಷಿಸಿದೆ. ಬಂದೋಬಸ್ತ್, ಪಾರ್ಕಿಂಗ್, ಸರ್ಕಾರದಿಂದ ಮಾಡಬೇಕಾದ ಸೌಲಭ್ಯ ಎಲ್ಲವನ್ನೂ ಈಗಾಗಲೇ ಜಿಲ್ಲಾಡಳಿತ ಕೈಗೊಂಡಿದೆ.

ಮುಜರಾಯಿ ಇಲಾಖೆಯ ನಿರ್ದೇಶನದಂತೆ ಎಲ್ಲ ರೀತಿಯ ವ್ಯವಸ್ಥೆ: ಇದೇ ತಿಂಗಳ 24 ರಿಂದ 26ರವರೆಗೆ ನಡೆಯಲಿರುವ ದತ್ತಜಯಂತಿ ಕಾರ್ಯಕ್ರಮಕ್ಕೆ ಮುಜರಾಯಿ ಇಲಾಖೆಯ ನಿರ್ದೇಶನದಂತೆ ಎಲ್ಲ ರೀತಿಯ ವ್ಯವಸ್ಥೆಗಳನ್ನು ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಸಿ.ಎಸ್.ಮೀನಾ ನಾಗರಾಜ್ ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳ ನ್ಯಾಯಾಲಯದ ಸಭಾಂಗಣದಲ್ಲಿ ಎಸ್ಪಿ ಡಾ. ವಿಕ್ರಮ್ ಅಮಟೆ ಅವರೊಂದಿಗೆ ಜಂಟೀ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ನರೇಗಾ ಬಗ್ಗೆ ಕೇಂದ್ರ ಸಚಿವ ಗಿರಿರಾಜ್ ಹಸಿ ಸುಳ್ಳು: ಸಚಿವ ಪ್ರಿಯಾಂಕ್ ಖರ್ಗೆ

ಹಿಂದಿನ ವರ್ಷಗಳಂತೆಯೇ ಮೂಲಭೂತ ಸೌಕರ್ಯ ಕಲ್ಪಿಸುವುದು, ಕಾನೂನು ಸುವ್ಯವಸ್ಥೆ ಕಾಪಾಡುವುದು ಹಾಗೂ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸುವ ಮೂರು ಆಯಾಮಗಳ ಆಧಾರದಲ್ಲಿ ಜಿಲ್ಲಾಡಳಿತ ಎಲ್ಲಾ ಮುಂಜಾಗ್ರತಾ ಕ್ರಮ ಕೈಗೊಂಡಿದೆ ಎಂದು ತಿಳಿಸಿದರು. ದತ್ತಪೀಠ ಮುಜರಾಯಿ ಸಂಸ್ಥೆ ಆಗಿರುವುದರಿಂದ ವ್ಯವಸ್ಥಾಪನಾ ಸಮಿತಿಯ ನೇತೃತ್ವದಲ್ಲಿ ಮುಜರಾಯಿ ಇಲಾಖೆ ನಿರ್ದೇಶನದಂತೆ ದತ್ತಜಯಂತಿಗೆ ಅನುಮತಿ ನೀಡಿ ಅವಕಾಶ ಕಲ್ಪಿಸಲಾಗಿದೆ ಎಂದರು.

ಎಲ್ಲರಿಂದ ಸಹಕಾರ: ಈ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಎಲ್ಲಾ ಧರ್ಮಗಳ ಮುಖಂಡರು ಹಾಗೂ ಸಂಘಟನೆಗಳ ಮುಖಂಡರೊಂದಿಗೆ ಜಿಲ್ಲಾಡಳಿತ ಚರ್ಚೆ ನಡೆಸಿದ್ದು, ಕಾನೂನು ವ್ಯವಸ್ಥೆ ಕಾಪಾಡುವ ಮೂಲಕ ಶಾಂತಿಯುತವಾಗಿ ಹಾಗೂ ವೈಭವಯುತವಾಗಿ ದತ್ತಜಯಂತಿ ಆಚರಣೆಗೆ ಸಹಕಾರ ನೀಡಲು ಎಲ್ಲರೂ ಒಪ್ಪಿಗೆ ನೀಡಿದ್ದಾರೆ ಎಂದರು.

ಹೋಮ, ಹವನಕ್ಕೆ ಅವಕಾಶ: ಡಿಸೆಂಬರ್ 24 ರಿಂದ ಆರಂಭವಾಗುವ ಅನುಸೂಯ ಜಯಂತಿ ಸಂಕೀರ್ತನಾ ಯಾತ್ರೆಗಳು ಹಾಗೂ ಈ ಮೂರು ದಿನಗಳ ಕಾಲ ಪೀಠಕ್ಕೆ ಬರುವ ಭಕ್ತರಿಗೆ ಪಾದುಕೆಗಳ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು. ಕೊನೆಯ ದಿನ ಕಳೆದ ವರ್ಷದಂತೆ ಗುಹೆಯ ಮುಂಭಾಗದಲ್ಲಿ ಹೋಮ, ಹವನ ನಡೆಸಲು ಅವಕಾಶ ಕಲ್ಪಿಸಲಾಗುವುದೆಂದು ಹೇಳಿದರು.

ಪ್ರವಾಸಿಗರಿಗೆ ನಿರ್ಬಂಧ: ದತ್ತ ಜಯಂತಿ ಸಂದರ್ಭದಲ್ಲಿ ವಾಹನ ದಟ್ಟಣೆಯನ್ನು ನಿಯಂತ್ರಿಸುವ ಸಲುವಾಗಿ ಹಾಗೂ ಕಾನೂನು ಪಾಲನೆ ದೃಷ್ಠಿಯಿಂದ ಮತ್ತು ಕ್ರಿಸ್ಮಸ್ ಪ್ರಯುಕ್ತ ರಜಾ ದಿನಗಳು ಹೆಚ್ಚು ಇರುವುದರಿಂದ ಜನಸಂದಣಿ ತಡೆಯುವ ಉದ್ದೇಶದಿಂದ ಒಂದು ವಾರಗಳ ಕಾಲ ಪ್ರವಾಸಿಗರ ಪ್ರವೇಶವನ್ನು ನಿಬಂಧಿಸಲಾಗಿದೆ ಎಂದು ತಿಳಿಸಿದರು.

ಕಟ್ಟುನಿಟ್ಟಿನ ಕ್ರಮ: ದತ್ತ ಜಯಂತಿ ಕಾರ್ಯಕ್ರಮವನ್ನು ಶಾಂತಿಯುತವಾಗಿ ಆಚರಿಸಲು ಅಗತ್ಯವಿರುವ ಎಲ್ಲಾ ಮುಂಜಾಗ್ರತ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ ಆಮಟೆ ತಿಳಿಸಿದರು.ಡಿಸೆಂಬರ್ 17 ರಿಂದ 27ರವರೆಗೆ ಎಲ್ಲಾ ರೀತಿಯ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಯಾರೇ ಆದರೂ ಕಾನೂನು ಕೈಗೆತ್ತಿಕೊಂಡರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದರು.

27 ಕಡೆ ಚೆಕ್ಪೋಸ್ಟ್: ಜಿಲ್ಲೆಯ ಗಡಿಭಾಗ ಸೇರಿದಂತೆ ಅಗತ್ಯವಿರುವ 27 ಸ್ಥಳಗಳಲ್ಲಿ ಚೆಕ್ಪೋಸ್ಟ್ ನಿರ್ಮಿಸಲಾಗಿದೆ. ನಗರದಿಂದ ದತ್ತಪೀಠದವರೆಗೂ ಬೃಹತ್ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಹಿಂದಿನ ವಷಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಸಿಬ್ಬಂದಿಗಳನ್ನು ನಿಯೋಜಿಸಿ ಹೆಚ್ಚಿನ ಸಂಖ್ಯೆಯಲ್ಲಿ ಸಿ.ಸಿ ಟಿವಿಗಳನ್ನು ಅಳವಡಿಸಲಾಗುವುದು ಎಂದು ಹೇಳಿದರು.ಡಿಸೆಂಬರ್ 17 ರಿಂದ ಜಿಲ್ಲೆಯ ಬೇರೆ ಬೇರೆ ಸ್ಥಳಗಳಲ್ಲಿ ಸಂಕೀರ್ತನೆ ಯಾತ್ರೆಗಳು ನಡೆಯಲಿವೆ. ನಗರದಲ್ಲಿ 24 ರಂದು ಸಂಕೀರ್ತನೆ ಯಾತ್ರೆ ಹಾಗೂ ಡಿಸೆಂಬರ್ 25 ರಂದು ಶೋಭಾಯಾತ್ರೆ ನಡೆಯಲಿದ್ದು ಈ ಎಲ್ಲಾ ಕಾರ್ಯಕ್ರಮಗಳಿಗೆ ಅಗತ್ಯ ಇರುವ ಬಂದೋಬಸ್ತ್ ವ್ಯವಸ್ಥೆ ಮಾಡಿಕೊಳಲಾಗಿದೆ. 

ನನಗೆ ಮಂತ್ರಿಯನ್ನೇ ಮಾಡಲಿಲ್ಲ, ಇನ್ನು ಸಿಎಂ ಮಾಡ್ತಾರಾ?: ಶಾಸಕ ಯತ್ನಾಳ

ಈ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಬ್ಯಾನರ್ ಬಂಟಿಂಗ್ಸ್ಗಳನ್ನು ಕಟೌಟ್ಗಳನ್ನು ಹಾಕಲು ಕಡ್ಡಾಯವಾಗಿ ಆಯಾ ಸ್ಥಳೀಯ ಆಡಳಿತದಿಂದ ಅನುಮತಿ ಪಡೆಯುವ ಜೊತೆಗೆ ಪೊಲೀಸ್ ಇಲಾಖೆಯ ಸಮಕ್ಷಮದಲ್ಲಿ ಬಂಟಿಂಗ್ಸ್, ಬ್ಯಾನರ್ಗಳು ಹಾಗೂ ಕಟೌಟ್ಗಳನ್ನು ಹಾಕುವಂತೆ ಸಂಘಟಕರಿಗೆ ಸೂಚಿಸಲಾಗಿದೆ ಎಂದರು.ಈಗಾಗಲೇ ಎಲ್ಲ ಧರ್ಮಗಳ ಮುಖಂಡರೊಂದಿಗೆ ಚರ್ಚೆ ನಡೆಸಿದ್ದು, ಎಲ್ಲರೂ ಕೂಡ ಶಾಂತಿ ಸುವ್ಯವಸ್ಥೆ ಕಾಪಾಡಲು ಸಹಕರಿಸುವುದಾಗಿ ಭರವಸೆ ನೀಡಿದ್ದಾರೆ. ಸಾರ್ವಜನಿಕರು ಈ ಕಾರ್ಯಕ್ರಮಕ್ಕೆ ಶಾಂತಿ ಕಾಪಾಡಲು ಸಹಕರಿಸುವಂತೆ ಮನವಿ ಮಾಡಿದರು.

Follow Us:
Download App:
  • android
  • ios