Asianet Suvarna News Asianet Suvarna News

ಎನ್‌ಇಪಿ ರದ್ದು ಬಗ್ಗೆ ಚರ್ಚಿಸಿ ತೀರ್ಮಾನ: ಸಚಿವ ಸುಧಾಕರ್‌

ನೂತನ ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ)ಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ. ರಾಜ್ಯ ಶಿಕ್ಷಣ ನೀತಿ ಅನುಷ್ಠಾನ ಮಾಡುವುದಾಗಿ ಚುನಾವಣಾ ಪ್ರಣಾಳಿಕೆಯಲ್ಲಿ ಕಾಂಗ್ರೆಸ್‌ ಭರವಸೆ ನೀಡಿತ್ತು. 

Discuss and decide on cancellation of NEP Says Minister Dr MC Sudhakar gvd
Author
First Published Jun 10, 2023, 7:48 AM IST

ಬೆಂಗಳೂರು (ಜೂ.10): ನೂತನ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ)ಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ. ರಾಜ್ಯ ಶಿಕ್ಷಣ ನೀತಿ ಅನುಷ್ಠಾನ ಮಾಡುವುದಾಗಿ ಚುನಾವಣಾ ಪ್ರಣಾಳಿಕೆಯಲ್ಲಿ ಕಾಂಗ್ರೆಸ್‌ ಭರವಸೆ ನೀಡಿತ್ತು. ಆದ್ದರಿಂದ ಈ ಬಗ್ಗೆ ತಜ್ಞರು, ಮಾಜಿ ಕುಲಪತಿಗಳಿಂದ ಸಲಹೆ ಪಡೆಯಲಾಗುತ್ತಿದ್ದು ಬಳಿಕ ತೀರ್ಮಾನ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ ಸ್ಪಷ್ಟಪಡಿಸಿದರು. ಮಹಾರಾಣಿ ಕ್ಲಸ್ಟರ್‌ ವಿಶ್ವವಿದ್ಯಾಲಯ ಮತ್ತು ರೋಟರಿ ಕ್ಲಬ್‌ ಬೆಂಗಳೂರು ಸಹಯೋಗದಲ್ಲಿ ಶುಕ್ರವಾರ ವಿವಿಯಲ್ಲಿ ಆಯೋಜಿಸಿದ್ದ ‘ಉದ್ಯೋಗ ಮತ್ತು ನೇಮಕಾತಿ ಅಭಿಯಾನ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಎನ್‌ಇಪಿಗೆ ಬದಲಾಗಿ ರಾಜ್ಯ ಶಿಕ್ಷಣ ನೀತಿ ಅನುಷ್ಠಾನ ಮಾಡುವುದಾಗಿ ಕಾಂಗ್ರೆಸ್‌ ಪ್ರಣಾಳಿಕೆಯಲ್ಲೇ ವಾಗ್ದಾನ ಮಾಡಲಾಗಿತ್ತು. ಆದ್ದರಿಂದ ವಿದ್ಯಾರ್ಥಿಗಳ ಹಿತದೃಷ್ಟಿಗಮನದಲ್ಲಿ ಇಟ್ಟುಕೊಂಡು ತಜ್ಞರ ಸಲಹೆ ಪಡೆಯಲಾಗುತ್ತಿದೆ. ಆಳವಾದ ಅಧ್ಯಯನ ನಡೆಸಿ ನಂತರ ತೀರ್ಮಾನಿಸಲಾಗುವುದು. ಆರ್ಟಿಫಿಷಿಯಲ್‌ ಇಂಟಲಿಜೆನ್ಸ್‌ ಕೋರ್ಸ್‌ಗೆ ಕಡಿಮೆ ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿದ್ದು ಹೊಸ ಅವಕಾಶಗಳ ಹಿನ್ನೆಲೆಯಲ್ಲಿ ಪ್ರವೇಶಾತಿ ಹೆಚ್ಚಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.

ಎಂಎ ಇಂಗ್ಲಿಷ್‌ ಅಂತಿಮ ಪರೀಕ್ಷೆ ಬರೆದ 81 ವರ್ಷದ ಹಿರಿಯಜ್ಜ: ಸಾಧನೆಗೆ ಪತ್ನಿಯೇ ಪ್ರೇರಣೆ

ನಮ್ಮ ಕಾಲದಲ್ಲಿ ವೈದ್ಯಕೀಯ ಮತ್ತು ತಾಂತ್ರಿಕ ಕೋರ್ಸ್‌ಗಳಿಗೆ ಮಾತ್ರ ಒತ್ತು ನೀಡಲಾಗುತ್ತಿತ್ತು. ಆದರೆ ಈಗ ಹೊಸ ಹೊಸ ಕೋರ್ಸ್‌ಗಳು ಬಂದಿದ್ದು ಅವಕಾಶಗಳೂ ಹೆಚ್ಚಿವೆ. ವಿವಿಯು ಉದ್ಯೋಗ ಮತ್ತು ನೇಮಕಾತಿ ಮೇಳವನ್ನು ಆಯೋಜಿಸುವ ಮೂಲಕ ವಿದ್ಯಾರ್ಥಿಗಳಿಗೆ ಅವಕಾಶಗಳನ್ನು ನೀಡುತ್ತಿರುವುದು ಸ್ವಾಗತಾರ್ಹ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿವಿ ಕುಲಪತಿ ಡಾ.ಎಲ್‌.ಗೋಮತಿದೇವಿ ಮಾತನಾಡಿ, ವಿವಿಯು ಹೊಸ ಉದ್ಯೋಗಾವಕಾಶಗಳಿಗೆ ಅಗತ್ಯವಿರುವ ಹೊಸ ಕೋರ್ಸ್‌ಗಳನ್ನು ಆರಂಭಿಸಿದೆ. 

ಒಂಟಿ ಪೋಷಕ ಸರ್ಕಾರಿ ಪುರುಷ ನೌಕರರಿಗೂ ಶಿಶುಪಾಲನಾ ರಜೆ: ಸರ್ಕಾರದಿಂದ ಹೊಸ ಆದೇಶ

ಬಿಬಿಎ ಅಪ್ರೆಂಟಿಷಿಪ್‌ ಕೋರ್ಸ್‌ ವಿತ್‌ ಇಂಟಿಗ್ರೇಟೆಡ್‌ ಇಂಡಸ್ಟ್ರಿ, ಬಿಕಾಂ ಬಿಗ್‌ ಡೇಟಾ ಅನಾಲಿಸಿಸ್‌, ಬಿಎಸ್ಸಿ ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌ ಮತ್ತು ಡೇಟಾ ಸೈನ್ಸ್‌ ಹೊಸ ಕೋರ್ಸ್‌ಗಳಾಗಿವೆ ಎಂದು ಮಾಹಿತಿ ನೀಡಿದರು. ಸತತ ಮೂರನೇ ವರ್ಷ ಆಯೋಜಿಸಿದ್ದ ಈ ಅಭಿಯಾನದಲ್ಲಿ 124 ಕಂಪೆನಿ ಪಾಲ್ಗೊಂಡಿದ್ದು ಸುಮಾರು 3 ಸಾವಿರ ಅಭ್ಯರ್ಥಿಗಳು ಪಾಲ್ಗೊಂಡಿದ್ದರು. ಇದರಲ್ಲಿ ಸುಮಾರು 2 ಸಾವಿರ ಅಭ್ಯರ್ಥಿಗಳಿಗೆ ನೇಮಕಾತಿಯಾಗಿದೆ. ರೋಟರಿ ಕ್ಲಬ್‌ ಬೆಂಗಳೂರು ಅಧ್ಯಕ್ಷ ಸಂಜಯ್‌ ಉದಾನಿ, ವಿವಿ ಕುಲಸಚಿವ ಪ್ರೊ.ಎಚ್‌.ರಾಮಕೃಷ್ಣಯ್ಯ, ಸಿಂಡಿಕೇಟ್‌ ಸದಸ್ಯ ಡಾ.ಎಚ್‌.ಮುನಿವೆಂಕಟಪ್ಪ ಮತ್ತಿತರರು ಹಾಜರಿದ್ದರು.

Follow Us:
Download App:
  • android
  • ios