ಡಿ.2ರಿಂದ ಟರ್ಫ್ ಕ್ಲಬ್ ಸ್ಥಗಿತಗೊಳಿಸಲು ನಿರ್ಣಯ!
ಡಿ.2ರಿಂದ ಟರ್ಫ್ ಕ್ಲಬ್ ಸ್ಥಗಿತಕ್ಕೆ ಲೆಕ್ಕಪತ್ರ ಸಮಿತಿಯ ನಿರ್ಣಯ| 32.86 ಕೋಟಿ ಬಾಕಿ ಬಾಡಿಗೆ ಹಣ ವಸೂಲಿಗೆ ಸೂಚನೆ: ಪಾಟೀಲ್
ಬೆಂಗಳೂರು[ನ.20]: ಬೆಂಗಳೂರು ಟರ್ಫ್ ಕ್ಲಬ್ ತೆರವಿಗೆ ಅಡ್ಡಿಯಾಗಿರುವ ನ್ಯಾಯಾಲಯದ ತಡೆಯಾಜ್ಞೆಯನ್ನು ತೆರವುಗೊಳಿಸಲು ಕ್ರಮ ಕೈಗೊಂಡು ಡಿ.2ರಿಂದ ಟರ್ಫ್ ಕ್ಲಬ್ ಸಂಪೂರ್ಣ ಸ್ಥಗಿತಗೊಳಿಸುವಂತೆ ಸಂಬಂಧ ಅಧಿಕಾರಿಗಳಿಗೆ ಸೂಚನೆ ನೀಡಲು ಸೂಚನೆ ನೀಡಲು ವಿಧಾನಸಭೆ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಒಮ್ಮತದ ನಿರ್ಣಯ ಕೈಗೊಂಡಿದೆ.
ವಿಧಾನಸೌಧದಲ್ಲಿ ಮಂಗಳವಾರ ನಡೆದ ಸಮಿತಿಯ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿದ ಸಮಿತಿಯ ಅಧ್ಯಕ್ಷ ಎಚ್.ಕೆ.ಪಾಟೀಲ್ ಅವರು ಸಭೆಯಲ್ಲಿ ಕೈಗೊಳ್ಳಲಾದ ಮೂರು ಪ್ರಮುಖ ನಿರ್ಣಯಗಳನ್ನು ಪ್ರಕಟಿಸಿದರು.
ಶುರುವಾಗಿದೆ ಕುದುರೆ ರೇಸ್! ಡರ್ಬಿ ಬಗ್ಗೆ ಇಲ್ಲಿದೆ ಇಂಟ್ರೆಸ್ಟಿಂಗ್ ವಿಚಾರ
ಬೆಂಗಳೂರು ಟರ್ಫ್ ಕ್ಲಬ್ನ ಭೋಗ್ಯದ ಕರಾರು ಮುಗಿದು ಹತ್ತು ವರ್ಷ ಕಳೆದಿರುವ ಹಿನ್ನೆಲೆಯಲ್ಲಿ ಡಿ.2ರಿಂದ ಕುದುರೆ ರೇಸ್ ಅಥವಾ ಜೂಜಿನ ಚಟುವಟಿಕೆಗಳನ್ನು ಸ್ಥಗಿತಗೊಳಿಸಲು ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಬೇಕು ಮತ್ತು ಕ್ಲಬ್ 2017-18ನೇ ಸಾಲಿನ ವರೆಗೆ ಸರ್ಕಾರಕ್ಕೆ ಬಾಕಿ ಉಳಿಸಿಕೊಂಡಿರುವ 32.86 ಕೋಟಿ ರು. ಬಾಕಿ ಬಾಡಿಗೆ ಹಣವನ್ನು ನ. 30ರೊಳಗೆ ವಸೂಲಿ ಮಾಡಬೇಕು ಲೋಕೋಪಯೋಗಿ ಇಲಾಖೆ ಅಪರ ಕಾರ್ಯದರ್ಶಿಗೆ ಸೂಚನೆ ನೀಡಲಾಗಿದೆ. ಅಲ್ಲದೆ, ಕ್ಲಬ್ ತೆರವಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ತಡೆಯಾಜ್ಞೆ ತೆರವು ಮತ್ತು ಗುತ್ತಿಗೆ ಕರಾರು ಕುರಿತು ಸುಪ್ರೀಂ ಕೋರ್ಟ್ನಲ್ಲಿರುವ ಮೊಕದ್ದಮೆ ಶೀಘ್ರ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳುವಂತೆ ಕಾನೂನು ಇಲಾಖೆ ಪ್ರಧಾನ ಪ್ರಧಾನ ಕಾರ್ಯದರ್ಶಿಗೆ ನಿರ್ದೇಶನ ನೀಡಲು ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ಅವರು ಹೇಳಿದರು.
ಬೆಂಗಳೂರು ಟರ್ಫ್ ಕ್ಲಬ್ಗೆ ಸರ್ಕಾರದಿಂದ 82.14 ಎಕರೆ ಜಾಗವನ್ನು ನೀಡಲಾಗಿದ್ದ ಭೋಗ್ಯದ ಕರಾರು 2009ಕ್ಕೆ ಮುಗಿದಿದೆ. ಬಳಿಕ ಹಲವು ಬಾರಿ ಜಾಗ ತೆರವಿಗೆ ಸರ್ಕಾರ ಆದೇಶಿಸಿದ್ದರೂ ಕ್ಲಬ್ ಇದನ್ನು ಪಾಲಿಸಿಲ್ಲ. ಈ ಬಗ್ಗೆ ವ್ಯಾಜ್ಯವನ್ನು ಹುಟ್ಟುಹಾಕಿ ನ್ಯಾಯಾಲಯದ ಮೊರೆಗೆ ಹೋಗಿದ್ದಾರೆ. ನ್ಯಾಯಾಲಯ ನೀಡಿರುವ ತಡೆಯಾಜ್ಞೆಯನ್ನು ನೆಪವಾಗಿಟ್ಟುಕೊಂಡು ಲೋಕೋಪಯೋಗಿ ಇಲಾಖೆ, ಕಾನೂನು ಇಲಾಖೆಯ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುತ್ತಿದೆ. ಅಲ್ಲದೆ, ನಗರದ ಕೇಂದ್ರ ಭಾಗದಲ್ಲಿ ಟಫ್ರ್ ಕ್ಲಬ್ ಇರುವುದರಿಂದ ತೀವ್ರ ಸಂಚಾರ ದಟ್ಟಣೆಯಂತಹ ಸಮಸ್ಯೆಯಿಂದ ನಾಗರಿಕರು ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದು ಎಚ್.ಕೆ.ಪಾಟೀಲ್ ತೀವ್ರ ಬೇಸರ ವ್ಯಕ್ತಪಡಿಸಿದರು.
ಮುಚ್ಚಲಿದೆಯಾ ಬೆಂಗಳೂರಿನ ರೇಸ್ ಕೋರ್ಸ್..?
ಟರ್ಫ್ ಕ್ಲಬ್ಗೆ 82 ಎಕರೆ ನೀಡಿದ್ದು ಹೀಗೆ
ಮೈಸೂರು ಮಹಾರಾಜರ ಕಾಲದಲ್ಲಿ ಕುದುರೆ ಓಡಿಸುವ ಸ್ಪರ್ಧೆ ನಡೆಸುವ ಉದ್ದೇಶಕ್ಕಾಗಿ 1923ರಲ್ಲಿ 83.14 ಎಕರೆ ಜಾಗವನ್ನು ಆಗಿನ ರೇಸ್ ಕ್ಲಬ್ಗೆ ಬಾಡಿಗೆ ಆಧಾರದಲ್ಲಿ ನೀಡಲಾಗಿತ್ತು. ನಂತರ 1983ರ ಡಿಸೆಂಬರ್ನಲ್ಲಿ ಬೆಂಗಳೂರು ಟಫ್ರ್ ಕ್ಲಬ್ ಮತ್ತು ಕರ್ನಾಟಕ ಸರ್ಕಾರದ ಮಧ್ಯೆ ಒಪ್ಪಂದ ಮಾಡಿಕೊಂಡು ಈ ಜಾಗವನ್ನು ವಾರ್ಷಿಕ 5 ಲಕ್ಷ ರು.ನಂತೆ ಬಾಡಿಗೆಯಂತೆ 30 ಗುತ್ತಿಗೆ ನೀಡಲಾಗಿತ್ತು.
ಒಪ್ಪಂದದ ಪ್ರಕಾರ ಕಾಲ ಕಾಲಕ್ಕೆ ಬಾಡಿಗೆ ಮೊತ್ತ ಪರಿಷ್ಕರಿಸಲು ಅಥವಾ ಸಾರ್ವಜನಿಕ ಉದ್ದೇಶಗಳಿಗಾಗಿ ಅವಶ್ಯಕತೆ ಬಂದಲ್ಲಿ ಆ ಜಾಗವನ್ನು ಸ್ವಾದೀನ ಪಡಿಸಿಕೊಳ್ಳಲು ಸರ್ಕಾರಕ್ಕೆ ಅವಕಾಶವಿದೆ. ಇದರ ಆಧಾರದ ಮೇಲೆ 1989ರ ಮಾಚ್ರ್ನಲ್ಲಿ ಸಾರ್ವಜನಿಕ ಉದ್ದೇಶಕ್ಕೆ ಸ್ಥಳವನ್ನು ಬಳಸಿಕೊಳ್ಳುವ ಉದ್ದೇಶದಿಂದ ಕ್ಲಬ್ನೊಂದಿಗಿನ ಗುತ್ತಿಗೆಯನ್ನು ರದ್ದು ಪಡಿಸಿ ಸ್ಥಳ ತೆರವುಗೊಳಿಸುವಂತೆ ಕ್ಲಬ್ನ ಆಡಳಿತ ಮಂಡಳಿಗೆ ಆದೇಶಿಸಿತ್ತು. ಆದರೆ, ಟಫ್ರ್ ಕ್ಲಬ್ ಸರ್ಕಾರದ ಆದೇಶ ಪಾಲಿಸಿಲ್ಲ ಎಂದು ತಿಳಿಸಿದರು.
ಆ ನಂತರ ಅಧಿಕಾರಕ್ಕೆ ಬಂದ ಹಲವು ಸರ್ಕಾರಗಳು ಟಫ್ರ್ ಕ್ಲಬ್ ಸ್ಥಳಾಂತರದ ಬಗ್ಗೆ ಪ್ರಸ್ತಾಪ ಮಾಡಿವೆ. ಈ ಕ್ಲಬ್ ತೆರವುಗೊಳಿಸಿ ಸದರಿ ಜಾಗದಲ್ಲಿ ಬೃಹತ್ ಉದ್ಯಾನ ನಿರ್ಮಿಸಲು ಅಥವಾ ದೆಹಲಿಯ ಪಾಲಿಕೆ ಬಜಾರ್ ಮಾದರಿಯ ನೆಲಮಾಳಿಗೆ ನಿರ್ಮಿಸಿ ಅದರ ಮೇಲೆ ಉದ್ಯಾನ ನಿರ್ಮಿಸುವಂತೆಯೂ ಸಾರ್ವಜನಿಕ ಸಮಿತಿ ಈ ಹಿಂದೆ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಆದರೆ, ನ್ಯಾಯಾಲಯದಲ್ಲಿ ಪ್ರಕರಣ ಇದ್ದ ಕಾರಣ ಇದ್ಯಾವುದೂ ಜಾರಿಯಾಗಿರಲಿಲ್ಲ ಮತ್ತು ಈ ಪ್ರಕರಣಕ್ಕೆ ಇದ್ದ ತಡೆಯಾಜ್ಞೆಯನ್ನು ತೆರವುಗೊಳಿಸಲು ಸರ್ಕಾರ ಗಂಭೀರ ಪ್ರಯತ್ನ ನಡೆಸಲಿಲ್ಲ ಎಂದು ಅವರು ತಿಳಿಸಿದರು.