ಬೆಂಗಳೂರಿನಿಂದ ಬೆಳಗಾವಿಗೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ ಚಾಲಕ, 40 ಪ್ರಯಾಣಿಕರ ಜೀವವನ್ನು ಪಣಕ್ಕಿಟ್ಟು ಡ್ರೈವಿಂಗ್ ಮಾಡುವಾಗಲೇ ಮೊಬೈಲ್ನಲ್ಲಿ ಮಾತನಾಡಿದ್ದಾನೆ. ಧಾರವಾಡದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಈ ಘಟನೆಯನ್ನು ಪ್ರಯಾಣಿಕರೊಬ್ಬರು ವಿಡಿಯೋ ಮಾಡಿದ್ದಾರೆ.
ಧಾರವಾಡ (ಡಿ.26): ಚಿತ್ರದುರ್ಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್ ಅಪಘಾತವಾಗಿ 7 ಮಂದಿ ಸಾವು ಕಂಡಿರುವ ಸುದ್ದಿ ಇನ್ನೂ ಜೀವಂತವಾಗಿರುವಾಗಲೇ, ಬಸ್ ಡ್ರೈವರ್ನ ನಿರ್ಲಕ್ಷ್ಯತನದ ಚಾಲನೆ ಮತ್ತೊಮ್ಮೆ ವರದಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಡ್ರೈವರ್ಳ ಅಜಾಗರುಕತೆಯಿಂದಾಗಿ ಪ್ರಯಾಣಿಕರು ರಸ್ತೆಯಲ್ಲಿ ದಾರುಣವಾಗಿ ಸಾವು ಕಾಣುತ್ತಿರುವ ಘಟನೆಗಳು ಹೆಚ್ಚಾಗುತ್ತಿರುವ ನಡುವೆಯೇ, ಕೆಎಸ್ಆರ್ಟಿಸಿ ಬಸ್ ಚಾಲಕನೊಬ್ಬ ಡ್ರೈವಿಂಗ್ ಮಾಡುವಾಗಲೇ ಫೋನ್ ಕಿವಿಯಲ್ಲಿಟ್ಟುಕೊಂಡು ಮಾತನಾಡುತ್ತಿರುವ ವಿಡಿಯೋ ವೈರಲ್ ಆಗಿದೆ.
ಸೀಬರ್ಡ್ ಬಸ್ ದುರಂತವಾದರೂ ಬಸ್ ಚಾಲಕ ಎಚ್ಚೆತ್ತುಕೊಳ್ಳದೇ ಇರುವ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. ಒಂದು ಕೈಯಲ್ಲಿ ಬಸ್ನ ಸ್ಟೇರಿಂಗ್ ಹಿಡಿದಿರುವ ಚಾಲಕ ಇನ್ನೊಂದು ಕೈನಲ್ಲಿ ಫೋನ್ ಹಿಡಿದುಕೊಂಡಿದ್ದಾರೆ. ಫೋನ್ನಲ್ಲಿ ಮಾತನಾಡುತ್ತಲೇ ಬಸ್ ಡ್ರೈವಿಂಗ್ ಮಾಡಿದ್ದಾರೆ.
ಹುಬ್ಬಳ್ಳಿ ಡಿಪೋಗೆ ಸೇರಿದ ಕೆಎಸ್ಆರ್ಟಿಸಿ ಬಸ್ ಇದಾಗಿದ್ದು, ಬೆಂಗಳೂರಿನಿಂದ ಬೆಳಗಾವಿಯ ಕಡೆಗೆ ಹೊರಟಿತ್ತು. ರಾಷ್ಟ್ರೀಯ ಹೆದ್ದಾರಿ 4 ರ ಧಾರವಾಡ ಹೊರವಲಯದಲ್ಲಿ ಘಟನೆ ನಡೆದಿದೆ.
ಹುಬ್ಬಳ್ಳಿ ಡಿಪೋ ಬಸ್
KA 63 F 0163 ನಂಬರ್ ಹೊಂದಿರುವ ಹುಬ್ಬಳ್ಳಿಯ ಡಿಪೋ ಬಸ್ ಇದಾಗಿದ್ದು, ಬಸ್ ನಲ್ಲಿ 40 ಜನರು ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದರು. ಕೆ ಎಸ್ ಆರ್ ಟಿ ಸಿ ಬಸ್ ಚಾಲಕನ ಹುಚ್ಚಾಟಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಬಸ್ನಲ್ಲಿಯೇ ಇದ್ದ ಪ್ರಯಾಣಿಕರೊಬ್ಬರು ಮೊಬೈಲ್ ನಲ್ಲಿ ವಿಡಿಯೋ ಚಿತ್ರಿಕರಣ ಮಾಡಿದ್ದಾರೆ. ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.


