ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೇವಾಸ್‌ ಮಲ್ಟಿಮೀಡಿಯಾ ಪ್ರೈ.ಲಿ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಅಮೆರಿಕ ನಿವಾಸಿ ರಾಮಚಂದ್ರನ್‌ ವಿಶ್ವನಾಥನ್‌ ಅವರನ್ನು ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಸಿಬಿಐ ವಿಶೇಷ ನ್ಯಾಯಾಲಯ ಘೋಷಿಸಿದೆ.

ಬೆಂಗಳೂರು (ಜೂ.10): ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೇವಾಸ್‌ ಮಲ್ಟಿಮೀಡಿಯಾ ಪ್ರೈ.ಲಿ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಅಮೆರಿಕ ನಿವಾಸಿ ರಾಮಚಂದ್ರನ್‌ ವಿಶ್ವನಾಥನ್‌ ಅವರನ್ನು ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಸಿಬಿಐ ವಿಶೇಷ ನ್ಯಾಯಾಲಯ ಘೋಷಿಸಿದೆ.

Add Asianetnews Kannada as a Preferred SourcegooglePreferred

ವಿಚಾರಣೆಗೆ ನ್ಯಾಯಾಲಯದ ಮುಂದೆ ಹಾಜರಾಗದ ಕಾರಣಕ್ಕಾಗಿ ರಾಮಚಂದ್ರನ್‌ ವಿಶ್ವನಾಥನ್‌ ಅವರನ್ನು ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಘೋಷಿಸುವಂತೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಮನವಿ ಮಾಡಿದ್ದರು. ಈ ಮನವಿಯನ್ನು ಪರಿಗಣಿಸಿದ ನ್ಯಾಯಾಲಯವು ಉದ್ಯಮಿಗಳು, ಈಗಾಗಲೇ ದೇಶ ತೊರೆದಿರುವ ಆರ್ಥಿಕ ಅಪರಾಧಿಗಳಾದ ವಿಜಯ್‌ ಮಲ್ಯ, ನೀರವ್‌ ಮೋದಿ ಪಟ್ಟಿಗೆ ರಾಮಚಂದ್ರನ್‌ ವಿಶ್ವನಾಥನ್‌ ಹೆಸರನ್ನು ಸೇರ್ಪಡೆ ಮಾಡಿದೆ. ಹೀಗಾಗಿ ಆರ್ಥಿಕ ಅಪರಾಧ ಕಾಯ್ದೆಯ ಸೆಕ್ಷನ್‌ 12(2) ರ ಅಡಿ ಉಲ್ಲೇಖಿಸಿರುವ ಆಸ್ತಿಗಳು ಕೇಂದ್ರ ಸರ್ಕಾರದ ವಶಕ್ಕೊಳಪಡಲಿವೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಮುಂದಿನ ವಿಚಾರಣೆಯನ್ನು ನ್ಯಾಯಾಲಯವು ಜೂ.26ಕ್ಕೆ ಮುಂದೂಡಿದೆ.

ಕಾರ್ಲ್‌ ಮಾರ್ಕ್ ಓಕೆ, ಪಠ್ಯದಲ್ಲಿ ಆರೆಸ್ಸೆಸ್‌ ನಾಯಕರು ಬೇಡವೇ?: ಸಿ.ಟಿ.ರವಿ

ವಿಶ್ವನಾಥ್‌ ವಿದೇಶದಲ್ಲಿ ನೆಲೆಸಿದ್ದರಿಂದ ವಿದೇಶಾಂಗ ಸಚಿವಾಲಯದ ಮೂಲಕ ನೊಟೀಸ್‌ ಜಾರಿ ಮಾಡಲಾಗಿತ್ತು. 2022ರ ಡಿ.12ರಂದು ವಿಚಾರಣೆಗೆ ಗೈರಾಗಿದ್ದು, ಮತ್ತೆ ಡಿ.26ಕ್ಕೆ ಹಾಜರಾಗಲು ಅವಕಾಶ ನೀಡಲಾಗಿತ್ತು. ಆದರೂ ವಿಚಾರಣೆಗೆ ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಇ.ಡಿ. ಅಧಿಕಾರಿಗಳು ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಘೋಷಣೆ ಮಾಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಜಾರಿ ನಿರ್ದೇಶನಾಲಯ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಪಿ.ಪ್ರಸನ್ನ ಕುಮಾರ್‌ ವಾದಿಸಿದರು.

ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ ಯೋಜನೆಗಳು ಗೊಂದಲಮಯ: ಪ್ರಲ್ಹಾದ್‌ ಜೋಶಿ

ಆರೋಪ ಏನು?: 2004ರಲ್ಲಿ ಉಪಗ್ರಹ ಆಧಾರಿತ ಮಲ್ಪಿಮೀಡಿಯಾ ಸೇವೆಗಳನ್ನು ನೀಡುವ ಉದ್ದೇಶದಿಂದ ವಿಶ್ವನಾಥನ್‌ ಅವರು ದೇವಾಸ್‌ ಮಲ್ಟಿ ಮೀಡಿಯಾ ಪ್ರೈ.ಲಿ. ಎಂಬ ಕಂಪನಿ ಆರಂಭಿಸಿದ್ದರು. ಅಂತರಿಕ್ಷ ಕಾರ್ಪೋರೇಷನ್‌ ಜತೆ ಮಾಡಿಕೊಂಡಿದ್ದು, ಎರಡು ಉಪಗ್ರಹಗಳನ್ನು ನಿರ್ಮಿಸಬೇಕಿತ್ತು. ಇದಕ್ಕೆ ಹಲವು ಹೂಡಿಕೆದಾರರು ಬೆಂಬಲ ನೀಡಿದ್ದರು. ಇಸ್ರೋದ ಆರ್ಥಿಕ ವಿಭಾಗದಿಂದ 578 ಕೋಟಿ ರು. ಲಾಭ ಮಾಡಿಕೊಂಡಿದ್ದರು. ಒಪ್ಪಂದದಂತೆ ಯಾವುದೇ ಕೆಲಸ ಮಾಡದ ಕಾರಣ ವಂಚನೆ ಮಾಡುವ ದುರುದ್ದೇಶದಿಂದಲೇ ಸಂಸ್ಥೆ ಆರಂಭಿಸಲಾಗಿತ್ತು ಎಂಬುದು ವಿಚಾರಣೆ ವೇಳೆ ತಿಳಿದುಬಂತು. ಹೀಗಾಗಿ ಹೆಚ್ಚಿನ ತನಿಖೆಗಾಗಿ ಇ.ಡಿ.ಗೆ ವರ್ಗಾಯಿಸಲಾಗಿದ್ದು, ತನಿಖೆಯನ್ನು ಮುಂದುವರಿಸಿದೆ.