ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇಂದು ನಿಗದಿಯಾಗಿದ್ದ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ. ಬಿಬಿಎಂಪಿ ಗಿಡ ನೆಡುವ ಕಾರ್ಯಕ್ರಮ, ಕಾರಾಗೃಹ ಇಲಾಖೆ ಹಾಗೂ ಕೆಎಸ್‌ಆರ್‌ಪಿ ಸಮುದಾಯ ಭವನ ಉದ್ಘಾಟನೆಗಳು ಮುಂದೂಡಲ್ಪಟ್ಟಿವೆ.

ಬೆಂಗಳೂರು (ಜು.16): ರಾಜ್ಯ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆ, ಇಂದು ನಿಗದಿಯಾಗಿದ್ದ ಎಲ್ಲಾ ಸಾರ್ವಜನಿಕ ಕಾರ್ಯಕ್ರಮಗಳನ್ನು ಅವರು ರದ್ದುಗೊಳಿಸಿದ್ದಾರೆ. ಅವರು ಈಸಮಯ ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

ರದ್ದುಗೊಂಡ ಕಾರ್ಯಕ್ರಮಗಳ ವಿವರ:

ಡಿಸಿಎಂ ಡಿ.ಕೆ.ಶಿವಕುಮಾರ್ ಇಂದು ಭಾಗವಹಿಸಬೇಕಾಗಿದ್ದ ಮೂರು ಪ್ರಮುಖ ಕಾರ್ಯಕ್ರಮಗಳು ಅನಾರೋಗ್ಯದ ಕಾರಣದಿಂದ ರದ್ದಾಗಿವೆ. ಡಿಸಿಎಂ ನೇತೃತ್ವ ಇಲ್ಲದೆ ನಡೆಯುವ ಕಾರ್ಯಕ್ರಮಗಳನ್ನು ಮುಂದುವರೆಸುವಂತೆ ಸೂಚನೆ ನೀಡಲಾಗಿದೆ. ಇನ್ನು ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆಯುವಂತಹ ಕೆಲವು ಕಾರ್ಯಕ್ರಮಗಳನ್ನು ಮುಂದೂಡಿಕೆ ಮಾಡಲಾಗಿದೆ. ಉಳಿದಂತೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಭೇಟಿಗೆ ಬರುವ ಸಾರ್ವಜನಿಕರಿಗೂ ಕೂಡ ಇಂದು ಅವಕಾಶ ಇಲ್ಲದಂತಾಗಿದೆ.

ಗಿಡ ನೆಡುವ ಕಾರ್ಯಕ್ರಮ (ಮಧ್ಯಾಹ್ನ 12 ಗಂಟೆ):

ಬಿಬಿಎಂಪಿ ಮತ್ತು ಕೆರೆಗಳ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ 10,000 ಗಿಡಗಳ ನೆಡುವ ಕಾರ್ಯಕ್ರಮವು ಇಂದು ನಡೆಯಬೇಕಾಗಿದ್ದರೂ, ಡಿಸಿಎಂ ಗೈರು ಇರುವ ಕಾರಣದಿಂದಾಗಿ ಕಾರ್ಯಕ್ರಮ ಆಯೋಜನೆ ದಿನಾಂಕದಲ್ಲಿ ಬದಲಾವಣೆ ಆಗುವ ಸಾಧ್ಯತೆ ಇದೆ.

ಕಾರಾಗೃಹ ಇಲಾಖೆಯ ಅನೆಕ್ಸ್ ಬಿಲ್ಡಿಂಗ್ ಉದ್ಘಾಟನೆ (ಸಂಜೆ 4:00):

ಬೆಂಗಳೂರು ಸಿಟಿ ಕಾರಾಗೃಹದ ಮುಖ್ಯ ಕಚೇರಿಯ ಹೊಸ ಅನೆಕ್ಸ್ ಬ್ಲಾಕ್ ಉದ್ಘಾಟನೆಯೂ ಇಂದು ನಿಗದಿಯಾಗಿತ್ತು. ಡಿಸಿಎಂ ಅವರು ಅನಾರೋಗ್ಯದ ಕಾರಣದಿಂದ ಈ ಕಾರ್ಯಕ್ರಮಕ್ಕೂ ಗೈರಾಗಲಿದ್ದಾರೆ. ಆದರೆ, ಗೃಹ ಸಚಿವರಿಂದ ಈ ಕಾರ್ಯಕ್ರಮ ಮುಂದುವರೆಯಲಿದೆ.

ಕೆಎಸ್‌ಆರ್‌ಪಿ ಸಮುದಾಯ ಭವನ ಉದ್ಘಾಟನೆ (ಸಂಜೆ 4:30):

ಕೆಎಸ್‌ಆರ್‌ಪಿ ಸಮುದಾಯ ಭವನ ಉದ್ಘಾಟನಾ ಸಮಾರಂಭಕ್ಕೂ ಅವರು ಹಾಜರಾಗುವುದಿಲ್ಲ. ಇದನ್ನೂ ಕೂಡ ಗೃಹ ಸಚಿವರ ನೇತೃತ್ವದಲ್ಲಿ ನಡೆಸಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.

ಆರೋಗ್ಯ ಸ್ಥಿತಿ ಸ್ಥಿರ

ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಆರೋಗ್ಯ ಪರೀಕ್ಷೆ ಮಾಡಿದ ವೈದ್ಯರು ಇದು ಜ್ವರ ಸಾಮಾನ್ಯವಾದುದಾಗಿದ್ದು, ಹೆಚ್ಚಿನ ಆತಂಕಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ. ಕೆಲವು ದಿನಗಳ ವಿಶ್ರಾಂತಿಯ ಬಳಿಕ ಅವರು ಪುನಃ ಸಾರ್ವಜನಿಕ ಜೀವನಕ್ಕೆ ಮರಳಲಿದ್ದಾರೆ ಎಂದು ಅವರ ಆಪ್ತ ಮೂಲಗಳಿಂದ ತಿಳಿದುಬಂದಿದೆ.