ರಾಜ್ಯ ಬಿಜೆಪಿಯಲ್ಲಿನ ಭಿನ್ನಾಭಿಪ್ರಾಯ ಮತ್ತು ಸಂಘಟನಾತ್ಮಕ ದೌರ್ಬಲ್ಯದ ಬಗ್ಗೆ ವರಿಷ್ಠರು ಕಳವಳ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ಅಧ್ಯಕ್ಷರ ಭೇಟಿಗೂ ಮುನ್ನ, ದಿಲ್ಲಿ ನಾಯಕರು ರಾಜ್ಯ ನಾಯಕರೊಂದಿಗೆ ಸಭೆ ನಡೆಸಿ, ಕಾಂಗ್ರೆಸ್ ಸರ್ಕಾರದ ವೈಫಲ್ಯ ಬಳಸಿಕೊಳ್ಳುವಲ್ಲಿನ ವಿಫಲತೆ ಬಗ್ಗೆ ಅಭಿಪ್ರಾಯ ಸಂಗ್ರಹ

  • ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್‌ ನವೀನ್‌ ರಾಜ್ಯ ಭೇಟಿಗೂ ಮುನ್ನ ನಾಯಕರಿಂದ ಅಭಿಪ್ರಾಯ ಸಂಗ್ರಹ
  • ರಾಜ್ಯ ಘಟಕದಲ್ಲಿ ಭಿನ್ನಾಭಿಪ್ರಾಯ ಬಗೆಹರಿಸಿ ಸಂಘಟನೆ ಬಲಪಡಿಸಲು ಆಯ್ದ ನಾಯಕರ ಜತೆಗೆ ಚರ್ಚೆ
  • ಕಾಂಗ್ರೆಸ್‌ 3 ವರ್ಷಗಳಲ್ಲಿ ಹಲವು ವೈಫಲ್ಯದ ಅಸ್ತ್ರ ನೀಡಿದ್ದರೂ ಅದನ್ನೇಕೆ ಹೊರಾಟಕ್ಕೆ ಬಳಸಿಕೊಳ್ಳುತ್ತಿಲ್ಲ
  • ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವಂಥ ಹೋರಾಟ ತಂಡಸ್ಫೂರ್ತಿಯಿಂದ ನಡೆಸಲು ಯಾಕೆ ಆಗುತ್ತಿಲ್ಲ?
  • ರಾಜ್ಯಾಧ್ಯಕ್ಷ ಕಾರ್ಯಕ್ರಮ, ಹೋರಾಟಕ್ಕೆ ಹಲವು ಹಿರಿಯ ನಾಯಕರೇಕೆ ಹೆಚ್ಚಿನ ಸಮಯ ನೀಡುತ್ತಿಲ್ಲ?
  • ದಿಲ್ಲಿ ನಾಯಕರಾದ ಶಿವಪ್ರಕಾಶ್, ಬೈಜಯಂತ್ ಜಯ್ ಪಾಂಡಾರಿಂದ ಪ್ರಶ್ನೆ, ಅಭಿಪ್ರಾಯ ಸಂಗ್ರಹ==

ಬೆಂಗಳೂರು (ಮೇ.22) ರಾಜ್ಯ ಬಿಜೆಪಿಯಲ್ಲಿನ ಸದ್ಯದ ಸ್ಥಿತಿ ಬಗ್ಗೆ ಚಿಂತಿತರಾಗಿರುವ ಪಕ್ಷದ ವರಿಷ್ಠರು, ರಾಜ್ಯಾಧ್ಯಕ್ಷ ಸ್ಥಾನದ ಬದಲಾವಣೆಯೂ ಸೇರಿ ಇಡೀ ರಾಜ್ಯ ಘಟಕದಲ್ಲಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿ ಸಂಘಟನೆ ಬಲಪಡಿಸುವ ಕುರಿತು ಆಯ್ದ ಪ್ರಮುಖ ನಾಯಕರಿಂದ ಮುಕ್ತ ಅಭಿಪ್ರಾಯ ಸಂಗ್ರಹಿಸುವ ಪ್ರಕ್ರಿಯೆಗೆ ಚಾಲನೆ ನೀಡಿದೆ.

Add Asianetnews Kannada as a Preferred SourcegooglePreferred

ವಿಧಾನಸಭಾ ಚುನಾವಣೆಗೆ ಎರಡು ವರ್ಷ ಉಳಿದಿರುವಾಗ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಚುನಾವಣೆ ಹೊಸ್ತಿಲಲ್ಲಿ ನಿಂತಿರುವ ಈ ಹೊತ್ತಿನಲ್ಲಿ ಇದೇ ಭಾನುವಾರ ಬಿಜೆಪಿಯ ನೂತನ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಮೊದಲ ಬಾರಿಗೆ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಹೀಗಾಗಿ, ಅದಕ್ಕೂ ಮೊದಲು ಆಗಮಿಸಿರುವ ಪಕ್ಷದ ರಾಷ್ಟ್ರೀಯ ಸಹ ಸಂಘಟನಾ ಪ್ರಧಾನ ಕಾರ್ಯದರ್ಶಿ ಶಿವಪ್ರಕಾಶ್ ಹಾಗೂ ರಾಷ್ಟ್ರೀಯ ಉಪಾಧ್ಯಕ್ಷ ಬೈಜಯಂತ್ ಜಯ್ ಪಾಂಡಾ ಅವರು ಗುರುವಾರ ಸಂಘಟನೆ ಬಲಪಡಿಸುವ ಕಸರತ್ತು ಕೈಗೆತ್ತಿಕೊಂಡರು.

ಪಕ್ಷದ ಕಚೇರಿಯಲ್ಲಿ ಕುಳಿತು ಸಭೆ ನಡೆಸಿದ ಈ ಇಬ್ಬರೂ ನಾಯಕರಿಗೆ ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್‌ವಾಲ್ ಅವರು ಸಾಥ್ ನೀಡಿದರು. ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್‌, ಉಪನಾಯಕ ಅರವಿಂದ ಬೆಲ್ಲದ ವಿಧಾನಪರಿಷತ್ತಿನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಬಂಡಾಯದ ಬಾವುಟ ಹಾರಿಸಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಮಾಜಿ ಉಪಮುಖ್ಯಮಂತ್ರಿ ಹಾಗೂ ಸಂಸದ ಗೋವಿಂದ ಕಾರಜೋಳ ಸೇರಿ ಹಲವು ನಾಯಕರೊಂದಿಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಿ ಸಲಹೆ ಮತ್ತು ಅಭಿಪ್ರಾಯಗಳನ್ನು ಸ್ವೀಕರಿಸಿದರು.

ಯಾಕೆ ಹೋರಾಟ ಸಾಧ್ಯವಾಗುತ್ತಿಲ್ಲ?:

ರಾಜ್ಯದಲ್ಲಿನ ಆಡಳಿತಾರೂಢ ಕಾಂಗ್ರೆಸ್‌ ಕಳೆದ ಮೂರು ವರ್ಷಗಳಲ್ಲಿ ಹಲವಾರು ವೈಫಲ್ಯಗಳ ಅಸ್ತ್ರಗಳನ್ನು ನೀಡಿದ್ದರೂ ಅವುಗಳನ್ನು ಸಮರ್ಪಕವಾಗಿ ಬಳಸಿಕೊಂಡು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವಂಥ ಹೋರಾಟಗಳನ್ನು ತಂಡಸ್ಫೂರ್ತಿಯಿಂದ ನಡೆಸಲು ಯಾಕೆ ಸಾಧ್ಯವಾಗುತ್ತಿಲ್ಲ? ರಾಜ್ಯಾಧ್ಯಕ್ಷರು ಹಮ್ಮಿಕೊಳ್ಳುವ ಅನೇಕ ಕಾರ್ಯಕ್ರಮಗಳು, ಹೋರಾಟಗಳಿಗೆ ಹಲವು ಹಿರಿಯ ನಾಯಕರು ಯಾಕೆ ಹೆಚ್ಚಿನ ಸಮಯ ನೀಡುತ್ತಿಲ್ಲ? ಹೋರಾಟಗಳನ್ನು ಯಶಸ್ವಿಗೊಳಿಸಲು ಏನು ಮಾಡಬೇಕು? ರಾಜ್ಯ ಪದಾಧಿಕಾರಿಗಳು ಜವಾಬ್ದಾರಿಯಿಂದ ನಡೆದುಕೊಳ್ಳುತ್ತಿಲ್ಲವೇ ಎಂಬಿತ್ಯಾದಿ ಪ್ರಶ್ನೆಗಳನ್ನು ರಾಷ್ಟ್ರೀಯ ನಾಯಕರು ರಾಜ್ಯ ನಾಯಕರ ಮುಂದಿಟ್ಟರು ಎಂದು ತಿಳಿದು ಬಂದಿದೆ.

ಹೇಳಿಕೆಗಷ್ಟೇ ಸೀಮಿತ ಆಗ್ತಿದ್ದೀರಿ:

ಜತೆಗೆ ರಾಜ್ಯ ನಾಯಕರ ಪೈಕಿ ಅನೇಕರು ಮಾಧ್ಯಮ ಹೇಳಿಕೆಗೆ ಮಾತ್ರ ಸೀಮಿತವಾಗಿದ್ದಾರೆಯೇ ಹೊರತು ರಾಜ್ಯದ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಸ್ವಯಂಪ್ರೇರಣೆಯಿಂದ ಬಯಲಿಗೆಳೆಯುತ್ತಿಲ್ಲ. ಮಾಧ್ಯಮಗಳಲ್ಲಿ ಪ್ರಕಟಗೊಂಡ ಬಳಿಕ ಆ ಬಗ್ಗೆ ಪ್ರತಿಕ್ರಿಯೆಗಳನ್ನು ನೀಡುವುದಷ್ಟೇ ಪ್ರತಿಪಕ್ಷದ ಕೆಲಸವೇ ಎಂದೂ ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ ಎನ್ನಲಾಗಿದೆ.

ಶುಕ್ರವಾರವೂ ರಾಷ್ಟ್ರೀಯ ಸಹ ಸಂಘಟನಾ ಪ್ರಧಾನ ಕಾರ್ಯದರ್ಶಿ ಶಿವಪ್ರಕಾಶ್ ಹಾಗೂ ರಾಷ್ಟ್ರೀಯ ಉಪಾಧ್ಯಕ್ಷ ಬೈಜಯಂತ್ ಜಯ್ ಪಾಂಡಾ ಹಲವು ರಾಜ್ಯ ನಾಯಕರನ್ನು ಭೇಟಿ ಮಾಡುವ ಸಾಧ್ಯತೆಯಿದ್ದು, ಬಳಿಕ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರಿಗೆ ಈ ಎಲ್ಲ ಮಾಹಿತಿ ರವಾನಿಸುವ ನಿರೀಕ್ಷೆಯಿದೆ.