ಕೃಷಿ ಸಾಲದಲ್ಲಿ ಡಿಸಿಸಿ ಬ್ಯಾಂಕ್‌ಉತ್ತಮ ಸಾಧನೆ: ಎಸ್‌ಟಿಎಸ್‌ ಗುರಿ ಮೀರಿದ ಸಾಧನೆ ಮಾಡಲು ಸಚಿವ ಸೂಚನೆ

ಬೆಂಗಳೂರು (ನ.24) : ಪ್ರಸಕ್ತ 2022-23ನೇ ಸಾಲಿನಲ್ಲಿ ಸರ್ಕಾರ ನಿಗದಿಪಡಿಸಿದ ಕೃಷಿ ಸಾಲ ವಿತರಣೆಯಲ್ಲಿ ಡಿಸಿಸಿ ಬ್ಯಾಂಕುಗಳು ಉತ್ತಮ ಸಾಧನೆ ಮಾಡಿದ್ದು, ಮಾಚ್‌ರ್‍ ಅಂತ್ಯದ ವೇಳೆಗೆ ಗುರಿಗಿಂತ ಹೆಚ್ಚು ಸಾಧನೆ ಮಾಡಬೇಕು ಎಂದು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಸೂಚನೆ ನೀಡಿದರು.

ಕೃಷಿ ಸಾಲ ವಿತರಣೆಗೆ ಸಂಬಂಧಿಸಿದಂತೆ ಡಿಸಿಸಿ ಬ್ಯಾಂಕುಗಳ ಅಧ್ಯಕ್ಷರು, ಅಪೆಕ್ಸ್‌ ಬ್ಯಾಂಕ್‌ ನಿರ್ದೇಶಕರು ಹಾಗೂ ಅಧಿಕಾರಿಗಳೊಂದಿಗೆ ವಿಕಾಸ ಸೌಧದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಕಾರ್ಖಾನೆಗಳಿಗೆ ಭಾರಿ ಸಾಲ: ಡಿಸಿಸಿ ದಿವಾಳಿ ಅಂಚಲ್ಲಿ, ಆತಂಕ

ಬಹುತೇಕ ಡಿಸಿಸಿ ಬ್ಯಾಂಕುಗಳು ಶೇ.80 ರಿಂದ 100ರಷ್ಟುಸಾಧನೆ ಮಾಡಿವೆ. ಉಳಿದ ಡಿಸಿಸಿ ಬ್ಯಾಂಕುಗಳು ನಿಗದಿತ ಅವಧಿಯೊಳಗೆ ಸರ್ಕಾರ ನಿಗದಿಪಡಿಸಿರುವ ಗುರಿ ಮುಟ್ಟಲು ಕಾರ್ಯಪ್ರವೃತ್ತರಾಗಬೇಕು. ಸಾಲ ವಿತರಣೆಯಲ್ಲಿ ಯಾವುದೇ ಸಮಸ್ಯೆ, ಗೊಂದಲಗಳಿದ್ದರೆ ಗಮನಕ್ಕೆ ತಂದರೆ ಸರ್ಕಾರದ ಹಂತದಲ್ಲಿ ತಕ್ಷಣ ಪರಿಹರಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ನವೆಂಬರ್‌ ತಿಂಗಳವರೆಗೆ 17.16 ಲಕ್ಷ ರೈತರಿಗೆ 12,518.92 ಕೋಟಿ ರು. ಅಲ್ಪಾವಧಿ ಕೃಷಿ ಸಾಲ ವಿತರಿಸಲಾಗಿದೆ. ಇದರಲ್ಲಿ 1 ಲಕ್ಷ ಹೊಸ ರೈತರಿಗೆ 792.61 ಕೋಟಿ ರು., ಪರಿಶಿಷ್ಟಪಂಗಡದ 2.33 ಲಕ್ಷ ರೈತರಿಗೆ 1428.64 ಕೋಟಿ ರು. ಸಾಲ ವಿತರಿಸಲಾಗಿದೆ. 22,590 ರೈತರಿಗೆ 711 ಕೋಟಿ ರು. ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಸಾಲ ವಿತರಿಸಿದ್ದು ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡದ 1635 ರೈತರಿಗೆ 45.36 ಕೋಟಿ ರು. ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.

‘ಡಿಸಿಸಿ’ ಸಾಲ ವಿತರಣೆ ವೇಳೆ ಕಾಂಗ್ರೆಸ್‌ ಶಾಸಕರನ್ನು ದೂರವಿಡಿ: ಬಿಜೆಪಿ ನಾಯಕರು

ಸಭೆಯಲ್ಲಿ ಸಚಿವರಾದ ಶಿವರಾಂ ಹೆಬ್ಬಾರ್‌, ಹಾಲಪ್ಪ ಆಚಾರ್‌, ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿ ಶಿವಯೋಗಿ ಪಿ.ಕಳಸದ್‌, ಮಾಜಿ ಸಚಿವ ಲಕ್ಷ್ಮಣ್‌ ಸವದಿ, ಶಾಸಕರಾದ ರಾಜಕುಮಾರ ಪಾಟೀಲ ತೇಲ್ಕೂರ್‌, ತುಮಕೂರು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಕೆ.ಎನ್‌. ರಾಜಣ್ಣ ಮತ್ತಿತರರು ಉಪಸ್ಥಿತರಿದ್ದರು.