ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಮತ ಎಣಿಕೆ ಮೇ 4 ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ, ನಗರದಲ್ಲಿ ಮದ್ಯ ಮಾರಾಟ ನಿಷೇಧಿಸಿ 'ಶುಷ್ಕ ದಿವಸ' ಘೋಷಿಸಲಾಗಿದೆ ಹಾಗೂ ಹಳೆ ಪಿ.ಬಿ. ರಸ್ತೆಯಲ್ಲಿ ವಾಹನ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ.

ದಾವಣಗೆರೆ (ಮೇ.4): ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಮತ ಎಣಿಕೆ ಕಾರ್ಯವು ಮೇ 4ರಂದು ನಡೆಯಲಿದ್ದು, ಮುಕ್ತ, ಶಾಂತಿಯುತ ಹಾಗೂ ನಿಷ್ಪಕ್ಷಪಾತವಾಗಿ ಮತ ಎಣಿಕೆ ಕಾರ್ಯ ನಡೆಸಲು ಪೂರಕವಾಗಿ ದಾವಣಗೆರೆ ತಾಲೂಕು ಮತ್ತು ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲ ಮದ್ಯದಂಗಡಿ, ಬಾರ್ ಮತ್ತು ರೆಸ್ಟೋರೆಂಟ್, ಹೋಟೆಲ್, ಕ್ಲಬ್, ಡಾಬಾಗಳಲ್ಲಿ ಹಾಗೂ ಇನ್ನಿತ ರೆ ಸ್ಥಳಗಳಲ್ಲಿ ಮದ್ಯ ಮಾರಾಟ ಸಂಪೂರ್ಣ ನಿಷೇಧಿಸಿ, ‘ಶುಷ್ಕ ದಿವಸ’ ಎಂದು ಘೋಷಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಆದೇಶ ಹೊರಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹಳೆ ಪಿ.ಬಿ. ರಸ್ತೆ ವಾಹನ ಸಂಚಾರ ಮಾರ್ಗ ಬದಲಾವಣೆ ದಾವಣಗೆರೆ: ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆಯ ಮತ ಎಣಿಕೆ ಮೇ.4ರಂದು ನಗರದ ಹಳೆ ಪಿ.ಬಿ.ರಸ್ತೆಯ ಡಿಆರ್‌ಆರ್ ಶಾಲೆಯಲ್ಲಿ ನಡೆಯುವ ಹಿನ್ನೆಲೆಯಲ್ಲಿ ಸುಗಮ ಸಂಚಾರ ವ್ಯವಸ್ಥೆ ಮತ್ತು ಭದ್ರತೆ ದೃಷ್ಟಿಯಿಂದ ಮತ ಎಣಿಕಾ ಕೇಂದ್ರದ ಸುತ್ತಮುತ್ತ ವಾಹನ ಸಂಚಾರ ಮಾರ್ಗ ಬದಲಾವಣೆ ಮಾಡಿ ಜಿಲ್ಲಾ ಚುನಾವಣಾಧಿಕಾರಿ, ಡಿಸಿ ಆದೇಶ ಹೊರಡಿಸಿದ್ದಾರೆ.

ಸಂಚಾರ ನಿಷೇಧ- ಪರ್ಯಾಯ ಮಾರ್ಗ ಮೇ 4ರ ಬೆಳಗ್ಗೆ 5ರಿಂದ ಸಂಜೆ 5ರವರೆಗೆ ಇಲ್ಲಿನ ಹಳೇ ಪಿ.ಬಿ. ರಸ್ತೆಯ ಎಪಿಎಂಸಿ ಫ್ಲೈಓವರ್‌ನಿಂದ ಡಿಸಿಎಂ ಅಂಡರ್ ಬ್ರಿಡ್ಜ್‌ವರೆಗೆ ಎಲ್ಲ ಮಾದರಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಬೆಂಗಳೂರು, ಚಿತ್ರದುರ್ಗ ಮಾರ್ಗವಾಗಿ ಬಾಡಾ ಕ್ರಾಸ್ ಮೂಲಕ ದಾವಣಗೆರೆ ನಗರಕ್ಕೆ ಬರುವ ಕೆಎಸ್‌ಆರ್‌ಟಿಸಿ, ಖಾಸಗಿ ಬಸ್ಸುಗಳು ಮತ್ತು ಎಲ್ಲ ಭಾರೀ ಹಾಗೂ ಲಘು ಸರಕು ಸಾಗಣೆ ವಾಹನಗಳು ಇಲ್ಲಿನ ಎಪಿಎಂಸಿ ಎತ್ತಿನ ಸಂತೆ ಮುಖಾಂತರ ಎಪಿಎಂಸಿ ಒಳಗಿನ ರಸ್ತೆಯ ಮೂಲಕ ಆರ್‌.ಎಂ.ಸಿ. ಫ್ಲೈ ಓವರ್‌ ಮಾರ್ಗವಾಗಿ ಶ್ರೀ ಬಸವೇಶ್ವರ ದೇವಸ್ಥಾನ, ಗಣೇಶ ಹೋಟೆಲ್ ಸರ್ಕಲ್ ಹಾಗೂ ಈರುಳ್ಳಿ ಮಾರ್ಕೆಟ್ ಮುಖಾಂತರ ಹಳೇ ಪಿ.ಬಿ. ರಸ್ತೆ ತಲುಪಬೇಕು.

ಭದ್ರತಾ ದೃಷ್ಟಿಯಿಂದ ಮತ ಎಣಿಕಾ ಕೇಂದ್ರಕ್ಕೆ ಬರುವಂತಹ ಚುನಾವಣಾ ಏಜೆಂಟರು ಹಾಗೂ ಮತ ಎಣಿಕಾ ಕೇಂದ್ರಕ್ಕೆ ಬರುವವರು ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳು ಮತ್ತು ಮೊಬೈಲ್ ಫೋನ್‌ಗಳನ್ನು ತರುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಆದೇಶ ಹೊರಡಿಸಿದ್ದಾರೆ.