ಸಿಟಿ ರವಿ ಅವರು ಸುದ್ದಿಗೋಷ್ಠಿಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಸಣ್ಣ ವ್ಯಾಪಾರಿಗಳಿಗೆ ನೀಡಿರುವ ವಾಣಿಜ್ಯ ತೆರಿಗೆ ನೋಟಿಸ್‌ಗಳನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿದರು. ರಾಜ್ಯದ ಖಜಾನೆ ಖಾಲಿ ಇರುವುದನ್ನು ಒಪ್ಪಿಕೊಳ್ಳುವಂತೆ ಸರ್ಕಾರಕ್ಕೆ ಸವಾಲು ಹಾಕಿದರು.

ಸಿಟಿ ರವಿ ಸುದ್ದಿಗೋಷ್ಠಿ ನಡೆಸಿ ರಾಜ್ಯ ಸರ್ಕಾರ ಸೇರಿದಂತೆ ಹಲವು ವಿಚಾರಗಳನ್ನು ಪ್ರಸ್ತುತಪಡಿಸಿದ್ದಾರೆ. ವಾಣಿಜ್ಯ ತೆರಿಗೆ ನೋಟೀಸ್ ಕುರಿತು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ ಅವರು "ಡಿಸಿಎಂ ಹೇಳಿದ ಹಾಗೆ ಕೋತಿ ತಾ ತಿಂದು ಮೇಕೆ ಬಾಯಿಗೆ ವರಸಿದಂತೆ ಆಯ್ತು. ಆದರೆ ಇಲ್ಲಿ ಈಗ ‘ಕೋತಿ ಯಾರು?’ ಎಂಬ ಪ್ರಶ್ನೆ ಉದ್ಭವಿಸಿದೆ," ಎಂದು ಕಿಡಿಕಾರಿದರು. ಸಣ್ಣ ವ್ಯಾಪಾರಿಗಳಿಗೆ ನೋಟೀಸ್ ನೀಡಿದ್ದು ರಾಜ್ಯದ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳು, ಮತ್ತು ಅದು ಮುಖ್ಯಮಂತ್ರಿ ಸೂಚನೆಯ ಮೇರೆಗೆ ನಡೆದಿರುವುದು. ನೀವು ಕೋತಿಯ ಕೆಲಸ ಮಾಡಿದ್ದೀರಿ ನೋಟೀಸ್ ನೀಡಿದ್ದು ಕೇಂದ್ರ ಸರ್ಕಾರವಲ್ಲ ಎಂದು ಬಗ್ಗೆಯಾಗಿ ಹೇಳಿದರು.

ಕೇವಲ ಕರ್ನಾಟಕದ ಸಣ್ಣ ವ್ಯಾಪಾರಿಗಳಿಗೆ ನೋಟೀಸ್:

"ಇಡೀ ದೇಶದಲ್ಲಿಯೇ ನೋಟೀಸ್‌ಗಳು ಕೇವಲ ಕರ್ನಾಟಕದ ಸಣ್ಣ ವ್ಯಾಪಾರಿಗಳಿಗೆ ಮಾತ್ರ ನೀಡಲಾಗಿದೆ. ಹಾಗೆ ದೇಶದ ಇತರ ರಾಜ್ಯಗಳಲ್ಲೂ ನೋಟೀಸ್‌ಗಳು ನೀಡಲಾಗಿದ್ದರೆ, ನಾವು ಒಪ್ಪಿಕೊಳ್ಳಬಹುದಿತ್ತು," ಎಂದು ಹೇಳಿದರು. "ಜಿಎಸ್‌ಟಿ 2017ರಲ್ಲಿ ಜಾರಿಯಾದರೂ, ನೀವು 2020ರಿಂದ ಮಾತ್ರ ನೋಟೀಸ್ ನೀಡಿದ್ದೀರಿ. ಹೂ ಮಾರುವಂತಹ ಸಣ್ಣ ವ್ಯಾಪಾರಿಗಳಿಗೆ ಸಹ ನೋಟೀಸ್ ನೀಡಿದ್ದೀರಿ. ಇದು ನ್ಯಾಯಯುತವಲ್ಲ ಎಂದರು.

ನೋಟೀಸ್ ವಾಪಸ್ ಪಡೆಯಬೇಕು:

ಸಿಟಿ ರವಿ ರಾಜ್ಯ ಸರ್ಕಾರವನ್ನು ಗಂಭೀರವಾಗಿ ಎಚ್ಚರಿಸಿದರು . ಇದು ರಾಜ್ಯ ಸರ್ಕಾರದ ಗಂಭೀರ ಯಡವಟ್ಟು. ತಕ್ಷಣ ಈ ನೋಟೀಸ್‌ಗಳನ್ನು ವಾಪಸ್ ಪಡೆಯಿರಿ. ಇಲ್ಲದಿದ್ದರೆ ನಾಳೆ ಸಣ್ಣ ವ್ಯಾಪಾರಿಗಳು ಹೋರಾಟ ಆರಂಭಿಸುತ್ತಿದ್ದಾರೆ. ಅವರಿಗೆ ಬಿಜೆಪಿ ನೈತಿಕ ಬೆಂಬಲ ನೀಡಲಿದೆ. ನಾವೂ ಅವರ ಹೋರಾಟದಲ್ಲಿ ಭಾಗಿಯಾಗುತ್ತೇವೆ ಎಂದರು.

ಡಿಜಿಟಲ್ ವ್ಯವಹಾರಗಳ ವಿರುದ್ಧ ಭಯ ಸೃಷ್ಟಿಯಾಗಿದೆ:

ನೀವು ವಹಿಸಿರುವ ಕ್ರಮದ ಪರಿಣಾಮವಾಗಿ, ಕೆಲವು ವ್ಯಾಪಾರಿಗಳು 'Only Cash, No UPI' ಎಂಬ ಫಲಕಗಳನ್ನು ಹಾಕುತ್ತಿದ್ದಾರೆ. ಇದರ ಲಾಭ ಮಧ್ಯವರ್ತಿಗಳಿಗೆ ಆಗುತ್ತಿದೆ. ಪ್ರಾಮಾಣಿಕವಾಗಿ ಡಿಜಿಟಲ್ ವ್ಯವಹಾರ ಪ್ರೋತ್ಸಾಹಿಸುತ್ತಿರುವ ಸಣ್ಣ ವ್ಯಾಪಾರಿಗಳಿಗೆ ತೊಂದರೆ ಕೊಡಬೇಡಿ.

ರಾಜ್ಯದ ಖಜಾನೆ ಖಾಲಿ ಎಂದಾದರೆ ಸ್ಪಷ್ಟವಾಗಿ ಒಪ್ಪಿಕೊಳ್ಳಿ:

ನಿಮ್ಮ ಖಜಾನೆ ಖಾಲಿ ಆಗಿದ್ದರೆ ಅದು ಒಪ್ಪಿಕೊಳ್ಳಿ. ಜನರಿಗೆ ಭಯ ಹುಟ್ಟಿಸುವ ಬದಲು ನಿಜವನ್ನು ಹೇಳಿ. ಸಿದ್ದರಾಮಯ್ಯ ಹೇಳಿದ 'ಖಜಾನೆ ತುಂಬಿ ತುಳುಕುತ್ತಿದೆ' ಎಲ್ಲಿದೆ? ಸಿದ್ದರಾಮಯ್ಯ ಅವರು ರಾಜ್ಯದ ಖಜಾನೆ ತುಂಬಿ ತುಳುಕುತ್ತಿದೆ ಎಂದು ಹೇಳಿದ್ದಾರೆ. ಆದರೆ, ನಿಮ್ಮ ಶಾಸಕರಾದ ಬಿ.ಆರ್. ಪಾಟೀಲ್, ರಾಜು ಕಾಗೆ, ಆರ್.ವಿ. ದೇಶಪಾಂಡೆ ಅವರು ‘ಅನುಧಾನವಿಲ್ಲ’ ಎಂದಿದ್ದಾರೆ. ಖಜಾನೆ ತುಂಬಿ ತುಳುಕುತ್ತಿದ್ದರೆ:

  • ಕಸದ ಮೇಲೆ ಸೆಸ್ ಏಕೆ?
  • ನೀರಿನ ದರ ಏರಿಕೆ ಏಕೆ?
  • ಆನ್‌ಲೈನ್ ವಿತರಣಾ ಸೇವೆಗಳಿಗೆ ಟ್ಯಾಕ್ಸ್ ಏರಿಕೆ ಏಕೆ?
  • ವಾಹನ ನೊಂದಣಿಗೆ ಹೆಚ್ಚುವರಿ ಶುಲ್ಕ ಏಕೆ?
  • ಬೀಜದ ದರ ಏರಿಕೆ ಏಕೆ?
  • 20 ರೂ. ಸ್ಟಾಂಪ್ ಪೇಪರ್ ಕಳೆದುಹೋಗಿ ಈಗ ಕನಿಷ್ಟ ₹500 ಆಗಿರುವುದು ಯಾಕೆ?
  • ಅಬಕಾರಿ, ಡೆತ್ ಸರ್ಟಿಫಿಕೇಟ್ ಶುಲ್ಕ ಏರಿಕೆ ಯಾಕೆ?

₹1.16 ಲಕ್ಷ ಕೋಟಿ ಸಾಲ ಮಾಡಿಕೊಂಡ ಸರ್ಕಾರ ಜನರಿಗೆ ₹300 ನೀಡಿ ಭಾಷಣ ಮಾಡುತ್ತಿದೆ:

ಈ ವರ್ಷದ ಸಾಲ ಮೊತ್ತ ₹1.16 ಲಕ್ಷ ಕೋಟಿ. ಇನ್ನು ಜನರಿಗೆ ₹300 ನೀಡಿ ಭಾಷಣ ಮಾಡಲು ಕರೆದುಕೊಂಡು ಬರುತ್ತಾರೆ. ಅಂತಹ ಜನ ಕೊನೆತನಕ ಕೂತು ಕೇಳ್ತಾರಾ? ₹300ಗೆ ಎಷ್ಟು ಹೊತ್ತು ಕೂತು ಕೇಳುತ್ತಾರೆ?

ಮುಡಾ ಪ್ರಕರಣ, ಸುಪ್ರೀಂ ತೀರ್ಪು ಭ್ರಷ್ಟಾಚಾರಕ್ಕೆ ಕ್ಲೀನ್ ಚಿಟ್ ಅಲ್ಲ:

“ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಸಿದ್ದರಾಮಯ್ಯ ಅವರ ಪಕ್ಷಪಾತಕ್ಕೆ ಅಥವಾ ಭ್ರಷ್ಟಾಚಾರಕ್ಕೆ ಶ್ರೇಯೋಭಿಲಾಷೆಯಲ್ಲ. ಅದು ತನಿಖಾ ಸಂಸ್ಥೆಗಳ ಕೆಲಸದ ಕುರಿತಾಗಿತ್ತು. ಹಾಗೆಯೇ ತೇಜಸ್ವಿ ಸೂರ್ಯ ಕುರಿತು ಕೊಟ್ಟ ತೀರ್ಪಿನಲ್ಲಿ 25 ಲಕ್ಷ ದಂಡವನ್ನೂ ವಿಧಿಸಲಾಗಿದೆ. ಅದನ್ನೂ ರಾಜ್ಯ ಸರ್ಕಾರ ಹಿನ್ನಡೆ ಎಂಬಂತೆ ನೋಡಿ, introspect ಮಾಡಬೇಕು.”