ಬಿಜೆಪಿ ನಾಯಕನ ಮನೆಗೆ ಲೋಕಾಯುಕ್ತ ರೇಡ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಿಟಿ ರವಿ ಕಾಂಗ್ರೆಸ್ ಸರ್ಕಾರ ಇದ್ದಿದ್ದರೆ ರೇಡ್ ಆಗುತ್ತಿರಲಿಲ್ಲ. ಪ್ರಕರಣವನ್ನು ಮುಚ್ಚಿ ಹಾಕುವ ಕೆಲಸ ಮಾಡುತ್ತಿದ್ದರು ಎಂದಿದ್ದಾರೆ.

ಚಿಕ್ಕಮಗಳೂರು (ಮಾ.3): ಕಾಂಗ್ರೆಸ್ ಸರ್ಕಾರ ಇದ್ದಿದ್ದರೆ ರೇಡ್ ಆಗುತ್ತಿರಲಿಲ್ಲ. ಪ್ರಕರಣವನ್ನು ಮುಚ್ಚಿ ಹಾಕುವ ಕೆಲಸ ಮಾಡುತ್ತಿದ್ದರು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು. ಲಂಚ ಪಡೆಯುವಾಗ ಶಾಸಕ ಮಾಡಾಳು ವಿರುಪಾಕ್ಷಪ್ಪ ಅವರ ಪುತ್ರ ಲೋಕಾಯುಕ್ತ ಬಲೆಗೆ ಬಿದ್ದ ಬಗ್ಗೆ ಚಿಕ್ಕಮಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಹಿಂದೆ ಕಾಂಗ್ರೆಸ್ ಆಡಳಿತದಲ್ಲಿದ್ದಾಗ ಎಸಿಬಿ ಮೂಲಕ 54 ಪ್ರಕರಣಗಳಿಗೆ ಕ್ಲೀನ್ಚಿಟ್ ಕೊಟ್ಟಿದ್ದರು ಎಂದರು. ಮಕ್ಕಳ ಹಾಸಿಗೆ, ದಿಂಬಿನಲ್ಲಿ ದುಡ್ಡು ಹೊಡೆದು ತಿಂದವರಿಗೂ ಕ್ಲೀನ್ ಚಿಟ್ ಕೊಟ್ಟರು. ಸಣ್ಣ ನೀರಾವರಿ ಇಲಾಖೆಯಲ್ಲಿ ಕಳ್ಳಬಿಲ್ಲು ಬರೆದುಕೊಂಡವರು ಹಾಗೂ ಮರಳು ದಂಧೆಯವರಿಗೂ ಕಾಂಗ್ರೆಸ್ನವರು ಕ್ಲೀನ್ ಚಿಟ್ ಕೊಟ್ಟಿದ್ದರು ಎಂದರು.

Add Asianetnews Kannada as a Preferred SourcegooglePreferred

ಅರ್ಕಾವತಿ ಬಡಾವಣೆ ಹಗರಣದಲ್ಲಿ 8 ಸಾವಿರ ಕೋಟಿ ರೂ. ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಿದೆ ಎಂದು ನ್ಯಾಯಮೂರ್ತಿ ಕೆಂಪಣ್ಣ ಆಯೋಗ ವರದಿ ಕೊಟ್ಟಿತ್ತು. ಹಾಗಿದ್ದರೆ ಕದ್ದ ಕಳ್ಳಯಾರು? ಪ್ರಮಾಣಿಕ ತನಿಖೆ ಆಗಿದ್ದರೆ ನಿಜವಾದ ಕಳ್ಳ ಯಾರು? ಲೂಟಿ ಹೊಡೆದವರು ಯಾರು ಎನ್ನುವುದು ಹೊರಕ್ಕೆ ಬರುತ್ತಿತ್ತು ಎಂದರು. ಇಂದು ಯಾವ ವಿಚಾರದಲ್ಲಿ ಯಾರಿದ್ದರೂ ಬಚಾವ್ ಮಾಡುವ ಪ್ರಶ್ನೆ ಇಲ್ಲ ಎನ್ನುವದಕ್ಕೆ ಇದೊಂದು ನಿದರ್ಶನ. ಆ ಕಾರಣಕ್ಕೆ ರೇಡ್ ಆಗಿರುವುದು ಎಂದು ಹೇಳಿದರು.

Lokayukta Ride: ವಾರಕ್ಕೊಮ್ಮೆ ಬರುವ ಮೋದಿ ಇದನ್ನೇ ಕಲಿಸಿ ಹೋಗಿದ್ದೀರಾ: ಶಾಸಕ ಎಚ್ ಕೆ ಪಾಟೀಲ ಪ್ರಶ್ನೆ

ಬಿಜೆಪಿಯ ಹಿರಿಯ ಶಾಸಕರೂ ಆಗಿರುವ ಕರ್ನಾಟಕ ಸಾಬೂನು ಮತ್ತು ಮಾರ್ಜಕ ಲಿ. (ಕೆಎಸ್‌ಡಿಎಲ್‌) ಅಧ್ಯಕ್ಷ ವಿರೂಪಾಕ್ಷಪ್ಪ ಮಾಡಾಳ್‌ ಪುತ್ರ ಪ್ರಶಾಂತ್‌ ಮಾಡಾಳ್‌ ಲಂಚ ಸ್ವೀಕಾರ ಆರೋಪದ ಮೇಲೆ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದಾರೆ. 40 ಲಕ್ಷ ರು. ಲಂಚದ ಹಣ ಹೊರತುಪಡಿಸಿ ದಾಖಲೆ ಇಲ್ಲದ ಎರಡು ಕೋಟಿ ರು. ಕೂಡ ಅವರ ಬಳಿ ಪತ್ತೆಯಾಗಿದೆ. ಲಂಚ ಸ್ವೀಕಾರ ಆರೋಪದ ಮೇಲೆ ಕಾರ್ಯಾಚರಣೆ ನಡೆಸಿದಾಗ ಇಷ್ಟೊಂದು ಪ್ರಮಾಣದಲ್ಲಿ ಹಣ ಪತ್ತೆಯಾಗಿರುವುದು ಲೋಕಾಯುಕ್ತ ಸಂಸ್ಥೆಯ ಇತಿಹಾಸದಲ್ಲಿಯೇ ಮೊದಲಾಗಿದೆ.

ವಿರೂಪಾಕ್ಷಪ್ಪಗೆ ಲೋಕಾಯುಕ್ತ ಖೆಡ್ಡಾ ತೋಡಿದ್ದು ಹೇಗೆ? ನ್ಯಾ. ಬಿಎಸ್‌ ಪಾಟೀಲ್‌ ವಿವರಿಸಿದ್ದು ಹೀಗೆ

ಅಕ್ರಮ ಆಸ್ತಿ ಗಳಿಕೆ ಆರೋಪದ ಮೇರೆಗೆ ನಡೆದ ದಾಳಿ ವೇಳೆ ಕೋಟ್ಯಂತರ ರು. ನಗದು ಪತ್ತೆಯಾದ ನಿದರ್ಶನಗಳಿವೆ. ಆದರೆ, ಲಂಚ ಸ್ವೀಕಾರ ಆರೋಪದ ಮೇಲೆ ನಡೆದ ಕಾರ್ಯಾಚರಣೆ ವೇಳೆ ಪತ್ತೆಯಾದ ಮೊತ್ತದಲ್ಲಿ ಇದೇ ಅತಿದೊಡ್ಡ ಮೊತ್ತವಾಗಿದೆ. ಕೆಎಸ್‌ಡಿಎಲ್‌ಗೆ ಕಚ್ಚಾವಸ್ತು ಪೂರೈಸುವ ಟೆಂಡರ್‌ ಪ್ರಕ್ರಿಯೆಯಲ್ಲಿ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲು 40 ಲಕ್ಷ ರು. ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.