Asianet Suvarna News Asianet Suvarna News

Corona Politics: ಮೇಕೆದಾಟು ಪಾದಯಾತ್ರೆಯಿಂದ ಕೊರೋನಾ ಹೆಚ್ಚಳ: ಸುಧಾಕರ್‌

*  ಹಲವು ಕಾಂಗ್ರೆಸ್‌ ಹಿರಿಯ ನಾಯಕರಿಗೆ ಕೊರೋನಾ ಸೋಂಕು ದೃಢ
*  ಪಾದಯಾತ್ರೆ ನಡೆಸಿದವರೇ ಸೋಂಕು ಪ್ರಕರಣಗಳ ಹೆಚ್ಚಳಕ್ಕೂ ಕಾರಣ
*  ಸೋಂಕಿನ ನಿಯಂತ್ರಣದಲ್ಲಿದ್ದ ಅಧಿ​ಕಾರಿಗಳ ಸ್ಫೂರ್ತಿ ಕಳೆಯುವ ಕೆಲಸ ಮಾಡಿದ ಡಿಕೆಶಿ

Covid Cases Increasing in Karnataka Due to Mekedatu Padayatra Says K Sudhakar grg
Author
Bengaluru, First Published Jan 14, 2022, 9:47 AM IST

ಬೆಂಗಳೂರು(ಜ.14):  ಮೇಕೆದಾಟು ಪಾದಯಾತ್ರೆಯಿಂದ(Mekedatu Padayatra) ರಾಜ್ಯದಲ್ಲಿ(Karnataka) ಕೊರೋನಾ(Coronavirus) ಸೋಂಕು ಪ್ರಕರಣಗಳು ಹೆಚ್ಚಳವಾಗಿದ್ದು, ಪಾದಯಾತ್ರೆ ನಡೆಸಿದವರೇ ಇದಕ್ಕೆ ಕಾರಣ ಎಂದು ಆರೋಗ್ಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌(Dr K Sudhakar) ಕಿಡಿಕಾರಿದ್ದಾರೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ಪಾದಯಾತ್ರೆಯಲ್ಲಿ ಭಾಗಿಯಾಗಿದ್ದ ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ, ಎಚ್‌.ಎಂ.ರೇವಣ್ಣ, ಸಿ.ಎಂ.ಇಬ್ರಾಹಿಂ ಸೇರಿದಂತೆ ಹಲವು ಕಾಂಗ್ರೆಸ್‌(Congress) ಹಿರಿಯ ನಾಯಕರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಅಂತೆಯೇ ಅನೇಕ ಅಮಾಯಕರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದು, ಎಷ್ಟು ಮಂದಿಗೆ ಸೋಂಕು ಬಂದಿದೆ ಎಂದು ಗೊತ್ತಿಲ್ಲ. ಪಾದಯಾತ್ರೆ ಸೋಂಕು ಹರಡಲು ಹಾದಿಯಾಗಿದ್ದು, ಪಾದಯಾತ್ರೆ ನಡೆಸಿದವರೇ ಸೋಂಕು ಪ್ರಕರಣಗಳ ಹೆಚ್ಚಳಕ್ಕೂ ಕಾರಣವಾಗಲಿದ್ದಾರೆ ಎಂದರು.

Covid 19 Third Wave: '2​​-3 ದಿನಕ್ಕೇ ರಾಜ್ಯದಲ್ಲಿ ಕೋವಿಡ್‌ ದ್ವಿಗುಣ, ಇನ್ನಷ್ಟು ಕಠಿಣ ನಿರ್ಬಂಧ'

ಕಾಂಗ್ರೆಸ್‌ನ ಪಾದಯಾತ್ರೆ ಸ್ಥಗಿತಗೊಳಿಸಲು ನಿರಂತರ ಪ್ರಯತ್ನವನ್ನು ಸರ್ಕಾರ ಮಾಡಿದೆ. ಯಾವುದೇ ಲಾಠಿ ಚಾರ್ಜ್‌, ಬಂಧನಕ್ಕೆ ಅವಕಾಶ ನೀಡದೆ ಸರ್ಕಾರ ಸಮಚಿತ್ತದಿಂದ ಪರಿಸ್ಥಿತಿ ನಿಭಾಯಿಸಿದೆ. ರಾಜ್ಯ ಸರ್ಕಾರ(Government of Karnataka) ಪ್ರಕರಣ ದಾಖಲಿಸಿ, ನೋಟಿಸ್‌ ಜಾರಿ ಮಾಡಿ ಕ್ರಮ ವಹಿಸಿದೆ. ಬಂಧಿ​ಸುವುದು, ಲಾಠಿ ಚಾರ್ಜ್‌ ಮಾಡುವುದು ದೊಡ್ಡ ವಿಚಾರವಲ್ಲ. ಆದರೆ ಇಂದಿನ ಸ್ಥಿತಿಯಲ್ಲಿ ಮುಖ್ಯಮಂತ್ರಿಗಳು ಉತ್ತಮವಾಗಿ ನಿರ್ವಹಣೆ ಮಾಡುವ ಮೂಲಕ ಮುತ್ಸದ್ದಿತನ ಮೆರೆದಿದ್ದಾರೆ ಎಂದು ಪ್ರಶಂಸಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌(DK Shivakumar) ಅವರು ಕೋವಿಡ್‌(Covid-19) ನಿರ್ವಹಣೆ ಬಗ್ಗೆ ಅನುಮಾನ ವ್ಯಕ್ತಪಡಿಸುವ ಮೂಲಕ ಸೋಂಕಿನ ನಿಯಂತ್ರಣದಲ್ಲಿದ್ದ ಅಧಿ​ಕಾರಿಗಳ ಸ್ಫೂರ್ತಿ ಕಳೆಯುವ ಕೆಲಸ ಮಾಡಿದ್ದಾರೆ ಎಂದು ಇದೇ ವೇಳೆ ಸಚಿವರು ಬೇಸರ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಒಂದೇ ದಿನ 25 ಸಾವಿರ ಜನಕ್ಕೆ ಕೋವಿಡ್‌!

ರಾಜ್ಯದಲ್ಲಿ ಗುರುವಾರ ಬರೋಬ್ಬರಿ 25,005 ಮಂದಿಯಲ್ಲಿ ಕೋವಿಡ್‌ ಸೋಂಕು ಪತ್ತೆಯಾಗಿದೆ. ಜನವರಿ ಒಂದರಂದು 1,033 ಪ್ರಕರಣ ವರದಿಯಾಗಿದ್ದು ಕೇವಲ 13 ದಿನದಲ್ಲೇ ದೈನಂದಿನ ಸೋಂಕಿತರ ಪ್ರಮಾಣ 25 ಪಟ್ಟು ಏರಿದೆ. ಎರಡನೇ ಅಲೆಯಲ್ಲಿ ದೈನಂದಿನ ಸೋಂಕಿತರ ಸಂಖ್ಯೆ ಸಾವಿರದಿಂದ 25 ಸಾವಿರಕ್ಕೆ ಏರಲು 37 ದಿನ ತೆಗೆದುಕೊಂಡಿತ್ತು.

ಸಮಾಧಾನಕರ ಅಂಶವೆಂದರೆ ಸೋಂಕಿತರ ಸಂಖ್ಯೆ ಕ್ಷಿಪ್ರಗತಿಯಲ್ಲಿ ಏರುತ್ತಿದ್ದರೂ ಕೂಡ ಸೋಂಕು ಉಲ್ಬಣಿಸಿ ಗಂಭೀರ ಸ್ಥಿತಿಗೆ ತಲುಪುತ್ತಿರುವವರ ಸಂಖ್ಯೆ ಕಡಿಮೆ ಇದೆ. ಎರಡನೇ ಅಲೆಯಲ್ಲಿ ದೈನಂದಿನ ಸೋಂಕಿತರ ಸಂಖ್ಯೆ 25 ಸಾವಿರ ದಾಟುವ ಸಂದರ್ಭದಲ್ಲಿ 243 ಮಂದಿ ಸೋಂಕಿತರು ತೀವ್ರ ನಿಗಾ ವಿಭಾಗದಲ್ಲಿ (ICU) ಚಿಕಿತ್ಸೆ ಪಡೆಯುತ್ತಿದ್ದರೆ ಸದ್ಯ ಸುಮಾರು 60 ಮಂದಿ ಐಸಿಯುನಲ್ಲಿದ್ದಾರೆ.

Covid 19 Spike: ತಿಂಗಳಾಂತ್ಯಕ್ಕೆ ಬೆಂಗ್ಳೂರಲ್ಲಿ ಕೋವಿಡ್‌ ಉತ್ತುಂಗಕ್ಕೆ..!

ರಾಜ್ಯದಲ್ಲಿ ಮೊದಲ ಬಾರಿಗೆ 2021ರ ಏಪ್ರಿಲ್‌ 22ಕ್ಕೆ 25,795 ಹೊಸ ಪ್ರಕರಣ ಬಂದಿತ್ತು. ಅಷ್ಟುಹೊತ್ತಿಗೆ ರಾಜ್ಯದ ಸಕ್ರಿಯ ಪ್ರಕರಣಗಳ ಸಂಖ್ಯೆ 1.96 ಲಕ್ಷ ತಲುಪಿತ್ತು. ಆದರೆ ಈ ಬಾರಿ ವೇಗವಾಗಿ ದೈನಂದಿನ ಸೋಂಕಿತರ ಸಂಖ್ಯೆ 25 ಸಾವಿರ ತಲುಪಿರುವುದರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ 1.15 ಲಕ್ಷದಷ್ಟಿದೆ.

ಹಾಗೆಯೇ ಎರಡನೇ ಅಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಒಂದು ಲಕ್ಷ ದಾಟುತ್ತಿದ್ದಂತೆ ಕೋವಿಡ್‌ನಿಂದ ಮರಣವನ್ನುಪ್ಪುವವರ ದೈನಂದಿನ ಸಂಖ್ಯೆ ಕೂಡ ನೂರು ದಾಟಿತ್ತು. ಆದರೆ ರಾಜ್ಯದಲ್ಲಿ ಸದ್ಯದ ಮಟ್ಟಿಗೆ ಕೋವಿಡ್‌ ನಿಂದ ಮರಣವನ್ನಪ್ಪುವವರ ಸಂಖ್ಯೆ ಒಂದಂಕಿಯಲ್ಲೇ ಇದೆ. ಗುರುವಾರ 8 ಮಂದಿ ಮರಣವನ್ನಪ್ಪಿದ್ದಾರೆ.

ಮೇ 24ಕ್ಕೆ 25,311 ಪ್ರಕರಣ ದಾಖಲಾದ 224 ದಿನಗಳ ಬಳಿಕ ಮೊದಲ ಬಾರಿಗೆ ಹೊಸ ಸೋಂಕಿತರ ಸಂಖ್ಯೆ 25 ಸಾವಿರದ ಗಡಿ ದಾಟಿದೆ. ರಾಜ್ಯದ ಇತಿಹಾಸದಲ್ಲೇ ಎರಡನೇ ಬಾರಿಗೆ 2 ಲಕ್ಷಕ್ಕಿಂತ ಹೆಚ್ಚು ಕೋವಿಡ್‌ ಪರೀಕ್ಷೆ ನಡೆದಿದ್ದರೂ ಪಾಸಿಟಿವಿಟಿ ದರದ ಓಟಕ್ಕೆ ಲಗಾಮು ಬಿದ್ದಿಲ್ಲ. ಗುರುವಾರದ ಪಾಸಿಟಿವಿಟಿ ದರ ಶೇ. 12.39 ವರದಿಯಾಗಿದೆ. ಬುಧವಾರ ಶೇ. 10.96 ಪಾಸಿಟಿವಿಟಿ ಇತ್ತು.

Follow Us:
Download App:
  • android
  • ios