Asianet Suvarna News Asianet Suvarna News

ಕೊರೋನಾ: ಎರಡೂ ಅಲೆಯಿಂದ ಪಾರಾದವರಿಗೆ 3ನೇ ಅಲೆ ಕಂಟಕ

  • ಎರಡನೆ ಅಲೆಯಿಂದ ಬಚಾವಾದವರು ಮೂರನೇ ಅಲೆಯಲ್ಲಿ ಕೋವಿಡ್‌-19 ಸೋಂಕುಪೀಡಿತರಾಗುವ ಸಾಧ್ಯತೆ ಹೆಚ್ಚಿದೆ
  • ರಾಜ್ಯ ಕೋವಿಡ್‌ ತಾಂತ್ರಿಕ ಸಲಹಾ ಸಮಿತಿಯ ಸದಸ್ಯ ಡಾ. ಸಿ.ಎನ್‌. ಮಂಜುನಾಥ್‌  ಎಚ್ಚರಿಕೆ
  • ಕೊರೋನಾ 3ನೇ ಅಲೆ ಮತ್ತಷ್ಟು ಡೇಂಜರಸ್ ಆಗಿರಲಿದೆ - ಎಚ್ಚರಿಕೆ
Covid 3rd Wave Is Most Dangerous Says Experts snr
Author
Bengaluru, First Published Jul 5, 2021, 9:30 AM IST

 ಬೆಂಗಳೂರು (ಜು.05): ಮೊದಲ ಅಲೆ ಮತ್ತು ಎರಡನೇ ಅಲೆಯಲ್ಲಿ ಕೊರೋನಾ ಸೋಂಕಿನಿಂದ ಬಾಧಿತರಾಗದವರು ಮೂರನೇ ಅಲೆಯಲ್ಲಿ ಕೋವಿಡ್‌-19 ಸೋಂಕುಪೀಡಿತರಾಗುವ ಸಾಧ್ಯತೆ ಹೆಚ್ಚಿದೆ ಎಂದು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ, ರಾಜ್ಯ ಕೋವಿಡ್‌ ತಾಂತ್ರಿಕ ಸಲಹಾ ಸಮಿತಿಯ ಸದಸ್ಯ ಡಾ. ಸಿ.ಎನ್‌. ಮಂಜುನಾಥ್‌ ಹೇಳಿದ್ದಾರೆ.

ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೊದಲ ಅಲೆಯಲ್ಲಿ ಸೋಂಕಿನಿಂದ ಪೀಡಿತರಾದವರಿಗೆ ಎರಡನೇ ಅಲೆಯಲ್ಲಿ ಸೋಂಕು ಬಂದ ಉದಾಹರಣೆ ಕಡಿಮೆ ಇದೆ. ಆದ್ದರಿಂದ ಈ ಎರಡೂ ಅಲೆಯಲ್ಲಿಯೂ ಸೋಂಕು ತಟ್ಟದೆ ಪಾರಾದವರು ಮೂರನೇ ಅಲೆಯಲ್ಲಿ ಅಪಾಯಕ್ಕೆ ಸಿಲುಕುವ ಸಂಭವ ಹೆಚ್ಚು ಎಂದು ತಿಳಿಸಿದರು.

ಕರ್ನಾಟಕದಲ್ಲಿ ಇಳಿಕೆಯತ್ತ ಕೊರೋನಾ: ಪಾಸಿಟಿವಿಟಿ ದರ ಶೇಕಡ 1.02ಕ್ಕೆ ಇಳಿಕೆ

ಇದೇ ವೇಳೆ ಕೋವಿಡ್‌ ಲಸಿಕೆಯ ಒಂದೇ ಒಂದು ಡೋಸ್‌ ಪಡೆಯದವರೂ ಅಪಾಯಕ್ಕೆ ಸಿಲುಕಿಕೊಳ್ಳಬಹುದು. ಮೂರನೇ ಅಲೆ ಆರಂಭವಾಗುವ ಮೊದಲು ಎರಡೂ ಡೋಸ್‌ ಲಸಿಕೆ ಪಡೆದರೆ ಒಳ್ಳೆಯದು. ಆದರೆ ಕನಿಷ್ಠ ಒಂದು ಡೋಸ್‌ ಲಸಿಕೆ ಪಡೆದಿದ್ದರೂ ಕೊರೋನಾದ ವಿರುದ್ಧದ ಪ್ರತಿಕಾಯ ಸೃಷ್ಟಿಯಾಗಿರುತ್ತದೆ ಎಂದರು.

ಕೊರೋನಾದಿಂದ ಚೇತರಿಸಿಕೊಂಡ ಮಕ್ಕಳಲ್ಲಿ ಕಾಣಿಸಿಕೊಂಡ ಹೊಸ ರೋಗ ಲಕ್ಷಣಗಳು..! .

‘ನಮ್ಮ ಜಯದೇವ ಆಸ್ಪತ್ರೆಯಲ್ಲಿ ಕೋವಿಶೀಲ್ಡ್‌ ಲಸಿಕೆಯ ಎರಡು ಡೋಸ್‌ಗಳನ್ನು 28 ದಿನಗಳ ಅಂತರದಲ್ಲಿ ಪಡೆದವರಲ್ಲಿಯೂ ಪ್ರತಿಕಾಯ ಉತ್ತಮವಾಗಿ ಸೃಷ್ಟಿಯಾಗಿದೆ. ನಮ್ಮ ಸಂಸ್ಥೆಯ ಸಿಬ್ಬಂದಿಗಳ ಮೇಲೆ ನಡೆದ ಅಧ್ಯಯನದಲ್ಲಿ ಶೇ.80ಕ್ಕೂ ಹೆಚ್ಚು ಸಿಬ್ಬಂದಿಗಳಲ್ಲಿ ಪ್ರತಿಕಾಯ ಸೃಷ್ಟಿಯಾಗಿದೆ. ಸೋಂಕು ಬಂದ ಬಳಿಕ ಒಂದು ಡೋಸ್‌ ಪಡೆದವರಲ್ಲಿ ಶೇ.90ರಷ್ಟುಮತ್ತು ಸೋಂಕು ಬಂದ ಬಳಿಕ ಎರಡು ಡೋಸ್‌ ಪಡೆದವರಲ್ಲಿ ಶೇ.100ರಷ್ಟುಪ್ರತಿಕಾಯ ಇರುವುದು ಕಂಡು ಬಂದಿದೆ’ ಎಂದು ತಿಳಿಸಿದರು.

ಅಕ್ಟೋಬರ್‌ನಲ್ಲಿ ಮೂರನೇ ಅಲೆ ಕಂಡು ಬರಬಹುದು. ಈವರೆಗೆ ಕೋವಿಡ್‌ ಸೋಂಕಿಗೆ ಒಳಗಾಗದವರು ಮತ್ತು ಲಸಿಕೆ ಪಡೆಯದವರು ಹೆಚ್ಚು ಜಾಗರೂಕರಾಗಿರಬೇಕು ಎಂದು ಎಚ್ಚರಿಸಿದರು.

ಸೋಮವಾರದಿಂದ ಮಾಲ್‌, ಧಾರ್ಮಿಕ ಸ್ಥಳಗಳು ಕೂಡ ಪುನಾರಂಭ ಆಗಲಿವೆ. ಸಾರಿಗೆ ವಾಹನಗಳಲ್ಲಿ ಶೇ.100ರಷ್ಟುಆಸನ ಭರ್ತಿಗೆ ಅವಕಾಶ ಕಲ್ಪಿಸಲಾಗಿದೆ. ಜನ ಮೈ ಮರೆತರೆ ಅಕ್ಟೋಬರ್‌ಗಿಂತ ಮುಂಚಿತವಾಗಿಯೂ ಮೂರನೇ ಅಲೆ ಬರಬಹುದು ಎಂದು ಎಚ್ಚರಿಸಿದರು.

ಎಲ್ಲರೂ ಲಸಿಕೆ ಪಡೆಯಬೇಕು. ಕೋವಿಡ್‌ ಮುನ್ನೆಚ್ಚರಿಕೆ ಕ್ರಮಗಳನ್ನು ಸದಾ ಪಾಲಿಸಬೇಕು. ಡಿಸೆಂಬರ್‌ ಅಂತ್ಯದವರೆಗೂ ಜನ ಗುಂಪು ಸೇರುವುದಕ್ಕೆ ನಿರ್ಬಂಧ ವಿಧಿಸಬೇಕು. ವೈರಾಣುಗಳ ರೂಪಾಂತರ ಸಾಮಾನ್ಯ. ಜನ ಈ ಬಗ್ಗೆ ಆತಂಕಪಡುವ ಆಗತ್ಯವಿಲ್ಲ. ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಸೋಂಕು ಹೆಚ್ಚಾದ ಮೂರನೇ ವಾರದಲ್ಲಿ ರಾಜ್ಯದಲ್ಲಿಯೂ ಸೋಂಕು ಹೆಚ್ಚಾಗುತ್ತದೆ ಎಂದು ಹೇಳಿದರು.

Follow Us:
Download App:
  • android
  • ios