ಹೊಸ ರೂಪಾಂತರಿ XE ಭೀತಿ  ಹಿನ್ನೆಲೆಯಲ್ಲಿ  ಸೋಮವಾರ ಆರೋಗ್ಯ ಸೌಧದಲ್ಲಿ ತಾಂತ್ರಿಕ ಸಲಹಾ ಸಮಿತಿಯ ಜೊತೆ ಆರೋಗ್ಯ ಸಚಿವ ಡಾ.‌ ಕೆ ಸುಧಾಕರ್ ತುರ್ತು ಸಭೆ ನಡೆಸಿದರು.‌ 

ವರದಿ: ಮಾರುತೇಶ್ ಹುಣಸನಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್

ಬೆಂಗಳೂರು (ಏ.11): ಕೊರೋನಾ ಕಡಿಮೆಯಾಗಿ ಜನ ನಿಟ್ಟುಸಿರು ಬಿಡುವ ನಡುವೆಯೇ ಮತ್ತೊಂದು ಹೊಸ ರೂಪಾಂತರಿ XE ಭೀತಿ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಆರೋಗ್ಯ ಸೌಧದಲ್ಲಿ ತಾಂತ್ರಿಕ ಸಲಹಾ ಸಮಿತಿಯ (Technical Advisory committee) ಜೊತೆ ಆರೋಗ್ಯ ಸಚಿವ ಡಾ.‌ ಕೆ ಸುಧಾಕರ್ (health minister k sudhakar) ತುರ್ತು ಸಭೆ ನಡೆಸಿದರು.‌ ಸಭೆ ಬಳಿಕ ಮಾತಾನಾಡಿದ ಆರೋಗ್ಯ ಸಚಿವ ಸುಧಾಕರ್, 8 ದೇಶಗಳಲ್ಲಿ ನಾಲ್ಕನೇ ಅಲೆ ಹೆಚ್ಚಾಗಿದ್ದು, XE ಹಾಗೂ ME ಎಂಬ ಹೊಸ ಪ್ರಬೇಧ ಹೆಚ್ಚಾಗಿದೆ. ನಮ್ಮ ದೇಶದಲ್ಲಿ ಹರಿಯಾಣ, ದೆಹಲಿಯಲ್ಲಿ ಕಳೆದ ಮೂರು ದಿನಗಳಲ್ಲಿ ಸೋಂಕು ಹೆಚ್ಚಾಗಿದೆ. ಹೀಗಾಗಿ ತುರ್ತು ಸಭೆ ಮಾಡಿ ಸಮಾಲೋಚನೆ ಮಾಡಿದ್ದು, ತಾಂತ್ರಿಕ ಸಲಹಾ ಸಮಿತಿ ನೀಡಿರುವ ಸಲಹೆಯಂತೆ ಸೋಂಕು ಹೆಚ್ಚಿರುವ ದೇಶಗಳಿಂದ ಬರುವವರ ಮೇಲೆ ನಿಗಾ ವಹಿಸಲು ಅಭಿಪ್ರಾಯ ವ್ಯಕ್ತವಾಗಿದೆ. ಏರ್ ಪೋರ್ಟ್ ಗೆ ಬಂದ ಬಳಿಕ ಅವರಿಗೆ ಟೆಸ್ಟ್ ಮಾಡಿ, ಮನೆಗೆ ಹೋದ ಬಳಿಕ ಟೆಲಿ ಮಾನಿಟರಿಂಗ್ ಮಾಡಲು ತೀರ್ಮಾನ ಮಾಡಲಾಗಿದೆ ಎಂದರು.

Scroll to load tweet…

IIT ಕಾನ್ಪುರ್ ರಿಪೋರ್ಟ್ ‌ಪ್ರಕಾರ ಜೂನ್- ಜುಲೈ ನಲ್ಲಿ ನಾಲ್ಕನೇ ಅಲೆ ಬರುತ್ತೆ ಎಂದು ಹೇಳಿದ್ದಾರೆ. ಆದರೆ ಜನ ಮಾಸ್ಕ್ ಹಾಕೋದನ್ನೇ ಮರೆತಿದ್ದಾರೆ, ಹೀಗಾಗಿ ಮಾಸ್ಕ್ ಬಳಕೆ ಮಾಡೋದು ಮುಂದುವರೆಸಿ. ಬೂಸ್ಟರ್ ಡೋಸ್ ಪಡೆಯುವ ಬಗ್ಗೆ ಜನರಲ್ಲಿ ನಿರ್ಲಕ್ಷ್ಯ ‌ಕಂಡುಬಂದಿದೆ. ಸೋಂಕು ಹೆಚ್ಚಳ ಆಗಿ ನಂತರ ವ್ಯಾಕ್ಸಿನೇಷನ್‌ ಗೆ ಮುಗಿಬೀಳಬೇಡಿ. ಈಗಲೇ ನಿಮ್ಮ ಅವಧಿ ಬಂದಾಗ ಬೂಸ್ಟರ್ ಡೋಸ್ ಪಡೆಯಿರಿ ಅಂತ ಮನವಿ ಮಾಡಿದ್ರು.‌

LIZARD FALLING FOOD ಹುಬ್ಬಳ್ಳಿ ಹೋಟೆಲ್ ಮಾಲೀಕನಿಂದ ಗ್ರಾಹಕರಿಗೆ ₹90,000 ಪರಿಹಾರ

ಯಾವ್ಯಾವ ದೇಶದಲ್ಲಿ ಹೆಚ್ಚಳವಾಗ್ತಿದೆ ಸೋಂಕು?: ದಕ್ಷಿಣ ಕೊರಿಯಾ, ಹಾಂಕಾಂಗ್, ಚೀನಾ ಈ ಮೂರು ದೇಶಗಳಲ್ಲಿ ಸೋಂಕು ಹೆಚ್ಚಿದ್ದು, ಉಳಿದಂತೆ ಯುಕೆ, ಕೊರಿಯಾ, ಜರ್ಮನಿ ಸೇರಿದಂತೆ ಎಂಟು ದೇಶಗಳಿಂದ ಬರುವವರಿಗೆ ಮಾರ್ಗಸೂಚಿ ಹೊರಡಿಸುತ್ತೇವೆ ಎಂದು ಸುಧಾಕರ್ ಹೇಳಿದ್ದಾರೆ. ಸದ್ಯ ರೋಗದ ತೀವ್ರತೆ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದು ಆಯಾ ದೇಶಗಳ ವರದಿ ಕೊಡುವಂತೆ ತಾಂತ್ರಿಕ ಸಲಹಾ ಸಮಿತಿಗೆ ಹೇಳಲಾಗಿದೆ. ಆದರೆ ತಜ್ಞರು ಸ್ಪಷ್ಟವಾಗಿ ಹೇಳಿದ್ದು, ತಡಮಾಡದೇ ಲಸಿಕೆ ಹಾಕಿಸಿಕೊಳ್ಳುವಂತೆ ಎಚ್ಚರಿಸಿದ್ದಾರೆ ಅಂತ ಸಚಿವರು ವಿವರಿಸಿದರು. 

ಖಾಸಗಿ ಆಸ್ಪತ್ರೆಗಳ ಕೋವಿಡ್ ಚಿಕಿತ್ಸಾ ದರ ಪರಿಷ್ಕರಣೆ: ಕೋವಿಡ್ ಸಮಯದಲ್ಲಿ ನಿಗಧಿ ಮಾಡಲಾಗಿದ್ದ ಖಾಸಗಿ ಆಸ್ಪತ್ರೆ ದರ ಪರಿಷ್ಕರಣೆ ವಿಚಾರವಾಗಿ ಮಾತಾನಾಡಿದ ಸಚಿವ ಸುಧಾಕರ್, ಈ ಬಗ್ಗೆ ಸೂಕ್ತ ತೀರ್ಮಾನವನ್ನು ಕೈಗೊಳ್ಳುತ್ತೇವೆ. ಇದಕ್ಕಾಗಿ ಪ್ರತ್ಯೇಕ ಸಭೆ ಮಾಡಿ ತೀರ್ಮಾನ ಮಾಡುತ್ತೇವೆ ಅಂದರು.‌ ಕೆಲ ಖಾಸಗಿ ಆಸ್ಪತ್ರೆ ಗಳಲ್ಲಿ ಮನಸೋ ಇಚ್ಛೆ ದರ ನಿಗದಿ ಮಾಡ್ತಾರೆ. ಖಾಸಗಿ ಆಸ್ಪತ್ರೆ ಗಳಲ್ಲಿ ಅತಿಯಾದ ಬಿಲ್ಲಿಂಗ್ ಮಾಡೋದು ಗಮನಕ್ಕೆ ಬಂದಿದೆ. ಕೊರೋನಾ ಟೈಂ ನಲ್ಲಿ ಮಾತ್ರವಲ್ಲ ಎಲ್ಲಾ ಟೈಂನಲ್ಲಿಯೂ ಇದು ಅಪ್ಲೇ ಆಗಬೇಕು ಅಂದರು. ಸಿಟಿ ಸ್ಕ್ಯಾನ್, ಎಂಆರ್ ಐ ಗೆ ದರ ನಿಗದಿ ಮಾಡಲಾಗಿದ್ದು, ಎರಡು ದಿನದಲ್ಲಿ ದರ ನಿಗದಿಯ ಆದೇಶ ಹೊರಡಿಸಲಾಗುತ್ತೆ. ಬಿಪಿಎಲ್ ಗೆ ಒಂದು ದರ ಎಪಿಎಲ್ ಗೆ ಒಂದು ದರ ನಿಗದಿ ಮಾಡಲಾಗಿದೆ. ರೋಗಿಗಳಿಂದ ಹಣ ಹೆಚ್ಚು ಸುಲಿಗೆ ಮಾಡಿದ್ರೇ ಲೈಸೆನ್ಸ್ ರದ್ದು ಮಾಡಲಾಗುತ್ತೆ ಅಂತ ಎಚ್ಚರಿಕೆ ನೀಡಿದರು. 

Davanagere ಹೊರಗೆ ಮಲಗಿದ್ದವರನ್ನೇ ಟಾರ್ಗೆಟ್ ಮಾಡಿ ಹತ್ಯೆಗೈಯುತ್ತಿದ್ದ ಸೈಕೊಪಾತ್‌ಗಳು!

ನಿರ್ಲಕ್ಷ್ಯ ಬಿಟ್ಟು ವ್ಯಾಕ್ಸಿನ್ ಹಾಕಿಸಿಕೊಳ್ಳಿ: ನಾಲ್ಕನೆಯ ಅಲೆ ಬಂದು ಆಸ್ಪತ್ರೆ ಯಲ್ಲಿ ದಾಖಲಾದ ಮೇಲೆ ಲಸಿಕೆ ಹಾಕಿಸಿಕೊಳ್ತೀರಾ‌.! ಯಾಕೆ ಈ ನಿರ್ಲಕ್ಷ್ಯ..? 60 ವರ್ಷ ಮೇಲ್ಪಟ್ಟವರು ಮೂರನೇ ಡೋಸ್ ಪಡೆಯಬೇಕಿದೆ. ಜೊತೆಗೆ ಇನ್ನೂ ಶೇ.2 ರಷ್ಟು ಮಂದಿ ಎರಡನೇ ಡೋಸ್ ಪಡೆಯಬೇಕಿದೆ. ಮೊದಲ ಡೋಸ್ ನಲ್ಲಿ 102% (4.97 ಕೋಟಿ ), ಎರಡನೇ ಡೋಸ್ ನಲ್ಲಿ 98% (4.77 ಕೋಟಿ) ಪ್ರಗತಿಯಾಗಿದೆ. ಇನ್ನೂ 32 ಲಕ್ಷ ಮಂದಿ ಎರಡನೇ ಡೋಸ್ ಪಡೆಯಬೇಕಿದೆ. ಇದು ಬಹಳ ನಿರ್ಲಕ್ಷ್ಯದ ಸಂಗತಿಯಾಗಿದ್ದು, ಯಾರೂ ಉದಾಸೀನ ತೋರಬಾರದು ಎಂದು ಸಚಿವ ಸುಧಾಕರ್ ಮನವಿ ಮಾಡಿದ್ರು.

15-17 ವಯೋಮಾನದವರ ಲಸಿಕಾರಣದಲ್ಲಿ ಮೊದಲ ಡೋಸ್ ನಲ್ಲಿ 79% (25.11 ಲಕ್ಷ) ಪ್ರಗತಿಯಾಗಿದೆ. ಇದರ ಗುರಿ 31 ಲಕ್ಷದ ಗುರಿ ಇದೆ. ಎರಡನೇ ಡೋಸ್ ಲಸಿಕಾರಣದಲ್ಲಿ 65% ಪ್ರಗತಿಯಾಗಿದ್ದು, ಇನ್ನೂ 35% ಮಂದಿ ಲಸಿಕೆ ಪಡೆಯಬೇಕಿದೆ. 60 ವರ್ಷ ಮೇಲ್ಪಟ್ಟವರಲ್ಲಿ 49% ಮಂದಿ ಮಾತ್ರ ಮೂರನೇ ಡೋಸ್ ಪಡೆದಿದ್ದಾರೆ. ಇನ್ನೂ 51% ಮಂದಿ ಮೂರನೇ ಡೋಸ್ ಲಸಿಕೆ ಪಡೆದೇ ಇಲ್ಲ. ಈ ವಯೋಮಾನದವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಬೇಗ ಲಸಿಕೆ ಪಡೆಯುವುದು ಸೂಕ್ತ. ಜನಸಾಮಾನ್ಯರು ಸರ್ಕಾರದಂತೆಯೇ ಜವಾಬ್ದಾರಿ ಹೊಂದಿರಬೇಕು. ಆಗ ಮಾತ್ರ ಆರೋಗ್ಯ ತುರ್ತು ಪರಿಸ್ಥಿತಿ ನಿಭಾಯಿಸಲು ಸಾಧ್ಯ ಎಂದರು.

12-14 ವಯೋಮಾನದ 20 ಲಕ್ಷ ಮಕ್ಕಳು ರಾಜ್ಯದಲ್ಲಿದ್ದಾರೆ. ಈ ಪೈಕಿ 13.96 ಲಕ್ಷ ಮಕ್ಕಳು (69%) ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ. ಉಳಿದ ಮಕ್ಕಳು ಬೇಗನೆ ಲಸಿಕೆ ಪಡೆಯಬೇಕಿದೆ ಎಂದು ತಿಳಿಸಿದರು.