ಇತ್ತೀಚೆಗೆ ತುಮಕೂರು ರಸ್ತೆಯ ಗೊರಗುಂಟೆಪಾಳ್ಯ ಸಮೀಪ ಕಾರು ಅಪಘಾತದ ನೆಪದಲ್ಲಿ ರೈತರಿಂದ ಸರಕು ಸಾಗಾಣಿಕೆ ವಾಹನ ಸಮೇತ ಎರಡು ಟನ್‌ ಟೊಮೆಟೋ ಕಳವು ಮಾಡಿದ್ದ ತಮಿಳುನಾಡು ಮೂಲದ ಚಾಲಾಕಿ ದಂಪತಿಯನ್ನು ಆರ್‌ಎಂಸಿ ಯಾರ್ಡ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು (ಜು.23) :  ಇತ್ತೀಚೆಗೆ ತುಮಕೂರು ರಸ್ತೆಯ ಗೊರಗುಂಟೆಪಾಳ್ಯ ಸಮೀಪ ಕಾರು ಅಪಘಾತದ ನೆಪದಲ್ಲಿ ರೈತರಿಂದ ಸರಕು ಸಾಗಾಣಿಕೆ ವಾಹನ ಸಮೇತ ಎರಡು ಟನ್‌ ಟೊಮೆಟೋ ಕಳವು ಮಾಡಿದ್ದ ತಮಿಳುನಾಡು ಮೂಲದ ಚಾಲಾಕಿ ದಂಪತಿಯನ್ನು ಆರ್‌ಎಂಸಿ ಯಾರ್ಡ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡು ರಾಜ್ಯದ ವೆಲ್ಲೂರು ಜಿಲ್ಲೆಯ ಅಂಬೂರು ಸಮೀಪದ ವನಿಯಂಬಾಡಿ ನಿವಾಸಿಗಳಾದ ಭಾಸ್ಕರನ್‌ ಹಾಗೂ ಆತನ ಪತ್ನಿ ಸಿಂಧುಜಾ ಬಂಧಿತರಾಗಿದ್ದು, ಆರೋಪಿಗಳಿಂದ ಬೊಲೆರೋ ಪಿಕ್‌ಆಪ್‌, ಎಕ್ಸ್‌ಯುವಿ 509 ಕಾರು ಹಾಗೂ ಮೊಬೈಲ್‌ ಜಪ್ತಿ ಮಾಡಲಾಗಿದೆ. ಈ ಕೃತ್ಯದ ಬಳಿಕ ತಪ್ಪಿಸಿಕೊಂಡಿರುವ ಸುಂಕದಟ್ಟೆಯ ರಾಕೇಶ್‌, ಮಹೇಶ್‌ ಹಾಗೂ ತಮಿಳುನಾಡಿನ ಕುಮಾರ್‌ ಪತ್ತೆಗೆ ತನಿಖೆ ನಡೆದಿದೆ.

ಗುಂಡ್ಲುಪೇಟೆ: ಹೊಲದಲ್ಲಿ ಕಟಾವಿಗೆ ಬಂದಿದ್ದ 150 ಕೆ.ಜಿ. ಟೊಮೆಟೊ ಕಳವು

ಟೊಮೆಟೋ ಕದ್ದರೆ ಸಿಗಲ್ಲ ಅಂತ ಕದ್ದರು:

ತಮಿಳುನಾಡಿನ ಭಾಸ್ಕರನ್‌ ಮೇಲೆ ಕಳ್ಳತನ, ಸುಲಿಗೆ ಹಾಗೂ ದರೋಡೆ ಸೇರಿದಂತೆ ಸ್ಥಳೀಯವಾಗಿ 10ಕ್ಕೂ ಹೆಚ್ಚಿನ ಪ್ರಕರಣಗಳಿವೆ. ಪೀಣ್ಯದ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುವಾಗ ಆತನ ಪತ್ನಿ ಸಿಂಧುಜಾ ಹಾಗೂ ಸುಂಕದಟ್ಟೆಯ ರಾಕೇಶ್‌ ಪತ್ನಿ ಸ್ನೇಹಿತರಾಗಿದ್ದರು. ತಮ್ಮ ಪತ್ನಿಯರ ಮೂಲಕ ರಾಕೇಶ್‌ ಹಾಗೂ ಭಾಸ್ಕರನ್‌ ಪರಿಚಿತರಾಗಿದ್ದರು. ಟೊಮೆಟೋ ಕಳವು ಮಾಡಿದರೆ ಸಿಕ್ಕಿ ಬೀಳುವುದಿಲ್ಲ ಎಂದು ಭಾಸ್ಕರನ್‌ಗೆ ಆತನ ಪತ್ನಿ ಸಿಂಧುಜಾ ಪ್ಲಾನ್‌ ನೀಡಿದ್ದಳು. ಅಂತೆಯೇ ತಮಿಳುನಾಡು ಜಿಲ್ಲೆ ವೆಲ್ಲೂರು ಜಿಲ್ಲೆ ಅಂಬೂರು ಸಮೀಪದ ವನಿಯಂಬಾಡಿಯಲ್ಲಿದ್ದ ಭಾಸ್ಕರನ್‌ ಮನೆಯಲ್ಲೇ ಕಳ್ಳತನ ಸಂಚು ರೂಪಿಸಿದರು. ಆದರೆ ಭಾಸ್ಕರನ್‌ ಪತ್ನಿ ಮನೆಯಲ್ಲೇ ಇದ್ದು ಕೃತ್ಯಕ್ಕೆ ನೆರವಾಗಿದ್ದಳು ಎಂದು ಪೊಲೀಸರು ವಿವರಿಸಿದ್ದಾರೆ.

ತಮಿಳುನಾಡಿನಿಂದ ಜು.9ರಂದು ತುಮಕೂರು ರಸ್ತೆಗೆ ಬಂದಿದ್ದ ಭಾಸ್ಕರನ್‌ ಹಾಗೂ ಆತನ ಮೂವರು ಸಹಚರರು, ಟೊಮೆಟೋ ವಾಹನಗಳ ಮೇಲೆ ನಿಗಾವಹಿಸಿದ್ದರು. ಅದೇ ವೇಳೆ ಚಿತ್ರದುರ್ಗ ಜಿಲ್ಲೆಯಿಂದ ಬೋಲೆರೋ ಪಿಕ್‌ಆಪ್‌ನಲ್ಲಿ ಎರಡು ಟನ್‌ ಟೊಮೆಟೋ ತುಂಬಿಕೊಂಡು ಕೋಲಾರ ಎಂಪಿಎಂಸಿ ಮಾರುಕಟ್ಟೆಗೆ ರೈತ ಮಲ್ಲೇಶ್‌ ತೆರಳುತ್ತಿದ್ದರು. ತುಮಕೂರು ರಸ್ತೆಯಿಂದ ಕೋಲಾರ ಕಡೆಗೆ ತೆರಳಲು ಗೊರಗುಂಟೆಪಾಳ್ಯ ಬಳಿ ತಿರುವು ತೆಗೆದುಕೊಂಡಾಗ ಅವರ ವಾಹನವನ್ನು ಆರೋಪಿಗಳು ಹಿಂಬಾಲಿಸಿದ್ದಾರೆ. ಮಾರ್ಗ ಮಧ್ಯೆ ತಮ್ಮ ಕಾರಿನ ಕನ್ನಡಿಗೆ ಬೋಲೆರೋ ಡಿಕ್ಕಿಯಾಗಿದೆ ಎಂದು ಆರೋಪಿಸಿ ರೈತರನ್ನು ಭಾಸ್ಕರನ್‌ ತಂಡ ಅಡ್ಡಗಟ್ಟಿತು. ಬಳಿಕ ಬೊಲೆರೋಗೆ ಬಲವಂತವಾಗಿ ನಾಲ್ವರು ಆರೋಪಿಗಳು ಪೈಕಿ ಮೂವರು ಹತ್ತಿದ್ದರು. ಬಳಿಕ ಗೊರಗುಂಟೆಪಾಳ್ಯದಿಂದ ದೇವನಹಳ್ಳಿಯ ಬೂದಿಗೆರೆ ಬಳಿಗೆ ರೈತರನ್ನು ಕರೆದೊಯ್ದು ಅಲ್ಲಿ ರೈತರನ್ನು ಇಳಿಸಿ ಟೊಮೆಟೋ ಸಮೇತ ಪರಾರಿಯಾಗಿದ್ದರು. ಟೊಮೆಟೋವನ್ನು ತಮಿಳುನಾಡಿನ ವನಿಯಂಬಾಡಿಯಲ್ಲಿ .1.5 ಲಕ್ಷಕ್ಕೆ ಭಾಸ್ಕರನ್‌ ತಂಡ ಮಾರಾಟ ಮಾಡಿ ಹಣ ಹಂಚಿಕೊಂಡಿತು. ಈ ಘಟನೆ ಬಗ್ಗೆ ಮರುದಿನ ಆರ್‌ಎಂಸಿ ಯಾರ್ಡ್‌ ಪೊಲೀಸ್‌ ಠಾಣೆಗೆ ರೈತ ಮಲ್ಲೇಶ್‌ ಹಾಗೂ ಬೊಲೆರೋ ಮಾಲಿಕ ಶಿವಣ್ಣ ದೂರು ನೀಡಿದ್ದರು.

ಟೊಮೆಟೋ ಕಳ್ಳತನ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾದ ಬಳಿಕ ಹೆದರಿದ ಆರೋಪಿಗಳು, ಟೊಮೆಟೋ ಮಾರಿದ ಬಳಿಕ ರೈತರ ಖಾಲಿ ಬೊಲೆರೋ ಪಿಕ್‌ಅಪ್‌ ಅನ್ನು ದೇವನಹಳ್ಳಿ ತಾಲೂಕಿನ ಬೂದಿಗೆರೆ ಸಮೀಪದ ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿದ್ದರು. ಪೊಲೀಸರು, ಗೊರಗುಂಟೆಪಾಳ್ಯದಿಂದ ದೇವನಹಳ್ಳಿ ಮಾರ್ಗದವರೆಗೆ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಆರೋಪಿಗಳ ಸುಳಿವು ಸಿಕ್ಕಿದೆ. ಈ ಸುಳಿವು ಆಧರಿಸಿ ಕಾರ್ಯಾಚರಣೆ ನಡೆಸಿದಾಗ ತಮ್ಮೂರಿನಲ್ಲೇ ಭಾಸ್ಕರನ್‌ ದಂಪತಿ ಬಲೆಗೆ ಬಿದ್ದರು.

ಅಕ್ಕಿ ಬದಲಿಗೆ ಬಂದ ಹಣದಿಂದ ಜೋಳ, ಟೊಮೆಟೊ, ಚಿಕನ್ ಕೊಳ್ಳಿ: ಎಚ್‌.ಕೆ.ಪಾಟೀಲ್‌

ಕಳ್ಳರಿಗೆ ಸಿಕ್ಕಿದ್ದು .1.5 ಲಕ್ಷ, ಕಳ್ಳರ ಬೇಟೆಗೆ 1 ಲಕ್ಷ ವೆಚ್ಚ!

ರೈತರಿಂದ .2 ಲಕ್ಷ ಮೌಲ್ಯದ 2 ಸಾವಿರ ಕೇಜಿಯ ಟೊಮೆಟೋ ಕದ್ದು ತಮಿಳುನಾಡಿನ ಮಾರಿ ಕಳ್ಳರು .1.5 ಲಕ್ಷ ಸಂಪಾದಿಸಿದ್ದರು. ಈ ಟೊಮೆಟೋ ಕಳ್ಳರನ್ನು ಹಿಡಿಯಲು ಪೊಲೀಸರು ಸುಮಾರು .1 ಲಕ್ಷ ವ್ಯಯಿಸಿದ್ದಾರೆ ಎಂದು ತಿಳಿದು ಬಂದಿದೆ.