Asianet Suvarna News Asianet Suvarna News

ನಾಡಹಬ್ಬ ದಸರಾ ಮಹೋತ್ಸವಕ್ಕೆ ಮುನ್ನುಡಿ: ಕಾಡಿನಿಂದ ನಾಡಿಗೆ ದಸರಾ ಗಜಪಯಣ...

ನಾಡಹಬ್ಬ ದಸರಾ ಮಹೋತ್ಸವಕ್ಕೆ ಮುನ್ನುಡಿಯಾದ ದಸರಾ ಗಜಪಯಣಕ್ಕೆ ಮೈಸೂರು ಜಿಲ್ಲೆ ಹುಣಸೂರು ತಾಲೂಕು ವೀರನಹೊಸಹಳ್ಳಿಯಲ್ಲಿ ಶುಕ್ರವಾರ ಚಾಲನೆ ದೊರೆಯಿತು. ದಸರೆಯಲ್ಲಿ ಭಾಗವಹಿಸುವ 14 ಆನೆಗಳ ಪೈಕಿ ಮೊದಲ ತಂಡದ 9 ಆನೆಗಳು ಕಾಡಿನಿಂದ ನಾಡಿಗೆ ಪಯಣ ಬೆಳೆಸಿದವು. 

countdown for the world famous mysuru dasara begins with the official start of gajapayana gvd
Author
First Published Sep 2, 2023, 1:00 AM IST

ಬಿ. ಶೇಖರ್‌ ಗೋಪಿನಾಥಂ

ವೀರನಹೊಸಹಳ್ಳಿ (ಹುಣಸೂರು ತಾಲೂಕು) (ಸೆ.02): ನಾಡಹಬ್ಬ ದಸರಾ ಮಹೋತ್ಸವಕ್ಕೆ ಮುನ್ನುಡಿಯಾದ ದಸರಾ ಗಜಪಯಣಕ್ಕೆ ಮೈಸೂರು ಜಿಲ್ಲೆ ಹುಣಸೂರು ತಾಲೂಕು ವೀರನಹೊಸಹಳ್ಳಿಯಲ್ಲಿ ಶುಕ್ರವಾರ ಚಾಲನೆ ದೊರೆಯಿತು. ದಸರೆಯಲ್ಲಿ ಭಾಗವಹಿಸುವ 14 ಆನೆಗಳ ಪೈಕಿ ಮೊದಲ ತಂಡದ 9 ಆನೆಗಳು ಕಾಡಿನಿಂದ ನಾಡಿಗೆ ಪಯಣ ಬೆಳೆಸಿದವು. ದಸರಾ ಜಂಬೂಸವಾರಿಯಲ್ಲಿ 750 ಕೆ.ಜಿ ತೂಕದ ಚಿನ್ನದ ಅಂಬಾರಿ ಹೊರಲಿರುವ ಅಭಿಮನ್ಯು ಆನೆಯ ನೇತೃತ್ವದಲ್ಲಿ ಅರ್ಜುನ, ಭೀಮ, ಗೋಪಿ, ಧನಂಜಯ, ವರಲಕ್ಷೀ, ವಿಜಯ, ಮಹೇಂದ್ರ ಮತ್ತು ಕಂಜನ್‌ ಆನೆಗಳು ಲಾರಿಯ ಮೂಲಕ ಸಂಜೆ ವೇಳೆಗೆ ಮೈಸೂರಿನ ಅಶೋಕಪುರಂನಲ್ಲಿರುವ ಅರಣ್ಯ ಭವನಕ್ಕೆ ಬಂದು ತಲುಪಿದವು. ಕಂಜನ್‌ ಆನೆಯು ಇದೇ ಮೊದಲ ಬಾರಿಗೆ ದಸರೆಯಲ್ಲಿ ಭಾಗವಹಿಸುತ್ತಿದೆ. ಉಳಿದ ಪ್ರಶಾಂತ್‌, ಸುಗ್ರೀವ, ರೋಹಿತ್‌, ಲಕ್ಷೀ ಮತ್ತು ಹಿರಣ್ಯ ಆನೆಗಳು ಎರಡನೇ ತಂಡದಲ್ಲಿ ಕಾಡಿನಿಂದ ನಾಡಿಗೆ ಆಗಮಿಸಲಿವೆ.

ಗಜಪಯಣಕ್ಕೆ ಚಾಲನೆ: ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆಯು ವೀರನಹೊಸಹಳ್ಳಿ ಬಳಿಯ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಹೆಬ್ಬಾಗಿಲು ಬಳಿ ಶುಕ್ರವಾರ ಬೆಳಗ್ಗೆ 9.45ಕ್ಕೆ ಸಾಂಪ್ರದಾಯಿಕವಾಗಿ ಆನೆಗಳಿಗೆ ಪುರೋಹಿತರು ಪೂಜೆ ಸಲ್ಲಿಸಿದರು. ಪುರೋಹಿತರಾದ ಎಸ್‌.ವಿ. ಪ್ರಹ್ಲಾದ್‌ ರಾವ್‌ ನೇತೃತ್ವದಲ್ಲಿ ನಡೆದ ಪೂಜೆ ವೇಳೆ ಅಲಂಕೃತ ಗಜಪಡೆಗಳ ಪಾದ ತೊಳೆದ ಅರ್ಚಕರು, ನಂತರ ಆನೆಗಳಿಗೆ ದೃಷ್ಟಿದೋಷ ತೆಗೆದರು. ಬಳಿಕ ಹಣೆ ಹಾಗೂ ಪಾದಗಳಿಗೆ ಕುಂಕುಮ, ಅರಿಶಿಣ, ಗರಿಕೆ, ಬೆಲ್ಲ, ಕಬ್ಬು, ಕಡುಬು, ಪಂಚ ಕಜ್ಜಾಯ, ಎಲೆ, ಅಡಿಕೆ, ಗಂಧ, ಪಂಚಫಲ, ಚಕ್ಕುಲಿ, ನಿಪ್ಪಟ್ಟು, ಹೋಳಿಗೆ, ದ್ರಾಕ್ಷಿ, ಗೋಡಂಬಿ, ಕಲ್ಲು ಸಕ್ಕರೆ, ಮೋದಕ ನೈವೇದ್ಯ ನೀಡಿ, ಶೋಡಷೋಪಚಾರ ಪೂಜೆ, ಗಣಪತಿ ಅರ್ಚನೆಯೊಂದಿಗೆ ವನದೇವತೆ ಹಾಗೂ ಚಾಮುಂಡೇಶ್ವರಿಗೆ ಪ್ರಾರ್ಥನೆ ಸಲ್ಲಿಸಿದರು. ತದನಂತರ ಆನೆಗಳಿಗೆ ನವಧಾನ್ಯಗಳ ಪೂಜೆ ನೆರವೇರಿಸಲಾಯಿತು.

ಉಪೇಂದ್ರ ಶವಯಾತ್ರೆ ನಡೆಸಿದ ಪ್ರತಿಭಟನಾಕಾರರು: ಧಿಕ್ಕಾರ ಕೂಗುವ ಮೂಲಕ ಆಕ್ರೋಶ

ಬಳಿಕ ಬೆಲ್ಲ, ಕಬ್ಬು, ತೆಂಗಿನಕಾಯಿ, ಹಣ್ಣುಗಳನ್ನು ಆನೆಗಳಿಗೆ ತಿನ್ನಿಸಿ ಪುಷ್ಪಾರ್ಚನೆ ಮಾಡುವ ಮೂಲಕ ಗಜಪಯಣಕ್ಕೆ ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ, ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಅವರು ಚಾಲನೆ ನೀಡಿದರು. ಈ ವೇಳೆ ಮಾವುತರ ಸಂಜ್ಞೆಯಂತೆ ಸೊಂಡಿಲೆತ್ತಿ ಸಲ್ಯೂಟ್‌ ಮಾಡಿದ ಆನೆಗಳು ಕಾಡಿನಿಂದ ನಾಡಿನತ್ತ ಪಯಣ ಆರಂಭಿಸಿದವು. ಇದೇ ವೇಳೆ ಗೊಂಬೆ ಕುಣಿತ, ಚಂಡೆ ಮೇಳ, ನಗಾರಿ, ವೀರಗಾಸೆ ಸೇರಿದಂತೆ ವಿವಿಧ ಜಾನಪದ ಕಲಾಪ್ರಾಕಾರಗಳು ಮೇಳೈಸಿದವು. ಅಲ್ಲದೆ, ಮುತ್ತೈದೆಯರು ಪೂರ್ಣಕುಂಭದೊಂದಿಗೆ ಸಾಗಿದರು. ಕಲಾತಂಡಗಳು, ಮಂಗಳವಾದ್ಯಗಳೊಂದಿಗೆ ಗಜಪಯಣ ಆರಂಭವಾಯಿತು.

5 ರಂದು ಅರಮನೆ ಪ್ರವೇಶ: ಕಾಡಿನಿಂದ ನಾಡಿಗೆ ಆಗಮಿಸಿರುವ ಗಜಪಡೆ ಮೈಸೂರಿನ ಅಶೋಕಪುರಂನಲ್ಲಿರುವ ಅರಣ್ಯ ಭವನದ ಆವರಣದಲ್ಲಿ ವಿಶ್ರಾಂತಿ ಪಡೆಯುತ್ತಿವೆ. ಸೆ.5 ರಂದು ಮೈಸೂರು ಅರಮನೆಯ ಜಯಮಾರ್ತಾಂಡ ದ್ವಾರದಲ್ಲಿ ಗಜಪಡೆಗೆ ಸಾಂಪ್ರದಾಯಿಕ ಸ್ವಾಗತ ಕೋರಲಾಗುತ್ತದೆ. ನಂತರ ಅರಮನೆ ಆವರಣದಲ್ಲಿ ಗಜಪಡೆಯು ಬಿಡಾರ ಹೂಡಿ, ಪ್ರತಿದಿನ ತಾಲೀಮು ಆರಂಭಿಸಲಿವೆ.

ದಸರಾ ಗಜಪಯಣದ ಹಿನ್ನೆಲೆ: ದಸರಾ ಮಹೋತ್ಸವಕ್ಕೆ ಮೈಸೂರನ್ನು ಆಳಿದ ರಾಜಮಹಾರಾಜರ ಕಾಲದಲ್ಲಿ ಆನೆಗಳನ್ನು ಕಾಡಿನಿಂದ ನಾಡಿಗೆ ನಾಗರಹೊಳೆಯಿಂದ ಗಜಪಯಣದ ಹೆಸರಿನಲ್ಲಿ ಕರೆ ತರಲಾಗುತ್ತಿತ್ತು. ನಂತರ ಈ ಸಂಪ್ರದಾಯ ನಿಂತು ಹೋಗಿ, ಆನೆಗಳನ್ನು ನೇರವಾಗಿ ವಿವಿಧ ಶಿಬಿರಗಳಲ್ಲಿ ಲಾರಿಗಳಲ್ಲಿ ಮೈಸೂರಿಗೆ ತಂದು, ಅರಮನೆಯಲ್ಲಿ ಸಾಂಪ್ರದಾಯಿಕ ಸ್ವಾಗತ ಮಾಡಲಾಗುತ್ತಿತ್ತು. 2003ರಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಚ್‌. ವಿಶ್ವನಾಥ್‌ ಅವರು ಗಜಪಯಣವನ್ನು ಮತ್ತೆ ಆರಂಭಿಸಿದರು. ಮೊದಲ ವರ್ಷ ನಾಗರಹೊಳೆ ಅಭಯಾರಣ್ಯದ ಹೆಬ್ಬಾಗಿಲು ವೀರನಹೊಸಹಳ್ಳಿಯಿಂದ ಮೈಸೂರುವರೆಗೆ ಕಾಲ್ನಡಿಗೆಯಲ್ಲಿ ಕರೆ ತರಲಾಗಿತ್ತು. 

ಶಿಕ್ಷಣ ಸಚಿವರೇ ಇತ್ತ ನೋಡಿ: 153 ಮಕ್ಕಳಿರುವ ಶಾಲೆಗೆ ಒಬ್ಬನೇ ಶಿಕ್ಷಕ..!

ಈ ವೇಳೆ ಮಾರ್ಗವುದ್ದಕ್ಕೂ ಜನರು ನೀಡಿದ ಕಬ್ಬು, ಬೆಲ್ಲ, ತೆಂಗಿನಕಾಯಿ ತಿಂದು ಆನೆಗಳ ಆರೋಗ್ಯದಲ್ಲಿ ಏರುಪೇರು ಆಗಿದ್ದರಿಂದ ಮರು ವರ್ಷದಿಂದ ಗಜಪಯಣದ ನಂತರ ಆನೆಗಳನ್ನು ನೇರವಾಗಿ ಲಾರಿಯಲ್ಲಿ ಮೈಸೂರಿಗೆ ಕರೆತರಲಾಗುತ್ತದೆ. 2003 ರಿಂದಲೂ ನಾಗರಹೊಳೆ ಅಭಯಾರಣ್ಯದ ಹೆಬ್ಬಾಗಿಲು ವೀರನಹೊಸಹಳ್ಳಿಯಿಂದ ಗಜಪಯಣ ಆರಂಭಿಸಲಾಗುತ್ತಿತ್ತು. ಆದರೆ, 2012 ರಿಂದ 2017 ರವರೆಗೆ ವೀರನಹೊಸಹಳ್ಳಿಯಿಂದ 4 ಕಿ.ಮೀ. ದೂರದಲ್ಲಿರುವ ನಾಗಾಪುರ-1ನೇ ಬ್ಲಾಕ್‌ನ ಸರ್ಕಾರಿ ಗಿರಿಜನ ಆಶ್ರಮ ಶಾಲೆಯ ಬಳಿ ಗಜಪಯಣ ಆರಂಭಿಸಲಾಗುತ್ತಿತ್ತು. 2018 ರಿಂದ ವೀರನಹೊಸಹಳ್ಳಿ ಬಳಿ ಗಜಪಯಣಕ್ಕೆ ಚಾಲನೆ ನೀಡುವ ಮೂಲಕ ಹಳೆಯ ಸಂಪ್ರದಾಯವನ್ನು ಮತ್ತೆ ಆರಂಭಿಸಿ ಮುಂದುವರಿಸಿಕೊಂಡು ಬರಲಾಗುತ್ತಿದೆ. ಇದು 2023ನೇ ಸಾಲಿನ ದಸರೆಯಲ್ಲಿ ಮುಂದುವರೆಯಿತು.

Follow Us:
Download App:
  • android
  • ios