Asianet Suvarna News Asianet Suvarna News

ಹಳ್ಳಿಗೆ ಹೋಗದಿರಿ, ಕೊರೋನಾ ಸೋಂಕು ಹಬ್ಬಿಸದಿರಿ: ಸಿಎಂ ಮನವಿ!

ಹಳ್ಳಿಗೆ ಹೋಗದಿರಿ, ಕೊರೋನಾ ಸೋಂಕು ಹಬ್ಬಿಸದಿರಿ| ಕರ್ನಾಟಕದ ನಗರ ಪ್ರದೇಶದ ಜನತೆಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಕಳಕಳಿಯ ಮನವಿ| ರಾಜ್ಯದ ಶೇ.60ರಷ್ಟು ಜನ ಗ್ರಾಮೀಣ ಪ್ರದೇಶದಲ್ಲಿದ್ದಾರೆ| ಅಲ್ಲಿಗೆ ವೈರಸ್‌ ಪ್ರವೇಶಿಸಿದರೆ ನಿಯಂತ್ರಣ ಕಷ್ಟ

Coronavirus Outbreak BS Yediyurappa Requests People Not Too Move Villages
Author
Bangalore, First Published Mar 23, 2020, 7:01 AM IST

ಒಲೆ ಹೊತ್ತಿ ಉರಿದೊಡೆ, ನಿಲಬಹುದಲ್ಲದೆ

ಧರೆ ಹೊತ್ತಿ ಉರಿದೊಡೆ ನಿಲಲುಬಹುದೆ..?

ಏರಿ ನೀರುಂಬೊಡೆ, ಬೇಲಿ ಕಯ್ಯ (ಬೆಳೆ) ಮೆಯ್ಯುವೊಡೆ

ನಾರ ಮನೆಯಲ್ಲಿ ಕಳುವೊಡೆ

ಇನ್ನಾರಿಗೆ ದೂರುವೆನಯ್ಯಾ

ಕೂಡಲಸಂಗಮ ದೇವಾ!?

ಹನ್ನೆರಡನೆಯ ಶತಮಾನದ ಮಹಾನ್‌ ಸಮಾಜ ಸುಧಾರಕ ಬಸವಣ್ಣನವರ ವಚನ ಈಗ ಎಷ್ಟುಸಾಂದರ್ಭಿಕವಾಗಿದೆ ನೋಡಿ. ಧರೆ ಈಗ ಕೊರೋನಾ ವೈರಸ್‌ ಎನ್ನುವ ಮಾರಣಾಂತಿಕ ರೋಗದಿಂದ ಹೊತ್ತಿ ಉರಿಯುತ್ತಿದೆ.

ಚೀನಾದ ವುಹಾನ್‌ ನಗರದಲ್ಲಿ ಕಾಣಿಸಿಕೊಂಡು ಅಲ್ಲಿನ ಸಾವಿರಾರು ಮಂದಿಯನ್ನು ಬಲಿ ತೆಗೆದುಕೊಂಡ ಕೊರೋನಾ ವೈರಸ್‌ ಒಂದೂವರೆ ತಿಂಗಳ ಅವಧಿಯಲ್ಲಿ ಇಡೀ ಜಗತ್ತನ್ನು ಆವರಿಸಿದೆ. ಅಮೆರಿಕ, ಇಟಲಿ, ಫ್ರಾಸ್ಸ್‌, ಸ್ಪೇನ್‌, ಜಪಾನ್‌, ಜರ್ಮನಿ, ಇಂಗ್ಲೆಂಡ್‌, ಇರಾನ್‌, ದಕ್ಷಿಣ ಕೊರಿಯಾ, ಸ್ವಿಜರ್ಲೆಂಡ್‌, ಬೆಲ್ಜಿಯಂ, ನೆದರ್‌ಲೆಂಡ್ಸ್‌, ಸ್ವೀಡನ್‌, ಕೆನಡಾ, ಡೆನ್ಮಾರ್ಕ್, ಆಸ್ಪ್ರೇಲಿಯಾ, ಬ್ರೆಜಿಲ…, ಥಾಯ್ಲೆಂಡ್‌, ಇಂಡಿಯಾ, ಪಾಕಿಸ್ತಾನ ಹೀಗೆ ಕೊರೋನಾ ವೈರಸ್ಸಿನ ಮರಣ ಮೃದಂಗಕ್ಕೆ ಬಲಿಯಾಗಿರುವ ದೇಶಗಳ ಪಟ್ಟಿಬೆಳೆಯುತ್ತಲೇ ಹೋಗುತ್ತದೆ.

ಈವರೆಗೆ ಜಗತ್ತಿನಾದ್ಯಂತ ಸಾವಿಗೀಡಾಗಿರುವವರ ಒಟ್ಟು ಕೊರೋನಾ ಪೀಡಿತರ ಸಂಖ್ಯೆ 13,071. ಇವರಲ್ಲಿ ಅತ್ಯಧಿಕ 4825 ಜನರು ಇಟಲಿಯಲ್ಲಿ ಸಾವನ್ನಪ್ಪಿದರೆ, ಕೊರೋನಾಕ್ಕೆ ಜನ್ಮ ನೀಡಿದ ರಾಷ್ಟ್ರ ಚೀನಾದಲ್ಲಿ ಈ ಮಾರಣಾಂತಿಕ ರೋಗಕ್ಕೆ ಬಲಿಯಾಗಿರುವವರ ಸಂಖ್ಯೆ 3261. ಚೀನಾದಲ್ಲಿ 81054 ಮಂದಿ ಕೊರೋನಾ ಶಂಕಿತರಾಗಿದ್ದರೆ, ಅವರಲ್ಲಿ 72440 ಮಂದಿ ಚೇತರಿಸಿಕೊಂಡಿದ್ದಾರೆ. 5353 ಮಂದಿ ಕೊರೋನಾ ಮಾರಿಯ ದಾಳಿಯಿಂದ ಚೇತರಿಸಿಕೊಳ್ಳಬಹುದು. ಸಾವು ಬದುಕಿನ ನಡುವೆ ಹೋರಾಡುತ್ತಿರುವವರ ಸಂಖ್ಯೆ ಕೇವಲ 1845 ಮಾತ್ರ. ಇದೇ ಪರಿಸ್ಥಿತಿ ಇಟಲಿಯಲ್ಲಿಯೂ ಇದೆ. ಇಲ್ಲಿ ಕೊರೋನಾ ಪೀಡಿತರ ಸಂಖ್ಯೆ 53,578. ಇವರಲ್ಲಿ ಸಂಪೂರ್ಣ ಗುಣಮುಖರಾಗಿರುವವರ ಸಂಖ್ಯೆ 6072, ಕೊರೋನಾ ರೋಗದ ತೀವ್ರ ಸುಳಿಯಿಂದ ಪಾರಾಗುವ ಸಾಧ್ಯತೆ ಇರುವವರ ಸಂಖ್ಯೆ 42,681. ಸಾವು ಬದುಕಿನ ನಡುವೆ ಹೋರಾಡುತ್ತಿರುವವರ ಸಂಖ್ಯೆ 2857. ಈ ಎರಡೂ ರಾಷ್ಟ್ರಗಳನ್ನು ಹೊರತುಪಡಿಸಿದರೆ ವಿಶ್ವದ ಬಹುತೇಕ ರಾಷ್ಟ್ರಗಳು ಕೊರೋನಾ ಎನ್ನುವ ಈ ಮಾರಣಾಂತಿಕ ರೋಗವನ್ನು ತಡೆಗಟ್ಟುವ ಹಾದಿಯಲ್ಲಿ ಸಮರೋಪಾದಿಯಲ್ಲಿ ಸಜ್ಜಾಗಿವೆ.

ಮೋದಿ ನೇತೃತ್ವದಲ್ಲಿ ಸಂಕಲ್ಪ

ಭಾರತದಲ್ಲಿ ನಮ್ಮ ನೆಚ್ಚಿನ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ದಕ್ಷ ನೇತೃತ್ವದಲ್ಲಿ ಕೊರೋನಾ ಪಿಡುಗನ್ನು ಮೂಲೋತ್ಪಾಟನೆ ಮಾಡಲು ನಾವು ಸಂಕಲ್ಪ ಮಾಡಿದ್ದೇವೆ. ಕರ್ನಾಟಕದ ಮುಖ್ಯಮಂತ್ರಿಯಾಗಿ ಈ ರಾಜ್ಯದ ಪ್ರತಿಯೊಬ್ಬ ವ್ಯಕ್ತಿಯ ಹಿತ ಕಾಪಾಡುವುದು ನನ್ನ ಗುರುತರ ಹೊಣೆಗಾರಿಕೆ. ಯಾವುದೇ ಕಾರಣಕ್ಕೂ ಕೊರೋನಾ ವೈರಸ್‌ ರಾಜ್ಯವ್ಯಾಪಿ ಹರಡಲು ನಮ್ಮ ಸರ್ಕಾರ ಅವಕಾಶ ನೀಡುವುದಿಲ್ಲ.

ಕೊರೋನಾ ವೈರಸ್ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕಳೆದ ಎರಡು ಮೂರು ದಶಕಗಳ ಅವಧಿಯಲ್ಲಿ ಘಟಿಸಿದ ತೀವ್ರ ನಗರೀಕರಣ ಮತ್ತು ಕೈಗಾರಿಕೀಕರಣದ ಪರಿಣಾಮವಾಗಿ ಲಕ್ಷಾಂತರ ಜನರು ಹಳ್ಳಿಗಳನ್ನು ಬಿಟ್ಟು ನಗರ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಆದರೆ ಅವರ ಬದುಕಿನ ಬೇರಿರುವುದು ಹಳ್ಳಿಗಳಲ್ಲಿ. ಅತಿವೃಷ್ಟಿ-ಅನಾವೃಷ್ಟಿಯಂತಹ ಪ್ರಕೃತಿ ವೈಪರೀತ್ಯಗಳ ಜೊತೆಗೆ ಎಲ್ಲಾ ರೀತಿಯ ನೋವು, ಸಮಸ್ಯೆ ಸಂಕಷ್ಟಗಳನ್ನು ಅನುಭವಿಸಿ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿದ ತಂದೆ-ತಾಯಿಗಳು, ಅವರನ್ನು ಆಶ್ರಯಿಸಿದವರು ಹಳ್ಳಿಗಳಲ್ಲಿ ನೆಲೆಸಿದ್ದಾರೆ. ಮಾಲಿನ್ಯ ಮುಕ್ತ ಶುದ್ಧ ಪರಿಸರದಲ್ಲಿ ಅವರು ನೆಮ್ಮದಿಯ ಬದುಕು ನಡೆಸುತ್ತಿದ್ದಾರೆ.

ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ ಕರ್ನಾಟಕದ 27,028 ಹಳ್ಳಿಗಳಲ್ಲಿ ಒಟ್ಟು 3,74,69,335 ಜನರು ವಾಸ ಮಾಡುತ್ತಿದ್ದಾರೆ. ಅದರಲ್ಲಿ 1,89,29,354 ಪುರುಷರಿದ್ದರೆ, 1,85,39,981 ಮಂದಿ ಮಹಿಳೆಯರಿದ್ದಾರೆ. ಅಂದರೆ ಕರ್ನಾಟಕದ ಶೇ.60ಕ್ಕೂ ಹೆಚ್ಚು ಮಂದಿ ಹಳ್ಳಿಗಳಲ್ಲಿ ವಾಸವಿದ್ದರೆ, ಶೇಕಡ 35ಕ್ಕೂ ಹೆಚ್ಚು ಮಂದಿ ನಗರ ಮತ್ತು ಅರೆನಗರಗಳಲ್ಲಿ ವಾಸಿಸುತ್ತಿದ್ದಾರೆ. ಪರಿಶುದ್ಧ ಪರಿಸರ, ಯಾವುದೇ ರೋಗರುಜಿನಗಳಿಲ್ಲದ ನೆಮ್ಮದಿಯ ನೆಲೆಯಾಗಿರುವ ಹಳ್ಳಿಗಳನ್ನು ಕೊರೋನಾ ಎನ್ನುವ ಈ ಮಾರಣಾಂತಿಕ ವೈರಸ್‌ ತಲುಪಲೇ ಕೂಡದು. ಹಳ್ಳಿಗಳು ಭಾರತದ ಬೆನ್ನೆಲುಬು. ಕೃಷಿ, ಹೈನುಗಾರಿಕೆ, ಮುಂತಾದ ಜೀವನೋಪಯೋಗಿ ಚಟುವಟಿಕೆಗಳು ಇಡೀ ರಾಜ್ಯದ ನೆಮ್ಮದಿಯ ಬದುಕಿನ ಜೀವನಾಡಿ. ಅತ್ಯಧಿಕ ಸಂಖ್ಯೆಯ ಶ್ರಮಿಕರು ನೆಲೆಸಿರುವುದೇ ಹಳ್ಳಿಗಳಲ್ಲಿ. ಈ ಕಾರಣದಿಂದಲೇ ಹಳ್ಳಿಗಳಿಗೆ ಕೊರೋನಾ ವೈರಸ್‌ ಪ್ರವೇಶಿಸಬಾರದು ಎನ್ನುವುದು ನನ್ನ ಅಭಿಮತ.

ನಗರದಲ್ಲಿ ಚಿಕಿತ್ಸೆ ಸಾಧ್ಯ, ಹಳ್ಳಿಗಳಲ್ಲಿ ಕಷ್ಟ

ನಗರ ಪ್ರದೇಶಗಳಲ್ಲಿ ತುರ್ತು ಚಿಕಿತ್ಸೆಗಳಿಗೆ ಎಲ್ಲಾ ರೀತಿಯ ಸವಲತ್ತುಗಳಿರುತ್ತದೆ. ಸಾಕಷ್ಟುಪ್ರಮಾಣದ ಪರಿಣತ ವೈದ್ಯಕೀಯ ಸಿಬ್ಬಂದಿ ಇರುತ್ತದೆ. ದೊಡ್ಡ ಪ್ರಮಾಣದಲ್ಲಿ ರೋಗ ತಪಾಸಣಾ ಕೇಂದ್ರಗಳಿವೆ. ಕೊರೋನಾ ತಡೆಯುವ ನಿಟ್ಟಿನಲ್ಲಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ 1700 ಹಾಸಿಗೆ ಸಮುಚ್ಚಯವನ್ನು ಮೀಸಲಿಟ್ಟಿದ್ದೇವೆ. ಆದರೆ ಇಂಥ ವೈದ್ಯಕೀಯ ಸವಲತ್ತುಗಳು ಹಳ್ಳಿಗಳಲ್ಲಿ ಇಲ್ಲ. ಬೆಂಗಳೂರು ಸೇರಿದಂತೆ ನಗರಕ್ಕೆ ಹತ್ತಿರವಿರುವ ಹಳ್ಳಿಗಳ ಜನರು ಕೊರೋನಾ ಸೋಂಕು ಪೀಡಿತರನ್ನು ನಗರ ಪ್ರದೇಶಗಳಿಗೆ ಕರೆದುಕೊಂಡು ಬರಬಹುದು. ಆದರೆ ಕುಗ್ರಾಮಗಳಲ್ಲಿ ನೆಲೆಸಿರುವವರು ತಕ್ಷಣ ಚಿಕಿತ್ಸೆಗಾಗಿ ನಗರ ಪ್ರದೇಶಗಳಿಗೆ ಬರಲು ಕಷ್ಟಸಾಧ್ಯ.

ಜನತಾ ಕರ್ಫ್ಯೂಗೆ ಒಂದಾದ ಭಾರತ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನು ಮನಗಂಡು ಹಳ್ಳಿಗಳಲ್ಲಿ ನೆಲೆಸಿರುವ ಕೃಷಿಕರು, ಕೃಷಿ ಕಾರ್ಮಿಕರು, ದಲಿತರು, ಹಿಂದುಳಿದವರು, ನಿರಕ್ಷರಿಗಳು ಅಸಹಾಯಕರು, ವಯೋವೃದ್ಧ ತಂದೆ-ತಾಯಿ, ಅಕ್ಕತಂಗಿ, ಅಣ್ಣತಮ್ಮ ಬಂಧುಬಳಗ ಇವರು ಯಾವುದೇ ಕಾರಣಕ್ಕೂ ಕೊರೋನಾ ವೈರಸ್ಸಿಗೆ ಬಲಿ ಆಗಲೇಕೂಡದು. ಈ ಹಿನ್ನೆಲೆಯಲ್ಲಿ ರೋಗ ಗುಣಪಡಿಸುವುದಕ್ಕಿಂತ, ರೋಗ ತಡೆಗಟ್ಟುವುದು ಜಾಣತನ ಎನ್ನುವ ಗಾದೆಯ ಮಾತಿನ ಹಾಗೆ ಬೆಂಗಳೂರು ನಗರ ಸೇರಿದಂತೆ ಇತರ ಪ್ರಮುಖ ನಗರಗಳಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯಕ್ತಿ ಯಾವುದೇ ಕಾರಣಕ್ಕೆ ಹಳ್ಳಿಗಳಿಗೆ ಭೇಟಿ ನೀಡಕೂಡದು.

ಎರಡು ಮೂರು ದಿನಗಳಲ್ಲಿ ಯುಗಾದಿ ಹಬ್ಬವಿದೆ. ಗ್ರಾಮೀಣ ಪ್ರದೇಶದಿಂದ ಬಂದು ಬೆಂಗಳೂರೂ ಸೇರಿದಂತೆ ನಗರ ಪ್ರದೇಶಗಳಲ್ಲಿ ನೆಲೆಸಿರುವವರಿಗೆ ಯುಗಾದಿ ಹಬ್ಬದ ಜೊತೆಗೆ ಭಾವನಾತ್ಮಕ ಬಂಧವಿದೆ. ಈ ಭಾವನಾತ್ಮಕ ಬಂಧದ ಸೆಳೆತಕ್ಕೆ ಬಲಿಯಾದರೆ ಹಳ್ಳಿಗಳ ನೆಮ್ಮದಿ ನಾಶ ಆಗುತ್ತದೆ. ಹರ್ಷದ ಕೂಳಿಗಿಂತಲೂ ವರ್ಷದ ಕೂಳು ಮುಖ್ಯ ಎನ್ನುವ ಕಟು ವಾಸ್ತವವನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು. ಒಂದು ವೇಳೆ ಹಳ್ಳಿಗಳನ್ನು ಕೊರೋನಾ ಪ್ರವೇಶಿಸದಂತೆ ತಡೆಗಟ್ಟಿದರೆ ನಾವು ಕೊರೋನಾ ವೈರಸ್‌ ವಿರುದ್ಧದ ಹೋರಾಟದಲ್ಲಿ ಶೇಕಡ ಅರವತ್ತರಷ್ಟುಗೆಲುವು ಸಾಧಿಸಿದ ಹಾಗೆ. ಕರ್ನಾಟಕದ ಪ್ರತಿಯೊಂದು ಹಳ್ಳಿಗಳನ್ನು ಕೊರೋನಾ ವೈರಸ್‌ ಮುಕ್ತವಾಗಿಸಬೇಕು ಎನ್ನುವ ನನ್ನ ಸರ್ಕಾರದ ಸದಾಶಯದೊಂದಿಗೆ ನೀವೆಲ್ಲಾ ಭಾಗಿಗಳಾಗಬೇಕೆಂದು ನಾನು ಕೈಜೋಡಿಸಿ ವಿನಂತಿ ಮಾಡಿಕೊಳ್ಳುತ್ತೇನೆ.

ಲ್ಯಾಬ್‌ಗಳ ಸಂಖ್ಯೆ ಹೆಚ್ಚಳ

ಕೊರೋನಾ ವೈರಸ್‌ ಹರಡುವಿಕೆಯನ್ನು ತಡೆಗಟ್ಟುವ ದಿಸೆಯಲ್ಲಿ ನನ್ನ ಸರ್ಕಾರ ಸಮರೋಪಾದಿಯಲ್ಲಿ ಕಾರ್ಯಕ್ರಮಗಳನ್ನು ರೂಪಿಸಿದೆ. ಕರ್ನಾಟಕದ ಎಲ್ಲಾ ಗಡಿಗಳನ್ನು ಮುಚ್ಚಿದ್ದೇವೆ. ಸಾಮಾಜಿಕ ಒಗ್ಗೂಡುವಿಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಈ ದಿಸೆಯಲ್ಲಿ ಎಸ್‌ಎಸ್‌ಎಲ…ಸಿ ಪರೀಕ್ಷೆಗಳನ್ನು ಮುಂದೂಡಿದ್ದೇವೆ. ಕೊರೋನಾ ವೈರಾಣುಗಳನ್ನು ಪತ್ತೆ ಮಾಡುವ ಲ್ಯಾಬ…ಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಪ್ರತಿ ಹತ್ತು ಲಕ್ಷ ಜನಸಂಖ್ಯೆಗೆ ಕನಿಷ್ಠ ಇನ್ನೂರು ಮಂದಿಗೆ ವೈದ್ಯಕೀಯ ತಪಾಸಣೆ ನಡೆಸುವ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ.

ಐಸಿಎಂಆರ್‌ ಮತ್ತು ಎನ್‌ಐವಿ ಸಹಯೋಗತ್ವದಲ್ಲಿ ಸಾಕಷ್ಟುಸಂಖ್ಯೆಯ ಸರ್ಕಾರಿ ಮತ್ತು ಸರ್ಕಾರೇತರ ಲ್ಯಾಬ…ಗಳಿಗೆ ಕೋವಿಡ್‌ ಅರ್ಥಾತ್‌ ಕೊರೋನಾ ತಪಾಸಣಾ ಪರವಾನಗಿ ನೀಡಲಾಗುವುದು. ಕೊರೋನಾ ತಡೆಗಟ್ಟುವ ಹಾದಿಯಲ್ಲಿ ಹಿರಿಯ ಸಚಿವರನ್ನೊಳಗೊಂಡ ಟಾಸ್ಕ್‌ಫೋರ್ಸ್‌ಗೆ ಸಹಾಯ ಮಾಡಲು ಹಿರಿಯ ಐಎಎಸ್‌ ಅಧಿಕಾರಿಗಳ ನಿಗ್ರಹ ದಳವನ್ನು ರಚಿಸಲಾಗಿದೆ. ಬಾಲಬ್ರೂಯಿ ಅತಿಥಿ ಗೃಹವನ್ನು ಕೊರೋನಾ ವಿರುದ್ಧ ಅತ್ಯಂತ ವ್ಯವಸ್ಥಿತವಾಗಿ ಹೋರಾಟ ಮಾಡುವ ವಾರ್‌ ರೂಂ ಆಗಿ ಪರಿವರ್ತಿಸಲಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಯಲ್ಲಿನ ಕೋರೋನಾ ಕುರಿತ ಸಂಪೂರ್ಣ ಮಾಹಿತಿ, ಅದನ್ನು ನಿವಾರಿಸಲು ಕೈಗೊಂಡ ಕ್ರಮಗಳ ಸಂಪೂರ್ಣ ನಿರ್ವಹಣೆಯನ್ನು ಬಾಲಬ್ರೂಯಿ ವಾರ್‌ ರೂಂನಿಂದ ನಿಭಾಯಿಸಲಾಗುವುದು. ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸುವ ವಾರ್‌ ರೂಂ ನಿರ್ವಹಣೆಯ ನೇತೃತ್ವವನ್ನು ನಾನೇ ವಹಿಸಿದ್ದೇನೆ.

ಹರಡುವಿಕೆ ತಡೆಗೆ ಎಲ್ಲ ಕಠಿಣ ಕ್ರಮ

ಇದರ ಜೊತೆಗೆ ಮುಂದಿನ ಆದೇಶದವರೆಗೆ ರಾಜ್ಯದಲ್ಲಿ ಮುಂಬರುವ ತಿಂಗಳುಗಳಲ್ಲಿ ನಡೆಯಬೇಕಿದ್ದ ಎಲ್ಲಾ ಚುನಾವಣೆಗಳನ್ನು ಮುಂದೂಡಿದ್ದೇವೆ. ಈಗಾಗಲೇ ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ಕಟ್ಟುನಿಟ್ಟಿನ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಸ್ಥಳೀಯ ವಿಮಾನ ಪ್ರಯಾಣಿಕರನ್ನು ತಪಾಸಣೆಗೆ ಗುರಿಪಡಿಸಲಾಗುವುದು. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಗಳೂರು, ಮೈಸೂರು, ಧಾರವಾಡ, ಚಿಕ್ಕಬಳ್ಳಾಪುರ, ಕೊಡಗು ಮತ್ತು ಬಳ್ಳಾರಿ ಸೇರಿದಂತೆ ಕೋರೋನಾ ವೈರಸ್‌ ಹೆಚ್ಚು ಕಂಡು ಬಂದಿರುವ ಜಿಲ್ಲೆಗಳಲ್ಲಿ ವೈದ್ಯಕೀಯ, ಔಷಧಿ, ದಿನಸಿ ಮತ್ತು ಕೃಷಿ ಚಟುವಟಿಕೆಗಳನ್ನು ಹೊರತುಪಡಿಸಿ ಉಳಿದ ವಾಣಿಜ್ಯ ಚಟುವಟಿಕೆಗಳನ್ನು ಸಂಪೂರ್ಣ ನಿರ್ಬಂಧಿಸಲಾಗಿದೆ. ಈ ಜಿಲ್ಲೆಗಳಲ್ಲಿ ಕೈಗಾರಿಕೆಗಳು ಹೆಚ್ಚು ಸಂಖ್ಯೆಯಲ್ಲಿ ಇರುವುದರಿಂದ, ದಿನ ಬಿಟ್ಟು ದಿನ ಅರ್ಧ ಸಂಖ್ಯೆಯ ಕಾರ್ಮಿಕರನ್ನು ಮಾತ್ರ ಕೆಲಸಕ್ಕೆ ನಿಯೋಜಿಸಿಕೊಳ್ಳುವಂತೆ ಸೂಚಿಸಿದ್ದೇವೆ. ಇನ್ನು ಈ ಒಂಬತ್ತು ಜಿಲ್ಲೆಗಳಲ್ಲಿ ಮಾಚ್‌ರ್‍ 31ರವರೆಗೆ ಸಾರಿಗೆ ವ್ಯವಸ್ಥೆಯನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ.

ಕರ್ನಾಟಕದ ಪ್ರತಿಯೊಬ್ಬ ನಾಗರಿಕರಲ್ಲಿ ನನ್ನದೊಂದು ಹೃದಯಪೂರ್ವಕ ನಿವೇದನೆ. ನನ್ನ ಸರ್ಕಾರ ಕೊರೋನಾ ತಡೆಗಟ್ಟಲು ಕಾಯಾ ವಾಚಾ ಮನಸಾ ಎಲ್ಲಾ ರೀತಿಯ ಕ್ರಮಗಳನ್ನು ಸಮರೋಪಾದಿಯಲ್ಲಿ ಅನುಷ್ಠಾನಗೊಳಿಸುತ್ತಿದೆ. ನಾನು ಹಗಲು- ರಾತ್ರಿಯೆನ್ನದೆ ಕೊರೋನಾ ನಿಯಂತ್ರಣಕ್ಕೆ ಸಂಬಂಧಿಸಿದ ಪ್ರತಿಯೊಂದು ಮುನ್ನೆಚ್ಚರಿಕಾ ಕ್ರಮಗಳ ಮೇಲುಸ್ತುವಾರಿಯನ್ನು ಮಾಡುತ್ತಿದ್ದೇನೆ. ಆರೋಗ್ಯ ಸಚಿವ ಶ್ರೀರಾಮುಲು, ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್‌, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ ಅವರುಗಳೂ ಸೇರಿದಂತೆ ನನ್ನ ಸಂಪುಟದ ಪ್ರತಿಯೊಬ್ಬ ಸಚಿವರು ಕೊರೋನಾ ವಿರುದ್ಧದ ಹೋರಾಟದಲ್ಲಿ ನನಗೆ ಬೆಂಗಾವಲಾಗಿ ನಿಂತಿದ್ದಾರೆ. ಇನ್ನು ರಾಜ್ಯದ ಸಾವಿರಾರು ವೈದ್ಯಕೀಯ ಸಿಬ್ಬಂದಿ ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಕೊರೋನಾ ವಿರುದ್ಧ ಯುದ್ಧ ಸಾರಿದೆ. ಕೇವಲ ಸರ್ಕಾರ ಮಾತ್ರ ಕೊರೋನಾ ವಿರುದ್ಧದ ಸಮರದಲ್ಲಿ ಭಾಗಿಯಾದರೆ ಸಾಲದು ಕರ್ನಾಟಕದ ಪ್ರತಿಯೊಬ್ಬ ನಾಗರಿಕನೂ ಕೊರೋನಾ ಸಮರದ ಸೇನಾನಿಗಳಾಗಬೇಕೆಂಬುದು ನನ್ನ ಕಳಕಳಿಯ ವಿನಂತಿ.

Follow Us:
Download App:
  • android
  • ios