ಕೆಲ ದಿನಗಳಿಂದ ನಿತ್ಯ ಒಂದು ಲಕ್ಷಕ್ಕೂ ಹೆಚ್ಚು ಪರೀಕ್ಷೆ ನಡೆಸಲಾಗುತ್ತಿದೆ. ಸಮಾಧಾನದ ಸಂಗತಿಯೆಂದರೆ, ಪಾಸಿಟಿವಿಟಿ ದರ ಶೇ.2ಕ್ಕಿಂತ ಕಡಿಮೆಯಿದೆ. 

ಬೆಂಗಳೂರು (ನ.21):  ರಾಜ್ಯದಲ್ಲಿ ಕರೋನಾ ಪರೀಕ್ಷೆ ಶನಿವಾರಕ್ಕೆ ಬಹುತೇಕ ಒಂದು ಕೋಟಿ ಪರಿಧಿ ದಾಟಲಿದೆ. ಕಳೆದ ಕೆಲ ದಿನಗಳಿಂದ ನಿತ್ಯ ಒಂದು ಲಕ್ಷಕ್ಕೂ ಹೆಚ್ಚು ಪರೀಕ್ಷೆ ನಡೆಸಲಾಗುತ್ತಿದೆ. ಸಮಾಧಾನದ ಸಂಗತಿಯೆಂದರೆ, ಪಾಸಿಟಿವಿಟಿ ದರ ಶೇ.2ಕ್ಕಿಂತ ಕಡಿಮೆಯಿದೆ. ತುಸು ಆತಂಕದ ಸಂಗತಿಯೆಂದರೆ ಕ್ರಮೇಣ ಕಡಿಮೆಯಾಗಿದ್ದ ಸೋಂಕಿತರ ಸಂಖ್ಯೆ ದೀಪಾವಳಿ ಹಬ್ಬದ ನಂತರ ತುಸು ಏರಿಕೆ ಗತಿಯಲ್ಲಿದೆ.

Add Asianetnews Kannada as a Preferred SourcegooglePreferred

ಶುಕ್ರವಾರ 1,781 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. 2,181 ಮಂದಿ ಗುಣಮುಖರಾಗಿದ್ದಾರೆ. 17 ಮಂದಿ ಮರಣವನ್ನಪ್ಪಿದ್ದಾರೆ. ಶುಕ್ರವಾರ ದಾಖಲೆಯ 1.21 ಲಕ್ಷ ಪರೀಕ್ಷೆಯೂ ಸೇರಿ ರಾಜ್ಯದಲ್ಲಿ ಇದುವರೆಗೂ ಪ್ರಸಕ್ತ 99.81 ಲಕ್ಷ ಪರೀಕ್ಷೆ ನಡೆದಿದೆ.

ಅಮೆರಿಕಾದಲ್ಲೂ ಹೆಚ್ಚಾಗ್ತಿದೆ ಕೊರೊನಾ ಸೋಂಕಿತ ಪ್ರಕರಣ ..

ದೀಪಾವಳಿಯ ಬಳಿಕ ರಾಜ್ಯದಲ್ಲಿನ ಹೊಸ ಕೊರೋನಾ ಪ್ರಕರಣಗಳಲ್ಲಿ ತುಸು ಏರಿಕೆ ದಾಖಲಾಗುತ್ತಿದೆ. ನವೆಂಬರ್‌ 16, ನ. 17 ರಂದು ಹೊಸ ಪ್ರಕರಣಗಳ ಸಂಖ್ಯೆ 1,500 ಕ್ಕಿಂತ ಕಡಿಮೆಯಿತ್ತು. ಆದರೆ, ಆ ಬಳಿಕ ಪ್ರತಿ ದಿನವೂ 1,500ಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾಗುತ್ತಿರುವುದು ಗಮನಾರ್ಹ.

ಇದೇ ವೇಳೆ ಸಕ್ರಿಯ ಪ್ರಕರಣಗಳ ಸಂಖ್ಯೆ 24,752ಕ್ಕೆ ಕುಸಿದಿದೆ. ಈ ಪೈಕಿ 539 ಮಂದಿ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ ಒಟ್ಟು 8.69 ಲಕ್ಷ ಜನರಿಗೆ ಸೋಂಕು ಬಂದಿದ್ದು, ಅದರಲ್ಲಿ 8.33 ಲಕ್ಷ ಮಂದಿ ಗುಣಮುಖರಾಗಿದ್ದಾರೆ. ಒಟ್ಟು 11,621 ಮಂದಿ ಮರಣವನ್ನಪ್ಪಿದ್ದಾರೆ. ರಾಜ್ಯದ ಒಟ್ಟು ಮರಣ ದರ ಶೇ.1.34 ರಷ್ಟಿದೆ.

ನವೆಂಬರ್‌ 19 ರಂದು 1,18,474 ಕೊರೋನಾ ಪರೀಕ್ಷೆ ನಡೆದಿದ್ದು ದಾಖಲೆಯಾಗಿತ್ತು. ಮರುದಿನವೇ ಈ ದಾಖಲೆ ಮುರಿದು ಬಿದ್ದಿದೆ. ಹಾಗೆಯೇ ದಿನದ ಆರ್‌ಟಿಪಿಸಿಆರ್‌ ಪರೀಕ್ಷೆಯ ಪ್ರಮಾಣ ಲಕ್ಷ ದಾಟಿದೆ. ದೈನಂದಿನ ಕೊರೋನಾ ಪರೀಕ್ಷೆಗಳಲ್ಲಿ ಶೇ.80ಕ್ಕಿಂತ ಹೆಚ್ಚು ಆರ್‌ಟಿಪಿಸಿಆರ್‌ ಪರೀಕ್ಷೆಗಳಾಗಿವೆ. ರಾಜ್ಯದ ಈವರೆಗಿನ ಪಾಸಿಟಿವಿಟಿ ದರ ಶೇ.8.8ರಷ್ಟಿದೆ.

ಬೆಂಗಳೂರು ನಗರ ಜಿಲ್ಲೆಯಲ್ಲಿ 6, ಮೈಸೂರು 3, ಧಾರವಾಡ 2, ಶಿವಮೊಗ್ಗ, ರಾಯಚೂರು, ತುಮಕೂರು, ದಕ್ಷಿಣ ಕನ್ನಡ, ಬಳ್ಳಾರಿ ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ ತಲಾ ಒಬ್ಬರು ಸೋಂಕಿನಿಂದ ಮೃತರಾಗಿದ್ದಾರೆ.

ಬೆಂಗಳೂರು ನಗರ ಜಿಲ್ಲೆಯಲ್ಲಿ 1067, ಬಾಗಲಕೋಟೆ 23, ಬಳ್ಳಾರಿ 54, ಬೆಳಗಾವಿ 38, ಬೆಂಗಳೂರು ಗ್ರಾಮಾಂತರ 66, ಬೀದರ್‌ 6, ಚಾಮರಾಜ ನಗರ 13, ಚಿಕ್ಕಬಳ್ಳಾಪುರ 11, ಚಿಕ್ಕಮಗಳೂರು 9, ಚಿತ್ರದುರ್ಗ 33, ದಕ್ಷಿಣ ಕನ್ನಡ 36, ದಾವಣಗೆರೆ 17, ಧಾರವಾಡ 21, ಗದಗ 11, ಹಾಸನ 28, ಹಾವೇರಿ 8, ಕಲಬುರಗಿ 5, ಕೊಡಗು 7, ಕೋಲಾರ 15, ಕೊಪ್ಪಳ 3, ಮಂಡ್ಯ 66, ಮೈಸೂರು 46, ರಾಯಚೂರು 11, ರಾಮನಗರ 24, ಶಿವಮೊಗ್ಗ 29, ತುಮಕೂರು 48, ಉಡುಪಿ 18, ಉತ್ತರ ಕನ್ನಡ 33, ವಿಜಯಪುರ 20 ಹಾಗೂ ಯಾದಗಿರಿ ಜಿಲ್ಲೆಯಲ್ಲಿ 7 ಹೊಸ ಪ್ರಕರಣ ಧೃಢಪಟ್ಟಿದೆ.