ಕೊರೋನಾ ಸೋಂಕಿತರನ್ನು ಕಳಂಕಿತರಂತೆ ನೋಡುತ್ತಿರುವುದು ದುರದೃಷ್ಟಕರ. ಇದೊಂದು ಸಾಮಾನ್ಯ ಸೋಂಕು. ಯಾರಿಗೆ ಬೇಕಾದರೂ ಬರಬಹುದು. ಹೀಗಾಗಿ ಯಾವುದೇ ಕಾರಣಕ್ಕೂ ಸೋಂಕಿತರನ್ನು ಅಗೌರವದಿಂದ ನೋಡಬಾರದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಹೇಳಿದ್ದಾರೆ ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಬೆಂಗಳೂರು(ಆ.11): ಕೊರೋನಾ ಜಗತ್ತನ್ನು ಕಾಡುತ್ತಿರುವ ಸಾಮಾನ್ಯ ಕಾಯಿಲೆ. ಹೀಗಾಗಿ ಕೊರೋನಾ ಸೋಂಕಿತರನ್ನು ಕಳಂಕಿತರಂತೆ ನೋಡಬಾರದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಮನವಿ ಮಾಡಿದ್ದಾರೆ.

ಯೋಜನಾ ಮತ್ತು ಸಾಂಖ್ಯಿಕ ಇಲಾಖೆ ಸೋಮವಾರ ಹಮ್ಮಿಕೊಂಡಿದ್ದ ‘ಕೋವಿಡ್‌ ಕಳಂಕ: ಚಿಂತನಾ-ಮಂಥನಾ’ ಆನ್‌ಲೈನ್‌ ಕಾರ್ಯಕ್ರಮ ಉದ್ಘಾಟಿಸಿದ ಅವರು, ಕೊರೋನಾ ಸೋಂಕಿತರನ್ನು ಕಳಂಕಿತರಂತೆ ನೋಡುತ್ತಿರುವುದು ದುರದೃಷ್ಟಕರ. ಇದೊಂದು ಸಾಮಾನ್ಯ ಸೋಂಕು. ಯಾರಿಗೆ ಬೇಕಾದರೂ ಬರಬಹುದು. ಹೀಗಾಗಿ ಯಾವುದೇ ಕಾರಣಕ್ಕೂ ಸೋಂಕಿತರನ್ನು ಅಗೌರವದಿಂದ ನೋಡಬಾರದು. ಈ ಸಂದರ್ಭದಲ್ಲಿ ಸೋಂಕಿತರಿಗೆ ಧೈರ್ಯ ತುಂಬವ ಕೆಲಸವಾಗಬೇಕು. ಸಮಾಜದ ಪ್ರತಿಯೊಬ್ಬರು ಈ ಕಾರ್ಯದಲ್ಲಿ ಭಾಗವಹಿಸಬೇಕು. ಅಂತೆಯೆ ಸೋಂಕಿನಿಂದ ಗುಣಮುಖರಾದವರನ್ನೂ ಗೌರವದಿಂದ ನಡೆಸಿಕೊಳ್ಳಬೇಕು ಎಂದು ಹೇಳಿದರು.

Scroll to load tweet…

ಜಯದೇವ ಹೃದ್ರೋಗ ಆಸ್ಪತ್ರೆ ಮುಖ್ಯಸ್ಥ ಡಾ.ಮಂಜುನಾಥ್‌ ಮಾತನಾಡಿ, ಈ ಕೊರೋನಾ ಸೋಂಕಿನಿಂದ ಸತ್ತವರಿಗಿಂತ ಈ ಸೋಂಕಿನ ಭಯದಿಂದ ಸತ್ತವರ ಸಂಖ್ಯೆ ಹೆಚ್ಚಾಗಿರುವುದು ಈ ಸಮಾಜದ ಮನಸ್ಥಿತಿಯನ್ನು ತೋರಿಸುತ್ತದೆ. ಇದೊಂದು ಸಾಮಾನ್ಯವಾಗಿ ಬಂದು ಹೋಗುವ ಸೋಂಕಾಗಿದ್ದು, ಭಯಪಡುವ ಅಗತ್ಯವಿಲ್ಲ. ಮಾಧ್ಯಮಗಳು ಸಹ ಜನರಲ್ಲಿ ಧೈರ್ಯ ತುಂಬುವ ಸಕರಾತ್ಮಕ ಸುದ್ದಿಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು.

ಬೆಂಗಳೂರಲ್ಲಿ 'ಕಂಟೈನ್ಮೆಂಟ್‌'ಗೆ ಬಿಬಿಎಂಪಿ ತಿಲಾಂಜಲಿ..?

ಸಂಸದೆ ಸುಮಲತಾ ಅಂಬರೀಶ್‌ ಮಾತಾನಾಡಿ, ತಾವು ಸೋಂಕಿಗೆ ತುತ್ತಾದ ಅನುಭವಗಳನ್ನು ಹಂಚಿಕೊಂಡರು. ಇದೊಂದು ಸಾಮಾನ್ಯ ಕಾಯಿಲೆಯಾಗಿದ್ದರೂ ಪೆಡಂಭೂತದಂತೆ ಚಿತ್ರಿಸಲಾಗುತ್ತಿದೆ. ಇದರಿಂದ ವಾಸಿಯಾದ ಅನೇಕ ವಿಐಪಿಗಳನ್ನು ಹಾಗೂ ಸಾಮಾನ್ಯ ಜನರನ್ನು ಸಮಾಜ ಕಾಣುವ ದೃಷ್ಟಿಕೋನ ಬದಲಾಗಬೇಕಿದೆ ಎಂದು ಅಭಿಪ್ರಾಯಪಟ್ಟರು. ಇದೇ ವೇಳೆ ಕೋವಿಡ್‌ನಿಂದ ಗುಣಮುಖರಾದ ಹಲವರು ತಮ್ಮ ಅನುಭವಗಳನ್ನು ಮುಕ್ತವಾಗಿ ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ನಟಿಯರಾದ ತಾರಾ, ರಶ್ಮಿಕಾ, ಪ್ರಕೃತಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.