ವರ್ಷಾಂತ್ಯದವರೆಗೂ ಕೊರೋನಾ 3ನೇ ಅಲೆ ಆತಂಕ..!
* ಲಸಿಕೆ ಪಡೆದವರಿಗೂ ಸೋಂಕು ಬರುವ ಸಾಧ್ಯತೆ
* ಇನ್ನೂ 3 ತಿಂಗಳು ಹುಷಾರಾಗಿರಬೇಕು: ತಜ್ಞರು
* ಕೋವಿಡ್ ಮುಗಿದೇ ಹೋಯಿತು ಎಂದು ಬೇಕಾಬಿಟ್ಟಿ ವರ್ತನೆ ಬೇಡ
ಬೆಂಗಳೂರು(ಅ.25): ರಷ್ಯಾ(Russia), ಜರ್ಮನಿ(Germany), ಬ್ರಿಟನ್(Britain), ಚೀನಾದಲ್ಲಿ(China ) ಕೋವಿಡ್-19 ಪ್ರಕರಣಗಳ ಸಂಖ್ಯೆ ಮತ್ತೆ ಹೆಚ್ಚಾಗುತ್ತಿದ್ದರೂ ರಾಜ್ಯದಲ್ಲಿ(Karnataka) ಸದ್ಯದ ಪರಿಸ್ಥಿತಿಯಲ್ಲಿ ಸೋಂಕು ಹೆಚ್ಚಾಗುವ ಸಾಧ್ಯತೆಗಳು ಕಡಿಮೆ. ಆದರೆ ಈ ವರ್ಷಾಂತ್ಯದವರೆಗೂ ಕೋವಿಡ್ ಮೂರನೇ ಅಲೆಯ ಆತಂಕ ಇದ್ದೇ ಇದೆ ಎಂದು ರಾಜ್ಯದ ಕೋವಿಡ್ ತಜ್ಞರು(Covid Experts) ಅಭಿಪ್ರಾಯ ಪಟ್ಟಿದ್ದಾರೆ.
‘ಕನ್ನಡಪ್ರಭ’ದೊಂದಿಗೆ(Kannada Prabha) ಮಾತನಾಡಿದ ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಮುಖ್ಯಸ್ಥ ಡಾ. ಎಂ. ಕೆ. ಸುದರ್ಶನ್, ಸಮಿತಿಯ ಸದಸ್ಯ ಮತ್ತು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ ಮತ್ತು ಸಮಿತಿಯ ಇನ್ನೋರ್ವ ಸದಸ್ಯ, ವೈರಾಣು ತಜ್ಞ ಡಾ. ವಿ. ರವಿ ಅವರು ಸದ್ಯದ ಮಟ್ಟಿಗೆ ಮೂರನೇ ಅಲೆಯ(Corona 3rd Wave) ಆತಂಕ ಇಲ್ಲದ್ದಿದ್ದರೂ ಜನರು ಮುನ್ನೆಚ್ಚರಿಕೆ ಕ್ರಮಗಳನ್ನು ತಪ್ಪದೆ ಪಾಲಿಸಬೇಕು ಎಂದು ಹೇಳಿದರು.
ಕೋವಿಡ್ ಮೂರನೇ ಅಲೆ ಅಕ್ಟೋಬರ್, ನವೆಂಬರ್ನಲ್ಲಿ ಬರುವ ಸಾಧ್ಯತೆ ಕಡಿಮೆ ಆಗಿರಬಹುದು. ಆದರೆ ಮೂರನೇ ಅಲೆಯ ಆತಂಕ ಇದ್ದೇ ಇದೆ. ಮುಂದಿನ ಮೂರು ತಿಂಗಳುಗಳ ಕಾಲ ಕೋವಿಡ್ ಶಿಷ್ಟಾಚಾರಗಳನ್ನು ಚಾಚೂ ತಪ್ಪದೆ ಪಾಲಿಸಬೇಕು ಎಂದು ಡಾ. ಸಿ.ಎನ್. ಮಂಜುನಾಥ್ ತಿಳಿಸಿದರು.
Covid 19: ದೀಪಾವಳಿ ನಂತರ ದೇಶದ ಅಲ್ಲಲ್ಲಿ ಸೋಂಕು ಏರಿಕೆ, ಮತ್ತೊಂದು ದೊಡ್ಡ ಅಲೆ ? ಏನಂತಾರೆ ತಜ್ಞರು ?
ಲಸಿಕೆ ಪಡೆದವರಿಗೂ ಸೋಂಕು ಆತಂಕ:
ರಾಜ್ಯದಲ್ಲಿ ಕೋವಿಡ್-19(Covid19) ಪ್ರಕರಣ ಕಡಿಮೆ ಆಗಿರಬಹುದು. ಆದರೆ ವಿದೇಶದಲ್ಲಿ(Foreign) ಇನ್ನೂ ಕೋವಿಡ್ ಪ್ರಕರಣಗಳು ಇವೆ. ಅದೇ ರೀತಿ ಕೋವಿಡ್ ಲಸಿಕೆ ಪಡೆಯಲು ಸಾಕಷ್ಟು ಮಂದಿ ಬಾಕಿಯಿದ್ದಾರೆ. ಲಸಿಕೆ ಪಡೆದವರಿಗೂ ಸೋಂಕು ಬರುವ ಸಾಧ್ಯತೆ ಇದೆ. ಮರಣದ ಪ್ರಮಾಣ ಶೇ.2ರಷ್ಟಿದೆ. ಆದ್ದರಿಂದ ಕೋವಿಡ್ ಮೂರನೇ ಅಲೇ ಬರುವುದೇ ಇಲ್ಲ ಎಂದು ಹೇಳುವ ಸ್ಥಿತಿ ಇಲ್ಲ. ಕೊರೋನಾ(Coronavirus) ವೈರಾಣುವಿನ ರೂಪಾಂತರದ ಬಗ್ಗೆ ಏನನ್ನೂ ಹೇಳಲು ಸಾಧ್ಯವಿಲ್ಲ. ವೈರಾಣು ರೂಪಾಂತರಗೊಳ್ಳುವ ಸಾಧ್ಯತೆ ಇರುತ್ತದೆ. ಆದ್ದರಿಂದ ಜನರು ಕೋವಿಡ್ ಮುಗಿದೇ ಹೋಯಿತು ಎಂದು ಬೇಕಾಬಿಟ್ಟಿವರ್ತಿಸಬಾರದು ಎಂದು ಡಾ. ಮಂಜುನಾಥ ಅವರು ಹೇಳಿದರು.
ಕೋವಿಡ್ ಸಲಹಾ ಸಮಿತಿ ಮುಖ್ಯಸ್ಥ ಡಾ. ಎಂ.ಕೆ. ಸುದರ್ಶನ್ ಅವರ ಪ್ರಕಾರ, ದೇಶದಲ್ಲಿ(India) ಸದ್ಯ ಚಾಲ್ತಿಯಲ್ಲಿರುವ ಕೊರೋನಾ ವೈರಾಣು ಪ್ರಭೇದಗಳಿಂದ ಮೂರನೇ ಅಲೆ ಸೃಷ್ಟಿಸಾಧ್ಯವಿಲ್ಲ. ಸದ್ಯ ಕೋವಿಡ್ ಮತ್ತೆ ಏರಿಕೆ ಕಾಣುತ್ತಿರುವ ದೇಶಗಳಲ್ಲಿಯೂ ಹೊಸ ಪ್ರಭೇದ ಕಂಡು ಬಂದಿಲ್ಲ. ಆದ್ದರಿಂದ ನವೆಂಬರ್ ಅಂತ್ಯದವರೆಗೂ ಮೂರನೇ ಅಲೆ ಬರುವ ಸಾಧ್ಯತೆಯಿಲ್ಲ. ಆದರೆ ನಾವು ಈ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಬೇಕು. ವಿದೇಶದಿಂದ ಬರುವವರ ಕೋವಿಡ್ ಪರೀಕ್ಷೆಯ ಜೊತೆಗೆ ಪಾಸಿಟಿವ್ ಕಂಡು ಬಂದರೆ ಅವರ ಸಂಪರ್ಕ ಪತ್ತೆ ಮತ್ತು ವೈರಾಣು ಪ್ರಬೇಧ ಪತ್ತೆ ಪರೀಕ್ಷೆಯನ್ನು ಆದ್ಯತೆಯ ಮೇಲೆ ನಡೆಸಬೇಕು ಎಂದು ಅವರು ಸಲಹೆ ನೀಡಿದರು.
ಡಾ. ವಿ. ರವಿ ಅವರು ವಿದೇಶದಲ್ಲಿ ಜನರು ಕೋವಿಡ್ ಹೋಗೇ ಬಿಟ್ಟಿದೆ ಎಂದು ವರ್ತಿಸಿ ಮತ್ತೆ ಸಮಸ್ಯೆಯನ್ನು ಆಹ್ವಾನಿಸಿಕೊಂಡಿದ್ದಾರೆ. ಅಲ್ಲಿ ಮಾಸ್ಕ್ ಧಾರಣೆ, ಸಾಮಾಜಿಕ ಅಂತರದ ಪಾಲನೆ, ಸ್ವಚ್ಛತೆ, ಲಸಿಕಾಕರಣ ಮುಂತಾದ ಕೋವಿಡ್ ನಿಗ್ರಹ ಕ್ರಮಗಳನ್ನು ಪಾಲಿಸದೆ ಜನ ಮೈಮರೆತು ವರ್ತಿಸುತ್ತಿರುವುದರಿಂದ ಕೋವಿಡ್ ಸೋಂಕು ಮತ್ತೆ ಹೆಚ್ಚಾಗಿದೆ ಎಂದು ವಿಶ್ಲೇಷಿಸಿದರು.
ನಮ್ಮಲ್ಲಿ ಲಸಿಕಾಕರಣ(Vaccine) ಚೆನ್ನಾಗಿ ಆಗಿದೆ. ಜನರು ಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಆದರೆ ಜನ ಚುನಾವಣೆ(Election), ಜಾತ್ರೆ ಎಂದು ಮತ್ತೆ ಗುಂಪು ಸೇರುವ ಚಟುವಟಿಕೆ ನಡೆಸಿ ಅಪಾಯಕ್ಕೆ ಆಹ್ವಾನ ನೀಡಬಾರದು. ಒಂದು ವೇಳೆ ಮೂರನೇ ಅಲೆ ಬಂದರೂ ಲಸಿಕಾಕರಣದಿಂದಾಗಿ ಸೋಂಕಿನ ತೀವ್ರತೆ ಮತ್ತು ಸಾವಿನ ಪ್ರಮಾಣ ಕಡಿಮೆ ಇರುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ರಾಜ್ಯದಲ್ಲಿ ಸದ್ಯದ ಕೋವಿಡ್ ಪರಿಸ್ಥಿತಿ ಆಶಾದಾಯಕವಾಗಿದೆ. ಪ್ರತಿದಿನ 7-8 ಜಿಲ್ಲೆಯಲ್ಲಿ ಹೊಸ ಸೋಂಕಿತರು ಪತ್ತೆಯಾಗುತ್ತಿಲ್ಲ. ಇನ್ನು 7-8 ಜಿಲ್ಲೆಯಲ್ಲಿ ಒಂದಂಕಿಯಲ್ಲಿ ಪ್ರಕರಣ ಬರುತ್ತಿದೆ. ಹಾಗೆಂದು ನಾವು ಮೈಮರೆಯಬಾರದು. ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳ ಪಾಲನೆಯನ್ನು ಮಾಡಲೇ ಬೇಕು. ಗುಂಪು ಸೇರುವುದು, ಅನಾವಶ್ಯಕ ಪ್ರಯಾಣಗಳನ್ನು ಮಾಡಬಾರದು ಎಂದು ಅವರು ಹೇಳಿದರು.