ಡೀಲಿಂಗ್‌ ಮಾಡಿದ್ದು ಯಾರು? ಈ ಬಗ್ಗೆ ತನಿಖೆ ಆಗಬೇಕಲ್ಲವೇ?, ಎಂಟಿಬಿ ಹೇಳಿಕೆ ಬಳಸಿ ಸರ್ಕಾರದ ವಿರುದ್ಧ ಸರಣಿ ಟ್ವೀಟ್‌ ದಾಳಿ

ಬೆಂಗಳೂರು(ಅ.30): ಪೊಲೀಸ್‌ ಇನ್ಸ್‌ಪೆಕ್ಟರ್‌ ಸ್ಥಳ ನಿಯೋಜನೆಗೆ 70-80 ಲಕ್ಷ ರು. ಲಂಚ ನೀಡಬೇಕಿರುವ ಕುರಿತು ಸಚಿವ ಎಂ.ಟಿ.ಬಿ. ನಾಗರಾಜ್‌ ಆಡಿರುವ ಮಾತನ್ನು ಸರ್ಕಾರದ ವಿರುದ್ಧ ಮತ್ತೊಂದು ಅಸ್ತ್ರವಾಗಿ ಪ್ರಯೋಗಿಸಲು ರಾಜ್ಯ ಕಾಂಗ್ರೆಸ್‌ ಮುಂದಾಗಿದೆ. ಇದರ ಭಾಗವಾಗಿ ಸರಣಿ ಟ್ವೀಟ್‌ಗಳ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಕಿಡಿಕಾರಿರುವ ಕಾಂಗ್ರೆಸ್‌, ‘ಪೇಸಿಎಂ ಎಂದ ತಕ್ಷಣ ಉರಿದು ಬೀಳುವ ಬಸವರಾಜ ಬೊಮ್ಮಾಯಿ ಅವರೇ, ಪೋಸ್ಟಿಂಗ್‌ ಪಡೆಯಲು 70-80 ಲಕ್ಷ ರು. ನೀಡಿದ್ದು ಯಾರಿಗೆ? ಈ ಡೀಲಿಂಗ್‌ ಮಾಡುವುದು ಯಾರು? ತನಿಖೆ ನಡೆಸಬೇಕಲ್ಲವೇ?’ ಎಂದು ಪ್ರಶ್ನಿಸಿದೆ.

ಎಂಟಿಬಿ ನಾಗರಾಜ್‌ ಅವರು 40 ಪರ್ಸೆಂಟ್‌ ಭ್ರಷ್ಟಾಚಾರವನ್ನು ನೇರಾನೇರವಾಗಿ ಬಯಲಿಗಿಟ್ಟಿದ್ದಾರೆ. ನೇಮಕಾತಿ ಅಕ್ರಮ, ವರ್ಗಾವಣೆ ದಂಧೆಗಳು ನಡೆದಿರುವುದನ್ನೂ ಸ್ಪಷ್ಟಪಡಿಸಿದ್ದಾರೆ. ಆಪರೇಷನ್‌ ಕಮಲದ ಮೂಲಕ ಹೋದ ಸಚಿವ ಎಂಟಿಬಿ ನಾಗರಾಜ್‌ ಅವರಿಗೆ ಸೋತರೂ ಸಚಿವ ಸ್ಥಾನ ಕೊಟ್ಟು ಮನ್ನಣೆ ನೀಡಲಾಗಿದೆ. ಹಾಗಾಗಿ ಅವರ ಮಾತನ್ನೂ ಗಂಭೀರವಾಗಿ ಪರಿಗಣಿಸಬೇಕು. 80 ಲಕ್ಷ ಪಾವತಿಯ ಬಗ್ಗೆ ಅವರಿಗೆ ಸ್ಪಷ್ಟಮಾಹಿತಿ ಇರುವಾಗ ತನಿಖೆಗೆ ನೋಟಿಸ್‌ ನೀಡದಿರುವುದೇಕೆ? ಸುಮೋಟೋ ಕೇಸ್‌ ದಾಖಲಿಸಿ ಅವರ ಮಾತಿನ ಮರ್ಮ ಶೋಧಿಸಬೇಕಲ್ಲವೇ ಬೊಮ್ಮಾಯಿ ಅವರೇ? ಎಂದು ಕಿಡಿಕಾರಿದೆ.

ಸಿಎಂಗೆ ತಾಕತ್ತಿದ್ದರೆ ಇನ್‌ಸ್ಪೆಕ್ಟರ್‌ ಸಾವಿನ ಬಗ್ಗೆ ನ್ಯಾಯಾಂಗ ತನಿಖೆ ನಡೆಸಲಿ: ರಾಮಲಿಂಗಾರೆಡ್ಡಿ

ಈ ಹಿಂದೆ ಸರ್ಕಾರವು ನಾನು ಭ್ರಷ್ಟ ಅಧಿಕಾರಿಯಲ್ಲ, ನಾನು ಲಂಚ ಪಡೆಯುವುದಿಲ್ಲ ಎಂದು ಅಧಿಕಾರಿಗಳು ಬೋರ್ಡ್‌ ಹಾಕುವ ಅಭಿಯಾನ ಶುರು ಮಾಡಿತ್ತು. ಮುಖ್ಯಮಂತ್ರಿ ಕಚೇರಿಯಲ್ಲಿ ಯಾವ ಹುದ್ದೆಗೆ ಎಷ್ಟೆಷ್ಟು ದರ ಎಂಬ ಬೋರ್ಡ್‌ ಹಾಕಬೇಕು. ಹಾಗೆಯೇ ಲಂಚ ಪಡೆಯಲಾಗುವುದು ಹಾಗೂ ಲಂಚ ನೀಡಲಾಗುವುದು ಎಂಬ ಬೋರ್ಡ್‌ ಹಾಕಿಕೊಳ್ಳಲಿ ಎಂದು ಟೀಕಿಸಿದೆ.