* ತುರ್ತುಸ್ಥಿತಿ ಹೇರಿ ಕರಾಳ ಶಾಸನ ಬರೆದಿದ್ದ ಕಾಂಗ್ರೆಸ್‌* ಅಕ್ಷಮ್ಯ ಆಪರಾಧವನ್ನು ಒಪ್ಪಿಕೊಳ್ಳಬೇಕು* ಜಯಪ್ರಕಾಶ್‌ ನಾರಾಯಣ್‌ ಪುಣ್ಯಾತ್ಮನ ಹೋರಾಟದಿಂದ ತುರ್ತು ಪರಿಸ್ಥಿತಿ ಅಂತ್ಯ

ಬೆಂಗಳೂರು(ಜೂ.26): ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿ ಕರಾಳ ಶಾಸನ ಬರೆದಿರುವ ಕಾಂಗ್ರೆಸ್‌ ಪಕ್ಷವು ದೇಶದ ಜನತೆಯ ಕ್ಷಮೆ ಕೋರಬೇಕು. ಈ ಮೂಲಕ ತನ್ನ ತಪ್ಪನ್ನು ಒಪ್ಪಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಆಗ್ರಹಿಸಿದ್ದಾರೆ.

Add Asianetnews Kannada as a Preferred SourcegooglePreferred

ಶುಕ್ರವಾರ ತಮ್ಮ ನಿವಾಸದಲ್ಲಿ ತುರ್ತು ಪರಿಸ್ಥಿತಿ ಹೇರಿದ ದಿನವನ್ನು ಕರಾಳ ದಿನವಾಗಿ ಆಚರಣೆ ಮಾಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಕರಾಳ ಶಾಸನ ಜನಜೀವನದ ಮೇಲೆ ಬೀರಿದ ದುಷ್ಪರಿಣಾಮ 46 ವರ್ಷಗಳಾದ ನಂತರವೂ ಕಾಣುತ್ತಿದೆ. ಇದಕ್ಕಾಗಿ ಕಾಂಗ್ರೆಸ್‌ ದೇಶದ ಜನರಲ್ಲಿ ಕ್ಷಮೆ ಕೇಳಬೇಕು. ಆ ಮೂಲಕ ಅವರು ಮಾಡಿದ ಅಕ್ಷಮ್ಯ ಆಪರಾಧವನ್ನು ಒಪ್ಪಿಕೊಳ್ಳಬೇಕು ಎಂದು ಒತ್ತಾಯಿಸಿದರು.

46 ವರ್ಷಗಳ ಹಿಂದೆ ಇದೇ ದಿನ ಆಗಿನ ಪ್ರಧಾನಿ ಇಂದಿರಾ ಗಾಂಧಿ ಯಾವುದೇ ಕಾರಣ ಇಲ್ಲದೇ ತುರ್ತು ಪರಿಸ್ಥಿತಿ ಘೋಷಿಸಿದ್ದರು. ಕೇವಲ ಖುರ್ಚಿ ಉಳಿವಿಗಾಗಿ ಇಂತಹ ತೀರ್ಮಾನ ಮಾಡಿದ್ದರು. ದೇಶದ ಅನೇಕ ನಾಯಕರು ಜೈಲುವಾಸ ಅನುಭವಿಸಬೇಕಾಯಿತು. ವಾಕ್‌ ಸ್ವಾತಂತ್ರ್ಯ, ರಾಜಕೀಯ ಸ್ವಾತಂತ್ರ್ಯ ಕಸಿದುಕೊಳ್ಳಲಾಯಿತು. ಇದನ್ನು ಅಂದು ಹಲವು ಪತ್ರಿಕೆಗಳು ಖಂಡಿಸಿ ಪ್ರತಿಭಟಿಸಿದ್ದವು ಎಂದು ತಿಳಿಸಿದರು.

ತುರ್ತು ಪರಿಸ್ಥಿತಿಗೆ 46 ವರ್ಷ: ಕಪ್ಪುದಿನವೆಂದು ಟ್ವೀಟ್ ಮಾಡಿದ ಮೋದಿ!

ತುರ್ತು ಪರಿಸ್ಥಿತಿ ವೇಳೆ ಜೈಲು ಸೇರಿದ್ದ ನಟಿ ಸ್ನೇಹಲತಾ ಜೈಲಿನಲ್ಲಿ ಸಾವನ್ನಪ್ಪಿದ್ದರು. ನಾನು ಸೇರಿದಂತೆ ಅನೇಕ ಕಾರ್ಯಕರ್ತರು ಜೈಲುವಾಸ ಅನುಭವಿಸಬೇಕಾಯಿತು. ಮಾಜಿ ಪ್ರಧಾನಿ ವಾಜಪೇಯಿ, ಹಿರಿಯ ಮುಖಂಡರಾದ ಅಡ್ವಾಣಿ, ಜಾಜ್‌ರ್‍ ಫರ್ನಾಂಡಿಸ್‌, ಎಚ್‌.ಡಿ.ದೇವೇಗೌಡ ಸೇರಿದಂತೆ ಎಲ್ಲರನ್ನೂ ಬಂಧಿಸಿ ಬೆಂಗಳೂರು ಸೆಂಟ್ರಲ್‌ ಜೈಲಿನಲ್ಲಿಟ್ಟಿದ್ದರು. ನಮ್ಮನ್ನು ಮುಗಿಸುವ ಪ್ರಯತ್ನವೂ ನಡೆದಿತ್ತು. ತದನಂತರ ನಡೆದ ಲೋಕಸಭೆ ಚುನಾವಣೆಯಲ್ಲಿ ಜನ ಅವರನ್ನು ತಿರಸ್ಕರಿಸಿದರು. ಬಿಜೆಪಿಯಿಂದ ಅಂದು ಬಂಧಿತರಾದವರ ಮನೆಗೆ ಹೋಗಿ ಗೌರವಿಸುವ ಕೆಲಸ ಮಾಡಲಾಗುತ್ತಿದೆ. ಮನೆ ಮನೆಗೆ ಹೋಗಿ ಗುರುತಿಸಿ ಸನ್ಮಾನ ಮಾಡುತ್ತಿರುವ ನಮ್ಮ ಕಾರ್ಯಕರ್ತರಿಗೆ ಧನ್ಯವಾದ ಹೇಳುತ್ತೇನೆ ಎಂದರು.

ಜೈಲಿನಲ್ಲಿದ್ದಾಗ ಅಲ್ಲಿಯೇ ನಮ್ಮನ್ನು ಮುಗಿಸುವ ಪ್ರಯತ್ನ ಮಾಡಿದ್ದನ್ನು ಜೀವನ ಪೂರ್ತಿ ನೆನಪಿಟ್ಟುಕೊಳ್ಳಬೇಕು. ಜಯಪ್ರಕಾಶ್‌ ನಾರಾಯಣ್‌ ಪುಣ್ಯಾತ್ಮನ ಹೋರಾಟದಿಂದ ತುರ್ತು ಪರಿಸ್ಥಿತಿ ಅಂತ್ಯವಾಯಿತು ಎಂದು ಹಳೆಯ ಘಟನೆಗಳನ್ನು ಮೆಲುಕು ಹಾಕಿದರು. ಇದೇ ವೇಳೆ ಪಕ್ಷದ ಕಾರ್ಯಕರ್ತರು ಯಡಿಯೂರಪ್ಪ ಅವರನ್ನು ಸನ್ಮಾನಿಸಿದರು.