ಶಾಸಕ ಭರತ್ ರೆಡ್ಡಿ ಅವರು ಮುಸ್ಲಿಂ ಸಮುದಾಯಕ್ಕೆ ನೀಡಿದ ಬೆಂಬಲವನ್ನು ಪುನರುಚ್ಚರಿಸಿದರು ಮತ್ತು ವಕ್ಫ್ ಬೋರ್ಡ್ ಆಸ್ತಿಯನ್ನು ದೇವರ ಆಸ್ತಿ ಎಂದು ಕರೆದರು, ಅದರ ರಕ್ಷಣೆ ಅವರ ಜವಾಬ್ದಾರಿ ಎಂದು ಹೇಳಿದರು. ಅವರು ಮಸೀದಿಗಳು, ಶಾದಿ ಮಹಲ್‌ಗಳು ಮತ್ತು ಅಲ್ಪಸಂಖ್ಯಾತ ಕಾಲೋನಿಗಳಿಗೆ ಅನುದಾನವನ್ನು ಘೋಷಿಸಿದರು.

ವಕ್ಫ್ ಬೋರ್ಡ್ ಆಸ್ತಿ ಅದು ದೇವರಿಗೆ ಸೇರಿದ್ದು, ಅದರ ರಕ್ಷಣೆ ನಮ್ಮ ಹೊಣೆ: ಶಾಸಕ ಭರತ್ ರೆಡ್ಡಿ

ಬಳ್ಳಾರಿ (ಫೆ.9): ಮೊದಲ ಸ್ವಾತಂತ್ರ್ಯ ಸಂಗ್ರಾಮದಿಂದ ಇಲ್ಲಿಯವರೆಗೆ ಮುಸ್ಲಿಂರು ದೇಶಕ್ಕಾಗಿ ತ್ಯಾಗ ಬಲಿದಾನ ಮಾಡುತ್ತಿದ್ದಾರೆ ಅವರ ಕೊಡುಗೆಯೂ ದೊಡ್ಡದಾಗಿದೆ ಎಂದು ನಗರ ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು. ಮುಸ್ಲಿಂ ಸಮುದಾಯದ ವತಿಯಿಂದ ಏರ್ಪಡಿಸಿದ್ದ ಶಾಸಕರ ಸಂಸದರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು

ಬಳ್ಳಾರಿ ನಗರದ 21 ಮಸೀದಿಗಳಿಗೆ 2.20 ಕೋಟಿ ರೂ.ಗಳ ಅನುದಾನ ತಂದಿರುವೆ. ಅದೇ ರೀತಿ ಎರಡು ಶಾದಿ ಮಹಲ್'ಗಳಿಗೆ 3 ಕೋಟಿ ರೂ.ಗಳ ಅನುದಾನ ತಂದಿರುವೆ. ಚುನಾವಣೆಯ ಸಂದರ್ಭದಲ್ಲಿ ಶಾದಿ ಮಹಲ್ ಬಗ್ಗೆ ಪ್ರಸ್ತಾಪ ಮಾಡಿದಾಗ ಅದು ಆಗದ ಕೆಲಸ ಎಂದು ವೃದ್ಧೆಯೊಬ್ಬರು ಹೇಳಿದ್ದರು ಆದರೆ ಇಂದು ಒಂದು ಶಾದಿ ಮಹಲ್ ಅಲ್ಲ ಎರಡು ಶಾದಿ ಮಹಲ್'ಗಳಿಗೆ ಅನುದಾನ ತಂದಿರುವೆ ಎಂದರು.

ಇದನ್ನೂ ಓದಿ: ಸಚಿವ ಜಮೀರ್ ಬದುಕಿದ್ದಾನೋ, ಸತ್ತಿದ್ದಾನೋ ಗೊತ್ತಿಲ್ಲ: ರಾಮುಲು ಆಕ್ರೋಶ

 ಅಲ್ಪಸಂಖ್ಯಾತ ಸಮುದಾಯಗಳ ಕಾಲೋನಿಗಳ ಅಭಿವೃದ್ಧಿಗಾಗಿ 5 ಕೋಟಿ ರೂ.ಗಳ ಕಾಮಗಾರಿಗೆ ಚಾಲನೆ ನೀಡಿದ್ದೇನೆ. ಹಿಂದೂ ಮುಸ್ಲಿಂರ ಐಕ್ಯತೆ ನಮ್ಮ ಸರ್ಕಾರದ ಮೊದಲ ಆದ್ಯತೆ. ಕೋಮು ಸೌಹಾರ್ದತೆ ಕಾಪಾಡುವ ಜವಾಬ್ದಾರಿ ನಮ್ಮದು ಎಂಬ ಭರವಸೆ ನೀಡುತ್ತೇವೆ ಎಂದರು.

ವಕ್ಫ್ ಮಂಡಳಿಯ ಆಸ್ತಿ ಅದು ದೇವರಿಗೆ ಸೇರಿದ್ದು, ಅದರ ರಕ್ಷಣೆ ನಮ್ಮ ಹೊಣೆಯಾಗಿದೆ, ಬಳ್ಳಾರಿ ನಗರದ ಹಾವಂಭಾವಿಯಲ್ಲಿ ಕೆಲವರು ಒತ್ತುವರಿ ಮಾಡಿದ್ದರು, ಆದರೆ ನಾವು ನ್ಯಾಯಾಲಯದ ಮೊರೆ ಹೋಗಿ ಆಸ್ತಿಯನ್ನು ರಕ್ಷಣೆ ಮಾಡಿದ್ದೇವೆ ಎಂದರು. ನನ್ನ ತಂದೆ ತಾಯಿಯ ಪುಣ್ಯ, ಅಲ್ಲಾಹನ ಕೃಪೆಯಿಂದಾಗಿ ನಾನು ಶಾಸಕನಾದೆ ಎಂದರು.