ಸಚಿವ ಮುರುಗೇಶ್‌ ನಿರಾಣಿ ಅವರಿಗೆ ಮಾತನಾಡಲು ಅವಕಾಶ ನೀಡುವಂತೆ ಒತ್ತಾಯಿಸಿ ಪ್ರತಿಪಕ್ಷ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಸದಸ್ಯರು ಒತ್ತಾಯಿಸಿ ಸಭಾಪತಿಗಳ ಮುಂದೆ ಧರಣಿ ನಡೆಸಿದ ಪ್ರಸಂಗ ನಡೆಯಿತು.

ವಿಧಾನ ಪರಿಷತ್‌ (ಡಿ.21): ಸಚಿವ ಮುರುಗೇಶ್‌ ನಿರಾಣಿ ಅವರಿಗೆ ಮಾತನಾಡಲು ಅವಕಾಶ ನೀಡುವಂತೆ ಒತ್ತಾಯಿಸಿ ಪ್ರತಿಪಕ್ಷ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಸದಸ್ಯರು ಒತ್ತಾಯಿಸಿ ಸಭಾಪತಿಗಳ ಮುಂದೆ ಧರಣಿ ನಡೆಸಿದ ಪ್ರಸಂಗ ನಡೆಯಿತು. ಪ್ರಶ್ನೋತ್ತರ ವೇಳೆ ಕಬ್ಬಿನ ದರ ಹೆಚ್ಚಳ, ಕಬ್ಬು ಉಪ ಉತ್ಪನ್ನಗಳ ಲಾಭಾಂಶದಲ್ಲಿ ರೈತರಿಗೆ ಪಾಲು ನೀಡುವ ಕುರಿತಂತೆ ಕಾಂಗ್ರೆಸ್‌ ಸದಸ್ಯರಾದ ಪ್ರಕಾಶ್‌ ರಾಥೋಡ್‌ ಹಾಗೂ ಪಿ.ಆರ್‌. ರಮೇಶ್‌ ಅವರು ಕೇಳಿದ ಪ್ರಶ್ನೆಗೆ ಸಕ್ಕರೆ ಸಚಿವ ಶಂಕರಪಾಟೀಲ್‌ ಮುನೇನಕೊಪ್ಪ ಅವರು, ಇತ್ತೀಚೆಗೆ ವಿವಿಧ ಸಕ್ಕರೆ ಕಾರ್ಖಾನೆಗಳ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಕಬ್ಬು ತೂಕದಲ್ಲಿ ರೈತರಿಗೆ ಮೋಸ ನಡೆದಿರುವುದು ಕಂಡುಬಂದಿಲ್ಲ ಎಂದು ಹೇಳಿದರು.

Add Asianetnews Kannada as a Preferred SourcegooglePreferred

ಆಗ ಮಧ್ಯ ಪ್ರವೇಶಿಸಿದ ಬಿಜೆಪಿಯ ಲಕ್ಷ್ಮಣ ಸವದಿ, ಪ್ರತಿ ಟನ್‌ಗೆ ನೂರಿನ್ನೂರು ಕೆ.ಜಿ. ತೂಕದಲ್ಲಿ ವ್ಯತ್ಯಾಸವಾಗಬಹುದು. ಆದರೆ, 20 ಟನ್‌ ಕಬ್ಬಿನಲ್ಲಿ 18 ಟನ್‌ ತೂಕ ಬರುವುದು ರೈತರಿಗೆ ಮಾಡುತ್ತಿರುವ ಮಹಾ ಮೋಸವಾಗಿದೆ ಎಂದರು. ಜೊತೆಗೆ, ಇತ್ತೀಚೆಗೆ ವಾಟ್ಸ್‌ಆಪ್‌ನಲ್ಲಿ ಗರ್ಭಿಣಿ ಮಹಿಳೆಯೊಬ್ಬರು ಕಬ್ಬು ಕೊಯ್ಯುವ ಹಾಗೂ ಹೆರಿಗೆಯಾದ ಮೂರೇ ದಿನದಲ್ಲಿ ಮತ್ತೆ ಕೂಲಿ ಕೆಲಸಕ್ಕೆ ಹೋದ ವಿಡಿಯೋ ನೋಡಿದೆ. ಇದನ್ನು ನೋಡಿ ನನಗೆ ಕಣ್ಣೀರು ಬಂದಿತು. ಸಕ್ಕರೆ ಕಾರ್ಖಾನೆ ಮಾಲಿಕರು ಇನ್ನಾದರೂ ರೈತರಿಗೆ ಮೋಸ ಮಾಡಬಾರದು ಎಂದು ಹೇಳಿದರು.

ವರ್ತೂರು ಪ್ರಕಾಶ್‌ ಹುಟ್ಟುಹಬ್ಬದಲ್ಲಿ ಬಿರಿಯಾನಿಗಾಗಿ ಕಿತ್ತಾಟ: ಪೊಲೀಸರಿಂದ ಲಾಠಿ ಚಾರ್ಜ್‌

ಆಗ ಸಚಿವ ಮುರುಗೇಶ್‌ ನಿರಾಣಿ ಎದ್ದು ಮಾತನಾಡಲು ಮುಂದಾದಾಗ ಸಭಾಪತಿ ಮಲ್ಕಾಪುರೆ ಅವರು ಮಾತನಾಡಲು ಅವಕಾಶ ನೀಡಲಿಲ್ಲ. ಇದಕ್ಕೆ ಪ್ರತಿಪಕ್ಷ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಸದಸ್ಯರು ಹಿರಿಯ ಸಚಿವರು ಮಾತನಾಡಲು ಅವಕಾಶ ನೀಡದೇ ಇರುವುದು ಸರಿಯಲ್ಲ. ಅವರಿಗೆ ಮಾತನಾಡಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು. ಜೆಡಿಎಸ್‌ ಸದಸ್ಯ ಮರಿತಿಬ್ಬೇಗೌಡ ಅವರು ಒಂದು ಹೆಜ್ಜೆ ಮುಂದೆ ಹೋಗಿ ಸಭಾಪತಿಗಳ ಮುಂದಿನ ಆವರಣದಲ್ಲಿ ಬಂದು ನಿಂತರು. ಮರಿತಿಬ್ಬೇಗೌಡ ಅವರ ಪ್ರತಿಭಟನೆಗೆ ಆಕ್ಷೇಪಿಸಿದ ಬಿಜೆಪಿ ಸದಸ್ಯರು, ಪ್ರಶ್ನೋತ್ತರಕ್ಕೆ ಇಷ್ಟೊಂದು ದೀರ್ಘ ಚರ್ಚೆ ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಹಂತದಲ್ಲಿ ಪ್ರತಿಪಕ್ಷ ಹಾಗೂ ಆಡಳಿತ ಪಕ್ಷದ ನಡುವೆ ಕೊಂಚ ವಾದಗಳು ನಡೆದವು. ಕೊನೆಗೆ ಸಭಾಪತಿಗಳು ನಿರಾಣಿ ಅವರಿಗೆ ಮಾತನಾಡಲು ಅವಕಾಶ ನೀಡಿದರು. ಮುರುಗೇಶ ನಿರಾಣಿ ಅವರು ಪ್ರತಿ ಟನ್‌ ಕಬ್ಬಿಗೆ ಎಷ್ಟುಪ್ರಮಾಣದ ಎಥೆನಾಲ್‌ ಉತ್ಪಾದನೆಯಾಗುತ್ತದೆ, ಎಷ್ಟುಆದಾಯ ಬರುತ್ತದೆ ಎಂಬುದನ್ನು ನಾನು ಹೇಳಲು ಹೊರಟಿದ್ದೆ ಅಷ್ಟೇ. ಸಭಾಪತಿಗಳು ಯಾಕೆ ಮಾತನಾಡಲು ನಿರಾಕರಿಸಿದರೋ ಎಂಬುದು ಗೊತ್ತಾಗಲಿಲ್ಲ ಎಂದು ಹೇಳಿದರು. ಮುಂದುವರೆದು ಎಥಾನಾಲ್‌ ಉತ್ಪಾದನೆ, ಆದಾಯದ ಬಗ್ಗೆ ಸದನಕ್ಕೆ ತಿಳಿಸಿದರು. 

ಸುವರ್ಣಸೌಧ ಬಳಿ ಸಾರಿಗೆ ನೌಕರರ ಅಹೋರಾತ್ರಿ ಧರಣಿ: ನಿರ್ವಾಹಕಿ ಜಯಶ್ರೀ ಅಸ್ವಸ್ಥ

ಆಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಇದೊಂದು ಗಂಭೀರ ವಿಷಯವಾಗಿದ್ದು, ಅರ್ಧ ಗಂಟೆ ಚರ್ಚೆಗೆ ಅವಕಾಶ ನೀಡುವಂತೆ ಮನವಿ ಮಾಡಿದರು. ಇದಕ್ಕೆ ಸಭಾಪತಿಗಳು ಅವಕಾಶ ನೀಡುವುದಾಗಿ ಹೇಳಿ ಮುಂದಿನ ಪ್ರಶ್ನೆ ಕೈಗೆತ್ತಿಕೊಂಡರು. ಆಗ ಮತ್ತೆ ಎದ್ದು ನಿಂತ ಪ್ರತಿಪಕ್ಷಗಳ ಸದಸ್ಯರು ನಿರಾಣಿ ಅವರಿಗೆ ಮಾತನಾಡಲು ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದರು. ಕೊನೆಗೆ ಒತ್ತಡಕ್ಕೆ ಮಣಿದು ಮಾತನಾಡುವಂತೆ ನಿರಾಣಿ ಅವರಿಗೆ ಸಭಾಪತಿಗಳು ಸೂಚಿಸಿದರು.