*   ಭ್ರಷ್ಟಾಚಾರ ಕಾಯ್ದೆ, ನ್ಯಾಯಾಂಗ ತನಿಖೆಗೆ ಆಗ್ರಹ*  10 ತಂಡದಿಂದ 5 ದಿನಗಳ ಕಾಲ ಸರಣಿ ಪ್ರತಿಭಟನೆ*  ಈಶ್ವರಪ್ಪ ರಾಜೀನಾಮೆ ಅಂಗೀಕರಿಸಿದ ಗೌರ್ನರ್‌ 

ಬೆಂಗ​ಳೂ​ರು(ಏ.17): ಗುತ್ತಿಗೆದಾರ ಸಂತೋಷ್‌ ಪಾಟೀಲ್‌(Santosh Patil Suicide) ಆತ್ಮಹತ್ಯೆ ಪ್ರಕರಣದ ಆರೋಪಿಯಾಗಿರುವ ಕೆ.ಎಸ್‌.ಈಶ್ವರಪ್ಪ(KS Eshwarappa) ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಸಾಲದು, ಅವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿ ಪ್ರಕರಣ ದಾಖಲಿಸಬೇಕು. ಅಲ್ಲದೆ, ಬಂಧಿಸಿ ತನಿಖೆಗೆ ಒಳಪಡಿಸಬೇಕು ಹಾಗೂ ಇಡೀ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರ​ಹಿ​ಸಿ ಕಾಂಗ್ರೆಸ್‌ ಪಕ್ಷ ಶನಿವಾರ ತನ್ನ 5 ದಿನಗಳ ರಾಜ್ಯವ್ಯಾಪಿ ಸರಣಿ ಪ್ರತಿಭಟನೆಗೆ ಚಾಲನೆ ನೀಡಿತು.

Add Asianetnews Kannada as a Preferred SourcegooglePreferred

ಹೋರಾಟದ ಅಂಗವಾಗಿ ಹಿರಿಯ ಕಾಂಗ್ರೆಸ್‌(Congress) ಮುಖಂಡರ ನೇತೃತ್ವದಲ್ಲಿ 9 ತಂಡಗಳನ್ನು ರಚಿಸಲಾಗಿದ್ದು, ಚಿಕ್ಕಮಗಳೂರಿ​ನಲ್ಲಿ ವಿಪಕ್ಷ ನಾಯಕ ಸಿದ್ದ​ರಾ​ಮ​ಯ್ಯ ಮತ್ತು ರಾಮ​ನ​ಗ​ರ​ದಲ್ಲಿ ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌(DK Shivakumar) ನೇತೃತ್ವದಲ್ಲಿ ಪ್ರತಿಭಟನೆಗಳು ನಡೆದವು. ಶಿರ​ಸಿ​ಯಲ್ಲಿ ಕೆಪಿ​ಸಿಸಿ ಕಾರ್ಯಾ​ಧ್ಯಕ್ಷ ಸತೀಶ್‌ ಜಾರ​ಕಿ​ಹೊಳಿ, ಹೊಸ​ಪೇ​ಟೆ​ಯಲ್ಲಿ ಮಾಜಿ ಸಚಿವ ಎಚ್‌.​ಕೆ.​ಪಾ​ಟೀಲ್‌, ಉಡು​ಪಿ​ಯಲ್ಲಿ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪ​ರ​ಮೇ​ಶ್ವರ್‌, ಮಂಗ​ಳೂ​ರಿ​ನಲ್ಲಿ ವಿಧಾ​ನ​ಸಭೆ ವಿಪಕ್ಷ ಉಪ​ನಾ​ಯಕ ಯು.ಟಿ.​ಖಾ​ದರ್‌ ನೇತೃತ್ವದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಹೋರಾಟ ನಡೆಸಿದರು.

ಕಾಫಿನಾಡಿನಲ್ಲಿ ಈಶ್ವರಪ್ಪ ವಿರುದ್ಧ ಕಾಂಗ್ರೆಸ್ ಕಹಳೆ, ಸೆಲ್ಪಿಗೆ ಯುವತಿ ಪಟ್ಟು

ಚಿಕ್ಕಮಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಕೆ.ಎಸ್‌.ಈಶ್ವರಪ್ಪ ಅವರ ಬಂಧನದ ಅಣಕು ಪ್ರದರ್ಶನ ಮಾಡಿದರು. ಈ ವೇಳೆ ಪ್ರತಿ​ಭ​ಟನಾ ಸಭೆ​ಯಲ್ಲಿ ಮಾತ​ನಾ​ಡಿದ ವಿಪಕ್ಷ ನಾಯಕ ಸಿದ್ದ​ರಾ​ಮ​ಯ್ಯ, ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಈಶ್ವರಪ್ಪ ಅವರ ವಿರುದ್ಧ ಪ್ರಕರಣ ದಾಖಲಿಸಿ ಕೂಡಲೇ ಅವರನ್ನು ದಸ್ತಗಿರಿ ಮಾಡಬೇಕು ಎಂದು ಆಗ್ರ​ಹಿ​ಸಿ​ದ​ರು.

ಇನ್ನು ರಾಮ​ನ​ಗ​ರ​ದಲ್ಲಿ ಮಾತ​ನಾ​ಡಿದ ಡಿ.ಕೆ.​ಶಿವಕುಮಾರ್‌, ಸಂತೋಷ್‌ ಆತ್ಮ​ಹತ್ಯೆ ಪ್ರಕ​ರ​ಣದ ತನಿಖೆ ನಡೆ​ಸಲು ರಾಜ್ಯ ಸರ್ಕಾ​ರಕ್ಕೆ ತಾಕತ್ತು ಇಲ್ಲ​ದಿ​ದ್ದರೆ ಸಿಬಿ​ಐಗೆ(CBI) ವಹಿ​ಸಲಿ ಎಂದರು. ಶಿರ​ಸಿ​ಯಲ್ಲಿ ಮಾತ​ನಾ​ಡಿದ ಸತೀಶ್‌ ಜಾರ​ಕಿ​ಹೊಳಿ, ಕಾಂಗ್ರೆಸ್‌ ಹೋರಾಟಕ್ಕೆ ಮಣಿದು ಬಿಜೆಪಿ ಸರ್ಕಾರ ಈಶ್ವರಪ್ಪ ಅವರ ರಾಜೀನಾಮೆ ಪಡೆದಿದೆ. ಅವರನ್ನು ಜೈಲಿಗಟ್ಟುವವರೆಗೂ ಎರಡನೇ ಹಂತದ ಪ್ರತಿಭಟನೆ ರಾಜ್ಯದ(Karnataka) ಎಲ್ಲ ಜಿಲ್ಲೆ, ತಾಲೂಕುಗಳಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ತಿಳಿ​ಸಿ​ದ​ರು.

ಈ ಪ್ರಕರಣದಲ್ಲಿ ಈಶ್ವರಪ್ಪನವರೇ ಎ1 ಆರೋಪಿ, ಆದ್ದರಿಂದ ಎ1 ಆರೋಪಿಯನ್ನು ಬಂಧನ ಮಾಡಬೇಕಲ್ವಾ ಎಂದು ಉಡು​ಪಿ​ಯಲ್ಲಿ ಪ್ರಶ್ನಿ​ಸಿದ ಮಾಜಿ ಉಪಮುಖ್ಯಮಂತ್ರಿ ಪರ​ಮೇ​ಶ್ವ​ರ್‌, ಮುಂದೆ ಇಂತ ಭ್ರಷ್ಟಾಚಾರ ಪ್ರಕರಣ ಆಗಬಾರದೆಂದರೆ ತಕ್ಷಣ ಈಶ್ವರಪ್ಪನವರ ಬಂಧನವಾಗಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಕಾರ್ಯಕಾರಣಿ ಸಭೆಯ ಮೊದಲ ದಿನದ ಸಂಪೂರ್ಣ ಮಾಹಿತಿ

ಕಾಂಗ್ರೆಸ್‌ ಸತ್ಯಹರಿಶ್ಚಂದ್ರರ ದಾಖಲೆ ಬಹಿರಂಗ: ಸಿಎಂ

ಬಹಳ ಶುದ್ಧಹಸ್ತರು, ಪವಿತ್ರ ಹಸ್ತದವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಯಾತ್ರೆ ಹೊರಟಿದ್ದಾರೆ. ಕಾಂಗ್ರೆಸ್ಸಿಗರ ಬೀರುಗಳಲ್ಲಿ ಭ್ರಷ್ಟಾಚಾರದ ಅಸ್ಥಿಪಂಜರಗಳು ಎಷ್ಟಿವೆ ಎಂದು ಮೊದಲು ಲೆಕ್ಕ ಹಾಕಿಕೊಳ್ಳಲಿ. ಕಾಂಗ್ರೆಸ್ಸಿನ ಸತ್ಯ ಹರಿಶ್ಚಂದ್ರರ ನೈಜ ದಾಖಲೆಗಳನ್ನು ಜನತೆಯ ಮುಂದೆ ತೆರೆದಿಡುವ ಕಾಲ ಬರುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಗುಡುಗಿದ್ದಾರೆ.

ಈಶ್ವರಪ್ಪ ರಾಜೀನಾಮೆ ಅಂಗೀಕರಿಸಿದ ಗೌರ್ನರ್‌

ಬೆಂಗಳೂರು: ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಪ್ರಕರಣದ ಸಂಬಂಧ ಸಚಿವ ಸ್ಥಾನಕ್ಕೆ ಕೆ.ಎಸ್‌.ಈಶ್ವರಪ್ಪ ನೀಡಿದ್ದ ರಾಜೀನಾಮೆಯನ್ನು ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಅಂಗೀಕರಿಸಿದ್ದಾರೆ.