ಸಂಪುಟ ವಿಸ್ತರಣೆ ಕಲಾಪಕ್ಕೆ ಮೊದಲೋ? ನಂತರವೋ?
ಮೊದಲೋ? ನಂತರವೋ? ಎಂಬ ವಿಚಾರ ಗರಿಗೆದರಿದೆ. ಸಿದ್ದರಾಮಯ್ಯ ಬಣ ಡಿ.5ರಂದು ಸಮನ್ವಯ ಸಮಿತಿ ಸಭೆ ನಡೆಸಿ ಅಲ್ಲೇ ಈ ಬಗ್ಗೆ ನಿರ್ಧಾರ ಮಡುತ್ತೇವೆ ಎಂದರೆ, ಬೆಳಗಾವಿ ಅಧಿವೇಶನದ ಬಳಿಕ ಸಂಪುಟ ವಿಸ್ತರಣೆ ಎಂದು ಕಾಂಗ್ರೆಸ್ ಹೈಕಮಾಂಡ್ ಮೂಲಗಳು ತಿಳಿಸಿವೆ.
ಬೆಂಗಳೂರು[ನ.30]: ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಹೈಕಮಾಂಡ್ ಭೇಟಿ ಮಾಡಿ ಗುರುವಾರ ನಗರಕ್ಕೆ ಹಿಂತಿರುಗುತ್ತಿದ್ದಂತೆಯೇ ಸಚಿವ ಸಂಪುಟ ವಿಸ್ತರಣೆ ಕುತೂಹಲ ಮತ್ತೆ ಆರಂಭಗೊಂಡಿದೆ. ಡಿ.5ರಂದು ಸಮನ್ವಯ ಸಮಿತಿ ಸಭೆ ನಡೆಯಲಿದ್ದು, ಅಲ್ಲಿ ಚರ್ಚಿಸಿ ಅಧಿವೇಶನದ ಒಳಗೆ ಸಂಪುಟ ವಿಸ್ತರಣೆ ಮಾಡುವುದು ಖಚಿತ ಎಂದು ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಆಪ್ತ ವಲಯ ಬಿಂಬಿಸುತ್ತಿದೆ.
ಆದರೆ, ಇದನ್ನು ಸ್ಪಷ್ಟವಾಗಿ ನಿರಾಕರಿಸುವ ಕಾಂಗ್ರೆಸ್ನ ಉನ್ನತ ಮೂಲಗಳು, ಅಧಿವೇಶನಕ್ಕೂ ಮುನ್ನ ನಿಗಮ ಮಂಡಳಿ ಅಧ್ಯಕ್ಷ- ಉಪಾಧ್ಯಕ್ಷರ ನೇಮಕವಾಗಲಿದೆ. ಸಂಪುಟ ವಿಸ್ತರಣೆಯೇನಿದ್ದರೂ ಅಧಿವೇಶನದ ನಂತರವೇ ಎಂದು ಖಚಿತವಾಗಿ ಹೇಳುತ್ತಿವೆ.
ಬೆಳಗಾವಿ ಅಧಿವೇಶನ ಡಿ.10ರಂದು ಆರಂಭವಾಗಲಿರುವ ಹಿನ್ನೆಲೆಯಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳು ಸಂಪುಟ ವಿಸ್ತರಣೆಗೆ ತೀವ್ರ ಒತ್ತಡ ನಿರ್ಮಾಣ ಮಾಡತೊಡಗಿದ್ದಾರೆ. ಈ ಹಿನ್ನೆಲೆಯಲ್ಲಿ ಡಿ.5ರಂದು ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಸಮನ್ವಯ ಸಮಿತಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಯಲಿದ್ದು, ಡಿಸೆಂಬರ್ ಆರು ಅಥವಾ ಏಳರಂದು ಕಾಂಗ್ರೆಸ್ ನಾಯಕರು ದೆಹಲಿಗೆ ತೆರಳಲಿದ್ದಾರೆ. ಹೈಕಮಾಂಡ್ ಒಪ್ಪಿಗೆ ನೀಡಿದರೆ, ಡಿ.8ರಂದೇ ಸಂಪುಟ ವಿಸ್ತರಣೆಯು ನಡೆದುಹೋಗುತ್ತದೆ ಎಂಬುದು ಸಿದ್ದರಾಮಯ್ಯ ಆಪ್ತ ಬಣದ ವಿವರಣೆ.
ಆದರೆ, ಇದನ್ನು ಸ್ಪಷ್ಟವಾಗಿ ಅಲ್ಲಗಳೆಯುವ ಹೈಕಮಾಂಡ್ನ ಮೂಲಗಳು, ಡಿ.5ರಂದು ನಡೆಯಲಿರುವ ಸಮನ್ವಯ ಸಮಿತಿ ಸಭೆಯಲ್ಲಿ ನಿಗಮ ಮಂಡಳಿ ನೇಮಕಾತಿ ಕುರಿತು ಚರ್ಚೆ ನಡೆಸಲಾಗುವುದು ಮತ್ತು ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವಿರುವ ಕೆಲ ಸಣ್ಣಪುಟ್ಟಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಲಾಗುವುದು. ಭಿನ್ನಾಭಿಪ್ರಾಯ ಬಗೆಹರಿದರೆ ಅಧಿವೇಶನದೊಳಗೆ ನಿಗಮ ಮಂಡಳಿ ನೇಮಕ ಆದೇಶ ಹೊರಡಿಸಲಾಗುವುದು. ಇದೇ ವೇಳೆ ವಿಧಾನಪರಿಷತ್ ಸಭಾಪತಿ ಹೆಸರು (ಬಹುತೇಕ ಎಸ್.ಆರ್. ಪಾಟೀಲ್), ಉಪ ಸಭಾಪತಿ ಹಾಗೂ ಮುಖ್ಯ ಸಚೇತಕ ಹುದ್ದೆಗೆ ಹೆಸರುಗಳನ್ನು ಆಖೈರುಗೊಳಿಸಲಾಗುವುದು.
ಸಚಿವ ಸಂಪುಟ ವಿಸ್ತರಣೆ ಬೆಳಗಾವಿ ಅಧಿವೇಶನ ಆರಂಭಕ್ಕೂ ಮೊದಲೇ ಆಗಲಿದೆ. ಈ ಬಗ್ಗೆ ಆದಷ್ಟುಬೇಗ ಉಭಯ ಪಕ್ಷಗಳ ನಾಯಕರ ಸಲಹೆ ಪಡೆದು ತೀರ್ಮಾನ ಕೈಗೊಳ್ಳುತ್ತೇವೆ. ಸಂಪುಟ ವಿಸ್ತರಣೆಗೆ ಅಧಿವೇಶನ ಮುಗಿಯುವವರೆಗೂ ಕಾಯುವುದಿಲ್ಲ.
- ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ
ನಿಗಮ ಮಂಡಳಿ ನೇಮಕಾತಿ ನಂತರ ಶಾಸಕರ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದನ್ನು ಗಮನಿಸಿ ಅನಂತರ ಸಂಪುಟ ವಿಸ್ತರಣೆ ಪ್ರಕ್ರಿಯೆ ಆರಂಭಿಸಲಾಗುವುದು. ಹೀಗಾಗಿ ಬೆಳಗಾವಿ ಅಧಿವೇಶನಕ್ಕೂ ಮುನ್ನ ಸಂಪುಟ ವಿಸ್ತರಣೆ ಅಸಾಧ್ಯ ಎಂದು ಈ ಮೂಲಗಳು ಖಚಿತವಾಗಿ ಹೇಳುತ್ತವೆ.
ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳ ನಾಯಕರು ನಿರ್ಧಾರ ಕೈಗೊಳ್ಳುತ್ತಾರೆ. ನನಗೆ ಆಡಳಿತ ನಡೆಸುವ ಹೊಣೆ ವಹಿಸಿದ್ದಾರೆ. ಮಿತ್ರ ಪಕ್ಷ ಕಾಂಗ್ರೆಸ್ ತೀರ್ಮಾನ ಕೈಗೊಂಡಲ್ಲಿ ಸಂಪುಟ ವಿಸ್ತರಣೆ ಕೂಡಲೇ ಆಗುತ್ತದೆ.
- ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ
ಆದರೆ, ಸಿದ್ದರಾಮಯ್ಯ ಆಪ್ತರು ಮಾತ್ರ, ಸಂಪುಟ ವಿಸ್ತರಣೆ ಬಗ್ಗೆ ಸಿದ್ದರಾಮಯ್ಯ ಅವರು ಗಂಭೀರವಾಗಿದ್ದಾರೆ. ಹೀಗಾಗಿಯೇ ಕೆಪಿಸಿಸಿ ಅಧ್ಯಕ್ಷರು ಬುಧವಾರ ದೆಹಲಿಗೆ ತೆರಳಿ ಹೈಕಮಾಂಡ್ನೊಂದಿಗೆ ಚರ್ಚಿಸಿ ಆಗಮಿಸಿದ್ದಾರೆ. ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರು ಸೋಮವಾರದ ನಂತರ ನಗರಕ್ಕೆ ಆಗಮಿಸಲಿದ್ದು, ಈ ವೇಳೆ ಜೆಡಿಎಸ್ ನಾಯಕರೊಂದಿಗೆ ಸಂಪುಟ ವಿಚಾರದ ಬಗ್ಗೆ ಅಂತಿಮ ಚರ್ಚೆ ನಡೆಯಲಿದೆ ಎನ್ನುತ್ತಾರೆ. ಈ ಮೂಲಗಳ ಪ್ರಕಾರ ಸಿದ್ದರಾಮಯ್ಯ ಅವರು ಬುಧವಾರ ಜೆಡಿಎಸ್ ವರಿಷ್ಠರಾದ ಎಚ್.ಡಿ.ದೇವೇಗೌಡ ಹಾಗೂ ಕುಮಾರಸ್ವಾಮಿ ಅವರೊಂದಿಗೆ ಒಂದು ಸುತ್ತಿನ ಮಾತುಕತೆಯನ್ನು ನಡೆಸಿದ್ದಾರೆ.
ಆದರೆ, ಮುಖ್ಯಮಂತ್ರಿ ಕಚೇರಿ ಹಾಗೂ ಜೆಡಿಎಸ್ ಮೂಲಗಳು ಇದನ್ನು ಸ್ಪಷ್ಟವಾಗಿ ನಿರಾಕರಿಸಿದ್ದು, ಇಂತಹ ಯಾವುದೇ ಸಭೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿವೆ.