Asianet Suvarna News Asianet Suvarna News

Ambedkar Photo Controversy: ಜಡ್ಜ್‌ ವಿರುದ್ಧ ಹೈಕೋರ್ಟ್‌ಗೆ ದೂರು

*   ಸತ್ಯ ಘಟನೆ ಮರೆಮಾಚಿ ಅಪಪ್ರಚಾರ: ಜಡ್ಜ್‌ ಸ್ಪಷ್ಟನೆ
*   ಡಾ.ಅಂಬೇಡ್ಕರ್‌ ಬಗ್ಗೆ ಅಪಾರಗೌರವಿದೆ: ನ್ಯಾ.ಮಲ್ಲಿಕಾರ್ಜುನಗೌಡ
*   ಪ್ರಕರಣ ಸಂಬಂಧ ಸಮಗ್ರ ತನಿಖೆಗೆ ಆಗ್ರಹ
 

Complaint to High Court against Judge For Ambedkar Photo Controversy grg
Author
Bengaluru, First Published Jan 28, 2022, 5:28 AM IST

ಬೆಂಗಳೂರು(ಜ.28):  ‘ಗಣರಾಜ್ಯೋತ್ಸವ(Republic Day) ಅಂಗವಾಗಿ ರಾಯಚೂರಿನ(Raichur) ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿ ಬುಧವಾರ ಆಯೋಜಿಸಿದ್ದ ಧ್ವಜಾರೋಹಣ ಕಾರ್ಯಕ್ರಮದ ವೇಳೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌. ಅಂಬೇಡ್ಕರ್‌(Dr BR Ambedkar) ಅವರ ಭಾವಚಿತ್ರವನ್ನು ತೆಗೆಸಿದ್ದಾರೆ ಎನ್ನಲಾದ ವಿವಾದ ಸಂಬಂಧ ಕೆಲ ವಕೀಲರು ಮತ್ತು ಸಂಘಟನೆಗಳಿಂದ ಹೈಕೋರ್ಟ್‌ಗೆ ದೂರು ಸಲ್ಲಿಕೆಯಾಗಿದೆ.

ಈ ಬಗ್ಗೆ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಮತ್ತು ರಿಜಿಸ್ಟ್ರಾರ್‌ ಜನರಲ್‌ ಅವರಿಗೆ ಇ-ಮೇಲ್‌ ಮೂಲಕ ಕೆಲ ವಕೀಲರು ಮತ್ತು ವಕೀಲರ ಸಂಘ ದೂರು ಸಲ್ಲಿಸಿ, ‘ರಾಯಚೂರು ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅವರು ಸಂವಿಧಾನ ಶಿಲ್ಪಿ ಅಂಬೇಡ್ಕರ್‌ಗೆ ಅಪಮಾನ ಮಾಡಿದ್ದಾರೆ. ಹೀಗಾಗಿ, ಪ್ರಕರಣ ಸಂಬಂಧ ಸಮಗ್ರ ತನಿಖೆಗೆ ಆದೇಶಿಸಬೇಕು. ನ್ಯಾ.ಮಲ್ಲಿಕಾರ್ಜುನ ಗೌಡ ಅವರನ್ನು ವಜಾಗೊಳಿಸಬೇಕು’ ಎಂದು ಒತ್ತಾಯಿಸಿದ್ದಾರೆ.

Raichur Republic Day :  ಜಡ್ಜ್ ವಿರುದ್ಧದ ಪ್ರತಿಭಟನೆಗೆ ತಾತ್ಕಾಲಿಕ ಬ್ರೇಕ್..  ಕಾದು ನೋಡ್ತೆವೆ

ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್‌ ರೆಡ್ಡಿ ಅವರು ಘಟನೆ ಸಂಬಂಧ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದು, ಸಂವಿಧಾನದ ಪಿತಾಮಹ ಅಂಬೇಡ್ಕರ್‌ಗೆ ಅವಮಾನ ಮಾಡಿರುವುದನ್ನು ಸಹಿಸಲಾಗದು. ಇದು ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದಂತಾಗುತ್ತದೆ. ಆದ್ದರಿಂದ ಪ್ರಕರಣದ ಕುರಿತು ಸಮಗ್ರ ತನಿಖೆಗೆ ಆದೇಶಿಸಬೇಕು ಮತ್ತು ಘಟನೆಗೆ ಹೊಣೆಯಾಗಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದ್ದಾರೆ.
ಮತ್ತೋರ್ವ ವಕೀಲ ರಮೇಶ್‌ ಎಲ್‌. ನಾಯಕ್‌ ಸಹ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಮತ್ತು ರಿಜಿಸ್ಟ್ರಾರ್‌ ಜನರಲ್‌ಗೆ ಈ ಮೇಲ್‌ ಮೂಲಕ ದೂರು(Complaint) ಸಲ್ಲಿಸಿದ್ದಾರೆ. ಅಂಬೇಡ್ಕರ್‌ಗೆ ಅಪಮಾನ ಮಾಡಿರುವ ಜಿಲ್ಲಾ ನ್ಯಾಯಾಧೀಶ ಗೌಡ ಅವರನ್ನು ಸೇವೆಯಿಂದ ವಜಾಗೊಳಿಸಬೇಕು ಹಾಗೂ ದೇಶದ್ರೋಹ ಆರೋಪದಡಿ ಪ್ರಾಸಿಕ್ಯೂಷನ್‌ಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ವರದಿ ತರಿಸಿ ಕ್ರಮ- ರಿಜಿಸ್ಟ್ರಾರ್‌:

ಇದೇ ವೇಳೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿರುವ ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ಟಿ.ಜಿ. ಶಿವಶಂಕರೇಗೌಡ, ಘಟನೆ ಕುರಿತು ವರದಿ ತರಿಸಿಕೊಂಡು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

ಸತ್ಯ ಘಟನೆ ಮರೆಮಾಚಿ ಅಪಪ್ರಚಾರ: ಜಡ್ಜ್‌ ಸ್ಪಷ್ಟನೆ

ರಾಯಚೂರು: ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ಜರುಗಿದ ಗಣರಾಜ್ಯೋತ್ಸವ ಸಮಯದಲ್ಲಿ ಸಂವಿಧಾನ ಶಿಲ್ಪಿ ಹಾಗೂ ಭಾರತ ರತ್ನ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಭಾವಚಿತ್ರ ತೆರವುಗೊಳಿಸಲಾಗಿದೆ ಎಂಬುದೆಲ್ಲ ಸುಳ್ಳು. ಸತ್ಯ ಘಟನೆಯನ್ನು ಮರೆಮಾಚಿ ಅಪಪ್ರಚಾರ ಮಾಡಲಾಗಿದೆ. ನನಗೆ ಡಾ.ಅಂಬೇಡ್ಕರ್‌ ಬಗ್ಗೆ ಅಪಾರಗೌರವ ಮತ್ತು ಅಭಿಮಾನ ಇದೆ ಎಂದು ರಾಯಚೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ(Mallikarjungouda) ಸ್ಪಷ್ಟನೆ ನೀಡಿದ್ದಾರೆ.

Raichur Republic Day : ಅಂಬೇಡ್ಕರ್ ಪೋಟೋ ತೆರವು.. ಪ್ರತಿಭಟನೆ ಮತ್ತು ಸಮರ್ಥನೆ

ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರಿಗೆ ಅವಮಾನ ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿ ಪತ್ರಿಕಾ ಪ್ರಕಟಣೆ ಮೂಲಕ ಸ್ಪಷ್ಟನೆ ನೀಡಿರುವ ಅವರು, ಜ.26ರ ಬೆಳಗ್ಗೆ 8.30ಕ್ಕೆ ನ್ಯಾಯಾಲಯದ ಆವರಣದಲ್ಲಿ 200 ಮಂದಿ ಮೀರದಂತೆ ಸೇರಿ ಗಣರಾಜ್ಯೋತ್ಸವ ಆಚರಿಸಲು ನಿರ್ಧರಿಸಲಾಗಿತ್ತು. ಅಂದು ಬೆಳಗ್ಗೆ ಕೆಲ ವಕೀಲರು ಬಂದು ಸರ್ಕಾರದ ಸುತ್ತೋಲೆ ಪ್ರಕಾರ ಡಾ.ಅಂಬೇಡ್ಕರ್‌ ಫೋಟೋ ಇಟ್ಟು ಗಣರಾಜೋತ್ಸವ ಆಚರಿಸಲು ಒತ್ತಾಯಿಸಿದರು. ಆಗ ನಾನು ಆ ಸುತ್ತೋಲೆ ಹೈಕೋರ್ಟ್‌ನ ಫುಲ್‌ಕೋರ್ಟ್‌ ಮುಂದೆ ಪರಿಗಣನೆಗೆ ಇರುವ ಕಾರಣ ನಾವು ಕಾಯಬೇಕೆಂದು ಹೈಕೋರ್ಟ್‌ ವಿಲೇಖನಾಧಿಕಾರಿಗಳು ನಮ್ಮ ಲೀಡರ್ಸ್‌ ಗುಂಪಿನಲ್ಲಿ ತಿಳಿಸಿದ್ದಾರೆ. ಆದ ಕಾರಣ ಒತ್ತಾಯಿಸಬೇಡಿ ಎಂದು ವಿನಂತಿಸಿಕೊಂಡೆ. ಅದೇ ಸಮಯದಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಜಿ.ಬಸವರಾಜ ಅವರು ವಕೀಲರಿಗೆ ವಿಲೇಖನಾಧಿಕಾರಿಗಳ ಸೂಚನೆ ಬಗ್ಗೆ ತಿಳಿಹೇಳಿ ಹೊರ ಕರೆದೊಯ್ದರು.

ನಂತರ ನಾನು ಧ್ವಜಾರೋಹಣ ನೆರವೇರಿಸಿದ್ದೇನೆ. ಯಾವುದೇ ವ್ಯಕ್ತಿಗಳು ಡಾ.ಅಂಬೇಡ್ಕರ್‌ ಅವರ ಫೋಟೋ ತಂದಿಟ್ಟಿದ್ದಾಗಲಿ, ತೆಗೆದುಕೊಂಡು ಹೋಗಿದ್ದಾಗಲಿ ನಾನು ಆ ವೇಳೆ ನೋಡಿಲ್ಲ. ಆದರೆ ಇದನ್ನು ಮರೆಮಾಚಿ ಡಾ.ಅಂಬೇಡ್ಕರ್‌ ಫೋಟೋ ತೆಗೆದರೆ ಮಾತ್ರ ಧ್ವಜಾರೋಹಣಕ್ಕೆ ಬರುತ್ತೇನೆಂದು ಅಪಪ್ರಚಾರ ಮಾಡಿದ್ದಾರೆಂದು ನ್ಯಾಯಾಧೀಶರು ತಿಳಿಸಿದ್ದಾರೆ.
 

Follow Us:
Download App:
  • android
  • ios