*  ಸಂಜಯ್‌ ಪಾಟೀಲ್‌ ನೀಡಿರುವ ಹೇಳಿಕೆ ಇಡೀ ಮಹಿಳಾ ಸಮುದಾಯಕ್ಕೆ ಮಾಡಿರುವ ಅಪಮಾನ*  ಮಹಿಳಾ ಆಯೋಗ ಇರುವುದೇ ಮಹಿಳೆಯರ ರಕ್ಷಣೆಗೆ*  ಮಹಿಳೆಯರ ಬಗ್ಗೆ ಅವಾಚ್ಯ, ಅಸಭ್ಯವಾಗಿ ಮಾತನಾಡುವುದು ಕಾನೂನು ಬಾಹಿರ

ಬೆಂಗಳೂರು(ಅ.06): ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌(Lakshmi Hebbalkar) ವಿರುದ್ಧ ಕೀಳು ಮಟ್ಟದ ಹೇಳಿಕೆ ಹಾಗೂ ಅವಾಚ್ಯ ಪದಗಳಿಂದ ನಿಂದನೆ ಮಾಡಿರುವ ಆರೋಪ ಸಂಬಂಧ ಮಾಜಿ ಶಾಸಕ ಸಂಜಯ್‌ ಪಾಟೀಲ್‌(Sanjay Patil) ವಿರುದ್ಧ ರಾಜ್ಯ ಮಹಿಳಾ ಪಂಚಮಸಾಲಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ವೀಣಾ ಕಾಶಪ್ಪನವರ್‌ ದೂರು ನೀಡಿದ್ದಾರೆ. 

Add Asianetnews Kannada as a Preferred SourcegooglePreferred

ನಗರದಲ್ಲಿ ಮಂಗಳವಾರ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ಅವರನ್ನು ಭೇಟಿ ಮಾಡಿ ದೂರು ಸಲ್ಲಿಸಿದ ಅವರು, ಲಕ್ಷ್ಮೀ ಹೆಬ್ಬಾಳ್ಕರ್‌ ಅವರ ವಿರುದ್ಧ ಸಂಜಯ್‌ ಪಾಟೀಲ್‌ ನೀಡಿರುವ ಹೇಳಿಕೆ ಇಡೀ ಮಹಿಳಾ ಸಮುದಾಯಕ್ಕೆ ಮಾಡಿರುವ ಅಪಮಾನವಾಗಿದೆ. ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ. ದೂರು ಸ್ವೀಕರಿಸಿ ಮಾತನಾಡಿದ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ಅವರು, ಸಂಜಯ್‌ ಪಾಟೀಲ್‌ ಅವರ ವಿರುದ್ಧದ ದೂರು ಪರಿಶೀಲಿಸಿ ಅವರ ಹೇಳಿಕೆಗಳ ಕುರಿತು ವರದಿ ತರಿಸಿಕೊಂಡು ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ದೂರು ಸಲ್ಲಿಕೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವೀಣಾ ಕಾಶಪ್ಪನವರ್‌, ಸಂಜಯ್‌ ಪಾಟೀಲ್‌ ಅವರ ಹೇಳಿಕೆ ಕೇವಲ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಸಂಬಂಧಿಸಿದ್ದಲ್ಲ. ಇಡೀ ಮಹಿಳಾ ವರ್ಗಕ್ಕೆ ಮಾಡಿರುವ ಅಪಮಾನ. ತಕ್ಷಣವೇ ಅವರು ಬೇಷರತ್‌ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ಅವರ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.

'ಚುಕ್ಕಿ, ಚಂದ್ರಮ ತೋರಿಸಿ ಹೆಬ್ಬಾ​ಳ​ಕ​ರ್‌ ರಾಜಕೀಯ'

ಮಹಿಳೆಯರನ್ನು ಗೌರವಿಸುವುದಾಗಿ ಹೇಳುವ ಬಿಜೆಪಿಯವರು(BJP) ತಮ್ಮದೇ ಪಕ್ಷದ ಸಂಜಯ್‌ ಪಾಟೀಲ್‌ ಹೇಳಿಕೆ ಖಂಡಿಸುವ, ಅವರ ವಿರುದ್ಧ ನೋಟಿಸ್‌ ನೀಡುವ ಕೆಲಸವನ್ನು ಈವರೆಗೂ ಮಾಡಿಲ್ಲ. ಬಿಜೆಪಿಯವರಿಗೆ ಮಹಿಳೆಯರ ಬಗ್ಗೆ ಗೌರವ ಇದ್ದರೆ ನೈತಿಕತೆ ಇದ್ದರೆ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ ಉಚ್ಛಾಟಿಸಬೇಕು ಎಂದು ಒತ್ತಾಯಿಸಿದರು.

ದೂರು ಪರಿಶೀಲಿಸಿ ಕ್ರಮ: 

ದೂರ ಸ್ವೀಕರಿಸಿ ಮಾತನಾಡಿದ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ಅವರು, ಸಂಜಯ್‌ ಪಾಟೀಲ್‌ ಅವರ ವಿರುದ್ಧದ ದೂರು ಪರಿಶೀಲಿಸಿ ಅವರ ಹೇಳಿಕೆಗಳ ಕುರಿತು ವರದಿ ತರಿಸಿಕೊಂಡು ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಮಹಿಳಾ ಆಯೋಗ ಇರುವುದೇ ಮಹಿಳೆಯರ ರಕ್ಷಣೆ, ಗೌರವ ಕಾಪಾಡಲು. ಮಹಿಳೆಯರ ಬಗ್ಗೆ ಅವಾಚ್ಯ, ಅಸಭ್ಯವಾಗಿ ಮಾತನಾಡುವುದು ಕಾನೂನು ಬಾಹಿರ. ಈ ಸಂಬಂಧ ಆಯೋಗದ ವ್ಯಾಪ್ತಿಯಲ್ಲಿ ಏನು ಕ್ರಮ ಕೈಗೊಳ್ಳಬಹುದೋ ಆ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು ಎಂದರು.