ಕರ್ನಾಟಕ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಯ ಚರ್ಚೆಗಳ ನಡುವೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್ ರಾಜ್ಯಸಭೆ ಸ್ಥಾನದ ಆಫರ್ ನೀಡಿದೆ ಎನ್ನಲಾಗಿದೆ. ಈ ಪ್ರಸ್ತಾವನೆಯನ್ನು ಸಿದ್ದರಾಮಯ್ಯ ತಕ್ಷಣವೇ ಒಪ್ಪಿಕೊಂಡಿಲ್ಲ.

ನವದೆಹಲಿ/ಬೆಂಗಳೂರು (ಮೇ.26): ಕರ್ನಾಟಕ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಕುರಿತಾದ ಚರ್ಚೆಗಳು ದೆಹಲಿ ಮಟ್ಟದಲ್ಲಿ ಹೊಸ ತಿರುವು ಪಡೆದುಕೊಂಡಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ರಾಜ್ಯಸಭೆಯ ಆಫರ್ ನೀಡಿದೆ ಎಂಬ ದಟ್ಟ ವದಂತಿಗಳು ಕೇಳಿಬರುತ್ತಿದ್ದು, ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದೆ. ಆದರೆ, ಹೈಕಮಾಂಡ್‌ನ ಈ ಆಫರ್ ಖಚಿತವಾಗಿದ್ದರೂ, ಸಿಎಂ ಸಿದ್ದರಾಮಯ್ಯ ಅವರು ಸದ್ಯಕ್ಕೆ ಯಾವುದೇ ಸ್ಪಷ್ಟ ನಿರ್ಧಾರವನ್ನು ಪ್ರಕಟಿಸದೆ ಸಸ್ಪೆನ್ಸ್ ಕಾಯ್ದುಕೊಂಡಿದ್ದಾರೆ ಎಂದು ವರದಿಯಾಗಿದೆ.

Add Asianetnews Kannada as a Preferred SourcegooglePreferred

ಆಪ್ತರ ಜೊತೆ ಚರ್ಚಿಸಿ ತೀರ್ಮಾನ ಎಂದ ಸಿಎಂ

ಹೈಕಮಾಂಡ್ ನಾಯಕರು ತಮಗೆ ನೀಡಿರುವ ರಾಜ್ಯಸಭೆ ಪ್ರಸ್ತಾವನೆಗೆ ತಕ್ಷಣವೇ ಒಪ್ಪಿಗೆ ಸೂಚಿಸದ ಸಿಎಂ ಸಿದ್ದರಾಮಯ್ಯ, ತಾವು ಬೆಂಗಳೂರಿಗೆ ಮರಳಿದ ಬಳಿಕ ತಮ್ಮ ಅತ್ಯಾಪ್ತ ನಾಯಕರು ಮತ್ತು ಶಾಸಕರ ಜೊತೆ ಈ ಕುರಿತು ಸುದೀರ್ಘವಾಗಿ ಚರ್ಚಿಸಿ ಅಂತಿಮ ನಿರ್ಧಾರ ಪ್ರಕಟಿಸುವುದಾಗಿ ವರಿಷ್ಠರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಸಿಎಂ ಸದ್ಯಕ್ಕೆ ಯಾವುದೇ ಗ್ರೀನ್ ಸಿಗ್ನಲ್ ನೀಡದ ಹಿನ್ನೆಲೆಯಲ್ಲಿ ಹೈಕಮಾಂಡ್ ಕೂಡ ಸದ್ಯಕ್ಕೆ ಯಾವುದೇ ಅಂತಿಮ ತೀರ್ಮಾನ ಕೈಗೊಳ್ಳದೆ ಕಾಯುವ ತಂತ್ರಕ್ಕೆ ಶರಣಾಗಿದೆ.

ಹೈಕಮಾಂಡ್ ಮುಂದೆ ಸಿಎಂ ಸಿದ್ದರಾಮಯ್ಯ ಪ್ರಶ್ನೆ

ದೆಹಲಿಯಲ್ಲಿ ನಡೆದ ಸಭೆಯ ವೇಳೆ ಹೈಕಮಾಂಡ್ ನಾಯಕರು ಈ ಆಫರ್ ಮುಂದಿಟ್ಟಾಗ, ಸಿಎಂ ಸಿದ್ದರಾಮಯ್ಯ ಅವರು ವರಿಷ್ಠರ ಮುಂದೆ ನೇರ ಪ್ರಶ್ನೆಯೊಂದನ್ನು ಇಟ್ಟಿದ್ದಾರೆ ಎನ್ನಲಾಗಿದೆ. "ನಾನು ರಾಜ್ಯಸಭೆಗೆ ಹೋದರೆ, ಮುಂದಿನ ಕರ್ನಾಟಕದ ಸಿಎಂ ಯಾರು?" ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಇದಕ್ಕೆ ಎಐಸಿಸಿ ವರಿಷ್ಠರು, "ಅದನ್ನು ಹೈಕಮಾಂಡ್ ತೀರ್ಮಾನ ಮಾಡಲಿದೆ, ಸದ್ಯಕ್ಕೆ ನೀವು ನಿಮ್ಮ ನಿರ್ಧಾರ ತಿಳಿಸಿ" ಎಂದು ಉತ್ತರಿಸಿದ್ದಾರೆ ಎನ್ನಲಾಗಿದೆ.

ಸಿದ್ದರಾಮಯ್ಯ ನಡೆಯ ಮೇಲೆಯೇ ಮುಂದಿನ ರಾಜಕೀಯ ಭವಿಷ್ಯ

ಕರ್ನಾಟಕ ಕಾಂಗ್ರೆಸ್ ಸರ್ಕಾರದ ಮುಂದಿನ ಭವಿಷ್ಯ ಮತ್ತು ನಾಯಕತ್ವ ಬದಲಾವಣೆಯ ಇಡೀ ಬೆಳವಣಿಗೆ ಈಗ ಸಂಪೂರ್ಣವಾಗಿ ಸಿಎಂ ಸಿದ್ದರಾಮಯ್ಯ ಅವರ ನಿರ್ಧಾರದ ಮೇಲೆಯೇ ನಿಂತಿದೆ. ಒಂದು ವೇಳೆ ಸಿದ್ದರಾಮಯ್ಯ ಅವರು ಹೈಕಮಾಂಡ್ ನೀಡಿದ ರಾಜ್ಯಸಭೆ ಆಫರ್ ಅನ್ನು ಒಪ್ಪಿಕೊಂಡರೆ ಮಾತ್ರ ರಾಜ್ಯದಲ್ಲಿ ಮುಂದಿನ ದೊಡ್ಡ ರಾಜಕೀಯ ಬದಲಾವಣೆಗಳು (ಸಿಎಂ ಕುರ್ಚಿ ಬದಲಾವಣೆ) ಸರಾಗವಾಗಿ ನಡೆಯಲಿವೆ. ಇಲ್ಲದಿದ್ದರೆ ಹೈಕಮಾಂಡ್ ಮತ್ತೊಂದು ಪರ್ಯಾಯ ಸೂತ್ರ ಹುಡುಕಬೇಕಾಗುತ್ತದೆ.