ಮೈಸೂರು ದಸರಾ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಸ್ಲಿಂ ಮಹಿಳೆ ಬಾನು ಮುಷ್ತಾಕ್ ಅವರು ಉದ್ಘಾಟನೆ ಮಾಡಿರುವುದನ್ನು ಬಲವಾಗಿ ಸಮರ್ಥಿಸಿಕೊಂಡರು. ಬಾನು ಮುಷ್ತಾಕ್ ಅವರ ಸಾಧನೆ ಮತ್ತು ಕನ್ನಡಕ್ಕೆ ನೀಡಿದ ಕೊಡುಗೆಯನ್ನು ಶ್ಲಾಘಿಸಿದರು.

ಮೈಸೂರು (ಸೆ.22): ಟಿಪ್ಪು ಸುಲ್ತಾನ್ ಕೂಡ ದಸರಾ ಆಚರಿಸಿದ್ದರು ಇತಿಹಾಸ ತಿರುಚಬೇಡಿ. ಬಾನು ಮುಷ್ತಾಕ್ ಹುಟ್ಟಿನಿಂದ ಮುಸ್ಲಿಂ ಮಹಿಳೆ ಆಗಿರ ಬಹುದು. ಆದ್ರೆ, ಅವ್ರೂ ಕೂಡ ಮನುಷ್ಯರು. ಮನುಷ್ಯ ಮನುಷ್ಯರನ್ನ ಪ್ರೀತಿಸಬೇಕು, ಗೌರವಿಸಬೇಕು. ಪರಸ್ಪರ ಪ್ರೀತಿಯಿಂದ ಇರಬೇಕು, ದ್ವೇಷದಿಂದ ಅಲ್ಲಾ. ನಾಡಿನ ಬಹುತೇಕ ಜನ ಬಾನು ಮುಷ್ತಾಕ್ ಉದ್ಘಾಟನೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿ, ದಸರಾವನ್ನು ಬಾನು ಮುಷ್ತಾಕ್ ಅವರು ಉದ್ಘಾಟನೆ ಮಾಡಿದ್ದಾರೆ ಎಂದು ತಿಳಿಸಿದರು. ನಾಡಿನ ಬಹುತೇಕ ಜನ ಬಾನು ಮುಷ್ತಾಕ್ ಉದ್ಘಾಟನೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು. ವಿಜಯನಗರ ಕಾಲದಲ್ಲಿ ದಸರಾ ಆಚರಣೆ ಮಾಡುತ್ತಿದ್ದರು. ವಿಜಯನಗರ ಸಾಮ್ರಾಜ್ಯ ಪತನವಾದ ಸಂದರ್ಭದಲ್ಲಿ ಅರಸರು ಆಚರಣೆ ಮಾಡಿದ್ರು. ನಂತರ ಟಿಪ್ಪು ಸುಲ್ತಾನ್ ಕೂಡ ದಸರಾ ಆಚರಣೆ ಮಾಡಿದ್ದರು ಎಂದು ಸಿಎಂ ಇತಿಹಾಸವನ್ನು ನೆನಪಿಸಿದರು.

ಎಲ್ಲರೂ ಇತಿಹಾಸವನ್ನ ತಿಳಿದುಕೊಳ್ಳಬೇಕು. ಆ ಕಾರಣಕ್ಕಾಗಿಯೇ ಸಂವಿಧಾನದ ಪೀಠಿಕೆಯನ್ನು ಪ್ರತಿಯೊಂದು ಶಾಲೆಯಲ್ಲೂ ಓದಬೇಕೆಂದು ಮಾಡಿದ್ದೇವೆ. ಇತಿಹಾಸವನ್ನ ತಿರುಚಿ ರಾಜಕೀಯಕ್ಕೋಸ್ಕರ ಮಾಡಬಾರದು. ರಾಜಕೀಯ ಮಾಡೋಣ ಅಂದ್ರೆ ಬಹಳಷ್ಟು ಇದೆ. ಚುನಾವಣೆ ಸಂದರ್ಭದಲ್ಲಿ ರಾಜಕೀಯ ಮಾಡೋಣ. ಇಲ್ಲ ಸಲ್ಲದ ದ್ವೇಷಕ್ಕೋಸ್ಕರ ರಾಜಕಾರಣ ಮಾಡಬಾರದು ಎಂದು ಹೇಳಿದರು.

ಸಂವಿಧಾನಕ್ಕೆ ಮಾಡುವ ಅಪಚಾರ ನಾಡಿಗೆ ಮಾಡುವ ಅಪಚಾರ

ಹೈಕೋರ್ಟ್, ಸುಪ್ರೀಂಕೋರ್ಟ್ ಕೂಡ ಸಂವಿಧಾನದ ಪೀಠಿಕೆ ಓದಿ ಎಂದು ತಕ್ಕ ಪಾಠ ಕಲಿಸಿದ್ದವು ಎಂದು ಅವರು ನೆನಪಿಸಿದರು. 'ಸಂವಿಧಾನ ಧರ್ಮಾತೀತ, ಜಾತ್ಯಾತೀತ. ನಾವು ಯಾವ ಧರ್ಮಕ್ಕೆ ಸೇರಿದರೂ, ನಾವೆಲ್ಲ ಭಾರತೀಯರು ಎಂಬ ಭಾವನೆ ಇರಬೇಕು. ಇಲ್ಲವಾದರೆ ಸಂವಿಧಾನಕ್ಕೆ ಮಾಡುವ ಅಪಚಾರ ನಾಡಿಗೆ ಮಾಡುವ ಅಪಚಾರ. ಎಲ್ಲರೂ ಸಮಾನ ಅವಕಾಶಗಳೇ ಎಂಬುದನ್ನು ಸಂವಿಧಾನ ಒತ್ತಿ ಹೇಳುತ್ತದೆ' ಎಂದು ಸಿಎಂ ಹೇಳಿದರು.

ಬಾನು ಮುಷ್ತಾಕ್ ಅವರು ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ ಪಡೆದಿದ್ದಾರೆ. ಅವರು ದಸರಾ ಉದ್ಘಾಟನೆ ಮಾಡಿರುವುದು ಸರಿ ಇದೆ. ಆ ಕಾರಣಕ್ಕಾಗಿಯೇ ಬಾನು ಮುಷ್ತಾಕ್ ಅವರಿಗೆ ಸರ್ಕಾರದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಅವರು ತುಂಬ ಚೆನ್ನಾಗಿ ಮಾತನಾಡಿದ್ದಾರೆ. ನನಗೂ ಕೂಡ ಅವರ ತರ ಮಾತಾಡಲಿಕ್ಕೆ ಆಗುವುದಿಲ್ಲ. ಕನ್ನಡ ಸಾಹಿತಿಯಾಗಿ ತುಂಬ ಅರ್ಥಗರ್ಭಿತವಾಗಿ ಮಾತನಾಡಿದ್ದಾರೆ. ವಿರುದ್ಧವಾಗಿ ಮಾತನಾಡುವವರಿಗೆ ಬಾನು ಮುಷ್ತಾಕ್ ಕಣ್ಣು ತೆರೆದಿದ್ದಾರೆ ಎಂದರು.

ಅ.2ರಂದು ಜಂಬೂಸವಾರಿ

ರೈತರ ಸಂಘಟನೆ, ದಲಿತ ಸಂಘಟನೆ ಹೋರಾಟಗಳಲ್ಲಿ ಬಾನು ಮುಷ್ತಾಕ್ ಭಾಗಿಯಾಗಿದ್ದಾರೆ. ಒಬ್ಬ ಮುಸ್ಲಿಂ ಮಹಿಳೆ ಕನ್ನಡಕ್ಕೆ ಗೌರವ ತಂದುಕೊಟ್ಟಿದ್ದಾರೆ. ಸರ್ಕಾರದಿಂದ ಗೌರವ ಸಲ್ಲಿಸುವ ಕೆಲವನ್ನೂ ಮಾಡಿದ್ದೇವೆ. ಈ ಬಾರಿ ದಸರಾ ಮಹೋತ್ಸವ 11 ದಿನ ನಡೆಯುತ್ತದೆ. ಅ.2ರಂದು ಜಂಬೂಸವಾರಿ ನಡೆಯಲಿದೆ' ಎಂದು ಸಿಎಂ ಸಿದ್ದರಾಮಯ್ಯ ತಮ್ಮ ಭಾಷಣವನ್ನು ಮುಗಿಸಿದರು.