ಸಮಾಜದ ಕಟ್ಟಕಡೆಯ ವ್ಯಕ್ತಿಯ ಟ್ವೀಟ್‌, ಅಹವಾಲಿಗೂ ಮುಖ್ಯಮಂತ್ರಿಯವರು ಮತ್ತು ಮುಖ್ಯಮಂತ್ರಿಯವರ ಕಚೇರಿಯ ಸಿಬ್ಬಂದಿ ಅತೀ ಶೀಘ್ರವಾಗಿ ಸ್ಪಂದಿಸಿ 24 ಗಂಟೆಯೊಳಗೆ ಸಮಸ್ಯೆಯನ್ನು ಇತ್ಯರ್ಥ ಪಡಿಸಿರುವುದಕ್ಕೆ ಸ್ಥಳೀಯರು ಮತ್ತು ಸಾರ್ವಜನಿಕರು ಅಭಿನಂದಿಸಿದ್ದಾರೆ.

ಬೆಂಗಳೂರು(ಆ.29): ಕಳೆದ ನಾಲ್ಕೈದು ದಶಕಗಳಿಂದ ವಿದ್ಯುತ್‌ ಸೌಲಭ್ಯ ಇಲ್ಲದ ವೃದ್ಧೆ ದೊಣಮ್ಮ (81) ಎಂಬುವರ ಸಮಸ್ಯೆಗೆ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಚೇರಿ ಸಿಬ್ಬಂದಿ ಕೇವಲ 24 ಗಂಟೆಯೊಳಗೆ ವಿದ್ಯುತ್‌ ಸಂಪರ್ಕ ಕಲ್ಪಿಸಿ ಸಮಸ್ಯೆ ಇತ್ಯರ್ಥಪಡಿಸಿದ್ದಾರೆ.

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಬಸಾಪುರ ಗ್ರಾಮದ ಒಂಟಿ ಮಹಿಳೆಯೊಬ್ಬರು ವಿದ್ಯುತ್‌ ಸಂಪರ್ಕ ಪಡೆಯಲು ಹಣವಿಲ್ಲದೇ ಇಂದಿಗೂ ದೀಪದ ಬೆಳಕಿನಲ್ಲಿ ಜೀವನ ಸಾಗಿಸುತ್ತಿದ್ದಾರೆ. ಇದು ಈ ದೇಶದ ದುರಂತವೇ ಸರಿ ಎಂದು ಮಹೇಂದ್ರ ಎಂಬುವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಟ್ವಿಟ್ಟರ್‌ ಖಾತೆಗೆ ಆಗಸ್ಟ್‌ 22ರಂದು ಟ್ವೀಟ್‌ ಮಾಡಿದ್ದರು.

ಗ್ರಾಮಗಳಲ್ಲಿ 24 ಗಂಟೆ ವಿದ್ಯುತ್‌ ಪೂರೈಕೆ

ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯಾಧಿಕಾರಿ ಡಾ. ಕೆ.ವೈಷ್ಣವಿ ಅವರು ತಮ್ಮ ಕಚೇರಿಯ ಸಿಬ್ಬಂದಿಗೆ ತುರ್ತಾಗಿ ಕಾರ್ಯೋನ್ಮುಖವಾಗಿ ನೊಂದ ಮಹಿಳೆಗೆ ನ್ಯಾಯ ಒದಗಿಸುವಂತೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಚಳ್ಳಕೆರೆ ರೇಣುಕಾಪುರ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಜಿ.ತಿಮ್ಮರಾಜು, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ತಿಮ್ಮರಾಜು, ಬೆಸ್ಕಾಂ ಶಾಖಾಧಿಕಾರಿ ದಂಡಪ್ಪ, ಅವರು ಸ್ಥಳಕ್ಕೆ ಭೇಟಿ ನೀಡಿ ಲೈನ್‌ಮನ್‌ ರಫೀಕ್‌ ಅವರ ನೆರವಿನೊಂದಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಿದ್ದರು.

ಸಮಾಜದ ಕಟ್ಟಕಡೆಯ ವ್ಯಕ್ತಿಯ ಟ್ವೀಟ್‌, ಅಹವಾಲಿಗೂ ಮುಖ್ಯಮಂತ್ರಿಯವರು ಮತ್ತು ಮುಖ್ಯಮಂತ್ರಿಯವರ ಕಚೇರಿಯ ಸಿಬ್ಬಂದಿ ಅತೀ ಶೀಘ್ರವಾಗಿ ಸ್ಪಂದಿಸಿ 24 ಗಂಟೆಯೊಳಗೆ ಸಮಸ್ಯೆಯನ್ನು ಇತ್ಯರ್ಥ ಪಡಿಸಿರುವುದಕ್ಕೆ ಸ್ಥಳೀಯರು ಮತ್ತು ಸಾರ್ವಜನಿಕರು ಅಭಿನಂದಿಸಿದ್ದಾರೆ.