ಸಂಪುಟ ಸಭೆಯಲ್ಲಿ ಪುಟ್ಟರಂಗ ಶೆಟ್ಟಿ ವಿರುದ್ಧ ಸಿಎಂ ಗರಂ!
ಸಚಿವ ಪುಟ್ಟರಂಗ ಶೆಟ್ಟಿ ಆಪ್ತ ಮೋಹನ್ ಬಳಿ ಲಕ್ಷಾಂತರ ರೂಪಾಯಿ ಹಣ ಪತ್ತೆಯಾದ ವಿಚಾರದಿಂದ ಮುಜುಗರಕ್ಕೊಳಗಾಗಿರುವ ಸಿಎಂ ಕುಮಾರಸ್ವಾಮಿ ಸದ್ಯ ಸಚಿವರ ವಿರುದ್ಧ ಗರಂ ಆಗಿದ್ದಾರೆ.
ಬೆಂಗಳೂರು[ಜ.11]: ವಿಧಾನಸೌಧದ ಆವರಣದಲ್ಲಿ ಸಚಿವ ಪುಟ್ಟರಂಗ ಶೆಟ್ಟಿ ಆಪ್ತ ಮೋಹನ್ ಬಳಿ 25.76 ಲಕ್ಷ ರು. ಪತ್ತೆಯಾದ ಪ್ರಕರಣವು ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪವಾಗಿದ್ದು, ಸಚಿವರ ವಿರುದ್ಧ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮತ್ತು ಉಪ ಮುಖ್ಯ ಮಂತ್ರಿ ಡಾ.ಜಿ.ಪರಮೇಶ್ವರ್ ಅವರಿಬ್ಬರೂ ಗರಂ ಆದ ಪ್ರಸಂಗ ನಡೆಯಿತು.
"
ಗುರುವಾರ ಸಂಜೆ ನಡೆದ ಸಚಿವ ಸಂಪುಟ ಸಭೆಗೆ ಪುಟ್ಟರಂಗ ಶೆಟ್ಟಿ ತುಸು ತಡವಾಗಿ ಆಗ ಮಿಸಿದರು. ಎಲ್ಲ ಸಚಿವರು ವಿಧಾನಸೌಧಕ್ಕೆ ಪಶ್ಚಿಮ ದ್ವಾರದಿಂದ ಆಗಮಿಸಿದರೆ ಪುಟ್ಟರಂಗ ಶೆಟ್ಟಿ ಮಾಧ್ಯಮ ಪ್ರತಿನಿಧಿಗಳ ಕಣ್ಣು ತಪ್ಪಿಸುವ ಸಲುವಾಗಿ ಪೂರ್ವ ದ್ವಾರದ ಮೂಲಕ ಸಚಿವ ಸಂಪುಟ ಸಭೆಯ ಕೊಠಡಿಗೆ ತೆರಳಿದರು. ಸಭೆಯಲ್ಲಿ ಸಚಿವರ ಆಪ್ತನ ಬಳಿ ಪತ್ತೆಯಾದ ಹಣದ ಬಗ್ಗೆ ಪ್ರಸ್ತಾಪವಾಯಿತು. ಅಂತಹವ ರನ್ನು ಏಕೆ ಇಟ್ಟುಕೊಳ್ಳುತ್ತೀರಿ ಎಂದು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ಸಚಿವರು ವಿರುದ್ಧ ಸಿಡಿಮಿಡಿಗೊಂಡರು ಎಂದು ಮೂಲಗಳು ತಿಳಿಸಿವೆ.
ಈ ವೇಳೆ ಸಚಿವರು ಸಮಜಾಯಿಷಿ ನೀಡಲು ಮುಂದಾ ದರು. ಆದರೂ ಘಟನೆ ಕುರಿತು ಸಿಎಂ ಬೇಸರ ವ್ಯಕ್ತಪಡಿಸಿ ದರು. ಘಟನೆಯಿಂದಾಗಿ ಸರ್ಕಾರಕ್ಕೆ ಮುಜುಗರವಾಗಿದೆ. ಇಂತಹ ಘಟನೆಗಳು ಒಳ್ಳೆಯ ಬೆಳವಣಿಗೆಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ಬೇಸರ ವ್ಯಕ್ತಪಡಿಸಿದಾಗ ಸಚಿವ ಶೆಟ್ಟಿ ಸಭೆಯಿಂದ ಎದ್ದು ಹೋದರು ಎನ್ನಲಾಗಿದೆ.