Asianet Suvarna News Asianet Suvarna News

ಬಿಸಿಯೂಟ ಯೋಜನೆ ಇನ್ನು ಇಲ್ಲಿಗೂ ವಿಸ್ತರಣೆ

ಶಾಲಾ ಮಕ್ಕಳಿಗೆ ನೀಡಲಾಗುತ್ತಿರುವ ಮಧ್ಯಾಹ್ನದ ಬಿಸಿಯೂಟ ಹಾಗೂ ಕ್ಷೀರಭಾಗ್ಯ ಯೋಜನೆಯನ್ನು ಮುಂದಿನ ತಿಂಗಳಿನಿಂದ ಅಂಗವಿಕಲ ಶಿಕ್ಷಣ ಸಂಸ್ಥೆಗಳಿಗೂ ವಿಸ್ತರಿಸಲಾಗು ವುದು ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದರು.

CM Kumaraswamy Extend Mid Day Meal Service
Author
Bengaluru, First Published Jul 15, 2018, 8:03 AM IST

ಬೆಂಗಳೂರು : ಶಾಲಾ ಮಕ್ಕಳಿಗೆ ನೀಡಲಾಗುತ್ತಿರುವ ಮಧ್ಯಾಹ್ನದ ಬಿಸಿಯೂಟ ಹಾಗೂ ಕ್ಷೀರಭಾಗ್ಯ ಯೋಜನೆಯನ್ನು ಮುಂದಿನ ತಿಂಗಳಿನಿಂದ ಅಂಗವಿಕಲ ಶಿಕ್ಷಣ ಸಂಸ್ಥೆಗಳಿಗೂ ವಿಸ್ತರಿಸಲಾಗು ವುದು ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದರು.

ಕರ್ನಾಟಕ ರಾಜ್ಯ ಅಂಗವಿಕಲರ ಸೇವಾ ಸಂಸ್ಥೆಗಳ ಒಕ್ಕೂಟ ಶನಿವಾರ ಆಯೋಜಿ ಸಿದ್ದ ‘ಸ್ಪಂದನ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ ಎಲ್ಲ ಅಂಗವಿಕಲ ಮಕ್ಕಳಿಗೂ ಸರ್ಕಾರದ ಸೌಲಭ್ಯ ಸಿಗಬೇಕೆಂಬ ಉದ್ದೇಶದಿಂದ ಯೋಜನೆ ವಿಸ್ತರಿಸಲಾಗುತ್ತಿದೆ. ಈ ಕುರಿತು ತಕ್ಷಣವೇ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದರು. 

ಮುಂದಿನ ವರ್ಷ ರಾಜ್ಯದಲ್ಲಿಯೇ ವಿಶ್ವಮಟ್ಟದ ಅಂಗವಿಕಲರ ಒಲಿಂಪಿಕ್ಸ್ ಕ್ರೀಡಾಕೂಟ  ವನ್ನು ಮಂಗಳೂರಿನಲ್ಲಿ ಆಯೋಜಿಸಲಾಗುವುದು. ಅಂಗವಿಕಲರಿಗೆ ಅವಶ್ಯವಿರುವ ಎಲ್ಲ ರೀತಿಯ ಸೌಲಭ್ಯಗಳನ್ನು ಸರ್ಕಾರ ನೀಡಲಿದೆ. ಅಂಗವಿಕಲ ಮಕ್ಕಳ ಕಾರ್ಯಕ್ರಮ ಮತ್ತು ಯೋಜನೆಗಳಲ್ಲಿ ಅಧಿಕಾರಿಗಳು ಭ್ರಷ್ಟಾಚಾರ ನಡೆಸಿದರೆ ತಕ್ಷಣವೇ ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. 

ಬಜೆಟ್‌ನಲ್ಲಿ 2016 ರ ಅಂಗವಿಕಲ ಕಾಯ್ದೆ ಅಡಿ 21 ರೀತಿಯ ಅಂಗವಿಕಲರಿಗೆ ಕಾರ್ಯಕ್ರಮ ರೂಪಿಸಲಾಗಿದೆ. ಇದಕ್ಕಾಗಿ ಐದು ಕೋಟಿ ರು. ಮೀಸಲಿಡಲಾಗಿದೆ. ರಾಷ್ಟ್ರೀಯ ಅಂಗವಿಕಲ ಹಣಕಾಸು ಅಭಿವೃದ್ಧಿ ನಿಗಮದಲ್ಲಿ ನೀಡಿರುವ ಸಾಲದ ಸುಸ್ತಿ ಬಡ್ಡಿ ಮನ್ನಾ ಮಾಡಲು 4 ಕೋಟಿ ರು. ಬಿಡಗಡೆ ಮಾಡಲಾಗಿದೆ. 20 ಎಕರೆ ಜಾಗದಲ್ಲಿ ತರಬೇತಿ, ಕೌಶಲ್ಯ ಅಭಿವೃದ್ಧಿ ತರಬೇತಿ ನೀಡಲು ಚಿಂತನೆ ನಡೆಸಲಾಗಿದೆ ಎಂದರು.

ಸಂತೃಪ್ತಿ ನೀಡಿದ ಕೆಲಸ: ನಾನು 12 ವರ್ಷಗಳ ಹಿಂದೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಎರಡೂ ಕಣ್ಣು ಕಾಣದ ಹೆಣ್ಣುಮಗಳಿಗೆ ಕೆಲಸ ಕೊಡಿಸಿದ್ದೆ. ಇಂದು ಆ ಹುಡುಗಿ ಅನಾಥ ಮಗುವೊಂದನ್ನು ದತ್ತು ತೆಗೆದುಕೊಂಡು ಸಾಕುತ್ತಿದ್ದಾಳೆ. ಈ ಘಟನೆ ನನ್ನ ಜೀವನದಲ್ಲಿ ಸಂತೃಪ್ತಿ ನೀಡಿದೆ. ಅದೇ ರೀತಿ ಮೊನ್ನೆ ರಾಯಚೂರಿನ ಎರಡೂ ಕಾಲುಗಳಿಲ್ಲದ ಎಂ.ಕಾಂ. ಪದವೀಧರೆಗೆ ಕೆಲಸ ನೀಡಿ 15 ಸಾವಿರ ರು. ವೇತನ  ನೀಡಲಾಗಿದೆ ಎಂದು ನೆನೆದರು. 

ನಗರಾಭಿವೃದ್ಧಿ ಸಚಿವ ಖಾದರ್, ಒಕ್ಕೂಟದ ಅಧ್ಯಕ್ಷ ಎಚ್.ವಿ. ಗೋಪಾಲಪ್ಪ, ಪ್ರಧಾನ ಕಾರ್ಯದರ್ಶಿ ವಸಂತಕುಮಾರ್ ಶೆಟ್ಟಿ, ಉಪಾಧ್ಯಕ್ಷ ಗೋವಿಂದರಾಜು ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಅಂಗವಿಕಲ ಮಕ್ಕಳು ಉಪಸ್ಥಿತರಿದ್ದರು.

Follow Us:
Download App:
  • android
  • ios