Asianet Suvarna News Asianet Suvarna News

ಆಶಾ ಕಾರ್ಯಕರ್ತೆಯರ ಶ್ರಮಕ್ಕೆ ಸಿಎಂ ಶ್ಲಾಘನೆ

* ಮೆಚ್ಚುಗೆ-ಕಾರ್ಯಕರ್ತರ ಜೊತೆ ಬಿಎಸ್‌ವೈ ವಿಡಿಯೋ ಸಂವಾದ
* ಕೋವಿಡ್‌ ನಿರ್ವಹಣೆಯ ಸಂದರ್ಭದಲ್ಲಿ ಮೊದಲಿಗೆ ಭಯಭೀತರಾಗಿದ್ದ ಸಾರ್ವಜನಿಕರು
* ಸೋಂಕಿತರಿಗೆ ಪೌಷ್ಟಿಕ ಆಹಾರ ಸೇವಿಸುವಂತೆ ಮನವರಿಕೆ 

CM BS Yediyurappa appreciating the Asha Workers during Coronavirus grg
Author
Bengaluru, First Published Jun 9, 2021, 7:12 AM IST

ಬೆಂಗಳೂರು(ಜೂ.09): ಕೋವಿಡ್‌ ನಿಯಂತ್ರಿಸುವಲ್ಲಿ ಮುಂಚೂಣಿ ಸಾಲಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರ ಜತೆ ವಿಡಿಯೋ ಸಂವಾದ ನಡೆಸಿದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಕೊರೋನಾ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.

ವಿವಿಧ ಜಿಲ್ಲೆಗಳ ಆಶಾ ಕಾರ್ಯಕರ್ತೆಯರ ಜತೆ ಮಂಗಳವಾರ ಗೃಹ ಕಚೇರಿ ಕೃಷ್ಣಾದಲ್ಲಿ ವಿಡಿಯೋ ಸಂವಾದ ಮೂಲಕ ಅವರ ಯೋಗಕ್ಷೇಮ ವಿಚಾರಿಸಿದರು. ಅಲ್ಲದೇ, ಆರೋಗ್ಯದ ಸ್ಥಿತಿಗತಿ, ಕಾರ್ಯನಿರ್ವಹಣೆ, ಅವರ ವ್ಯಾಪ್ತಿಯಲ್ಲಿ ಕೋವಿಡ್‌ ಪ್ರಕರಣಗಳ ವಿವರ, ಸಾರ್ವಜನಿಕರು, ಮೇಲಾಧಿಕಾರಿಗಳ ಸಹಕಾರ ಸೇರಿದಂತೆ ಇನ್ನಿತರ ವಿಚಾರಗಳ ಕುರಿತು ಚರ್ಚಿಸಿದರು. ಆಶಾ ಕಾರ್ಯಕರ್ತೆಯರ ಪರಿಶ್ರಮ ಹಾಗೂ ಅಪಾಯಕಾರಿ ಸನ್ನಿವೇಶದಲ್ಲಿ ಕಾರ್ಯನಿರ್ವಹಿಸುವುದನ್ನು ಗಮನಿಸಿ, ಕೋವಿಡ್‌ ಎರಡನೇ ಅಲೆಯ ಪರಿಹಾರ ಪ್ಯಾಕೇಜ್‌ನಡಿ ಮೂರು ಸಾವಿರ ರು. ಸಹಾಯಧನ ಘೋಷಿಸಿರುವುದಾಗಿ ಯಡಿಯೂರಪ್ಪ ತಿಳಿಸಿದರು.

ಅನುಭವ ಹಂಚಿಕೊಂಡ ಸಿಬ್ಬಂದಿ: 

ಕೋವಿಡ್‌ ನಿರ್ವಹಣೆಯ ಸಂದರ್ಭದಲ್ಲಿ ಮೊದಲಿಗೆ ಸಾರ್ವಜನಿಕರು ಭಯಭೀತರಾಗಿದ್ದರು. ಪರೀಕ್ಷೆ ಮಾಡಿಸಲು, ಲಸಿಕೆ ಹಾಕಿಸಿಕೊಳ್ಳಲು ಹಿಂಜರಿಯುತ್ತಿದ್ದರು. ಕೋವಿಡ್‌ ಸೋಂಕಿತರು ಕೋವಿಡ್‌ ಕೇರ್‌ ಕೇಂದ್ರಗಳಿಗೆ ದಾಖಲಾಗಲು ಭಯ ಪಡುತ್ತಿದ್ದರು. ಆದರೆ, ಇದೀಗ ಸಹಕರಿಸುತ್ತಿದ್ದಾರೆ ಎಂದು ಆಶಾ ಕಾರ್ಯಕರ್ತೆಯರು ತಮ್ಮ ಅನುಭವಗಳನ್ನು ಹಂಚಿಕೊಂಡರು. ಅಲ್ಲದೇ, ಲಸಿಕೆ ಹಾಕಿಸಲು ತಮ್ಮ ಗ್ರಾಮದ ಜನರ ಮನವೊಲಿಸಿ, ಮೇಲಾಧಿ​ಕಾರಿಗಳ ಸಹಾಯದಿಂದ ವಾಹನ ವ್ಯವಸ್ಥೆ ಮಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಕರೆದೊಯ್ದು ಲಸಿಕೆ ಹಾಕಿಸಿದ್ದನ್ನು ಸ್ಮರಿಸಿಕೊಂಡರು.

ಗುಡ್ ನ್ಯೂಸ್ : ರಾಜ್ಯದಲ್ಲಿ ಕೊರೋನಾ ಪಾಸಿಟಿವ್ ಸಂಖ್ಯೆಯಲ್ಲಿ ಭಾರೀ ಇಳಿಕೆ

ಆಶಾ ಕಾರ್ಯಕರ್ತರ ಜೊತೆ ಬಿಎಸ್‌ವೈ ವಿಡಿಯೋ ಸಂವಾದ

ಕೋವಿಡ್‌ ಪೀಡಿತರಾಗಿದ್ದ ಶಿವಮೊಗ್ಗ ಜಿಲ್ಲೆ ಮುಂಬಾರಿನ ಕೆ.ವಿ.ಶಾರದಾ, ಕೋವಿಡ್‌ ಕೇರ್‌ ಸೆಂಟರ್‌ನಿಂದಲೇ ಸಂವಾದದಲ್ಲಿ ಪಾಲ್ಗೊಂಡರು. ಕಳೆದ 15 ದಿನದವರೆಗೆ ತಮ್ಮ ಗ್ರಾಮ ಕೋವಿಡ್‌ ಮುಕ್ತವಾಗಿತ್ತು. ಇದೀಗ ಏಳು ಪ್ರಕರಣಗಳು ಕಂಡು ಬಂದಿವೆ. ಇಬ್ಬರು ಹೋಂ ಐಸೊಲೇಷನ್‌ನಲ್ಲಿದ್ದು, ಉಳಿದವರು ಕೋವಿಡ್‌ ಕೇರ್‌ ಸೆಂಟರಿನಲ್ಲಿ ದಾಖಲಾಗಿದ್ದಾರೆ ಎಂದು ವಿವರಿಸಿದರು.

ಜನರು ಲಸಿಕೆಯ ಸುರಕ್ಷತೆ ಬಗ್ಗೆ ಅನುಮಾನ ವ್ಯಕ್ತಪಡಿಸಿದಾಗ ತಮ್ಮ ಪತಿಗೆ ಮೊದಲಿಗೆ ಲಸಿಕೆ ಕೊಡಿಸಿ, ಜನರಲ್ಲಿ ವಿಶ್ವಾಸ ಮೂಡಿಸಿದ ಅನುಭವವನ್ನು ರಾಮನಗರದ ಶಿವಲಿಂಗಮ್ಮ ಹಂಚಿಕೊಂಡರು. ವಿಜಯಪುರ ಜಿಲ್ಲೆಯ ದೀಪಾ ಬಜ್ಜನವರ ಅವರು, ಕೋವಿಡ್‌ ಕೇರ್‌ ಸೆಂಟರ್‌ಗೆ ದಾಖಲಾಗಲು ಜನರು ಹಿಂದೇಟು ಹಾಕಿದ ಅನುಭವವನ್ನು ವಿವರಿಸಿದರು. ಸಬ್ಬಮಂಗಲದ ರತ್ನಮ್ಮ ಅವರು, ಮನೆ ಮನೆಗೆ ಭೇಟಿ ನೀಡಿ, ಅರಿವು ಮೂಡಿಸುವುದರೊಂದಿಗೆ ಸೋಂಕಿತರಿಗೆ ಪೌಷ್ಟಿಕ ಆಹಾರ ಸೇವಿಸುವಂತೆ ಮನವರಿಕೆ ಮಾಡುತ್ತಿರುವುದಾಗಿ ತಿಳಿಸಿದರು.

ಕೊಪ್ಪಳ ಜಿಲ್ಲೆ ನವಲಿ ಗ್ರಾಮದ ಲಕ್ಷ್ಮವ್ವ ನಾಯಕ್‌, ತಮ್ಮ ಗ್ರಾಮದಲ್ಲಿ 60 ವರ್ಷ ಮೇಲ್ಪಟ್ಟ 120 ಜನರಲ್ಲಿ 115 ಜನರಿಗೆ ಲಸಿಕೆ ಹಾಕಿಸಿರುವುದಾಗಿ ಹೇಳಿದರು. ಬೆಳಗಾವಿ ಜಿಲ್ಲೆ ಸುರೇಬಾನದ ಶಾರದಾ ಮುದ್ದನ್ನವರ ಅವರು ಬಡಜನರ ಚಿಕಿತ್ಸೆಗೆ ದಾನಿಗಳಿಂದ ನೆರವು ದೊರಕಿಸುವ ಪ್ರಯತ್ನ ಮಾಡಿರುವುದನ್ನು ಮುಖ್ಯಮಂತ್ರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.

ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಮಾತನಾಡಿ, ಗ್ರಾಮಸ್ಥರಿಗೆ ಕೋವಿಡ್‌ ಲಸಿಕೆ ಸುರಕ್ಷಿತ ಎಂಬುದನ್ನು ಮನವರಿಕೆ ಮಾಡುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ಹಾಕಿಸಬೇಕು. ಜೊತೆಗೆ, ಐಎಲ್‌ಐ, ಸಾರಿ ಪ್ರಕರಣಗಳು ಕಂಡುಬಂದಲ್ಲಿ ಅವರಿಗೆ ಕೂಡಲೇ ಪರೀಕ್ಷೆ ಮಾಡಿಸಿ, ಚಿಕಿತ್ಸೆ ಒದಗಿಸಲು ಕ್ರಮ ವಹಿಸುವಂತೆ ಸಲಹೆ ನೀಡಿದರು.
 

Follow Us:
Download App:
  • android
  • ios