Asianet Suvarna News Asianet Suvarna News

ಜನರ ಮನದಾಳ ಅರಿವ ಮಾಧ್ಯಮಕ್ಕೆ ಯಶಸ್ಸು: ಸಿಎಂ ಬೊಮ್ಮಾಯಿ

ಜನರ ಮನದಾಳ ಅರ್ಥೈಸಿಕೊಂಡು ಮುನ್ನಡೆವ ಮಾಧ್ಯಮ ಯಶಸ್ವಿಯಾಗುತ್ತದೆ. ‘ವಿಸ್ತಾರ’ ಸುದ್ದಿ ವಾಹಿನಿ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿ ಯಶಸ್ವಿಯಾಗುವ ವಿಶ್ವಾಸವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. 

CM Basavaraj Bommai Talks Over Vistara News Channel gvd
Author
First Published Nov 7, 2022, 1:40 AM IST

ಬೆಂಗಳೂರು (ನ.07): ಜನರ ಮನದಾಳ ಅರ್ಥೈಸಿಕೊಂಡು ಮುನ್ನಡೆವ ಮಾಧ್ಯಮ ಯಶಸ್ವಿಯಾಗುತ್ತದೆ. ‘ವಿಸ್ತಾರ’ ಸುದ್ದಿ ವಾಹಿನಿ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿ ಯಶಸ್ವಿಯಾಗುವ ವಿಶ್ವಾಸವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಭಾನುವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ನೂತನ ಸುದ್ದಿವಾಹಿನಿ ‘ವಿಸ್ತಾರ’ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು. ಮಾಧ್ಯಮ ಹಾಗೂ ಸಾರ್ವಜನಿಕ ವಲಯದ ನಡುವೆ ಅವಿನಾಭಾವ ಸಂಬಂಧ ಇರುತ್ತದೆ. ಜನತೆಯ ಆಶೋತ್ತರಕ್ಕೆ ಧ್ವನಿಯಾಗುವ ಮಾಧ್ಯಮ ಯಶಸ್ವಿಯಾಗಲು ಸಾಧ್ಯ. 

ಪ್ರಜಾಪ್ರಭುತ್ವದ ಮೇಲಿನ ಜನರ ವಿಶ್ವಾಸ ಉಳಿಯುವಂತೆ ಮಾಡುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು. ರಾಜಕಾರಣಿ, ಆಡಳಿತ ವ್ಯವಸ್ಥೆ, ನ್ಯಾಯಾಂಗ ಹಾಗೂ ಪತ್ರಕರ್ತರು ಸೇರಿ ಪ್ರಜಾಪ್ರಭುತ್ವ ಉಳಿಸುವ ಕೆಲಸ ಮಾಡಬೇಕು. ನಾವು ನೋಡುವ ದೃಷ್ಟಿಯಲ್ಲಿ ಜಗತ್ತು ಇರುವುದಿಲ್ಲ. ಜಗತ್ತು ಯಾವ ರೀತಿ ನಮ್ಮನ್ನು ನೋಡುತ್ತಿದೆ ಎಂಬುದರ ಅರಿವು ನಮಗಿರಬೇಕು ಎಂದು ಆತ್ಮಶುದ್ಧಿಯಿಂದ ನಡೆದುಕೊಳ್ಳುವುದರ ಮಹತ್ವ ತಿಳಿಸಿದರು.

ಸಾಲ ಕಟ್ಟದಿದ್ದರೂ ರೈತರ ಆಸ್ತಿ ಜಪ್ತಿ ಮಾಡುವಂತಿಲ್ಲ: ಸಿಎಂ ಬೊಮ್ಮಾಯಿ

ಕೇಂದ್ರ ಕಲ್ಲಿದ್ದಲು ಖಾತೆ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಪತ್ರಿಕೆ, ಸುದ್ದಿವಾಹಿನಿ ಸಮಾಜದ ಶುದ್ಧ ಕನ್ನಡಿಯಾಗಿರಬೇಕು. ಮಾಧ್ಯಮದಲ್ಲಿ ಬಂದಿದ್ದೇ ಸತ್ಯ ಎಂದು ಜನ ನಂಬುವ ಕಾಲವಿತ್ತು. ಆದರೆ, ಇವತ್ತು ಆ ಸ್ಥಿತಿಯಿಲ್ಲ. ವಿಶ್ವಾಸಾರ್ಹತೆ ಉಳಿಸಿಕೊಳ್ಳುವ ಸವಾಲು ಮಾಧ್ಯಮಗಳಿಗಿವೆ. ವಿಸ್ತಾರ ವಾಹಿನಿ ಯಶಸ್ವಿಯಾಗಲಿ ಎಂದು ಹಾರೈಸಿದರು. ಕೇಂದ್ರ ವಾರ್ತಾ ಇಲಾಖೆ ರಾಜ್ಯ ಖಾತೆ ಸಚಿವ ಡಾ. ಎಲ್‌. ಮುರುಗನ್‌, ವಿಧಾನಸಭೆಯ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಹರಿಹರದ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಅವರು ಮಾತನಾಡಿ ಶುಭ ಕೋರಿದರು.

Global Investors Meet 2022: ಕುಲಕರ್ಣಿ, ಗೌಡ, ಪಾಟೀಲರು ಉದ್ಯಮಿ ಆಗ್ಬೇಕು: ಸಿಎಂ ಬೊಮ್ಮಾಯಿ

ಪ್ರಾಸ್ತಾವಿಕವಾಗಿ ಮಾತನಾಡಿದ ವಿಸ್ತಾರ ಪ್ರಧಾನ ಸಂಪಾದಕ ಹರಿಪ್ರಕಾಶ ಕೋಣೆಮನೆ, ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ವಿಸ್ತಾರ ಮ್ಯೂಸಿಕ್‌, ವಿಸ್ತಾರ ಮನರಂಜನಾ ವಾಹಿನಿಯನ್ನು ರಾಜ್ಯಕ್ಕೆ ಅರ್ಪಿಸಲಿದ್ದೇವೆ. ಸಮಾಜವನ್ನು ಒಳಗೊಂಡು ರಾಜ್ಯದ ಕೆಲಸ ಮಾಡುತ್ತೇವೆ ಎಂದರು. ಆರೋಗ್ಯ ಸಚಿವ ಡಾ.ಸುಧಾಕರ್‌, ಕಂದಾಯ ಸಚಿವ ಆರ್‌.ಅಶೋಕ್‌, ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ, ರಾಜ್ಯ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌.ಷಡಕ್ಷರಿ, ವಿಸ್ತಾರದ ಎಂಡಿ ಧರ್ಮೇಶ, ಶ್ರೀನಿವಾಸ ಹೆಬ್ಬಾರ ಸೇರಿ ಇತರರಿದ್ದರು.

Follow Us:
Download App:
  • android
  • ios