* ಅಗತ್ಯ ಅನುಮತಿ ಪಡೆದು ಡ್ಯಾಂ ನಿರ್ಮಾಣ* ಕಾವೇರಿ ಮೇಲೆ ಕರ್ನಾಟಕಕ್ಕೆ ಎಲ್ಲ ಹಕ್ಕುಗಳಿವೆ* ನಾವು ನಿಶ್ಚಿತವಾಗಿ ಮೇಕೆದಾಟು ಯೋಜನೆ ಜಾರಿಗೊಳಿಸುತ್ತೇವೆ
ನವದೆಹಲಿ(ಆ.01): ಮೇಕೆದಾಟಿನಲ್ಲಿ ಕರ್ನಾಟಕ ನಿರ್ಮಿಸಲು ಉದ್ದೇಶಿಸಿರುವ ಅಣೆಕಟ್ಟೆಯನ್ನು ವಿರೋಧಿಸಿ ತಮಿಳುನಾಡು ಬಿಜೆಪಿ ಅಧ್ಯಕ್ಷ, ಕರ್ನಾಟಕದ ಮಾಜಿ ಐಪಿಎಸ್ ಅಧಿಕಾರಿ ಕೆ.ಅಣ್ಣಾಮಲೈ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಹೇಳಿರುವುದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ಯಾರಾದರೂ ಊಟ ಮಾಡಲಿ ಬಿಡಲಿ, ನಾವು ಮೇಕೆದಾಟು ಡ್ಯಾಂ ನಿರ್ಮಿಸುತ್ತೇವೆ’ ಎಂದು ಹೇಳಿದ್ದಾರೆ.
ಶನಿವಾರ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅಣ್ಣಾಮಲೈ ಅವರ ಕೆಲಸ ಮಾಡುತ್ತಾರೆ. ಅದು ನಮಗೆ ಸಂಬಂಧಿಸಿದ್ದಲ್ಲ. ಅವರು ಉಪವಾಸ ಮಾಡುವುದಕ್ಕೂ ನನಗೂ ಸಂಬಂಧವಿಲ್ಲ. ಕರ್ನಾಟಕಕ್ಕೆ ಕಾವೇರಿ ನದಿ ನೀರಿನ ಮೇಲೆ ಎಲ್ಲಾ ಹಕ್ಕುಗಳಿವೆ. ನಾವು ನಿಶ್ಚಿತವಾಗಿ ಮೇಕೆದಾಟು ಯೋಜನೆ ಜಾರಿಗೊಳಿಸುತ್ತೇವೆ. ಅದಕ್ಕೆ ಬೇಕಾದ ಅನುಮತಿಗಳನ್ನೂ ಪಡೆದುಕೊಳ್ಳುತ್ತೇವೆ. ಯಾರಾದರೂ ಊಟ ಮಾಡಲಿ ಬಿಡಲಿ’ ಎಂದು ಹೇಳಿದರು.
ಮೇಕೆದಾಟು ವಿಷಯದಲ್ಲಿ ತಮಿಳುನಾಡು ಪರ : ಅಣ್ಣಾಮಲೈ
ಕರ್ನಾಟಕ ಸರ್ಕಾರ ಈಗಾಗಲೇ ವಿಸ್ತೃತ ಯೋಜನಾ ವರದಿಯನ್ನು ತಯಾರಿಸಿ ಕೇಂದ್ರ ಸರ್ಕಾರದ ಅನುಮತಿಗಾಗಿ ಸಲ್ಲಿಸಿದೆ ಎಂದೂ ಅವರು ತಿಳಿಸಿದರು. ಮೇಕೆದಾಟು ಡ್ಯಾಂ ವಿರೋಧಿಸಿ ಆ.5ರಂದು ಒಂದು ದಿನದ ಉಪವಾಸ ಕೈಗೊಳ್ಳುವುದಾಗಿ ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಅಣ್ಣಾಮಲೈ ಇತ್ತೀಚೆಗಷ್ಟೇ ಹೇಳಿದ್ದರು.
