ಚಿಕ್ಕಮಗಳೂರಿನಲ್ಲಿ ನಡೆಯುತ್ತಿರುವ ವಕೀಲರು ಹಾಗೂ ಪೊಲೀಸರ ನಡುವಿನ ಜಟಾಪಟಿ ತೀವ್ರ ಸ್ಪರೂಪಕ್ಕೆ ತಿರುಗಿದೆ. 6 ಪೊಲೀಸರ ಅಮಾನತು ಬೆನ್ನಲ್ಲೇ ಕರ್ತವ್ಯನಿರತ ಪೊಲೀಸರು ಇದೀಗ ಪ್ರತಿಭಟನೆಗೆ ಇಳಿದಿದ್ದಾರೆ. ರಸ್ತೆ ತಡೆದು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.

ಚಿಕ್ಕಮಗಳೂರು(ಡಿ.02) ವಕೀಲರು ಹಾಗೂ ಪೊಲೀಸರ ನಡುವಿನ ಗಲಾಟೆ ಪ್ರಕರಣ ಇದೀಗ ತೀವ್ರ ಸ್ವರೂಪ ಪಡೆದುಕೊಂಡಿದೆ. ಚಿಕ್ಕಮಗಳೂರಿನ ಯುವ ವಕೀಲನ ಮೇಲೆ ಪೊಲೀಸ್ ಸಿಬ್ಬಂದಿ ಅಮಾನುಷವಾಗಿ ಥಳಿಸಿದ್ದಾರೆ ಎಂದು ವಕೀಲರು ಪ್ರತಿಭಟನೆ ಆರಂಭಿಸಿದ್ದಾರೆ. ಇದರ ಬೆನ್ನಲ್ಲೇ ಸರ್ಕಾರ ಹಲ್ಲೆ ನಡೆಸಿದ 6 ಪೊಲೀಸರ ಅಮಾನತು ಮಾಡಿತ್ತು. ಇದು ಪೊಲೀಸರ ಆಕ್ರೋಶಕ್ಕೆ ಕಾರಣವಾಗಿತ್ತು. ಇಲ್ಲಿಂದ ಆರಂಭಗೊಂಡ ಜಟಾಪಟಿ ಇದೀಗ ಮತ್ತೊಂದು ಹಂತ ತಲುಪಿದೆ. ಅಮಾನತು ಮಾಡಿರುವ ಪೊಲೀಸರ ಬೈಕಿ ಓರ್ವ ಪೊಲೀಸ್‌ನ ಬಂಧಿಸಿರುವುದು ಚಿಕ್ಕಮಗಳೂರು ಪೊಲೀಸರ ಕೆರಳಿಸಿದೆ. ಕರ್ತವ್ಯಕ್ಕೆ ಹಾಜರಾಗಬೇಕಿದ್ದ ಪೊಲೀಸರು ನೇರವಾಗಿ ರಸ್ತೆಗಿಳಿದು ಪ್ರತಿಭಟನೆ ಮಾಡಿದ್ದಾರೆ. ಕಡೂರು-ಬೆಂಗಳೂರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ. ಪೊಲೀಸರ ಪ್ರತಿಭಟನೆಯಿಂದ ಹೆದ್ದಾರಿ ಜಾಮ್ ಆಗಿದೆ.

Add Asianetnews Kannada as a Preferred SourcegooglePreferred

ಕ್ಷಣಕ್ಷಣಕ್ಕೂ ಚಿಕ್ಕಮಗಳೂರು ವಕೀಲರು ಹಾಗೂ ಪೊಲೀಸರ ನಡುವಿನ ಗಲಾಟೆ ಪ್ರಕರಣ ಜೋರಾಗುತ್ತಿದೆ. 200ಕ್ಕೂ ಹೆಚ್ಚು ಪೊಲೀಸರು ರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ 173 ಬಂದ್ ಮಾಡಿದ್ದಾರೆ. ಪರಿಸ್ಥಿತಿ ಕೈಮೀರುತ್ತಿದ್ದಂತೆ ಸ್ಥಳಕ್ಕೆ ಪಶ್ಚಿಮ ವಲಯ ಐಜಿಪಿ ಚಂದ್ರಗುಪ್ತ ಭೇಟಿ ನೀಡಿ ಪೊಲೀಸರ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಯಾವುದೇ ಪ್ರಯತ್ನಕ್ಕೂ ಪೊಲೀಸರು ಬಗ್ಗುತ್ತಿಲ್ಲ. 

ಚಿಕ್ಕಮಗಳೂರು: ಹೆಲ್ಮೆಟ್ ಹಾಕಿಲ್ಲ ಅಂತ ವಕೀಲರಿಗೆ ಮನಸೋ ಇಚ್ಛೆ ಥಳಿಸಿದ ಪೊಲೀಸರ ಬಂಧನಕ್ಕೆ ಆಗ್ರಹ

ಪ್ರತಿಭಟನೆ ತೀವ್ರಗೊಳಿಸಿರುವ ಕಾರಣ ನಗರದಲ್ಲಿ ಟ್ರಾಫಿಕ್ ಜಾಮ್ ಸೃಷ್ಟಿಯಾಗಿದೆ.ರಸ್ತೆ ಉದ್ದಕ್ಕೂ ವಾಹನಗಳು ಸಾಲುಗಟ್ಟಿ ನಿಂತಿದೆ. ಹನುಮಂತಪ್ಪ ವೃತ್ತದ ಬಳಿ ನೂರಾರು ಪೊಲೀಸರು ನ್ಯಾಯಕ್ಕಾಗಿ ಹೋರಾಟ ಆರಂಭಿಸಿದ್ದಾರೆ. ನಗರ ಪೊಲೀಸ್ ಠಾಣೆಯಿಂದ ಡಿವೈಎಸ್ಪಿ ಕಚೇರಿಗೆ ಪ್ರತಿಭಟನೆ ಮಾಡಿಕೊಂಡು ಹೊರಟ ಪೊಲೀಸರು ಘೋಷಣೆ ಕೂಗಿದ್ದಾರೆ. ಪೊಲೀಸ್ ಠಾಣೆಗೆ ನುಗ್ಗಿ ದಾಂದಲೆ ಮಾಡಿದ ವಕೀಲರ ಬಂಧನ ಆಗಲೇಬೇಕು, ಗೂಂಡಾ ವರ್ತನೆ ತೋರಿದ ವಕೀಲರನ್ನು ಬಾರ್ ಕೌನ್ಸಿಲ್‌ನಿಂದ ಕೈಬಿಡಬೇಕು ಎಂದು ಪೊಲೀಸರು ಅಗ್ರಹಿಸಿದ್ದಾರೆ.

ನ್ಯಾಯ ಸಿಗುವವರೆಗೂ ಪ್ರತಿಭಟನೆ ನಿಲ್ಲುವುದಿಲ್ಲ. ಜಿಲ್ಲೆಯಿಂದ ಎಲ್ಲಾ ಪೊಲೀಸರು ಇಲ್ಲಿಗೆ ಆಗಮಿಸಲಿ.ನ್ಯಾಯ ಸಿಗುವ ವರೆಗೂ ಪ್ರತಿಭಟನೆ ಕೈಬಿಡಲ್ಲ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಇದೇ ವೇಳೆ ಈ ಹಿಂದೆ ಕರ್ತವ್ಯ ನಿರ್ವಹಿಸಿದ ಐಎಎಸ್ ಅಧಿಕಾರಿ ಅಣ್ಣಾಮಲೈ ನೆನೆದಿದ್ದಾರೆ. ಅಣ್ಣಾಮಲೈ ಸಾಹೇಬ್ರು ಇದ್ದಾಗ ಎಲ್ಲಾ ಚೆನ್ನಾಗಿತ್ತು ಎಂದಿದ್ದಾರೆ.

ರಾತ್ರಿ ಮಂಕಿ ಕ್ಯಾಪ್ ಧರಿಸಿ ಬಂದಿದ್ದ ಕಿರಾತಕನಿಂದ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಮೇಲೆ ಮಾರಣಾಂತಿಕ ಹಲ್ಲೆ!