*ಹೊಸ ಬೆಂಗಳೂರು ನಗರ ಪೊಲೀಸ್ ಆಯ್ತುಕ್ತರ ನೇಮಕ* ಬೆಂಗಳೂರು ನಗರದ ನೂತನ ಪೊಲೀಸ್‌ ಆಯುಕ್ತರಾಗಿ ‌ಪ್ರತಾಪ್‌ ರೆಡ್ಡಿ ನೇಮಕ* ನೇಮಕಾತಿ ವಿಭಾಗದ ಡಿಜಿಪಿಯಾಗಿ ಕಮಲ್‌ಪಂತ್‌ ಅವ್ರನ್ನ ವರ್ಗಾವಣೆ

ಬೆಂಗಳೂರು, (ಮೇ.16) : ಬೆಂಗಳೂರು ನಗರದ ನೂತನ ಪೊಲೀಸ್‌ ಆಯುಕ್ತರಾಗಿ ಪ್ರತಾಪ್‌ ರೆಡ್ಡಿ ನೇಮಕವಾಗಿದ್ದಾರೆ. ಪೊಲೀಸ್‌ ಆಯುಕ್ತರಾಗಿದ್ದ ಕಮಲ್‌ ಪಂತ್‌ ಅವರನ್ನ ವರ್ಗಾವಣೆ ಮಾಡಲಾಗಿದ್ದು, ಅವರ ಸ್ಥಾನಕ್ಕೆ ಪ್ರತಾಪ್‌ ರೆಡ್ಡಿ ಅವರನ್ನು ನೇಮಕಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಪ್ರತಾಪ್‌ರೆಡ್ಡಿ ಅವರು ಈ ಹಿಂದೆ ಸರ್ಕಾರ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿಯಾಗಿದ್ದರು. ಇನ್ನು ಕಮಲ್ ಪಂತ್ ಅವರನ್ನು ನೇಮಕಾತಿ ವಿಭಾಗದ ಡಿಜಿಪಿಯಾಗಿ ವರ್ಗಾವಣೆ ಮಾಡಲಾಗಿದೆ. 1991 ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಪ್ರತಾಪ್ ರೆಡ್ಡಿ, ಆಂಧ್ರಪ್ರದೇಶದ ಗುಂಟೂರು ಮೂಲದವರು. ಬೆಂಗಳೂರಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ ಕೆಲಸ ಮಾಡಿದ್ದರು. ಇದೀಗ ಕಾನೂನು ಸುವ್ಯವಸ್ಥೆ ಎಡಿಜಿಪಿ ಹುದ್ದೆಯಿಂದ ಬೆಂಗಳೂರು ಪೊಲೀಸ್ ಆಯುಕ್ತರಾಗಿ ವರ್ಗಾವಣೆಗೊಂಡಿದ್ದಾರೆ.

Bengaluru: ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಟ್ರಾನ್ಸ್‌ಫರ್‌?: ಹುದ್ದೆಗೇರಲು ಭಾರೀ ಪೈಪೋಟಿ ಶುರು..!

ಇನ್ನು ಕಮಲ್ ಪಂತ್ ಸೇರಿದಂತೆ ಐವರು IPS ಅಧಿಕಾರಿಗಳನ್ನ ಸರ್ಕಾರ ವರ್ಗಾವಣೆ ಮಾಡಿದ್ದು, ಕೆಎಸ್‌ಆರ್‌ಪಿ ಎಡಿಜಿಪಿಯಾಗಿದ್ದ ಅಲೋಕ್ ಕುಮಾರ್ರನ್ನು ಲಾ & ಆರ್ಡರ್ ಎಡಿಜಿಪಿಯಾಗಿ ವರ್ಗಾಹಿಸಲಾಗಿದೆ. ಕೆಎಸ್‌ಆರ್‌ಪಿ ಎಡಿಜಿಪಿಯಾಗಿ ಆರ್.ಹಿತೇಂದ್ರರನ್ನ ವರ್ಗಾವಣೆ ಮಾಡಲಾಗಿದ್ದು ಸಿಐಡಿ ಎಸ್‌ಪಿಯಾಗಿ ಎಂ.ಎನ್.ಅನುಚೇತ್ ವರ್ಗಾವಣೆಯಾಗಿದೆ. ಬೆಂಗಳೂರಿನ ಕೇಂದ್ರ ವಿಭಾಗದ ಡಿಸಿಪಿಯಾಗಿ ವೆಂಕಟೇಶ್ ವರ್ಗಾವಣೆಯಾಗಿದ್ದಾರೆ.

ಅಷ್ಟೇ ಅಲ್ಲದೆ ರಾಜ್ಯದಲ್ಲಿ 37 ಇನ್‌ಸ್ಪೆಕ್ಟರ್‌ಗಳನ್ನು ವರ್ಗಾಯಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಗಾಂಜಾ ಕೇಸ್‌ಗೆ ಸಂಬಂಧಿಸಿದಂತೆ ಅಮಾನತುಗೊಂಡಿದ್ದ ಅಶ್ವಥ್ ಗೌಡರನ್ನು ತೀರ್ಥಹಳ್ಳಿ ಪೊಲೀಸ್ ಠಾಣಾ ಇನ್‌ಸ್ಪೆಕ್ಟರ್‌ ಆಗಿ ವರ್ಗಾಯಿಸಲಾಗಿದೆ.

ಆಯುಕ್ತರ ಹುದ್ದೆಗೆ ರೇಸ್‌ನಲ್ಲಿದ್ದ ಹಲವರು
ಆಯುಕ್ತರ ಹುದ್ದೆ ರೇಸ್‌ನಲ್ಲಿ ಕೆಎಸ್‌ಆರ್‌ಪಿ ಎಡಿಜಿಪಿ ಅಲೋಕ್‌ ಕುಮಾರ್‌(Alok Kumar), ಗುಪ್ತದಳ ಮುಖ್ಯಸ್ಥ ಬಿ.ದಯಾನಂದ್‌, ಸಿಐಡಿ ಎಡಿಜಿಪಿ ಉಮೇಶ್‌ ಕುಮಾರ್‌, ಆಂತರಿಕ ಭದ್ರತಾ ವಿಭಾಗದ ಮುಖ್ಯಸ್ಥ ಅರುಣ್‌ ಚಕ್ರವರ್ತಿ, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಪ್ರತಾಪ್‌ ರೆಡ್ಡಿ ಹೆಸರು ಮುಂಚೂಣಿಯಲ್ಲಿವೆ. ಈ ಪೈಕಿ ಅಲೋಕ್‌ ಕುಮಾರ್‌ ಮತ್ತು ಬಿ.ದಯಾನಂದ್‌ ಹೆಸರು ಹೆಚ್ಚು ಚರ್ಚೆಯಾಗುತ್ತಿದೆ. ಇಬ್ಬರೂ ಖಡಕ್‌ ಅಧಿಕಾರಿಗಳಾಗಿದ್ದು, ಉತ್ತಮ ಹೆಸರು ಪಡೆದಿದ್ದಾರೆ. ಹೀಗಾಗಿ ಆಯುಕ್ತರ ಹುದ್ದೆಗೆ ಈ ಇಬ್ಬರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತಿ.

ಇತ್ತೀಚೆಗೆ ನಡೆದ ಜೆ.ಜೆ.ನಗರ ಚಂದ್ರು ಕೊಲೆ ಪ್ರಕರಣದಲ್ಲಿ ಉರ್ದು ಮಾತನಾಡಿಲ್ಲ ಎಂಬ ಕಾರಣಕ್ಕೆ ಚಂದ್ರು ಕೊಲೆಯಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ(Araga Jnanendra) ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ಇದೇ ವಿಚಾರವಾಗಿ ಪ್ರತಿಕ್ರಿಯಿಸಿದ್ದ ಆಯುಕ್ತ ಕಮಲ್‌ ಪಂತ್‌ ಅವರು ಬೈಕ್‌ ಡಿಕ್ಕಿಯ ಕಾರಣಕ್ಕೆ ನಡೆದ ಜಗಳದ ವೇಳೆ ಚಂದ್ರು ಕೊಲೆಯಾಗಿದೆ ಎಂದು ಹೇಳಿದ್ದರು. ಈ ವಿಚಾರದಲ್ಲಿ ಗೃಹ ಸಚಿವರಾದಿಯಾಗಿ ಸರ್ಕಾರ ತೀವ್ರ ಮುಜುಗರ ಅನುಭವಿಸಿತ್ತು. ಈ ವೇಳೆ ಬಿಜೆಪಿ(BJP)s ನಾಯಕರು ಆಯುಕ್ತ ಕಮಲ್‌ ಪಂತ್‌ ವಿರುದ್ಧ ಬಹಿರಂಗ ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಕಮಲ್‌ ಪಂತ್‌ ಅವರ ವರ್ಗಾವಣೆ ವಿಚಾರ ಚರ್ಚೆಗೆ ಬಂದಿತ್ತು.