ಬೆಂಬಲ ಬೆಲೆ ಆಧಾರದ ಮೇಲೆ ಉದ್ದು, ಹೆಸರು ಕಾಳು ಖರೀದಿಗೆ ಆದೇಶ
- ರಾಜ್ಯದಲ್ಲಿ ಬೆಂಬಲ ಬೆಲೆ ಆಧಾರದ ಮೇಲೆ 30 ಸಾವಿರ ಟನ್ ಹೆಸರು ಕಾಳು ಹಾಗೂ 10 ಸಾವಿರ ಟನ್ ಉದ್ದಿನ ಕಾಳು ಖರೀದಿ
- ಖರೀದಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ಇದರಂತೆ ಖರೀದಿ ಕೇಂದ್ರಗಳ ಸ್ಥಾಪನೆ
- 90 ದಿನಗಳ ಕಾಲ ರೈತರಿಂದ ಬೆಂಬಲ ಬೆಲೆ ಆಧಾರದ ಮೇಲೆ ಖರೀದಿ
ಬೆಂಗಳೂರು (ಆ.26): ರಾಜ್ಯದಲ್ಲಿ ಬೆಂಬಲ ಬೆಲೆ ಆಧಾರದ ಮೇಲೆ 30 ಸಾವಿರ ಟನ್ ಹೆಸರು ಕಾಳು ಹಾಗೂ 10 ಸಾವಿರ ಟನ್ ಉದ್ದಿನ ಕಾಳು ಖರೀದಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ಇದರಂತೆ ಖರೀದಿ ಕೇಂದ್ರಗಳನ್ನು ಸ್ಥಾಪಿಸಿ 90 ದಿನಗಳ ಕಾಲ ರೈತರಿಂದ ಬೆಂಬಲ ಬೆಲೆ ಆಧಾರದ ಮೇಲೆ ಖರೀದಿ ಮಾಡಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಇದರಂತೆ ಗದಗ, ಧಾರವಾಡ, ಹಾವೇರಿ, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಕೊಪ್ಪಳ, ಕಲಬುರಗಿ, ಯಾದಗಿರಿ, ಬೀದರ್, ತುಮಕೂರು, ಹಾಸನ, ಮೈಸೂರು ಮತ್ತು ಚಿತ್ರದುರ್ಗ ಜಿಲ್ಲೆಗಲ್ಲಿ ಪ್ರತಿ ಕ್ವಿಂಟಾಲ್ಗೆ 7,275 ರು.ಗಳಂತೆ ಹೆಸರು ಕಾಳು ಖರೀದಿಗೆ ಸಹಕಾರ ಇಲಾಖೆ ಆದೇಶ ಹೊರಡಿಸಿದೆ.
ರೈತರನ್ನು ಸ್ವಾವಲಂಬಿಯಾಗಿಸಲು 10 ಸಾವಿರ ರೈತ ಉತ್ಪಾದಕ ಸಂಘ
ರಾಜ್ಯದ ವತಿಯಿಂದ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳವನ್ನು ಖರೀದಿ ಸಂಸ್ಥೆಯನ್ನಾಗಿ ಗುರುತಿಸಲಾಗಿದೆ. ಪ್ರತಿ ಎಕರೆಗೆ 4 ಕ್ವಿಂಟಾಲ್ ಗರಿಷ್ಠ ಪ್ರಮಾಣ ಹಾಗೂ ಪ್ರತಿ ರೈತರಿಂದ 6 ಕ್ವಿಂಟಾಲ್ ಹೆಸರು ಕಾಳು ಖರೀದಿ ಪ್ರಮಾಣ ನಿಗದಿಪಡಿಸಿ ಖರೀದಿ ಮಾಡಬೇಕು. ಉದ್ದಿನ ಕಾಳು ಪ್ರತಿ ಎಕರೆಗೆ ಮೂರು ಕ್ವಿಂಟಾಲ್ ಹಾಗೂ ಪ್ರತಿ ರೈತರಿಂದ 6 ಕ್ವಿಂಟಾಲ್ ಖರೀದಿಸಬೇಕು ಎಂದು ತಿಳಿಸಲಾಗಿದೆ.
ಖರೀದಿ ಸಂಸ್ಥೆಗಳು ಗ್ರಾಮೀಣ ಭಾಗದ ರೈತರಿಗೆ ಅನುಕೂಲವಾಗುವಂತೆ ಮಾರ್ಗಸೂಚಿ ಅನ್ವಯ ಖರೀದಿ ಕೇಂದ್ರ ತೆರೆಯಬೇಕು. ರೈತ ನೋಂದಣಿ ಕಾರ್ಯಕ್ಕೆ ಸಿಬ್ಬಂದಿ ಕೊರತೆ ಕಂಡು ಬಂದಲ್ಲಿ ಕಂದಾಯ ಇಲಾಖೆ ಸಿಬ್ಬಂದಿ ಹಾಗೂ ಮತ್ತಿತರ ಇಲಾಖೆಗಳಲ್ಲಿ ಲಭ್ಯವಿರುವ ಸಿಬ್ಬಂದಿಗಳನ್ನು ಬಳಸಿಕೊಳ್ಳಬೇಕು ಎಂದು ಆದೇಶದಲ್ಲಿ ಸಹಕಾರ ಇಲಾಖೆ ತಿಳಿಸಿದೆ.