ಮಳವಳ್ಳಿ ತಾಲೂಕಿನ ಸಂಶೆಟ್ಟಿಪುರ ಗೇಟ್ ಬಳಿ ಕಾರು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತಮಿಳುನಾಡು ಮೂಲದ ರಾಹುಲ್ ವಿಘ್ನೇಶ್ವರ್ (25) ಮೃತರು. ಹಿಂಬದಿ ಸವಾರ ಪುವಿತ್ ಕುಮಾರ್ ಗಾಯಗೊಂಡಿದ್ದಾರೆ.

ಮಳವಳ್ಳಿ ((ಜೂ.17): ಕಾರು ಡಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟಿರುವ ಘಟನೆ ತಾಲೂಕಿನ ಸಂಶೆಟ್ಟಿಪುರ ಗೇಟ್ ಬಳಿ ಭಾನುವಾರ ಸಂಜೆ ನಡೆದಿದೆ.

Add Asianetnews Kannada as a Preferred SourcegooglePreferred

ತಮಿಳುನಾಡು ಮೂಲದ ರಾಹುಲ್ ವಿಘ್ನೇಶ್ವರ್ (25) ಮೃತಪಟ್ಟವರು.

ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ರಾಹುಲ್ ವಿಘ್ನೇಶ್ವರ್ ತಮ್ಮ ಮೂವರು ಸ್ನೇಹಿತರೊಂದಿಗೆ ಬೈಕ್ ಗಳಲ್ಲಿ ಮೈಸೂರಿನ ಚಾಮುಂಡಿಬೆಟ್ಟಕ್ಕೆ ತೆರಳಿ ವಾಪಸ್ ಬೆಂಗಳೂರಿಗೆ ಹೋಗುತ್ತಿದ್ದ ವೇಳೆ ಮಳವಳ್ಳಿ ಕಡೆಯಿಂದ ಬಂದ ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ರಾಹುಲ್ ವಿಘ್ನೇಶ್ವರ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಹಿಂಬದಿ ಸವಾರ ಪುವಿತ್ ಕುಮಾರ್ ಸಹ ಗಾಯಗೊಂಡಿದ್ದು, ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಕಿರುಗಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತೆಂಗಿನ ಮರ ಬಿದ್ದು ರೈತನಿಗೆ ಗಂಭೀರ ಗಾಯ

ನಾಗಮಂಗಲ: ಜಮೀನಿನಲ್ಲಿ ತೆಂಗಿನಕಾಯಿ ಸುಲಿಯುತ್ತಿದ್ದ ರೈತನ ಮೇಲೆ ತೆಂಗಿನ ಮರ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಲಾಳನಕೆರೆ ಗ್ರಾಮದಲ್ಲಿ ಸೋಮವಾರ ಬೆಳಗ್ಗೆ ಸಂಭವಿಸಿದೆ.

ಗ್ರಾಮದ ಬೋಜೇಗೌಡರ ಪುತ್ರ ಎಲ್.ಬಿ.ಕುಮಾರ್ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ರೈತ.

ಸೋಮವಾರ ಬೆಳಗ್ಗೆ ತಮ್ಮ ಜಮೀನಿನಲ್ಲಿ ತೆಂಗಿನಕಾಯಿ ಸುಲಿಯುತ್ತಿದ್ದ ವೇಳೆ ಬೀಸಿದ ಬಿರುಗಾಳಿ ರಭಸಕ್ಕೆ ಹತ್ತಿರದಲ್ಲಿದ್ದ ತೆಂಗಿನ ಮರ ಬಿದ್ದು ರೈತ ಕುಮಾರ್ ಅವರ ಕಾಲು ಮುರಿದಿದೆ. ಅಲ್ಲದೇ, ಕಾಯಿ ಸುಲಿಯುತ್ತಿದ್ದ ಹಾರೆ ಎದೆಯ ಭಾಗಕ್ಕೆ ಚುಚ್ಚಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದರು.

ತೆಂಗಿನ ಮರದ ಕೆಳಗೆ ಸಿಲುಕಿ ಚೀರಾಡುತ್ತಿದ್ದ ಕುಮಾರ್ ಅವರನ್ನು ನೋಡಿದ ಸ್ಥಳೀಯರು ಹೊರ ತೆಗೆದು ನಂತರ ತಾಲೂಕಿನ ಬಿ.ಜಿ.ನಗರದ ಆದಿಚುಂಚನಗಿರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.