Asianet Suvarna News Asianet Suvarna News

ಬಿಎಸ್‌ವೈ ರಾಜ್ಯ ಪ್ರವಾಸಕ್ಕೆ ಹೈಕಮಾಂಡ್ ಬ್ರೇಕ್ ಹಾಕಿದೆಯಾ? ಬಿವೈ ವಿಜಯೇಂದ್ರ ಏನು ಹೇಳಿದ್ರು?

ಬೆಳಗಾವಿ ಜಿಲ್ಲೆ ಹುಕ್ಕೇರಿ ಹಿರೇಮಠಕ್ಕೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿವೈ ವಿಜಯೇಂದ್ರ ಭೇಟಿ ನೀಡಿದರು. ನವರಾತ್ರಿ ಪ್ರಯುಕ್ತ ಹಿರೇಮಠದಲ್ಲಿ ನಡೆಯುತ್ತಿರುವ 9 ದಿನ ನವ ಚಂಡಿಕಾ ಯಾಗದಲ್ಲಿ ಭಾಗಿಯಾಗಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಗಳಿಂದ ಆಶೀರ್ವಾದ ಪಡೆದರು. 

BY Vijayendra visited Hukkeri Hiremath in Belgaum today at belagavi rav
Author
First Published Oct 21, 2023, 12:40 PM IST

ಚಿಕ್ಕೋಡಿ (ಅ.21): ಬೆಳಗಾವಿ ಜಿಲ್ಲೆ ಹುಕ್ಕೇರಿ ಹಿರೇಮಠಕ್ಕೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿವೈ ವಿಜಯೇಂದ್ರ ಭೇಟಿ ನೀಡಿದರು. ನವರಾತ್ರಿ ಪ್ರಯುಕ್ತ ಹಿರೇಮಠದಲ್ಲಿ ನಡೆಯುತ್ತಿರುವ 9 ದಿನ ನವ ಚಂಡಿಕಾ ಯಾಗದಲ್ಲಿ ಭಾಗಿಯಾಗಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಗಳಿಂದ ಆಶೀರ್ವಾದ ಪಡೆದರು. 

ಹುಕ್ಕೇರಿ ಹಿರೇಮಠದ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ವಿಜಯೇಂದ್ರ, ಹುಕ್ಕೇರಿ ದಸರಾ ಮಹೋತ್ಸವಕ್ಕೆ ಅ.18ರಂದು ಭಾಗವಹಿಸಬೇಕಿತ್ತು. ಆದರೆ ಕಾರಣಾಂತರಗಳಿಂದ ಆಗಿರಲಿಲ್ಲ. ನಿನ್ನೆ ಲಿಂಗಸಗೂರಿನಲ್ಲಿ ರಂಭಾಪುರಿ ಶ್ರೀಗಳ ನೇತೃತ್ವದ ದಸರಾ ಮಹೋತ್ಸವದಲ್ಲಿ ಭಾಗವಹಿಸಿದ್ದೆ. ಇಂದು ಹುಕ್ಕೇರಿಗೆ ಬಂದು ಆಶೀರ್ವಾದ ಪಡೆದು ಹೋಗಬೇಕೆಂದು ಬಂದಿದ್ದೇನೆ ಎಂದರು.

ರಾಜ್ಯದಲ್ಲಿ ತೀವ್ರ ಬರಗಾಲ ಇರುವಾಗ ಸಚಿವರಿಗೆ ಹೊಸ ಗೂಟದ ಕಾರು ಅಗತ್ಯವಿತ್ತೇ? : ವಿಜಯೇಂದ್ರ ಪ್ರಶ್ನೆ

ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್ ಸರ್ಕಾರ ಪತನವಾಗುತ್ತದೋ ಇಲ್ಲವೋ ಅದರ ಬಗ್ಗೆ ನಾನು ಹೆಚ್ಚಿಗೆ ಹೇಳೋಕೆ ಇಷ್ಟಪಡಲ್ಲ. ಆದರೆ ಈ ಸರ್ಕಾರ ಬಂದು ಐದು ತಿಂಗಳು ಕಳೆದಿದೆ, ರಾಜ್ಯದಲ್ಲಿ ಭೀಕರ ಬರಗಾಲ ಇದ್ದು ರೈತರು ಸಂಕಷ್ಟದಲ್ಲಿದ್ದಾರೆ. ವಿದ್ಯುತ್ ಅಭಾವ ಇದೆ, ರೈತರಿಗೆ ಮಧ್ಯಂತರ ಬೆಳೆಹಾನಿ ಪರಿಹಾರಕ್ಕೆ ಆಗ್ರಹಿಸುತ್ತಿದ್ದೇವೆ. ರೈತರ ಸಂಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ಬರಪೀಡಿತ ತಾಲೂಕು ಘೋಷಣೆ ಮಾಡಲು ಸರ್ಕಾರ ಮೀನಾಮೇಷ ಮಾಡಿದೆ. ರಾಜ್ಯದಲ್ಲಿ ರೈತರು ಸಂಕಷ್ಟದಲ್ಲಿರುವಾಗ ರಾಜ್ಯಸರ್ಕಾರ ಮಂತ್ರಿಗಳಿಗೆ ಹೊಸ ಕಾರು ಕೊಟ್ಟಿದ್ದಾರೆ? ಇಂಥ ಪರಿಸ್ಥಿತಿಯಲ್ಲಿ ಹೊಸ ಕಾರು ಖರೀದಿಸುವುದು ಅಗತ್ಯವಿತ್ತೇ ಎಂದು ಪ್ರಶ್ನಿಸಿದರು.

ಸರ್ಕಾರದ ಆದ್ಯತೆ ಏನು ಅಂತಾ ರಾಜ್ಯದ ಜನ ಪ್ರಶ್ನೆ ಮಾಡುತ್ತಿದ್ದಾರೆ. ಮಂತ್ರಿಗಳು, ಶಾಸಕರ ಮಧ್ಯೆ ವ್ಯತ್ಯಾಸಗಳು ಕಂಡುಬರ್ತಿವೆ. ಸರ್ಕಾರ ಬಂದು ಅರ್ಧವರ್ಷ ಕಳೆದರೂ ಅಭಿವೃದ್ಧಿಗೆ ಒಂದು ರೂ‌. ಅನುದಾನವನ್ನು ಯಾವುದೇ ಶಾಸಕರಿಗೆ ಕೊಟ್ಟಿಲ್ಲ. ಎಲ್ಲಾ ಕ್ಷೇತ್ರಗಳಲ್ಲೂ ಸರ್ಕಾರ ವಿಫಲವಾಗಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಹೀಗಾಗಿ ಸಹಜವಾಗಿ ಆಡಳಿತ ಪಕ್ಷದ ಶಾಸಕರ ಅಸಮಾಧಾನ ಎದ್ದು ಕಾಣುತ್ತಿದೆ. ಕಾಂಗ್ರೆಸ್ ಪತನವಾದರೆ ಶಾಸಕರ ಅಸಮಾಧಾನದಿಂದಲೇ ಆಗುತ್ತದೆ ಬಿಜೆಪಿಯಿಂದಲ್ಲ ಎಂದರು.

ಡಿಸಿಎಂ ಡಿಕೆಶಿ ಭೇಟಿ ವೇಳೆ ಬೆಳಗಾವಿ ಜಿಲ್ಲಾ ಶಾಸಕರು ಗೈರು ಆಗಿದ್ದಾರೆ. ಡಿಕೆಶಿ ಮತ್ತನ ಯಾವತ್ತು ಏನ್ ಆಗ್ತದೆಯೋ ಅಂತಾ ಹೇಳೋಕೆ ಸಾಧ್ಯವಿಲ್ಲ. ಆಡಳಿತದ ವೈಖರಿ ಹೇಗಿದೆ ಅಂದ್ರೆ ಆಡಳಿತಾರೂಢ ಪಕ್ಷದ ಶಾಸಕರಲ್ಲೇ ಅಸಮಾಧಾನ ಭುಗಿಲೆದ್ದಿದೆ. ಸರ್ಕಾರದ ಬಗ್ಗೆ ಜನರ ಮನಸ್ಸಿನಲ್ಲಿ ಅಸ್ಥಿರತೆ ಕಾಡುತ್ತಿದೆ. ಏನ್ ಬೇಕಾದರೂ ಆಗಬಹುದು ಅಂತಾ ಸಾಮಾನ್ಯ ಜನರು ಮಾತನಾಡುತ್ತಿದ್ದಾರೆ. ನೀವು ಎಷ್ಟು ದಿನ ಅಧಿಕಾರದಲ್ಲಿ ಇದ್ದೀರಿ ಅನ್ನೋದು ಮುಖ್ಯವಲ್ಲ, ಅಧಿಕಾರದಲ್ಲಿ ಇರುವ ಸಂದರ್ಭದಲ್ಲಿ ರೈತರ ಸಮಸ್ಯೆಗೆ ಸ್ಪಂದನೆ ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು. 

ಬರಗಾಲ ಸಂದರ್ಭದಲ್ಲಿ ರೈತರನ್ನ ಸಮಸ್ಯೆಯಿಂದ ಹೊರತರುವ ಕೆಲಸ ಆಗಬೇಕು. ರಾಜ್ಯದ ನಾನಾ ಕಡೆ ರೈತರು ಆತ್ಮಹತ್ಯೆ ಮಾಡಿಕೊಳ್ಳೋದನ್ನ ನೋಡುತ್ತಿದ್ದೇವೆ. ಸರ್ಕಾರದ ಆದ್ಯತೆ ಏನು ನಿಮ್ಮ ಒಳಕಚ್ಚಾಟ ಎಲ್ಲ ಮರೆತು ರೈತರ ಸಮಸ್ಯೆಗೆ ಸ್ಪಂದಿಸಬೇಕು ಎಂದು ಆಗ್ರಹಿಸಿದರು.

20 ಶಾಸಕರ ಜೊತೆ ಮೈಸೂರು ಪ್ರವಾಸಕ್ಕೆ ಸತೀಶ್ ಜಾರಕಿಹೊಳಿ ನಿರ್ಧರಿಸಿದ್ದ ವಿಚಾರ ಪ್ರಸ್ತಾಪಿಸಿ ಮಾತನಾಡಿದ ಅವರು, ಈ ಸರ್ಕಾರದಲ್ಲಿ ಎಷ್ಟು ಜನ ಶಾಸಕರಿದ್ದಾರೆ ಮುಖ್ಯವಲ್ಲ, ಆದ್ರೆ ಅವರ ಮಾನಸಿಕ ಸ್ಥಿತಿ, ಮನಸ್ಥಿತಿ ಏನಿದೆ ಅದು ಮುಖ್ಯ. ಅವರ ಪಕ್ಷದಲ್ಲಿ ಶಾಸಕರ ಅಸಮಾಧಾನ ಬಗ್ಗೆ ಹೆಚ್ಚು ಹೇಳೋಕೆ ಹೋಗಲ್ಲ ಅವರ ಹಣೆಬರಹ ಅದು, 136 ಶಾಸಕರು ಇರುವ ಆಡಳಿತ ಪಕ್ಷ ಯಾವ ರೀತಿ ಆಡಳಿತ ನಡೆಸಬೇಕಿತ್ತು. ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದವರು ನೀವೇ, ಚುನಾವಣೆ ಸಂದರ್ಭದಲ್ಲಿ ಸಾಕಷ್ಟು ಭರವಸೆ ನೀಡಿ ಇವತ್ತು ಪರಿಸ್ಥಿತಿ ಏನಾಗಿದೆ? 200 ಯೂನಿಟ್ ಫ್ರೀ ವಿದ್ಯುತ್ ನೀಡ್ತೀರಿ ಎಂದು ರೈತರು ರಸ್ತೆಗೆ ಬಂದಿಲ್ವಾ? ರೈತರಿಗೆ ಯಾವ ರೀತಿ ಪರಿಹಾರ ನೀಡುತ್ತಿದ್ದೀರಿ? ಬಿ ಎಸ್ ವೈ ಸಿಎಂ ಆಗಿದ್ದಾಗ ಛತ್ತೀಸ್‌ಘಡ್‌ನಿಂದ ವಿದ್ಯುತ್ ಖರೀದಿಸಿ ರೈತರಿಗೆ 7-8ಗಂಟೆ ನೀಡುತ್ತಿದ್ರು. ಇವತ್ತು ಎರಡ್ಮೂರು ಗಂಟೆ ವಿದ್ಯುತ್ ಕೊಡಲಾಗುತ್ತಿಲ್ಲ ಯಾವಾಗ ಕೊಡ್ತೀರಿ? ಇನ್ನು ಎಷ್ಟು ರೈತರು ಆತ್ಮಹತ್ಯೆ ಮಾಡಿಕೊಳ್ಳಬೇಕು? ಎಂದು ರಾಜ್ಯಸರ್ಕಾರಕ್ಕೆ ಪ್ರಶ್ನೆಗಳ ಸುರಿಮಳೆಗೈದರು. 

ಮನುಷ್ಯ ಧರ್ಮದ ಸಾರ ಅರಿತು ಬಾಳಬೇಕು: ಶಾಸಕ ವಿಜಯೇಂದ್ರ

ಬಿಎಸ್‌ವೈ ರಾಜ್ಯ ಪ್ರವಾಸಕ್ಕೆ ಹೈಕಮಾಂಡ್ ಬ್ರೇಕ್ ಹಾಕಿದೆಯಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬಿ.ವೈ.ವಿಜಯೇಂದ್ರ, ಖಂಡಿತ ಇಲ್ಲ ಯಡಿಯೂರಪ್ಪ ಹಿರಿಯ ನಾಯಕರಿದ್ದಾರೆ. ಅವರು ಸ್ಚತಂತ್ರ ಇದ್ದಾರೆ ಅವರಿಗೆ ಯಾವಾಗ ಸರಿ ಅನಿಸುತ್ತೆ ಆಗ ಪ್ರವಾಸ ಮಾಡ್ತಾರೆ. ಯಡಿಯೂರಪ್ಪ ಎಲ್ಲಿ ಬೇಕಾದಲ್ಲಿ ಪ್ರವಾಸ ಮಾಡ್ತಾರೆ. ಯಾರೂ ಕೂಡ ಅದನ್ನ ತಡೆಯುವಂತಹ ಪ್ರಯತ್ನ ಮಾಡೋದಿಲ್ಲ, ಮಾಡುವ ಅವಶ್ಯಕತೆಯೂ ಇಲ್ಲ ಎಂದರು.

ಇನ್ನು ಬಿಜೆಪಿ ನೂತನ ರಾಜ್ಯಾಧಕ್ಷರ ವಿಚಾರಕ್ಕೆ ಪ್ರತಿಕ್ರಿಯಿಸಿದ ವಿಜಯೇಂದ್ರ, ಅತಿ ಶೀಘ್ರದಲ್ಲೇ ಆಗುತ್ತೆ. ಜೊತೆಗೆ ವಿಪಕ್ಷ ನಾಯಕ ಸ್ಥಾನವೂ ಆಯ್ಕೆ ಆಗುತ್ತೆ. ಎರಡೂ ಒಟ್ಟಿಗೆ ಆಗುವ ಸುಳಿವು ನೀಡಿದರು.

Follow Us:
Download App:
  • android
  • ios