ಜಿಲ್ಲಾಡಳಿತವು ಬೆಳಗ್ಗೆ ಕೆರೆ ಒತ್ತುವರಿ ತೆರವುಗೊಳಿಸಿತ್ತು. ಆದರೆ ರಾತೋರಾತ್ರಿ ಕಾಂಪೌಂಡ್‌ ನಿರ್ಮಿಸಿ ಜಿಲ್ಲಾಡಳಿತಕ್ಕೆ ಒತ್ತುವರಿದಾರರು ಸಡ್ಡು ಹೊಡೆದ ಅಪರೂಪದ ಘಟನೆ ನಡೆದಿದೆ.

ಯಲಹಂಕ (ಡಿ.19) : ಜಿಲ್ಲಾಡಳಿತವು ಬೆಳಗ್ಗೆ ಕೆರೆ ಒತ್ತುವರಿ ತೆರವುಗೊಳಿಸಿತ್ತು. ಆದರೆ ರಾತೋರಾತ್ರಿ ಕಾಂಪೌಂಡ್‌ ನಿರ್ಮಿಸಿ ಜಿಲ್ಲಾಡಳಿತಕ್ಕೆ ಒತ್ತುವರಿದಾರರು ಸಡ್ಡು ಹೊಡೆದ ಅಪರೂಪದ ಘಟನೆ ನಡೆದಿದೆ.

ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲೂಕಿನ ದಿಬ್ಬೂರು ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳ ಆದೇಶದಂತೆ ಒತ್ತುವರಿಯಾಗಿದ್ದ ಸರ್ವೆ ನಂ 22ರಲ್ಲಿ 14 ಗುಂಟೆ ಜಾಗವನ್ನು ಜೆಸಿಬಿ ಯಂತ್ರದಿಂದ ತಹಸೀಲ್ದಾರ್‌ ನೇತೃತ್ವದಲ್ಲಿ ಕಂದಾಯ ಇಲಾಖೆಯ ಸಿಬ್ಬಂದಿ ಗ್ರಾಮಸ್ಥರ ಸಮ್ಮುಖದಲ್ಲಿ ತೆರವುಗೊಳಿಸಲಾಗಿತ್ತು. ಸಮಾರಂಭದಲ್ಲಿ ಗ್ರಾಮಸ್ಥರಿಗೆ ವಿಷಯ ತಿಳಿಸಿ ಮೂರು ದಿನದೊಳಗೆ ಉಳಿದ ಎಲ್ಲಾ ಸರ್ಕಾರಿ ಒತ್ತುವರಿಯನ್ನು ತೆರವುಗೊಳಿಸಲಾಗುವುದು ಎಂದು ತಹಸೀಲ್ದಾರ್‌ ಅನಿಲ್‌ಕುಮಾರ್‌ ಮಾಹಿತಿ ನೀಡಿ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗಿದ್ದರು.

ಆದರೆ ಕಾರ್ಯಕ್ರಮ ಮುಗಿದು ರಾತ್ರಿ ಆಗುತ್ತಿದ್ದಂತೆ ತೆರವುಗೊಳಿದ ಜಾಗದಲ್ಲೇ ಒತ್ತುವರಿದಾರರು ಸಿಮೆಂಟ್‌ ಸ್ಲಾಬ್‌ನಿಂದ ಮತ್ತೆ ಕಾಂಪೌಂಡ್‌ ನಿರ್ಮಿಸಿ ಗ್ರಾಮಸ್ಥರಿಗೆ ಆಶ್ವರ್ಯ ಮೂಡಿಸಿದ್ದಾರೆ. ಇದನ್ನು ಬೆಳಗ್ಗೆ ನೋಡಿದ ಜನರು ಕಂದಾಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Bengaluru: ನಾಗರಿಕರ ಜಲ ಮಾರ್ಗಕ್ಕೆ ತ್ಯಾಜ್ಯ ಎಸೆದವರ ಮೇಲೆ ಬಿಬಿಎಂಪಿ ಕಾನೂನು ಕ್ರಮ

ಸೋಮವಾರ ಕೆರೆ ಅಂಗಳದಲ್ಲೇ ಸ್ಥಳೀಯ ರೈತರು, ರಾಷ್ಟ್ರೀಯ ಕಿಸಾನ್‌ ಸಂಘದಿಂದ ಧರಣಿ ನಡೆಸಲು ನಿರ್ಧರಿಸಿದ್ದೇವೆ. ಆದರೆ ತಹಸೀಲ್ದಾರ್‌ ಅವರು ನಾಳೆ ಒಂದು ದಿನ ಕಾಲಾವಕಾಶ ಕೇಳಿದ್ದು, ತೆರವುಗೊಳಿಸದಿದ್ದರೆ ಮಂಗಳವಾರ ಬೃಹತ್‌ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ರಾಷ್ಟ್ರೀಯ ಕಿಸಾನ್‌ ಸಂಘಟನೆ ರಾಜ್ಯಾಧ್ಯಕ್ಷ ಜಯಕುಮಾರ್‌ ಹೇಳಿದರು.

ಜಿಲ್ಲಾಧಿಕಾರಿಗಳ ಆದೇಶದಂತೆ ಒತ್ತುವರಿ ಅಳತೆ ಮಾಡಿ ಸರ್ವೇ ನಂ 22ರಲ್ಲಿ 14 ಗುಂಟೆ ಕಾಂಪೌಂಡ್‌ ಸಂಜೆಯವರೆಗೂ ತೆರವುಗೊಳಿಸಿದ್ದೆವು. ಒತ್ತುವರಿದಾರರು ರಾತ್ರಿ ಮತ್ತೆ ಕಾಂಪೌಂಡ್‌ ಹಾಕಿದ್ದಾರೆ. ಇದು ಕಾನೂನು ಉಲ್ಲಂಘನೆಯಾಗಿದೆ. ಒತ್ತುವರಿದಾರರ ಮೇಲೆ ರಾಜಾನುಕುಂಟೆ ಪೊಲೀಸ್‌ ಠಾಣೆಯಲ್ಲಿ ಕ್ರಿಮಿನಲ್‌ ದೂರು ದಾಖಲಿಸಿದ್ದೇವೆ. ಸೋಮವಾರ ಹಿಟಾಚಿ ಯಂತ್ರದಿಂದ ಪೊಲೀಸ್‌ ಬಂದೋಬಸ್‌್ತನಲ್ಲಿ ಹಾಕಿರುವ ಕಾಂಕ್ರಿಟ್‌ ಸ್ಲಾಬ್‌ ಒಡೆದು ಉರುಳಿಸಲಾಗುವುದು ಎಂದು ಯಲಹಂಕ ತಾಲೂಕು ತಹಸೀಲ್ದಾರ್‌ ಅನಿಲ್‌ ಕುಮಾರ್‌ ತಿಳಿಸಿದರು.